Please enable javascript.ಆಮಂತ್ರಣ ಪತ್ರಿಕೆ ಯಾವಾಗ ಬರೆಯಬೇಕು - ಆಮಂತ್ರಣ ಪತ್ರಿಕೆ ಯಾವಾಗ ಬರೆಯಬೇಕು - Vijay Karnataka

ಆಮಂತ್ರಣ ಪತ್ರಿಕೆ ಯಾವಾಗ ಬರೆಯಬೇಕು

Vijaya Karnataka Web 21 Dec 2013, 3:00 am
Subscribe

ಯಾವುದೇ ಶುಭ ಕಾರ್ಯಕ್ಕೂ ಮೊದಲು ಆಮಂತ್ರಣ ಪತ್ರ ಸಿದ್ಧಪಡಿಸುವಾಗ ಶುಭ ತಿಥಿ ವಾರ ಮತ್ತು ನಕ್ಷತ್ರಗಳನ್ನು ನೋಡುವುದು ಅಗತ್ಯವಾಗಿದೆ.

ಆಮಂತ್ರಣ ಪತ್ರಿಕೆ ಯಾವಾಗ ಬರೆಯಬೇಕು
* ಶ್ರೀಪಾದ ಆರ್.ಕುಲಕರ್ಣಿ

ಸಂಬಂಧಗಳನ್ನು ಗಟ್ಟಿಗೊಳಿಸಲು, ಹೊಸ ಸಂಬಂಧಗಳನ್ನು ಬೆಳೆಸಲು ಆಮಂತ್ರಣ ಪತ್ರಿಕೆ ಮಹತ್ವದ ಪಾತ್ರವಹಿಸುತ್ತದೆ. ಮಗುವಿನ ನಾಮಕರಣ, ಉಪನಯನ, ವಿವಾಹ ಮತ್ತು ಗೃಹಪ್ರವೇಶಾದಿ ಎಲ್ಲ ಕಾರ್ಯಗಳಲ್ಲಿ ಮುಹೂರ್ತವನ್ನು ನಿಗದಿಪಡಿಸಲು ವಿಶೇಷ ಮಹತ್ವ ಕೊಡಲಾಗುತ್ತದೆ. ಆದರೆ ಆಮಂತ್ರಣ ಪತ್ರಿಕೆಯ ವಿಷಯದಲ್ಲಿ ಈ ಅಂಶವನ್ನು ನಿರ್ಲಕ್ಷಿಸಲಾಗಿದೆ. ಆಮಂತ್ರಣ ಪತ್ರಿಕೆಯನ್ನು ಮುದ್ರಣಕ್ಕೆ ಕೊಡುವ ಪೂರ್ವದಲ್ಲಿ ಒಂದು ಹಸ್ತ ಲಿಖಿತ ಪ್ರತಿಯನ್ನು ತಯಾರಿಸಬೇಕು. ಅದನ್ನು ತಯಾರಿಸಲು ಮುದ್ರಣಕ್ಕೆ ಕೊಡಲು ಶುಭ ತಿಥಿ ವಾರ ಮತ್ತು ನಕ್ಷತ್ರಗಳನ್ನು ನೋಡುವುದು ಅವಶ್ಯವಾಗಿದೆ. ಆಮಂತ್ರಣ ಪತ್ರಿಕೆಗಳನ್ನು ಕೊಡಲು ವ್ಯಕ್ತಿಗತವಾಗಿ ಹೋಗುವುದಿದ್ದರೆ ಯಾವ ದಿನ ಯಾವ ದಿಕ್ಕಿಗೆ ಹೋಗಬೇಕು ಎನ್ನುವುದನ್ನು ಕೂಡ ಗಮನಿಸಬೇಕು.

ಚಂದ್ರ
ಚಂದ್ರನು ಮುಹೂರ್ತದ ಆಧಾರವಾಗಿರುವನು. ಕಾರಣ ಚಂದ್ರನು ಬಲಿಷ್ಣನಾಗಿರುವಾಗ ಆಮಂತ್ರಣ ಪತ್ರಿಕೆ ಬರೆಯಬೇಕು. ಶುಕ್ಲ ಪಕ್ಷದ ದಶಮಿಯಿಂದ ಕೃಷ್ಣ ಪಕ್ಷದ ಪಂಚಮಿಯವರೆಗೆ ಚಂದ್ರ ಬಲಿಷ್ಠನಾಗಿರುವನು. ಶುಕ್ಲ ಪಕ್ಷ ಪ್ರತಿಪಾದದಿಂದ ದಶಮಿಯವರೆಗೆ ಮಧ್ಯಮ ಬಲ ಮತ್ತು ಕೃಷ್ಣ ಪಕ್ಷದ ಪಂಚಮಿಯಿಂದ ಅಮಾವಾಸ್ಯೆಯವರೆಗೆ ಬಲಹೀನನಾಗಿರುತ್ತಾನೆ. ರಿಕ್ತಾ, ಅಮಾವಾಸ್ಯೆ, ಭದ್ರಾ, ಸಂಕ್ರಾಂತಿ ತಿಥಿಗಳು ನಿಷಿದ್ಧವಾಗಿವೆ.

ವಾರ ಮತ್ತು ತಿಥಿ
ಬುಧವಾರ, ಗುರುವಾರ ಮತ್ತು ಶುಕ್ರವಾರಗಳು ಶ್ರೇಷ್ಠವಾಗಿವೆ. ಸೋಮವಾರ ಮತ್ತು ಶನಿವಾರಗಳು ಮಧ್ಯಮ. ಅದರಲ್ಲಿಯೂ ಬುಧವಾರ ದ್ವಿತೀಯಾ, ಸಪ್ತಮಿ, ದಶಮಿ ಇದ್ದರೆ, ಗುರುವಾರ ಪಂಚಮಿ, ದಶಮಿ, ಪೂರ್ಣಿಮಾ ಇದ್ದರೆ, ಶುಕ್ರವಾರ ತೃತೀಯಾ, ಅಷ್ಟಮಿ, ತ್ರಯೋದಶಿ ತಿಥಿಗಳಿದ್ದರೆ ಅತಿ ಉತ್ತಮ. ಯಾವ ವಾರ ಕಾರ್ಯ ಪ್ರಾರಂಭಿಸಲಾಗುತ್ತದೆಯೋ ಆ ದಿನದ ಗ್ರಹವು (ಬುಧ, ಗುರು, ಶುಕ್ರ) ಪಾಪಗ್ರಹಗಳಿಂದ ದೃಷ್ಟವಾಗಿರಬಾರದು.

ನಕ್ಷತ್ರಗಳು
ಚಂದ್ರನು ಸ್ವಾತಿ, ಪುನರ್ವಸು, ಶ್ರವಣ, ಧನಿಷ್ಠ, ಶತ:ಭಿಷ, ಅಶ್ವಿನಿ ಮತ್ತು ಹಸ್ತ ನಕ್ಷತ್ರಗಳಲ್ಲಿದ್ದರೆ ವಿಶೇಷ ಶುಭ. ಉತ್ತರ ಫಾಲ್ಗುಣಿ, ಉತ್ತರ ಆಷಾಢ, ಉತ್ತರ ಭಾದ್ರಪದ, ರೋಹಿಣಿ, ಕೃತಿಕಾ, ಜ್ಯೇಷ್ಠಾ ಕೂಡ ಶುಭವಾಗಿವೆ.

ಪ್ರಯಾಣ ಮುಹೂರ್ತ
ಆಮಂತ್ರಣ ಪತ್ರಿಕೆಗಳನ್ನು ಕೊಡಲು ಪರ ಊರಿಗೆ ಹೋಗಬೇಕಾದರೆ, ಯಾವ ದಿಕ್ಕಿಗೆ ಹೋಗಬೇಕಾಗಿದೆಯೋ ಆ ಗ್ರಹದ ವಾರದಂದೇ ಹೋಗಬೇಕು. ಪೂರ್ವ-ಸೂರ್ಯ-ಭಾನುವಾರ, ಉತ್ತರಪೂರ್ವ-ಚಂದ್ರ-ಸೋಮವಾರ, ದಕ್ಷಿಣ ಪೂರ್ವ-ಶುಕ್ರ-ಶುಕ್ರವಾರ, ಪಶ್ಚಿಮ-ಶನಿ-ಶನಿವಾರ ಸಾಧ್ಯವಿದ್ದಷ್ಟು ವಿರುದ್ಧ ದಿಕ್ಕಿಗೆ ಹೋಗುವುದನ್ನು ತಪ್ಪಿಸಬೇಕು.

ಇದಲ್ಲದೆ ಆಯಾ ವಾರದ ರಾಹುಕಾಲ ಮತ್ತು ಗೌರ ಪಂಚಾಂಗದಿಂದ ಆನಂದಾದಿ ಯೋಗಗಳನ್ನು ನೋಡಿಕೊಂಡು, ಗಣಪತಿ ಮತ್ತು ಕುಲದೇವತೆಗಳ ಧ್ಯಾನ ಮಾಡಿ ಆಮಂತ್ರಣ ಪತ್ರಿಕೆಯನ್ನು ಬರೆಯಬೇಕು. ಯಾವ ಕಾರ್ಯಕ್ಕಾಗಿ ಆಮಂತ್ರಣ ಪತ್ರಿಕೆಯನ್ನು ಬರೆಯಲಾಗುತ್ತದೆಯೋ ಅದು ನಿರ್ವಿಘ್ನವಾಗಿ ನೆರವೇರಲು ಸಾಮರ್ಥ್ಯಾನುಸಾರವಾಗಿ ಸಂಕಲ್ಪ ಮಾಡಿ ಬರೆದ ನಂತರ ದೇವರ ಫೋಟೊ ಅಥವಾ ಪ್ರತಿಮೆಗಳ ಸಮ್ಮುಖದಲ್ಲಿ ಇಟ್ಟು ಅರಿಶಿನ-ಕುಂಕುಮ-ಪುಷ್ಪಾದಿಗಳಿಂದ ಪೂಜೆ ಮಾಡಿ ನಂತರ ಮುದ್ರಣಕ್ಕೆ ಕೊಡಬೇಕು. ಮುದ್ರಿತವಾದ ಪತ್ರಿಕೆಗಳನ್ನು ಇದೇ ಪ್ರಕಾರ ಪೂಜಿಸಿ, ಮೊದಲನೆಯ ಪತ್ರಿಕೆಯನ್ನು ಕುಲದೇವರಿಗೆ, ಗುರುಗಳಿಗೆ ಅರ್ಪಿಸಿ ನಂತರ ಸಂಬಂಧಿಕರ ಕ್ರಮದಲ್ಲಿ ಬರೆಯಬೇಕು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ