ಬೆಂಗಳೂರು: ರಾಯಚೂರು ಜಿಲ್ಲೆಯ ಕವಿತಾಳ ಪಟ್ಟಣ ಪಂಚಾಯಿತಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ವಾರ್ಡ್ ನಂಬರ್ 7ರಿಂದ ಅಪ್ರಾಪ್ತೆ ಆಯ್ಕೆಯಾಗಿದ್ದಾರೆ ಎನ್ನುವ ವಿವಾದ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ.
ಸ್ಥಳೀಯರಾದ ಕಾಶೀನಾಥ್ ಎಂಬುವರು ಸಲ್ಲಿಸಿದ್ದ ಅರ್ಜಿ ಮಂಗಳವಾರ ನ್ಯಾ.ರವಿ ಮಳೀಮಠ್ ಅವರಿದ್ದ ಏಕಸದಸ್ಯಪೀಠದ ಮುಂದೆ ವಿಚಾರಣೆಗೆ ಬಂದಿತು. ನ್ಯಾಯಪೀಠ ಸರಕಾರಕ್ಕೆ ಆ ಬಗ್ಗೆ ಮಾಹಿತಿ ನೀಡುವಂತೆ ಮೌಖಿಕ ಸೂಚನೆ ನೀಡಿ ವಿಚಾರಣೆಯನ್ನು ಮೇ 12 ಕ್ಕೆ ನಿಗದಿಪಡಿಸಿತು.
''ವಾರ್ಡ್ ನಂಬರ್ ಏಳರಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಹೀನಾ ಸುಲ್ತಾನ ಅವರು 160 ಮತಗಳ ಅಂತರದಿಂದ ಬಿಜೆಪಿಯ ಹುಸೇನಮ್ಮ ಅವರನ್ನು ಮಣಿಸಿ ಆಯ್ಕೆಯಾಗಿದ್ದಾರೆ. ಶಾಲಾ ದಾಖಲೆಗಳ ಪ್ರಕಾರ ಅವರ ವಯಸ್ಸು ಕೇವಲ 17 ವರ್ಷ. ಆದರೂ ಅವರು ಚುನಾವಣೆ ವೇಳೆ ತಮಗೆ 18 ವರ್ಷ ಪೂರೈಸಿದೆ ಎಂದು ಸುಳ್ಳು ಪ್ರಮಾಣಪತ್ರ ಸಲ್ಲಿಕೆ ಮಾಡಿ ಆಯ್ಕೆಯಾಗಿದ್ದಾರೆ. ಹೀಗಾಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಆಯ್ಕೆಗೆ ನಡೆಯಲಿರುವ ಚುನಾವಣೆಯಲ್ಲಿ ಅವರಿಗೆ ಮತದಾನ ಮಾಡದಂತೆ ನಿರ್ಬಂಧ ವಿಧಿಸಬೇಕು,'' ಎಂದು ಅರ್ಜಿದಾರರು ನ್ಯಾಯಪೀಠವನ್ನು ಕೋರಿದ್ದಾರೆ.