ಬೆಂಗಳೂರು: ಜಾತ್ಯತೀತ ಜನತಾದಳದ ನೂತನ ಕಚೇರಿ ಉದ್ಘಾಟನೆಗೆ ಮಾಜಿ ಉಪಪ್ರಧಾನಿ ಹಾಗೂ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಅವರು ಆಗಮಿಸಲಿದ್ದಾರೆ.
ನವೆಂಬರ್ನಲ್ಲಿ ಪಕ್ಷದ ಹೊಸ ಕಚೇರಿ ಉದ್ಘಾಟನೆಯಾಗಲಿದ್ದು ಜಯಪ್ರಕಾಶ್ ನಾರಾಯಣ ಚಳವಳಿಯಲ್ಲಿ ಪಾಲ್ಗೊಂಡಿದ್ದ ಆಡ್ವಾಣಿ ಸೇರಿದಂತೆ ಅನೇಕ ಹಿರಿಯ ನಾಯಕರನ್ನು ಆಹ್ವಾನಿಸಲಾಗುವುದು ಎಂದು ಜೆಡಿಎಸ್ನ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬೆಂಗಳೂರಿನ ರೇಸ್ಕೋರ್ಸ್ ರಸ್ತೆಯಲ್ಲಿದ್ದ ಜೆಡಿಎಸ್ ಕಚೇರಿಯನ್ನು ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ಗೆ ಬಿಟ್ಟುಕೊಟ್ಟಿದ್ದರಿಂದ ಬಿಬಿಎಂಪಿ ಪಕ್ಷದ ಕಚೇರಿಗಾಗಿ ಪ್ರತ್ಯೇಕ ಜಾಗ ನೀಡಿದೆ. ಈ ಕಚೇರಿ ನವೆಂಬರ್ನಲ್ಲಿ ಉದ್ಘಾಟನೆಗೊಳ್ಳಲು ಸಜ್ಜಾಗುತ್ತಿದೆ.
ಪ್ರತಿಷ್ಠೆ ಮಾಡಬೇಡಿ
ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವೆ ವಿವಾದ ಸೃಷ್ಟಿಸಿರುವ ಮಹದಾಯಿ ನದಿ ನೀರಿನ ಹಂಚಿಕೆ ವಿಷಯದಲ್ಲಿ ರಾಜ್ಯ ಸರಕಾರ ಪ್ರತಿಷ್ಠೆ ಮಾಡಬಾರದು ಎಂದು ದೇವೇಗೌಡರು ಹೇಳಿದ್ದಾರೆ.
''ನೀರು ಹಂಚಿಕೆ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಪ್ರತಿಷ್ಠೆ ಬಿಟ್ಟು ಗಂಭೀರ ಪ್ರಯತ್ನ ನಡೆಸಬೇಕು,'' ಎಂದು ತಿಳಿಸಿದರು.
''ಧಾರವಾಡ, ಗದಗ, ಬೆಳಗಾವಿ ಜಿಲ್ಲೆಗಳ ಕುಡಿಯುವ ನೀರು ಪೂರೈಸುವ ಕಳಸಾ ಬಂಡೂರಿ ನಾಲಾ ಯೋಜನೆಗೆ ಮಧ್ಯಾಂತರ ಪರಿಹಾರವಾಗಿ ರಾಜ್ಯಕ್ಕೆ 7.56 ಟಿಎಂಸಿ ನೀರು ಬಿಡುಗಡೆಗೆ ಆದೇಶ ನೀಡಬೇಕೆಂದು ಕೋರಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಆದರೆ, ಅದನ್ನು ನ್ಯಾಯಮಂಡಲಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆ ನಡೆದ ಬಳಿಕ ಪ್ರಧಾನಿ ಮಧ್ಯಸ್ಥಿಕೆಯಿಂದ ಮಾತ್ರ ಈ ವಿವಾದಕ್ಕೆ ಪರಿಹಾರ ಸಿಗಲಿದೆ,'' ಎಂದು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ದೇವೇಗೌಡರು ಈ ಹೇಳಿಕೆ ನೀಡಿದ್ದಾರೆ.