ಹರಿವ ಜಲಧಾರೆ, ಕುಣಿವ ದೇವರ ಮೀನು: ಇದು ತೊಡಿಕಾನದ ವೈಶಿಷ್ಟ್ಯ
ನಿಸರ್ಗ ಸೌಂದರ್ಯವನ್ನೇ ತನ್ನೊಳಗೆ ಹರಡಿಕೊಂಡಿರುವ ಶ್ರೀ ಮಲ್ಲಿಕಾರ್ಜುನ ದೇವಸ್ಥಾನವು ಭಕ್ತಾದಿಗಳ ಪುಣ್ಯಕ್ಷೇತ್ರ. ಅಲ್ಲದೇ, ಭಕ್ತರ ನಂಬಿಕೆ, ಹರಕೆಗಳು ಸಾಕ್ಷಾತ್ ಇದೇ ಸ್ಥಳದಲ್ಲಿ ನೆರವೇರಿದ್ದಕ್ಕೆ ಅನೇಕ ಉದಾಹರಣೆಗಳೂ ಇವೆ. ಈ ಪುಣ್ಯಕ್ಷೇತ್ರವನ್ನು ತಲುಪಲು, ಸುಳ್ಯದಿಂದ ಮಡಿಕೇರಿ ರಾಜ್ಯ ರಸ್ತೆಯಲ್ಲಿ ಸಾಗಿದರೆ ಅರಂತೋಡು ಎಂಬ ಊರು ಸಿಗುತ್ತದೆ. ಬಲಭಾಗದಲ್ಲಿ ಶ್ರೀ ಮಲ್ಲಿಕಾರ್ಜುನ ದೇವಾಲಯದ ದ್ವಾರವಿದೆ. ಈ ದ್ವಾರದ ಮೂಲಕ 6 ಕಿ.ಮೀ. ಪ್ರಯಾಣಿಸಿದರೆ ಸಿಗುವುದೇ, ತೊಡಿಕಾನದ ಶ್ರೀ ಮಲ್ಲಿಕಾರ್ಜುನ ದೇವಾಲಯ. ಸುತ್ತಲೂ ಹರಡಿ ನಿಂತಿರುವ ಬೆಟ್ಟಗುಡ್ಡಗಳು, ಅಡಿಕೆ, ತೆಂಗು, ಬಾಳೆಯ ಕಂಪು. ಜುಳುಜುಳು ಸದ್ದು ಮಾಡುತ್ತಾ ಹರಿಯುವ ಪಯಸ್ವಿನಿ ನದಿ. ಇಂತಹ ನಿಸರ್ಗ ಸೌಂದರ್ಯವನ್ನು ತನ್ನೊಳಗೆ ಬಚ್ಚಿಟ್ಟುಕೊಂಡು ತನ್ನತ್ತ ಬರುವ ಪ್ರವಾಸಿಗರಿಗೆ ಉಣಬಡಿಸಲೆಂದೇ ತೊಡಿಕಾನ ಕ್ಷೇತ್ರ ನೆಲೆನಿಂತಿದೆ. ತೊಡಿಕಾನವು ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿದೆ. ತೊಡಿಕಾನದಲ್ಲಿ ಕಣ್ವ ಮುನಿಗಳು ತಪಸ್ಸು ಮಾಡಿದ್ದರೆಂದೂ, ಶಿವ ಮತ್ತು ಅರ್ಜುನನಿಗೆ ಯುದ್ಧ ನಡೆದ ಸ್ಥಳವೆಂದೂ ಆ ಕಾರಣಕ್ಕಾಗಿಯೇ ಇದು ಇಂದಿಗೂ ಪವಿತ್ರ ಕ್ಷೇತ್ರವಾಗಿದೆ ಎಂದು ಹೇಳಲಾಗುತ್ತಿದೆ. ಸುಂದರ ಮಲ್ಲಿಕಾರ್ಜುನ ದೇಗುಲ, ಮತ್ಸ್ಯ ತೀರ್ಥ, ದೇವರಗುಂಡಿ ಜಲಪಾತ ಇಲ್ಲಿನ ವೈಶಿಷ್ಟ್ಯವಾಗಿದೆ. ದೇವಾಲಯದ ಪಕ್ಕದಲ್ಲೇ ಕಾಣಸಿಗುವ ಮತ್ಸತೀರ್ಥವು ಪ್ರತೀ ಭಕ್ತರ ಕಣ್ಮನ ಸೆಳೆಯುತ್ತದೆ. ಮಳೆಗಾಲದ ಸಂದರ್ಭದಲ್ಲಿ ಹೆಚ್ಚು ಹರಿವನ್ನು ಕಾಣುವ ಈ ಸ್ಥಳದಲ್ಲಿ ಮಹಾಶೀರ್ ಮೀನುಗಳು ವಾಸವಾಗಿವೆ. ಇವುಗಳನ್ನು ದೇವರ ಮೀನು ಅಥವಾ ಸಾಕ್ಷಾತ್ ಮಹಾವಿಷ್ಣುವಿನ ಅವತಾರವೆಂದೇ ಹೇಳುವುದು ಪ್ರತೀತಿ. ಭಕ್ತರು ತಮ್ಮಲ್ಲಿನ ಸಂಕಷ್ಟ ಪರಿಹಾರಕ್ಕೆ ಮತ್ಸತೀರ್ಥದಲ್ಲಿನ ಈ ದೇವರ ಮೀನುಗಳ ಬಳಿ ಬಂದು ಹರಕೆ ಹೇಳುವುದೂ ವಾಡಿಕೆಯಲ್ಲಿದೆ.
We use cookies and other tracking technologies to provide services in line with the preferences you reveal while browsing the Website to show personalize content and targeted ads, analyze site traffic, and understand where our audience is coming from in order to improve your browsing experience on our Website. By continuing to browse this Website, you consent to the use of these cookies. If you wish to object such processing, please read the instructions described in our privacy policy/cookie policy.