ಬೆಂಗಳೂರು: ಸಂಪುಟದಿಂದ ಅಂಬರೀಷ್ ಅವರನ್ನು ಕೈಬಿಟ್ಟಿದ್ದನ್ನು ಖಂಡಿಸಿ ನಾಲ್ವರು ನಿರ್ಮಾಪಕರು ತಮ್ಮ ನಿರ್ಮಾಣದ ಸಿನಿಮಾ ಚಿತ್ರೀಕರಣವನ್ನು ಬಂದ್ ಮಾಡಿ ಪ್ರತಿಭಟಿಸಿದ್ದಾರೆ.
ಇಡೀ ಚಿತ್ರರಂಗ ಬಂದ್ ಮಾಡುವುದಾಗಿ ಹೇಳಿದ್ದರೂ ಆ ಕುರಿತು ಇನ್ನು ಸ್ಪಷ್ಟ ತೀರ್ಮಾನ ಆಗದ ಹಿನ್ನೆಲೆಯಲ್ಲಿ ಅಂಬರೀಷ್ ನಿಷ್ಠರಾದ ಕೆ.ಮಂಜು, ರಾಕ್ಲೈನ್ ವೆಂಕಟೇಶ್, ಉಮಾಪತಿ ಸೇರಿ ನಾಲ್ವರು ಈ ತೀರ್ಮಾನ ತೆಗೆದುಕೊಂಡಿದ್ದು, ಚಿತ್ರೀಕರಣವನ್ನು ಸೋಮವಾರ ಸಾಂಕೇತಿಕವಾಗಿ ನಿಲ್ಲಿಸಿ ಪ್ರತಿಭಟನೆ ನಡೆಸಿದರು.
''ಅಂಬರೀಷ್ ಸಚಿವರಾಗಿದ್ದರೆ ಸಿನಿಮಾರಂಗಕ್ಕೆ ದೊಡ್ಡ ಶಕ್ತಿ ಬರುತ್ತದೆ. ಸಿನಿಮಾ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಸಹಾಯಕವಾಗುತ್ತದೆ. ಹೀಗಾಗಿ ಅವರಿಗೆ ಸಚಿವ ಸ್ಥಾನ ಮರಳಿ ಕೊಡಿಸಬೇಕು,'' ಎಂದು ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ನೀಡಿದ್ದಾರೆ.
ಈ ಬಗ್ಗೆ ಪತ್ರಿಕೆ ಜತೆ ಮಾತನಾಡಿದ ನಿರ್ಮಾಪಕ ಕೆ.ಮಂಜು, ''ಅಂಬರೀಷ್ ಸಚಿವರಾಗಿದ್ದರೆ ಚಿತ್ರ ರಂಗಕ್ಕೆ ಆನೆ ಬಲ ಇದ್ದಂತೆ. ಕಾವೇರಿ ಸಮಸ್ಯೆ ಎದುರಾದಾಗ ಯಾರನ್ನೂ ಕೇಳದೆ ರಾಜೀನಾಮೆ ನೀಡಿ ರಾಜ್ಯಕ್ಕೆ ನ್ಯಾಯ ಒದಗಿಸಿದ್ದರು. ಇಂಥವರನ್ನು ಸಚಿವ ಸ್ಥಾನದಿಂದ ತೆಗೆದದ್ದು ನಮಗೆಲ್ಲಾ ತುಂಬ ನೋವಾಗಿದೆ. ಹೀಗಾಗಿ ಚಿತ್ರೀಕರಣವನ್ನು ಸಾಂಕೇತಿಕವಾಗಿ ನಿಲ್ಲಿಸಿದ್ದೇವೆ. ಸಿಎಂ ಸಿದ್ದರಾಮಯ್ಯ ಅವರು ಅಂಬರೀಷ್ ಅವರನ್ನು ಮತ್ತೆ ಮಂತ್ರಿ ಸ್ಥಾನಕ್ಕೆ ಕರೆಸಿಕೊಳ್ಳದಿದ್ದರೆ ಶಾಶ್ವತವಾಗಿ ಚಿತ್ರೀಕರಣ ಸ್ಥಗಿತಗೊಳಿಸಲಾಗುವುದು,''ಎಂದು ಎಚ್ಚರಿಕೆ ನೀಡಿದ್ದಾರೆ.
ಸಂಘದ ತೀರ್ಮಾನ ಅಲ್ಲ
ಅಂಬರೀಷ್ ವಿಚಾರದಲ್ಲಿ ಸಿನಿಮಾ ಚಿತ್ರೀಕರಣ ನಿಲ್ಲಿಸುವುದಕ್ಕೆ ಚಿತ್ರರಂಗದ ಯಾವುದೇ ಸಂಘಗಳಿಂದ ತೀರ್ಮಾನ ತೆಗೆದುಕೊಂಡಿಲ್ಲ. ಅಂಬರೀಷ್ ಅವರ ಕೆಲವು ಆತ್ಮೀಯ ನಿರ್ಮಾಪಕರು ಚಿತ್ರೀಕರಣ ನಿಲ್ಲಿಸಿರಬಹುದು. ಅದು ನಮಗೆ ಗೊತ್ತಿಲ್ಲ.
-ಸಾ.ರ.ಗೋವಿಂದು