ಕಳೆದ ವಾರ.. ಅಂದ್ರೆ ‘ಬಿಗ್ ಬಾಸ್ ಕನ್ನಡ 10’ ಕಾರ್ಯಕ್ರಮದಲ್ಲಿ 9ನೇ ವಾರ ಗಂಧರ್ವರು ವರ್ಸಸ್ ರಾಕ್ಷಸರು ಟಾಸ್ಕ್ ನೀಡಲಾಗಿತ್ತು. ಈ ಚಟುವಟಿಕೆಯಲ್ಲಿ ಕೆಲವರು ಅಕ್ಷರಶಃ ರಾಕ್ಷಸರಂತೆಯೇ ವರ್ತಿಸಿದರು. ಅದರಲ್ಲೂ ‘ಚೇರ್ ಆಫ್ ಥಾರ್ನ್ಸ್’ ಟಾಸ್ಕ್ನಲ್ಲಿ ರಾಕ್ಷಸರಾಗಿದ್ದವರು ಮನುಷ್ಯತ್ವವನ್ನೇ ಮರೆತು ಆಡಿದರು. ಸೋಪು ನೀರಿನಲ್ಲಿ ದಾಳಿ ನಡೆಸಿದರು. ಪರಿಣಾಮ, ಸಂಗೀತಾ ಹಾಗೂ ಡ್ರೋನ್ ಪ್ರತಾಪ್ ಕಣ್ಣಿಗೆ ಗಂಭೀರವಾಗಿ ಪೆಟ್ಟು ಬಿತ್ತು. ಇಬ್ಬರೂ ಆಸ್ಪತ್ರೆಗೆ ದಾಖಲಾಗುವಂತಾಯಿತು. ಇಷ್ಟೆಲ್ಲಾ ಆದ್ಮೇಲೆ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಸರಿಯಾಗಿ ಕಿವಿ ಹಿಂಡುತ್ತಾರೆ, ಅದರಲ್ಲೂ ಕೆಲವರಿಗೆ ಸ್ಪೆಷಲ್ ಕ್ಲಾಸ್ ತಗೊಳ್ತಾರೆ ಅಂತ ವೀಕ್ಷಕರು ಭಾವಿಸಿದ್ದು ಹೌದು. ಕಳೆದ ವಾರದ ಪಂಚಾಯತಿ ಸಂಚಿಕೆಗಾಗಿ ಇಡೀ ಕರ್ನಾಟಕ ಕಾಯುತ್ತಿತ್ತು. ಆದರೆ, ನಿರೀಕ್ಷಿಸಿದ ಮಟ್ಟಕ್ಕೆ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಮಂಗಳಾರತಿ ಮಾಡಲಿಲ್ಲ. ಇದನ್ನ ಸ್ವತಃ ಕಿಚ್ಚ ಸುದೀಪ್ ಇಂದಿನ ಪಂಚಾಯತಿ ಸೆಷನ್ನಲ್ಲಿ ಒಪ್ಪಿಕೊಂಡಿದ್ದಾರೆ. ಇಂದು ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಸ್ಪರ್ಧಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಕಿಚ್ಚ ಸುದೀಪ್, ‘’ಕಳೆದ ವಾರ ಗಂಧರ್ವರು - ರಾಕ್ಷಸರು ಟಾಸ್ಕ್ ಆದ್ಮೇಲೆ ನಾಯಿಗೆ ಉಗಿದ ಹಾಗೆ ಸುದೀಪ್ ಉಗೀತಾರೆ ಅಂತ ಇಡೀ ಕರ್ನಾಟಕ ಕಾಯುತ್ತಿತ್ತು. ಆದರೆ ಹಾಗೆ ಮಾಡಲಿಲ್ಲ’’ ಎಂದು ಹೇಳಿದ್ದಾರೆ. ಜೊತೆಗೆ ‘’ಯಾಕೆ ಮಾಡಲಿಲ್ಲ’’ ಎಂಬುದಕ್ಕೆ ಕಿಚ್ಚ ಸುದೀಪ್ ಕಾರಣವನ್ನೂ ನೀಡಿದ್ದಾರೆ.
‘’ಈ ವಾರ ಹೀಗೆ ಇರಲೇಬಾರದು. ಆದರೆ, ನಿಮ್ಮೆಲ್ಲರಿಗೂ ಖುಷಿ ಕೊಡಲು ಹೋದ ನಮಗೆ ನೀವು ಕೊಟ್ಟಿರುವ ಉಡುಗೊರೆ ಇದು’’ ಎಂದು ಸ್ಪರ್ಧಿಗಳ ಅಶಿಸ್ತು ಬಗ್ಗೆ ಕಿಚ್ಚ ಸುದೀಪ್ ತಮ್ಮ ಬೇಸರ ಹೊರಹಾಕಿದರು.
ಸ್ಪರ್ಧಿಗಳಲ್ಲಿ ಶಿಸ್ತು ಇಲ್ಲ!
‘ಬಿಗ್ ಬಾಸ್’ ಮನೆಯಲ್ಲಿರುವ ಸ್ಪರ್ಧಿಗಳಲ್ಲಿ ಶಿಸ್ತು ಇಲ್ಲ ಎಂಬುದರ ಬಗ್ಗೆ ಈ ವಾರದ ಪಂಚಾಯತಿ ಸೆಷನ್ ಆರಂಭದಲ್ಲೇ ಕಿಚ್ಚ ಸುದೀಪ್ ಬೇಸರ ವ್ಯಕ್ತಪಡಿಸಿದರು. ಕ್ಯಾಪ್ಟನ್ ಇದ್ದಾಗ ಬೆಲೆ ಕೊಡಲಿಲ್ಲ. ಕ್ಯಾಪ್ಟನ್ ಇಲ್ಲದಿರುವಾಗಲೂ ನಿಯಮಗಳು ಫಾಲೋ ಆಗ್ತಿಲ್ಲ ಎಂಬ ಕಾರಣಕ್ಕೆ ಕಿಚ್ಚ ಸುದೀಪ್ ಕೋಪಗೊಂಡರು. ಈ ಬಗ್ಗೆ ಸ್ಪರ್ಧಿಗಳಿಗೆ ಛೀಮಾರಿ ಹಾಕುತ್ತಿದ್ದ ಸಮಯದಲ್ಲಿ ಕಳೆದ ವಾರದ ವಿಷಯವನ್ನ ಕಿಚ್ಚ ಸುದೀಪ್ ಉಲ್ಲೇಖಿಸಿದರು.ಇಡೀ ಕರ್ನಾಟಕ ಕಾಯುತ್ತಿತ್ತು!
‘’ಮನೆಯಲ್ಲಿ ಕ್ಯಾಪ್ಟನ್ ಸ್ಥಾನ ಹೋದ್ಮೇಲೆ ಸೆಲೆಬ್ರೇಷನ್ ಶುರು ಮಾಡಿದ್ಧೀರಾ. ಕ್ಯಾಪ್ಟನ್ ಇದ್ದಾಗ ಬೆಲೆ ಕೊಡಲಿಲ್ಲ. ಇಲ್ಲದಿರೋದಕ್ಕೆ ಇನ್ನೂ ಗೌರವ ಇಲ್ಲ. ಅಸಲಿಗೆ, ಕಳೆದ ವಾರ ರಾಕ್ಷಸರು ವರ್ಸಸ್ ಗಂಧವರು ಟಾಸ್ಕ್ ಆದ್ಮೇಲೆ.. ಅಷ್ಟು ಕಿತ್ತಾಟ, ಕೂಗಾಟ ಆದಾಗಲೇ ಇಡೀ ಕರ್ನಾಟಕದಲ್ಲೆಲ್ಲಾ ಜನ ಕಾಯ್ತಾಯಿದ್ದರು. ಬರ್ತಾರೆ ಇವತ್ತು ಸುದೀಪ್ ಅವರು.. ನಾಯಿಗೆ ಉಗಿದ ಹಾಗೆ ಉಗೀತಾರೆ.. ಒಂದ್ ನಾಲ್ಕು ಜನರಿಗೆ ಸಿಕ್ಕಾಪಟ್ಟೆ ಬೈಯ್ಯುತ್ತಾರೆ.. ಹಾಗೆ ಹೀಗೆ ಅಂತ ತುಂಬಾ ಇತ್ತು. ಆದರೆ, ನಾವು ಆರಾಮಾಗಿ sort out (ಪರಿಹಾರ) ಮಾಡಿ ಕಳೆದ ವಾರ ಹೋದ್ವಿ. ನಾವು ಯಾಕೆ ಉಗೀಲಿಲ್ಲ ಅಂದ್ರೆ ‘ಬಿಗ್ ಬಾಸ್’ ಮನೆ ಅಂದ್ಮೇಲೆ ಅವೆಲ್ಲಾ ಇರುತ್ತೆ. ಟಾಸ್ಕ್ನಲ್ಲಿ ಇರುತ್ತೆ’’ ಎಂದರು ಕಿಚ್ಚ ಸುದೀಪ್.‘’ಈ ವಾರ ಹೀಗೆ ಇರಲೇಬಾರದು. ಆದರೆ, ನಿಮ್ಮೆಲ್ಲರಿಗೂ ಖುಷಿ ಕೊಡಲು ಹೋದ ನಮಗೆ ನೀವು ಕೊಟ್ಟಿರುವ ಉಡುಗೊರೆ ಇದು’’ ಎಂದು ಸ್ಪರ್ಧಿಗಳ ಅಶಿಸ್ತು ಬಗ್ಗೆ ಕಿಚ್ಚ ಸುದೀಪ್ ತಮ್ಮ ಬೇಸರ ಹೊರಹಾಕಿದರು.