ಆ್ಯಪ್ನಗರ

KKR vs SRH: ಹೈದರಾಬಾದ್‌ಗೆ ಹೀನಾಯ ಸೋಲು, ಫೈನಲ್‌ಗೆ ಕೋಲ್ಕತಾ!

Kolkata Knight Riders vs Sunrisers Hyderabad Match Highlights: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದಿದ್ದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ದ ಕೋಲ್ಕತಾ ನೈಟ್‌ ರೈಡರ್ಸ್‌ 8 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯ ಫೈನಲ್‌ಗೆ ಲಗ್ಗೆ ಇಟ್ಟಿತು. ಸೋತ ಎಸ್‌ಆರ್‌ಎಚ್‌ ತಂಡ, ಬುಧವಾರ ಎಲಿಮಿನೇಟರ್‌ ಪಂದ್ಯದಲ್ಲಿ ಗೆಲ್ಲುವ ತಂಡದ ವಿರುದ್ದ ಎರಡನೇ ಕ್ವಾಲಿಫೈಯರ್‌ ಹಣಾಹಣಿಯಲ್ಲಿ ಸೆಣಸಲಿದೆ.

Authored byರಮೇಶ ಕೋಟೆ | Vijaya Karnataka Web 21 May 2024, 11:34 pm

ಹೈಲೈಟ್ಸ್‌:

  • ಪ್ರಸ್ತುತ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿ ನಡೆಯುತ್ತಿದೆ.
  • ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಕೋಲ್ಕತಾ ನೈಟ್‌ ರೈಡರ್ಸ್‌ಗೆ 8 ವಿಕೆಟ್‌ ಭರ್ಜರಿ ಜಯ .
  • ಮೊದಲನೇ ಕ್ವಾಲಿಫೈಯರ್‌ ಗೆದ್ದ ಕೆಕೆಆರ್‌ ಫೈನಲ್‌ಗೆ ಪ್ರವೇಶ ಮಾಡಿದೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web KKR vs SRH Match Preview
ಕೆಕೆಆರ್ vs ಎಸ್‌ಆರ್‌ಎಚ್‌ (ಚಿತ್ರ: ಐಪಿಎಲ್‌)
ಅಹಮದಾಬಾದ್‌: ಮಿಚೆಲ್‌ ಸ್ಟಾರ್ಕ್‌ (34ಕ್ಕೆ 3) ಮಾರಕ ದಾಳಿ ಹಾಗೂ ವೆಂಕಟೇಶ್‌ ಅಯ್ಯರ್‌ (51*) ಹಾಗೂ ಶ್ರೇಯಸ್‌ ಅಯ್ಯರ್‌ (58*) ಅವರ ಅರ್ಧಶತಕಗಳ ಬಲದಿಂದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್ (ಐಪಿಎಲ್‌) ಟೂರ್ನಿಯ ಮೊದಲನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ದ 8 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯ ಫೈನಲ್‌ಗೆ ಪ್ರವೇಶ ಮಾಡಿತು.
ಮಂಗಳವಾರ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಹೈದರಾಬಾದ್‌ ನೀಡಿದ್ದ 160 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಕೆಕೆಆರ್‌, ಭರ್ಜರಿ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿತು. ವೆಂಕಟೇಶ್‌ ಅಯ್ಯರ್‌ ಹಾಗೂ ನಾಯಕ ಶ್ರೇಯಸ್‌ ಅಯ್ಯರ್‌ ಅವರ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನದ ಬಲದಿಂದ ಕೆಕೆಆರ್‌ 13.4 ಓವರ್‌ಗಳಿಗೆ 2 ವಿಕೆಟ್‌ ನಷ್ಟಕ್ಕೆ 164 ರನ್‌ ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು. ಇನ್ನು ಈ ಪಂದ್ಯದಲ್ಲಿ ಸೋತ ಸನ್‌ರೈಸರ್ಸ್‌ಹೈದರಬಾದ್‌ ತಂಡ, ಬುಧವಾರ ಎಲಿಮಿನೇಟರ್ (ಆರ್‌ಸಿಬಿ vs ಆರ್‌ಆರ್‌) ಪಂದ್ಯದಲ್ಲಿ ಗೆದ್ದ ತಂಡದ ಎದುರು ಎರಡನೇ ಕ್ವಾಲಿಫೈಯರ್‌ ಪಂದ್ಯವನ್ನು ಆಡಲಿದೆ.

SRH vs KKR ಪಂದ್ಯದ ಸ್ಕೋರ್‌ ಕಾರ್ಡ್‌

ಮಿಂಚಿದ ವೆಂಕಟೇಶ್‌-ಶ್ರೇಯಸ್‌

ಸ್ಪರ್ಧಾತ್ಮಕ ಗುರಿ ಹಿಂಬಾಲಿಸಿದ ಕೆಕೆಆರ್‌ ಪರ ವೆಂಕಟೇಶ್‌ ಅಯ್ಯರ್‌ ಹಾಗೂ ಶ್ರೇಯಸ್‌ ಅಯ್ಯರ್‌ ಬ್ಯಾಟಿಂಗ್‌ನಲ್ಲಿ ಮಿಂಚಿದರು. ರೆಹಮಾನ್‌ವುಲ್ಲಾ ಗುರ್ಬಾಜ್(23) ಹಾಗೂ ಸುನೀಲ್‌ ನರೇನ್‌ (21) ಅವರು ವಿಕೆಟ್‌ ಒಪ್ಪಿಸಿದ ಬಳಿಕ ಕ್ರೀಸ್‌ಗೆ ಬಂದ ವೆಂಕಟೇಶ್‌ ಅಯ್ಯರ್‌ ಮೊದಲನೇ ಎಸೆತದಿಂದಲೇ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಅವರು 28 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 5 ಬೌಂಡರಿಗಳೊಂದಿಗೆ ಅಜೇಯ 51 ರನ್‌ ಸಿಡಿಸಿದರು ಹಾಗೂ ನಾಯಕ ಶ್ರೇಯಸ್‌ ಅಯ್ಯರ್‌ ಕೇವಲ 24 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ ಅಜೇಯ 58 ರನ್‌ ಚಚ್ಚಿದರು. ಆ ಮೂಲಕ ಈ ಜೋಡಿ ಮೂರನೇ ವಿಕೆಟ್‌ಗೆ 97 ರನ್‌ಗಳನ್ನು ಕಲೆ ಹಾಕಿತು.


159ಕ್ಕೆ ಸನ್‌ರೈಸರ್ಸ್‌ ಆಲ್‌ಔಟ್‌

ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಸನ್‌ರೈಸರ್ಸ್ ಹೈದರಾಬಾದ್‌ ತಂಡ 20 ಓವರ್‌ಗಳಿಗೆ 159 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಕೋಲ್ಕತಾ ನೈಟ್‌ ರೈಡರ್ಸ್‌ಗೆ 160 ರನ್ ಗುರಿ ನೀಡಿದೆ. ಎಸ್‌ಆರ್‌ಎಚ್‌ ಪರ ರಾಹುಲ್‌ ತ್ರಿಪಾಠಿ 55 ರನ್‌, ಹೆನ್ರಿಚ್‌ ಕ್ಲಾಸೆನ್‌ 32 ಹಾಗೂ ಪ್ಯಾಟ್‌ ಕಮಿನ್ಸ್ 30 ರನ್‌ ಗಳಿಸಿದರು.

ಎಸ್‌ಆರ್‌ಎಚ್‌ಗೆ ಆರಂಭಿಕ ಆಘಾತ

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಿರ್ಧರಿಸಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ನಾಯಕ ಪ್ಯಾಟ್‌ ಕಮಿನ್ಸ್ ರಣತಂತ್ರವನ್ನು ಕೆಕೆಆರ್‌ ಬೌಲರ್‌ಗಳು ಕೆಡವಿದರು. ಹೊಸ ಚೆಂಡಿನಲ್ಲಿ ಮಾರಕ ದಾಳಿ ನಡೆಸಿದ್ದ ಮಿಚೆಲ್‌ ಸ್ಟಾರ್ಕ್‌, ಟ್ರಾವಿಸ್‌ ಹೆಡ್‌, ನಿತೀಶ್ ರೆಡ್ಡಿ ಹಾಗೂ ಶಹಬಾಝ್‌ ಅಹ್ಮದ್‌ ಅವರ ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಎಸ್‌ಆರ್‌ಎಚ್‌ ತಂಡ 39 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು.
ಕೊಹ್ಲಿ-ರೋಹಿತ್‌ ಅಲ್ಲ, ಅತ್ಯಂತ ಅಪಾಯಕಾರಿ ಭಾರತೀಯ ಬ್ಯಾಟರ್‌ ಹೆಸರಿಸಿದ ಪ್ಯಾಟ್‌ ಕಮಿನ್ಸ್‌!


ರಾಹುಲ್ ತ್ರಿಪಾಠಿ ಅರ್ಧಶತಕ

39 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ರಾಹುಲ್‌ ತ್ರಿಪಾಠಿ ನಿರ್ಣಾಯಕ ಅರ್ಧಶತಕವನ್ನು ಸಿಡಿಸಿದರು. 35 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ 55 ರನ್‌ ಸಿಡಿಸಿದರು ಹಾಗೂ ಮುರಿಯದ ಐದನೇ ವಿಕೆಟ್‌ಗೆ ಹೆನ್ರಿಚ್‌ ಕ್ಲಾಸೆನ್‌ (32) ಜೊತೆ 61 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿದ್ದರು. ಆದರೆ, ಕ್ಲಾಸೆನ್‌ ಹಾಗೂ ತ್ರಿಪಾಠಿ ವಿಕೆಟ್‌ ಒಪ್ಪಿಸಿದ ಬಳಿಕ ಎಸ್ಆರ್‌ಎಚ್‌ ತಂಡ ಬ್ಯಾಟಿಂಗ್‌ ವಿಭಾಗ ಕುಸಿಯಿತು. ಕೊನೆಯಲ್ಲಿ ನಾಯಕ ಪ್ಯಾಟ್‌ ಕಮಿನ್ಸ್‌ 30 ರನ್‌ ಸಿಡಿಸಿ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಲು ನೆರವು ನೀಡಿದರು.

ಪಂದ್ಯ ಶ್ರೇ‍ಷ್ಠ ಪ್ರಶಸ್ತಿ: ಮಿಚೆಲ್‌ ಸ್ಟಾರ್ಕ್‌

ಇತ್ತಂಡಗಳ ಪ್ಲೇಯಿಂಗ್‌ XI


ಕೋಲ್ಕತ್ತಾ ನೈಟ್ ರೈಡರ್ಸ್ : ರಹಮಾನುಲ್ಲಾ ಗುರ್ಬಾಜ್ (ವಿ.ಕೀ), ಸುನಿಲ್ ನರೇನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ

ಸನ್‌ರೈಸರ್ಸ್ ಹೈದರಾಬಾದ್: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್(ವಿ.ಕೀ), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ವಿಜಯಕಾಂತ್ ವ್ಯಾಸಕಾಂತ್, ಟಿ ನಟರಾಜನ್
ಲೇಖಕರ ಬಗ್ಗೆ
ರಮೇಶ ಕೋಟೆ
ವಿಜಯ ಕರ್ನಾಟಕ ಡಿಜಿಟಲ್‌ನಲ್ಲಿ 2020ರ ಮಾರ್ಚ್‌ನಿಂದ ಕ್ರೀಡಾ ಪತ್ರಕರ್ತರಾಗಿ ಇವರು ಕೆಲಸ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ವಿಶ್ವವಾಣಿ ದಿನ ಪತ್ರಿಕೆ, ಯುನೈಟೆಡ್‌ ನ್ಯೂಸ್‌ ಆಫ್‌ ಇಂಡಿಯಾ ಸುದ್ದಿ ಸಂಸ್ಥೆ, ಸಂಜೆ ವಾಣಿ ಹಾಗೂ ಈ ಸಂಜೆ ಪತ್ರಿಕೆಗಳಲ್ಲಿ ಕೆಲಸ ಮಾಡಿರುವ ಅನುಭವವನ್ನು ಇವರು ಹೊಂದಿದ್ದಾರೆ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ ಹಾಗೂ ಅಂಕಣಗಳನ್ನು ಬರೆಯುವುದು ಇವರ ಆಸಕ್ತದಾಯಕ ವಿಷಯಗಳು. ಕನ್ನಡ ಸಾಹಿತ್ಯ ಓದುವುದು, ಕ್ರಿಕೆಟ್‌ ಆಡುವುದು, ಟ್ರೆಕ್ಕಿಂಗ್‌, ಬೈಕ್‌ ರೈಡಿಂಗ್‌, ಫೋಟೋಗ್ರಫಿ ಇವು ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌