Please enable javascript.ವಿಕ ಫೋಕಸ್‌: ಕಾಡಿನಾಳದಲ್ಲಿ ಮಾನವನ ಹೆಜ್ಜೆ! - ವಿಕ ಫೋಕಸ್‌: ಕಾಡಿನಾಳದಲ್ಲಿ ಮಾನವನ ಹೆಜ್ಜೆ! - Vijay Karnataka

ವಿಕ ಫೋಕಸ್‌: ಕಾಡಿನಾಳದಲ್ಲಿ ಮಾನವನ ಹೆಜ್ಜೆ!

Vijaya Karnataka Web 13 Nov 2014, 4:00 am
Subscribe

ದಟ್ಟ ಅರಣ್ಯದೊಳಗೆ ಮೌನ ಕದಡಿದೆ; ಮನುಷ್ಯನ ಹೆಜ್ಜೆಗಳು ಕಾಣಿಸತೊಡಗಿವೆ. ಕಾಡಿನ ಸಂಪತ್ತಿನ ಮೇಲೆ ದುರಾಸೆಯ ಕಂಗಳ ಕರಿನೆರಳು ಬಿದ್ದಿವೆ. ಕಾಡಿನ ನಿಗೂಢದಾಳದಲ್ಲಿ ಮಾನವ-ಮಾನವರ ನಡುವೆಯೇ ಸಂಘರ್ಷ ಹೆಚ್ಚುತ್ತಿದೆ...ಕಾಡುಲೋಕದ ಇಂಥ ಕಾಡುವ ಸಂಗತಿಗಳ ಮೇಲೊಂದು ಇಲ್ಲಿದೆ ಕ್ಷ-ಕಿರಣ.

ವಿಕ ಫೋಕಸ್‌: ಕಾಡಿನಾಳದಲ್ಲಿ ಮಾನವನ ಹೆಜ್ಜೆ!
ದಟ್ಟ ಅರಣ್ಯದೊಳಗೆ ಮೌನ ಕದಡಿದೆ; ಮನುಷ್ಯನ ಹೆಜ್ಜೆಗಳು ಕಾಣಿಸತೊಡಗಿವೆ. ಕಾಡಿನ ಸಂಪತ್ತಿನ ಮೇಲೆ ದುರಾಸೆಯ ಕಂಗಳ ಕರಿನೆರಳು ಬಿದ್ದಿವೆ. ಕಾಡಿನ ನಿಗೂಢದಾಳದಲ್ಲಿ ಮಾನವ-ಮಾನವರ ನಡುವೆಯೇ ಸಂಘರ್ಷ ಹೆಚ್ಚುತ್ತಿದೆ...ಕಾಡುಲೋಕದ ಇಂಥ ಕಾಡುವ ಸಂಗತಿಗಳ ಮೇಲೊಂದು ಇಲ್ಲಿದೆ ಕ್ಷ-ಕಿರಣ.
-----

* ಕುಂದೂರು ಉಮೇಶ ಭಟ್ಟ/ ಚೀ.ಜ.ರಾಜೀವ/ ಕೆ.ಎಸ್.ಫಾಲಲೋಚನ ಆರಾಧ್ಯ

ವನ್ಯಮೃಗಗಳು ಆಹಾರ ಅರಸಿ ನಾಡಿಗೆ ಬರುತ್ತಿರುವ ಹಿನ್ನೆಲೆಯಲ್ಲಿ, ಅರಣ್ಯದಂಚಿನಲ್ಲಿ ಮಾನವ ಮತ್ತು ಪ್ರಾಣಿಗಳ ಸಂಘರ್ಷ ಈಚೆಗೆ ಸಾಮಾನ್ಯ. ಆದರೆ, ಕಾಡಿನ ನಿಗೂಢದಾಳದಲ್ಲಿ ಮಾನವ-ಮಾನವರ ನಡುವೆಯೇ ಸಂಘರ್ಷ ಹೆಚ್ಚುತ್ತಿರುವುದು ಈಚೆಗಿನ ವಿದ್ಯಮಾನ. ಹಸಿರು ಸಿರಿಯಿಂದ ಸಮೃದ್ಧವಾಗಿರುವ ವನ್ಯ ಸಂಪತ್ತು, ಕಾಡು ಮೃಗಗಳು, ನದಿ-ತೊರೆಗಳೆಂಬ ನೈಸರ್ಗಿಕ ಸಂಪನ್ಮೂಲಗಳ ದುರ್ಬಳಕೆಯೇ ಈ ಸಂಘರ್ಷದ ಮೂಲ ಮರ್ಮ. ಪರಿಣಾಮ, ನಾಗರಹೊಳೆ, ಬಂಡೀಪುರ ಅರಣ್ಯ ಪ್ರದೇಶದ ಅಂಚಿನಿಂದ ಗುಂಡಿನ ಕಾದಾಟ ಮೊಳಗುತ್ತಲೇ ಇರುತ್ತದೆ. ಹೆಣಗಳು ಕೂಡ ಬೀಳುತ್ತಿರುತ್ತವೆ.

ಸಂಘರ್ಷ ಸ್ವರೂಪವೂ ನಾನಾ ನಮೂನೆಯದ್ದು. ಸ್ಥಳೀಯರ ಸೋಗಿನ ಬೇಟೆಗಾರರು, ಅರಣ್ಯ ಇಲಾಖೆ ಸಿಬ್ಬಂದಿ, ಕಾಡಂಚಿನ ಗ್ರಾಮಸ್ಥರು ಹಾಗೂ ವಾಚರ್‌ಗಳು, ಅರಣ್ಯದೊಳಗಿದ್ದುಕೊಂಡೇ ನಿಗಾ ವಹಿಸುವ ರೇಂಜರ್‌ಗಳು, ಹವಾ ನಿಯಂತ್ರಿತ ಕೊಠಡಿಯಲ್ಲಿ ಕೂತು ಕಾಡಿನ ಮೇಲೆ ನಿಗಾ ವಹಿಸುವ ಐಎಫ್‌ಎಸ್ ಅಧಿಕಾರಿಗಳು, ‘ಸಫಾರಿ ನೆಪ’ದಲ್ಲಿ ಬೇಟೆಗೆ ಬರುವ ವಿಐಪಿಗಳು ಹಾಗೂ ಅರಣ್ಯಾಧಿಕಾರಿಗಳು... ಹೀಗೆ, ತಳದಿಂದ ತುದಿಯ ತನಕ ಸಂಘರ್ಷದ ಸಿಕ್ಕು ಆವರಿಸಿದೆ. ಅರಣ್ಯಪ್ರದೇಶ ಗಡಿ ಮೀರಿದ್ದರಂತೂ ಉಭಯ ರಾಜ್ಯಗಳ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ನಡುವೆ ಪ್ರತಿಷ್ಠೆಯ ಸಂಘರ್ಷವೂ ಸೇರುತ್ತದೆ.

ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯದ ಸುಮಾರು 6,000 ಚದರ ಕಿ. ಮೀ. ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಪಶ್ಚಿಮಘಟ್ಟದ ಶ್ರೇಣಿಯಲ್ಲಿಯೇ ಬರುವ ನಾಗರಹೊಳೆ,ಬಂಡೀಪುರ ಅರಣ್ಯ ಪ್ರದೇಶಗಳು ಕರುನಾಡಿನ ಬಹುದೊಡ್ಡ ಆಸ್ತಿಗಳು. ಹಿಂದೊಮ್ಮೆ ಈ ಅರಣ್ಯ ಪ್ರದೇಶದಲ್ಲಿ ಅನೇಕ ವರ್ಷಗಳ ಕಾಲ ಅಡಗಿಕೊಂಡಿದ್ದ ಕಾಡುಗಳ್ಳ ವೀರಪ್ಪನ್ ಮತ್ತವನ ಸಹಚರರ ಸದ್ದಡಗಿ ಸರಿಯಾಗಿ ದಶಕವೇ ಕಳೆದಿದೆ. ಆದರೂ ಈ ಅರಣ್ಯಗಳಂಚಿನಿಂದ ಗುಂಡಿನ ಸದ್ದು ಮೊಳಗುವುದು ನಿಂತಿಲ್ಲ. ಕೆಲ ದಿನಗಳ ಹಿಂದೆ ಪಾಲಾರ್ ಬಳಿ ಬೇಟೆಗಾರರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆಯಿತು. ತಮಿಳುನಾಡಿನ ಗೋವಿಂದಪ್ಪಾಡಿ ಗ್ರಾಮದ ಪಳನಿ ಎಂಬ ಬೇಟೆಗಾರನೊಬ್ಬ ನಿಗೂಢವಾಗಿ ಮೃತಪಟ್ಟ. ಇದೇ ನೆಪವಾಗಿ ಕಾಡಂಚಿನ ಗ್ರಾಮಸ್ಥರು ಕರ್ನಾಟಕದ ಅರಣ್ಯ ಇಲಾಖೆಗೆ ಸೇರಿದ ಚೆಕ್‌ಪೋಸ್ಟ್ ಅನ್ನು ಹಾಡಹಗಲೇ ರಾಜಾರೋಷವಾಗಿ ಧ್ವಂಸಗೊಳಿಸಿದರು. ಅರಣ್ಯ ಇಲಾಖೆ ಮೂಲಗಳ ಪ್ರಕಾರ, ಪಳನಿಯ ಹೆಸರು ಅರಣ್ಯ ಇಲಾಖೆಯ 80 ಬೇಟೆಗಾರರ ಪಟ್ಟಿಯಲ್ಲಿದೆ ! ಹಲವು ಪ್ರಕರಣಗಳಲ್ಲಿ ರಾಜ್ಯದ ಅರಣ್ಯ ಇಲಾಖೆಗೆ ಬೇಕಾದವನೀತ. ಹೀಗಿದ್ದರೂ ಅರಣ್ಯಇಲಾಖೆ ಸಿಬ್ಬಂದಿಗೆ ಸಹಕಾರ ನೀಡಬೇಕಾದ ಪೊಲೀಸರು ‘ಸಕ್ರಿಯ’ರಾಗಿರಲಿಲ್ಲ. ಜತೆಗೆ, ನೆರೆಯ ತಮಿಳುನಾಡಿನ ಅರಣ್ಯ ಇಲಾಖೆ ಹಾಗೂ ಪೊಲೀಸರು ಕೂಡ ಪ್ರಕರಣವನ್ನು ‘ತಮ್ಮ ಗಡಿ’ಯ ನೆಲೆಯಲ್ಲಿ ನೋಡಿದರು ಎಂಬ ಮಾತುಗಳು ಕೇಳಿ ಬಂದವು.

ಹೀಗೆ, ಇಲಾಖೆ ಹಾಗೂ ಇತರರ ನಡುವೆ ಸಂಘರ್ಷ ನಡೆದಾಗಲೆಲ್ಲ ಸಮನ್ವಯದ ಕೊರತೆ ಎದ್ದು ಕಾಣುತ್ತದೆ. ಯಾರದ್ದೋ ಪ್ರತಿಷ್ಠೆ ರಾರಾಜಿಸುತ್ತದೆ. ಯಾರತ್ತಲೋ ಇಟ್ಟ ಗುರಿ ಇನ್ನ್ಯಾರಿಗೋ ಬಡಿಯುತ್ತದೆ.

* ಕಾಡುವ ‘ಕಹಿ’ಘಟನೆಗಳು
1. ತೊಂಬತ್ತರ ದಶಕ. ನಾಗರಹೊಳೆಯಲ್ಲಿ ಬೇಟೆಗಾರರು,ಕಾಡುಗಳ್ಳರ ವಿರುದ್ಧ ಸಮರ ಸಾರಿದ್ದ ವಲಯ ಅರಣ್ಯಾಧಿಕಾರಿ ಕೆ.ಎಂ.ಚಿಣ್ಣಪ್ಪ ಮೇಲೆ ದಾಳಿ ನಡದಿತ್ತು. ಚೆಕ್‌ಪೋಸ್ಟ್‌ನಲ್ಲಿ ಪ್ರವೇಶ ಬಿಗಿ ಮಾಡಿ, ಅರಣ್ಯ ಅಕ್ರಮಗಳನ್ನು ಮಟ್ಟ ಹಾಕಿದ್ದರಿಂದ ಸಿಟ್ಟಿಗೆದ್ದವರು ಅವರ ವಸತಿಗೃಹಕ್ಕೆ ಬೀಗ ಹಾಕಿ ಬೆಂಕಿ ಹಚ್ಚಿದ್ದರು. ಪತ್ನಿಯೊಂದಿಗೆ ಕಾಡಿನಲ್ಲಿ ನಡೆದುಕೊಂಡೇ ಸಾಗಿ ತಪ್ಪಿಸಿಕೊಂಡಿದ್ದರು ಚಿಣ್ಣಪ್ಪ . ದಾಳಿ ಮಾಡಿದವರ ವಿರುದ್ಧ ಕೇಸು ದಾಖಲಾಗಿತ್ತು. ಮಾತ್ರವಲ್ಲ, ಚಿಣ್ಣಪ್ಪ ವಿರುದ್ಧವೇ ಕೇಸು ದಾಖಲಿಸಿ, ಬಂಧಿಸಲಾಗಿತ್ತು. ಕೈಕೋಳ ತೊಡಿಸಿ ಮೆರವಣಿಗೆಯಲ್ಲಿ ಕರೆದೊಯ್ದು ಅವಮಾನಿಸಲಾಗಿತ್ತು.

2. ನಾಗರಹೊಳೆಯ ಕಲ್ಲಹಳ್ಳ ವಲಯದಲ್ಲಿ 3 ವರ್ಷದ ಹಿಂದೆ ಕಾಡಿಗೆ ನುಗ್ಗಿದ್ದ ಬೇಟೆಗಾರರನ್ನು ಹಿಮ್ಮೆಟ್ಟಿಸಲು ಅರಣ್ಯ ಸಿಬ್ಬಂದಿ ದಾಳಿ ನಡೆಸಿದರು. ಅದರಲ್ಲಿ ಒಬ್ಬಾತ ಕಾಣೆಯಾಗಿದ್ದ. ಇಲಾಖೆಯವರ ಗುಂಡೇಟಿನಿಂದ ಆತ ಮೃತಪಟ್ಟಿದ್ದಾನೆ ಎಂದು ಸ್ಥಳೀಯರು ದೂರಿದರು. ಅರಣ್ಯ ಸಿಬ್ಬಂದಿ ವಿರುದ್ಧ ಕೇಸು ದಾಖಲಾಯಿತು. ಕೊನೆಗೆ ಕಾಣೆಯಾಗಿದ್ದವನು ಕೇರಳದಲ್ಲಿ ಪತ್ತೆಯಾದ !

3. 7 ವರ್ಷದ ಹಿಂದೆ ನಾಗರಹೊಳೆ ವ್ಯಾಪ್ತಿಯ ಡಿ. ಬಿ.ಕುಪ್ಪೆ ಪ್ರಭಾರ ವಲಯ ಅರಣ್ಯಾಧಿಕಾರಿ ವೆಂಕಟೇಶ್ ವಿರುದ್ಧ ಮಾಫಿಯಾ ಶಕ್ತಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದವು. ಕೈ ,ಕಾಲುಗಳಿಗೆ ಬಲವಾದ ಏಟು ಬಿದ್ದಿತ್ತು. ಅರಣ್ಯ ಪ್ರವೇಶ,ಅಕ್ರಮ ಚಟುವಟಿಕೆಗಳಿಗೆ ವಿರೋಧ ವ್ಯಕ್ತಪಡಿಸಿದ್ದು ಕಾರಣ. ಸತತ ಚಿಕಿತ್ಸೆ ನಂತರ ಬದುಕುಳಿದ ವೆಂಕಟೇಶ್ ಈಗ ಮಂಡ್ಯದಲ್ಲಿ ಎಸಿಎಫ್.

4. ವರ್ಷದ ಹಿಂದೆ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮದ್ದೂರು ವನ್ಯಜೀವಿ ವಲಯದಲ್ಲಿ ಕೆಲ ಅಯ್ಯಪ್ಪಸ್ವಾಮಿ ಭಕ್ತರು ಅರಣ್ಯ ಮಧ್ಯೆ ನಿಂತು ಕೀಟಲೆ ಮಾಡುತ್ತಿದ್ದರು.ಪ್ರಶ್ನಿಸಿದ ಆರ್‌ಎಫ್‌ಒ ರತ್ನಪ್ರಭಾ ವಿರುದ್ಧವೇ ತಿರುಗಿ ಬಿದ್ದರು. ಘರ್ಷಣೆಗೆ ತಿರುಗಿತು. ಪರಸ್ಪರ ದೂರು ಪೊಲೀಸ್ ಠಾಣೆಯಲ್ಲಿ ದಾಖಲಾಯಿತು. ಜಾಮೀನು ಪಡೆಯಲು ಸುಪ್ರೀಂಕೋರ್ಟ್ ಮೆಟ್ಟಿಲೇರಬೇಕಾದ ಸನ್ನಿವೇಶ ನಿರ್ಮಾಣವಾಯಿತು.

5. ಜಿಂಕೆ ಬೇಟೆಗಾರರ ಮಾಹಿತಿ ಜಾಡು ಹಿಡಿದು ಅರಣ್ಯ ಇಲಾಖೆಯವರು ಎರಡು ತಿಂಗಳ ಹಿಂದೆ ಎಚ್‌ಡಿಕೋಟೆ ತಾಲೂಕಿನ ಕೆಲ ಗ್ರಾಮಗಳಲ್ಲಿ ದಾಳಿ ನಡೆಸಿದ್ದು, ಘರ್ಷಣೆ ತಿರುಗಿ ಚೆಕ್‌ಪೋಸ್ಟ್ ಮೇಲೆ ದಾಳಿ ನಡೆದಿತ್ತು. ಇದರಲ್ಲಿ ಹೆಡಿಯಾಲ ಆರ್‌ಎಫ್‌ಒ ಗಿರೀಶ್ ಹಾಗೂ ಸಿಬ್ಬಂದಿಗೆ ತೀವ್ರಗಾಯವಾಗಿತ್ತು.

6. ಎಚ್. ಡಿ. ಕೋಟೆ ಕಬಿನಿ ಹಿನ್ನೀರಿನಲ್ಲಿ ಮೀನುಗಾರಿಕೆ ಲಾಬಿ ಜೋರು. 2 ವರ್ಷದ ಹಿಂದೆ ಅರಣ್ಯ ಇಲಾಖೆ ಹಾಗೂ ಸ್ಥಳೀಯರ ನಡುವೆ ಘರ್ಷಣೆ ನಡೆದು ಮೂವರಿಗೆ ತೀವ್ರ ಗಾಯವಾಗಿತ್ತು. ಅನುಮತಿ ಪ್ರದೇಶಕ್ಕಿಂತ ಮುಂದೆಯೂ ಮೀನುಗಾರಿಕೆಗೆ ಅರಣ್ಯ ಇಲಾಖೆಯವರು ಅಡ್ಡಿಪಡಿಸುತ್ತಾರೆ ಎನ್ನುವುದು ಘರ್ಷಣೆಗೆ ಮೂಲ.

7. ಬಂಡೀಪುರ ವ್ಯಾಪ್ತಿಯ ಚಿಕ್ಕಬರಗಿಯಲ್ಲಿ ವರ್ಷದ ಹಿಂದೆ ಹುಲಿ ದಾಳಿ ನಡೆಸಿ ಬಸಪ್ಪ ಎಂಬಾತನನ್ನು ಕೊಂದಿತು. ಗ್ರಾಮಸ್ಥರು ಇಲಾಖೆ ಕಚೇರಿ, ಅತಿಥಿಗೃಹ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಕೆಲವರು ಗಾಯಗೊಂಡು, 150 ಮಂದಿ ವಿರುದ್ಧ ಮೊಕದ್ದಮೆ ದಾಖಲಾಗಿತ್ತು.

8. ನಾಗರಹೊಳೆ ಅಂತರ ಸಂತೆ ವಲಯಕ್ಕೆ ಹೊಂದಿಕೊಂಡ ಗ್ರಾಮದಲ್ಲಿ ಮನೆಗೆ ಚಿರತೆ ನುಗ್ಗಿತು. ರಕ್ಷಣೆಗೆ ತೆರಳಿದ ಆಗಿನ ಆರ್‌ಎಫ್‌ಒ ಪೂವಯ್ಯ ಅವರ ಮೇಲೆ ಹಲ್ಲೆ ನಡೆಯಿತು.

9. ಗುಂಡ್ಲುಪೇಟೆ, ಎಚ್.ಡಿ.ಕೋಟೆ ಹಾಗೂ ನಂಜನಗೂಡು ತಾಲೂಕಿನ ಗಡಿ ಗ್ರಾಮ ಭೀಮನಬೀಡುವಿನಲ್ಲಿ ಅರಣ್ಯ ಸಂಬಂಧಿ ಅಕ್ರಮದಲ್ಲಿ ಭಾಗಿಯಾದವರು ಹೆಚ್ಚು. ‘ಮನೆಗೊಂದು ಗನ್’ ಇಲ್ಲಿನ ವಿಶೇಷ. ಬಹಳಷ್ಟು ಹಳ್ಳಿಗಳಲ್ಲಿ ಇಂಥದೇ ಜಾಲವಿದೆ.

10. ‘ತಂಡ’ದೊಂದಿಗೆ ಕಾಡಿಗೆ ನುಗ್ಗಿದ ಪೊಲೀಸ್ ಅಧಿಕಾರಿಯೊಬ್ಬರು ಪ್ರಾಣಿ ಮೇಲೆ ಗುಂಡಿಟ್ಟಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಸಂಬಂಧಿಸಿದವರನ್ನೆಲ್ಲ ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಿದ್ದಾಯಿತು. ಸದರಿ ಪೊಲೀಸ್ ಅಧಿಕಾರಿ ನಕ್ಸಲರನ್ನು ಹುಡುಕುತ್ತಾ ಕಾಡಿಗೆ ಹೋಗಿದ್ದರು ಎಂಬುದು ಪೊಲೀಸ್ ಇಲಾಖೆ ವಾದ. ಸದ್ಯ ಅಧಿಕಾರಿ ಜಾಮೀನು ಮೇಲಿದ್ದಾರೆ. ಇಲ್ಲಿಯೂ ಮನುಷ್ಯ ‘ಪ್ರತಿಷ್ಠೆ’ಯದ್ದೇ ಜಗಳ.

* ನಾನಾ‘ದಾಳಿ’ಗಳು
- ದಾಂಡೇಲಿ ವನ್ಯಜೀವಿ ವಿಭಾಗದಲ್ಲಿ ಎರಡು ವರ್ಷದ ಹಿಂದೆ ಮೊಸಳೆ ವೀಕ್ಷಣೆಗೆ ಬಂದವರು ಹಲ್ಲೆ ನಡೆಸಿದ್ದರಿಂದ ಎಸಿಎಫ್ ನಾಯಕ್ ಮೃತಪಟ್ಟಿದ್ದರು.

- ಭದ್ರ ಹುಲಿಯೋಜನೆ ವ್ಯಾಪ್ತಿಯ ಲಕ್ಕವಳ್ಳಿ ಸಮೀಪದಲ್ಲೂ ಅರಣ್ಯ ಸಿಬ್ಬಂದಿ ಮೇಲೆ ಸ್ಥಳೀಯರು ದಾಳಿ ನಡಸಿ ವಾಹನ ಸುಟ್ಟು ಹಾಕಿದ್ದರು.

- ಮಲೈ ಮಹಾದೇಶ್ವರ ಬೆಟ್ಟದ ಸಮೀಪ ಚೆಕ್‌ಪೋಸ್ಟ್‌ನಲ್ಲಿ ತಡೆದ ಸಿಬ್ಬಂದಿಯನ್ನೇ ಕೆಲವರು ಅಪಹರಿಸಿ ನಂತರ ಬಿಡುಗಡೆ ಮಾಡಿದ್ದರು.
-----

ನಾಗರಹೊಳೆ ವ್ಯಾಪ್ತಿಯಲ್ಲೂ ಪ್ರತಿ ವರ್ಷ ಹತ್ತಕ್ಕೂ ಹೆಚ್ಚು ದಾಳಿ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಪರಿಸ್ಥಿತಿ ನಿಭಾಯಿಸುವ ಕೆಲಸವನ್ನು ಇಲಾಖೆ ಮಾಡುತ್ತಿದೆ. ಸಿಬ್ಬಂದಿಯಲ್ಲಿ ನೈತಿಕ ಸ್ಥೈರ್ಯ ತುಂಬಿ ಕಾನೂನು ರೀತಿಯಲ್ಲಿ ಹೋರಾಟ ನಡೆಸುತ್ತಿದ್ದೇವೆ.
* ಆರ್.ಗೋಕುಲ್, ನಿರ್ದೇಶಕರು, ರಾಜೀವ್‌ಗಾಂಧಿ ರಾಷ್ಟ್ರೀಯ ಉದ್ಯಾನ.

* ಸಮನ್ವಯದ್ದೇ ಕೊರತೆ !
ಬಂಡೀಪುರ, ನಾಗರಹೊಳೆ, ಬಿಳಿಗಿರಿರಂಗನಬೆಟ್ಟ, ಮಲೈಮಹಾದೇಶ್ವರ ಬೆಟ್ಟ ಅರಣ್ಯ ಪ್ರದೇಶದಲ್ಲಿ ಜೈವಿಕ ಸಂಪತ್ತಿನ ಜತೆಗೆ ವನ್ಯಸಂಪತ್ತು ಅಗಾಧ. ವನ್ಯಜೀವಿ ಬೇಟೆ, ಮರ, ಮರಳು, ದನ ಸಾಗಣೆ ಲಾಬಿಯೂ ಜೋರು. ಇದನ್ನು ತಡೆಯುವ ಪ್ರಯತ್ನದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಸಮಸ್ಯೆಯಾದರೆ ಅರಣ್ಯ ಇಲಾಖೆಗೆ ಪೊಲೀಸರ ಸಹಕಾರ ಬೇಕೇ ಬೇಕು. ಆದರೆ ಬಹಳಷ್ಟು ಸನ್ನಿವೇಶದಲ್ಲಿ ಇಂಥ ಸಹಕಾರ ಸಿಗುವುದಿಲ್ಲ. ‘‘ಕೆಳ ಹಂತದಲ್ಲಿ ಸಮನ್ವಯ ಕೊರತೆ ಸಾಮಾನ್ಯ. ಡಿವೈಎಸ್ಪಿ ,ಎಸಿಎಫ್, ಸರ್ಕಲ್ ಇನ್ಸ್‌ಪೆಕ್ಟರ್,ಆರ್‌ಎಫ್‌ಒ, ಎಸ್‌ಐ, ಡಿಆರ್‌ಎಫ್‌ಒ ಹಂತದಲ್ಲಿ ತಿಂಗಳಿಗೊಮ್ಮೆಯಾದರೂ ಸಭೆ ನಡೆದರೆ ಸಮನ್ವಯ ಸಾಧ್ಯವಾಗಬಹುದು. ಅರಣ್ಯ ಇಲಾಖೆಯವರು ಸಂಕಷ್ಟ ಎದುರಿಸುವುದೂ ತಪ್ಪುತ್ತೆ. ಇದಕ್ಕಾಗಿ ಅರಣ್ಯ-ಪೊಲೀಸ್ ಇಲಾಖೆಯ ಸಮನ್ವಯ ಸಭೆ ನಡೆಯಬೇಕು’’ಎನ್ನುವುದು ವಾಯ್ಸ್ ಫಾರ್ ವೈಲ್ಡ್‌ಲೈಫ್ ಸಂಸ್ಥೆಯ ಕೆ.ಎಸ್.ಸುಧೀರ್ ಸಲಹೆ.

* ‘ನೆರೆ’ಯವರ ಅಸಹಕಾರ
ಅತ್ಯಾಧುನಿಕ ತಂತ್ರಜ್ಞಾನವಿದ್ದರೂ ಹಲವು ಬೇಟೆಗಾರರ ಬಂಧನ ಸಾಧ್ಯವಾಗಿಲ್ಲ. ಇದಕ್ಕೆ ರಾಜ್ಯ ಹಾಗೂ ನೆರೆ ರಾಜ್ಯಗಳಲ್ಲಿನ ಇಲಾಕಾ ಸಮನ್ವಯ ಕೊರತೆಯೂ ಕಾರಣ. ಮಲೆ ಮಹಾದೇಶ್ವರಬೆಟ್ಟ ಹಾಗೂ ಕಾವೇರಿ ವನ್ಯಜೀವಿಧಾಮಗಳ ವ್ಯಾಪ್ತಿಯ, ತಮಿಳುನಾಡಿಗೆ ಸೇರಿದ ಪೂಂಜಿಕೊರೈ, ಕಾಡುಕೊರೆ, ಗೋವಿಂದಪ್ಪಾಡಿ, ಚೆಟ್ಟಿಪಟ್ಟಿ ಗ್ರಾಮಗಳಲ್ಲಿ ಬೇಟೆಗಾರರು ಹೆಚ್ಚು. ‘‘ಅವರ ಬಂಧನಕ್ಕೆ ತಮಿಳುನಾಡು ಅರಣ್ಯ ಇಲಾಖೆ ಅಧಿಕಾರಿಗಳು ಸಹಕರಿಸುತ್ತಿಲ್ಲ . ಉಭಯ ಇಲಾಖೆ ಅಧಿಕಾರಿಗಳ ಜಂಟಿ ಸಭೆ ನಡೆಸುವ ಪ್ರಸ್ತಾಪಕ್ಕೂ ಸ್ಪಂದಿಸುತ್ತಿಲ್ಲ ’’ಎಂಬುದು ಆರೋಪ. ಕಾಡುಕೊರೆ ಹಾಗೂ ಗೋವಿಂದಪ್ಪಾಡಿ ಭಾಗದಲ್ಲಿ ಇಂದಿಗೂ ವೀರಪ್ಪನ್ ಆರಾಧಕರಿದ್ದಾರೆ. ಈ ಊರುಗಳಲ್ಲಿ ವೀರಪ್ಪನ್ ಸತ್ತ 10 ವರ್ಷದ ನೆನಪಿಗಾಗಿ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು !

* ಎದೆ ನಡುಗಿಸುವ ಕುಖ್ಯಾತರು
- ವೀರಪ್ಪನ್ ಅಟ್ಟಹಾಸ ಅಂತ್ಯದ ನಂತರವೂ ಆಗಾಗ ಈ ಪ್ರದೇಶದಲ್ಲಿ ‘ಮರಿ’ ವೀರಪ್ಪನ್‌ಗಳ ಉಪಟಳ ಇಣುಕುತ್ತಿದೆ. ಮರಿ ವೀರಪ್ಪನ್ ಎನ್ನಿಸಿಕೊಂಡಿದ್ದ ಸರವಣನ್ ಕಾವೇರಿ ವನ್ಯಧಾಮ ವ್ಯಾಪ್ತಿಯಲ್ಲಿ ಈಚೆಗೆ ಸಿಕ್ಕಿಬಿದ್ದ.

- ಹುಲಿ ಹಂತಕರಾದ ಗುಂಡ್ಲು ಪೇಟೆ ತಾಲೂಕಿನ ಪಾಪ, ಮಹಾದೇವರ ವಿರುದ್ಧ ನಾಗರಹೊಳೆ,ಬಂಡೀಪುರ ವಿಭಾಗಗಳಲ್ಲಿ ಮೊಕದ್ದಮೆಗಳಿವೆ. ಐದಾರು ವಲಯದವರು ಇವರ ವಿರುದ್ಧದ ಪ್ರಕರಣಗಳ ವಿಚಾರಣೆಗೆ ಕಾಯುತ್ತಿದ್ದಾರೆ.

- ಮೂರು ವರ್ಷದ ಹಿಂದೆ ಕೊಳ್ಳೇಗಾಲ ಭಾಗದಲ್ಲಿ ಸೆರೆ ಸಿಕ್ಕ ಮಧ್ಯ ಪ್ರದೇಶ ಮೂಲದ ಐವರು ದಟ್ಟಾರಣ್ಯದಲ್ಲಿ ಜಾಟ್ರ್ಯಾಪ್ ಅಳವಡಿಸಿ, ಹುಲಿ ಹತ್ಯೆಗೆ ಯೋಜನೆ ರೂಪಿಸಿದ್ದ ನಟೋರಿಯಸ್ ಖದೀಮರು.ಪೀಚಲು ದೇಹದವರಾದರೂ ಕೃತ್ಯ ಎದೆ ನಡುಗಿಸುವಂತದ್ದು.ಜಾಟ್ರ್ಯಾಪ್‌ಗೆ ಕಾಲು ಸಿಕ್ಕಿಸಿಕೊಂಡ ಹುಲಿಯ ಕಣ್ಣನ್ನು ಸಲಾಕೆಯಿಂದ ಇರಿದು ಕೊಲ್ಲುವುದು, ಚರ್ಮವನ್ನು ಲೋಪವಾಗದಂತೆ ತೆಗೆಯುವುದರಲ್ಲಿ ನಿಪುಣರು.ಅವರ ಹಿಂದೆ ಭಾರಿ ಜಾಲದ ಶಂಕೆ ವ್ಯಕ್ತವಾಗಿತ್ತು.

- ಕೆಲವರು ಮಾಂಸಕ್ಕಾಗಿ ಜಿಂಕೆ, ಕಡವೆ, ಮೊಲ,ಕಾಡುಹಂದಿ,ಗೌಜಲಕ್ಕೆ ಇತರೆ ಪ್ರಾಣಿ,ಪಕ್ಷಿಗಳನ್ನು ಬೇಟೆಯಾಡಿ,ಮಾರುತ್ತಾರೆ. ಮಾಂಸಕ್ಕಾಗಿ ಸುಂದರ ನವಿಲನ್ನು ಕೊಲ್ಲುವವರೂ ಇದ್ದಾರೆ. ಹುಲಿ ಹಂತಕರಿಗೆ ಮಾಂಸ ಬೇಕಿಲ್ಲ. ಹುಲಿಯ ಚರ್ಮ, ಉಗುರುಗಳು ಬೇಕು. ಜಾಟ್ರ್ಯಾಪ್ ಹಂತಕರಿಗೆ ಹುಲಿ ಚರ್ಮ ತರುವಂತೆ ಸುಪಾರಿ ನೀಡಲಾಗಿತ್ತಂತೆ. ಮಾರುವಾಗ ಸಿಕ್ಕಿ ಬಿದ್ದವರು ಹಲವರು. ಇವುಗಳ ‘ನಕಲಿ ಮಾಲು’ಗಳನ್ನು ಮಾರುವವರದ್ದೇ ದೊಡ್ಡ ಜಾಲ.

- ಈಗಲೂ ಅಲ್ಲಲ್ಲಿ ದಂತಕ್ಕಾಗಿ ಆನೆ ಹತ್ಯೆಯ ಸುದ್ದಿಗಳು ಬರುತ್ತಲೇ ಇವೆ. ಈಚೆಗೆ, ಕೊಡಗಿನ ಗಾಳಿಬೀಡು ಸಮೀಪ ದಂತಕ್ಕಾಗಿ ಕಾಡಾನೆಯನ್ನು ಗುಂಡಿಟ್ಟು ಕೊಂಡ ಮೂವರನ್ನು ಬಂಧಿಸಲಾಗಿದೆ. ಈ ಪೈಕಿ ಇಬ್ಬರು ಅರಣ್ಯ ಇಲಾಖೆಯ ವಾಚರ್ ಒಬ್ಬರ ಇಬ್ಬರು ಹರೆಯದ ಮಕ್ಕಳು!

* ಹುಲಿ,ಹೆಜ್ಜೆ ತಂತ್ರಜ್ಞಾನ
ಸಿಬ್ಬಂದಿಯ ‘ಬೀಟ್’ ಮೇಲೆ ನಿಗಾ ಇಡಲು ಹುಲಿ, ಹೆಜ್ಜೆ ಎನ್ನುವ ತಂತ್ರಜ್ಞಾನ ಆಧರಿತ ಸೇವೆ ಬಳಸಲಾಗುತ್ತಿದೆ. ಸಿಬ್ಬಂದಿ ಕಚೇರಿಯಲ್ಲೇ ಕುಳಿತು ‘ಬೀಟ್ ಮಾಡುವುದನ್ನು ’ತಪ್ಪಿಸುವುದು ಉದ್ದೇಶ. ಈಗಾಗಲೇ ಬಂಡೀಪುರ, ಬಿಆರ್‌ಟಿ, ಕಾವೇರಿ ವನ್ಯಧಾಮದಲ್ಲಿ ಜಾರಿಯಾಗಿದೆ. ನಾಗರಹೊಳೆಯ ಐದು ವಲಯದಲ್ಲಿ ಅನುಷ್ಠಾನಗೊಳಿಸಿದ್ದು, ಎರಡು ವಲಯಗಳಿಗೆ ಜಾರಿಯಾಗಬೇಕಿದೆ. ಈ ಸಾಫ್ಟ್‌ವೇರ್ ಉಪಯೋಗದ ಸಮಗ್ರ ವರದಿ ಇಲಾಖೆ ಬಳಿ ಇದ್ದಂತಿಲ್ಲ.

* ತಾರ್ಕಿಕ ಅಂತ್ಯವಿಲ್ಲ
ಅರಣ್ಯ ಸಂಬಂಧಿ ದಾಳಿ ಇಲ್ಲವೇ ಘರ್ಷಣೆ ವೇಳೆ ದಾಖಲಾಗುವ ಪ್ರಕರಣಗಳಿಗೆ ತಾರ್ಕಿಕ ಅಂತ್ಯವೇ ಸಿಗುತ್ತಿಲ್ಲ. ಅದರಲ್ಲೂ ಅರಣ್ಯ ಸಿಬ್ಬಂದಿ ಮೇಲೆ ಹಲ್ಲೆ, ಆಸ್ತಿಪಾಸ್ತಿ ನಾಶದ ಪ್ರಕರಣಗಳಲ್ಲಿ ಮೊಕದ್ದಮೆ ದಾಖಲಾದರೂ ಶಿಕ್ಷೆಯಾಗಿರುವ ಪ್ರಮಾಣ ಅತ್ಯಲ್ಪ.ದಾಳಿಗೆ ಪ್ರೇರಣೆ ನೀಡುವ ಶಕ್ತಿಗಳಿಗೆ ಇದೂ ಬಲ ತಂದಂತಿದೆ. ‘‘ಹಲವು ವರ್ಷಗಳಿಂದ ಅರಣ್ಯ ಸಂಬಂಧಿ ದಾಳಿ ಮೊಕದ್ದಮೆಗಳಲ್ಲಿ ಸಿಲುಕಿದವರಿಗೆ ಶಿಕ್ಷೆಯೇ ಆಗುತ್ತಿಲ್ಲ. ಅರಣ್ಯ ರಕ್ಷಣೆ ವಿಚಾರ ದಲ್ಲಿ ಸರಕಾರದ ಕಠಿಣ ನಿಲುವು ಅಗತ್ಯ.ಇಲಾಖೆಯವರು ತಪ್ಪು ಮಾಡಿದರೆ ಅವರ ವಿರುದ್ಧವೂ ಕ್ರಮ ಆಗಬೇಕಾಗುತ್ತದೆ’’ ಎನ್ನುತ್ತಾರೆ ಲಿಫ್ಟ್ ಸಂಸ್ಥೆಯ ಪಿ.ಎಂ.ಮುತ್ತಣ್ಣ.

* ಸಿಬ್ಬಂದಿ ಕೊರತೆ
ಕಾವೇರಿ ಹಾಗೂ ಮಲೆ ಮಹಾದೇಶ್ವರ ವನ್ಯಧಾಮದ ಅರಣ್ಯ ವಿಸ್ತೀರ್ಣ ಹೆಚ್ಚು ಕಡಿಮೆ 2 ಸಾವಿರ ಚದರ ಕಿ.ಮೀ. ಇದರ ರಕ್ಷಣೆಗೆ ಇರುವ ಸಿಬ್ಬಂದಿ ನೂರು ದಾಟಿಲ್ಲ. ಇದೂ ಕಾಡುಗಳ್ಳರಿಗೆ ಒಂದರ್ಥದಲ್ಲಿ ‘ವರ’.

- ನಾಗರಹೊಳೆಯಲ್ಲಿ ಶೇ.90ರಷ್ಟು ಹುದ್ದೆ ಭರ್ತಿ. 65 ವಾಚರ್, 48 ಗಾರ್ಡ್, 23 ಫಾರೆಸ್ಟರ್ ನಿಯೋಜಿಸಲಾಗಿದೆ. ಎಲ್ಲಾ ವಲಯಗಳಲ್ಲಿ ಯುವ ಆರ್‌ಎಫ್‌ಒಗಳಿದ್ದಾರೆ.

- ಬಂಡೀಪುರದಂಥ ದೊಡ್ಡ ವಿಭಾಗದಲ್ಲಿ ಇನ್ನೂ ಶೇ.40ರಷ್ಟು ಸಿಬ್ಬಂದಿ ಹುದ್ದೆ ಖಾಲಿ. ಫಾರೆಸ್ಟರ್, ಗಾರ್ಡ್ ಹಾಗೂ ವಾಚರ್‌ಗಳ ಹುದ್ದೆ ನೇಮಕಕ್ಕೆ ಬೇಡಿಕೆಯಿದೆ.

- ಕಾವೇರಿ ಹಾಗೂ ಮಲೈ ಮಹಾದೇಶ್ವರ ವಿಭಾಗಗಳಲ್ಲೂ ಶೇ.50ರಷ್ಟು ಸಿಬ್ಬಂದಿ ಕೊರತೆ.

* ಚೆಕ್‌ಪೋಸ್ಟ್,ಕ್ಯಾಂಪ್
- ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಯ ಪ್ರಮುಖ ಅರಣ್ಯ ಪ್ರದೇಶದಲ್ಲಿ 70ಕ್ಕೂ ಹೆಚ್ಚು ಚೆಕ್‌ಪೋಸ್ಟ್, ಸುಮಾರು 250ಕ್ಯಾಂಪ್‌ಗಳಿವೆ.

- ಕ್ಯಾಂಪ್‌ಗಳಲ್ಲಿ ತಲಾ ಮೂವರು ಸಿಬ್ಬಂದಿ ಪಾಳಿ ಆಧಾರದಲ್ಲಿ ಕಾರ‌್ಯನಿರ್ವಹಿಸುತ್ತಾರೆ.

- ಗಾರ್ಡ್‌ಗೆ ಗನ್‌ಗಳನ್ನು ಒದಗಿಸಲಾಗಿದೆ. ವೈರ್‌ಲೆಸ್ ಸೇವೆಯೂ ಇರುತ್ತದೆ.

- ಸೂಕ್ಷ್ಮ ಚೆಕ್‌ಪೋಸ್ಟ್‌ಗಳಲ್ಲಿ ಸಿಬ್ಬಂದಿ ಹೆಚ್ಚಿರುತ್ತಾರೆರ. ಗಡಿ ಭಾಗದ ಚೆಕ್‌ಪೋಸ್ಟ್‌ಗಳಿಗೆ ಹೆಚ್ಚಿನ ಭದ್ರತೆಯ ಬೇಡಿಕೆಯಿದ್ದರೂ ಜಾರಿಯಾಗಿಲ್ಲ.

* ‘ತಡೆ’ಯಿಲ್ಲದ ಬೇಟೆ ತಡೆ ಶಿಬಿರ!
- ಬಂಡೀಪುರ,ನಾಗರಹೊಳೆ ವ್ಯಾಪ್ತಿಯಲ್ಲಿರುವ ಬೇಟೆ ತಡೆ ಶಿಬಿರಗಳಲ್ಲಿರುವ ಸಿಬ್ಬಂದಿ ಜೀವ ಕೈಲಿ ಹಿಡಿದುಕೊಂಡೇ ಕೆಲಸ ಮಾಡಬೇಕು. ಇಲ್ಲಿಗೆ ಸುಲಭವಾಗಿ ಪ್ರಾಣಿಗಳು ನುಗ್ಗಬಹುದು. ಕರಡಿ,ಆನೆಗಳು ಬಂದ ಉದಾಹರಣೆಗಳಿವೆ. ಆನೆಯೊಂದು ಒಳ ನುಗ್ಗಿ ಹಿಟ್ಟನ್ನು ಮೈಮೇಲೆ ಚೆಲ್ಲಿಕೊಂಡಿತ್ತು. ಅಲ್ಲಿಗೆ ಬಂದ ಸಿಬ್ಬಂದಿ ‘ಬಿಳಿಯಾನೆ’ ಕಂಡು ಅವಾಕ್ಕಾಗಿದ್ದರು!

- ಕೇರಳದಲ್ಲಿ ಬೇಟೆ ತಡೆ ಶಿಬಿರಗಳಿಗೆ ಟಿವಿ, ಗ್ಯಾಸ್‌ನಂಥ ಸೌಲಭ್ಯಗಳು ಬಂದಿವೆ. ಕರ್ನಾಟಕದಲ್ಲಿ ಕಟ್ಟಿಗೆ ಅಡುಗೆ ಅನಿವಾರ‌್ಯ. ಸುತ್ತಲೂ ಮೆಷ್ ಅಳವಡಿಸಿ ಸುರಕ್ಷತೆಗೆ ಒತ್ತು ನೀಡಬೇಕೆನ್ನುವ ಸಲಹೆ ಇಲಾಖೆಯಲ್ಲಿ ಕೊಳೆಯುತ್ತಿದೆ. ಇಂಥಲ್ಲಿ ಕಾರ‌್ಯ ನಿರ್ವಹಿಸುವ ಸಿಬ್ಬಂದಿ ಕಾಡಾನೆಗಳಿಗಿಂತ, ಇಲಾಖೆಯೊಳಗಿನ ‘ಬಿಳಿಯಾನೆ’ಗಳನ್ನು ,ಅವರ ಅಟಾಟೋಪವನ್ನು ಕಂಡು ಕರುಬುವುದು ‘ಸಹಜ’!

* ಓಬಿರಾಯನ ಕಾಲದ ಗನ್
ಅರಣ್ಯ ಇಲಾಖೆ ಬಳಸುವುದು ಓಬಿರಾಯನ ಕಾಲದ ಗನ್, ರೈಫಲ್‌ಗಳನ್ನೇ. ಗಾರ್ಡ್, ಮೇಲ್ಪಟ್ಟ ಹುದ್ದೆಯವರಿಗೆ 12 ಬೋರ್ ಗನ್, 315 ರೈಫಲ್, ಪಿಸ್ತೂಲ್. ವಿಶೇಷ ಹುಲಿ ಕಾರ‌್ಯಾಚರಣೆ ಪಡೆ ಸಿಬ್ಬಂದಿಗೂ ಇದೇ ಶಸ್ತ್ರಾಸ್ತ್ರ. ಪೂನಾ ಬಳಿಯ ಶಸ್ತ್ರಾಸ್ತ್ರ ಘಟಕದಿಂದ ಇವುಗಳ ಸರಬರಾಜಾಗುತ್ತೆ. ನೆರೆಯ ತಮಿಳುನಾಡಿನವರು ಹೊರದೇಶದ,ಅತ್ಯಾಧುನಿಕ ಶಸ್ತ್ರಾಸ್ತ್ರ ಬಳಸುತ್ತಾರೆ.ನಮ್ಮಲ್ಲೂ 3 ವರ್ಷದ ಹಿಂದೆ ಅತ್ಯಾಧುನಿಕ ಶಸ್ತ್ರಾಸ್ತ್ರ ನೀಡುವ ಪ್ರಯತ್ನವಾಗಿ 42 ಗನ್ ವಿತರಿಸಲಾಯಿತು. ಅದು ಮುಂದುವರಿಯಲಿಲ್ಲ.

ವನ್ಯ ಜೀವಿ ಭೇಟೆ
ವನ್ಯ ಜೀವಿ ಶಿಕಾರಿ ಕೆಲವರಿಗೆ ಹವ್ಯಾಸ. ಮಲೆನಾಡು ಭಾಗದಲ್ಲಿ ವನ್ಯ ಪ್ರಾಣಿ ಶಿಕಾರಿ ಮಾಮೂಲಿಯಂತಾಗಿದ್ದು ದೊಡ್ಡ ಶಿಕಾರಿ, ಮರಸು ಕೂರುವುದು, ಕೋವಿ ಕಟ್ಟುವುದು ( ಶಿಸ್ತು), ನಾಡಬಾಂಬ್ ಇಡುವ ಮೂಲಕ ಪ್ರಾಣಿಬೇಟೆ ಮಾಡಲಾಗುತ್ತಿದೆ. ಹಳ್ಳಿಗರ ಪಾಲಿಗೆ ಶಿಕಾರಿ ಒಂದು ಹವ್ಯಾಸದಂತೆ ಚಲಾವಣೆಯಲ್ಲಿದೆ.

ಇತ್ತೀಚಿನ ವರ್ಷದಲ್ಲಿ ಶಿಕಾರಿ ವಿರುದ್ಧ ಅರಣ್ಯ ಇಲಾಖೆ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿರುವುದರಿಂದ ಕಡಿಮೆ ಪ್ರಮಾಣದಲ್ಲಿ ಶಿಕಾರಿ ನಡೆಯುಂತಾಗಿದೆ. ಕಾಡುಕೋಣ, ಜಿಂಕೆ.ಕುರಿ, ಮೊಲ, ಕಾಡುಹಂದಿ, ಬರ್ಕಾ,ಕಬ್ಬೆಕ್ಕು, ಪುಂನಗಿನಬೆಕ್ಕು,ಅಣಲು,ಕಡವೆ ಮುಂತಾದ ಪ್ರಾಣಿಗಳ ಬೇಟೆ ಮಾಮೂಲಿ ಆಗಿದೆ. ಇತ್ತೀಚೆಗೆ ಮಂಡಗದ್ದೆ, ಆಗುಂಬೆ ವಲಯಾರಣ್ಯ ವ್ಯಾಪ್ತಿಯಲ್ಲಿ ವನ್ಯಜೀವಿ ಶಿಕಾರಿಯಲ್ಲಿ ಭಾಗಿ ಆದವರ ವಿರುದ್ಧ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ