ಆ್ಯಪ್ನಗರ

ಗ್ರಹ ದೋಷ ನಿವಾರಕ ಶ್ರಾವಣ ಮಾಸ

ಶ್ರಾವಣ ಮಾಸವನ್ನು ಹಬ್ಬಗಳ ಮಾಸ ಎನ್ನುವರು. ಈ ಮಾಸದಲ್ಲಿ ಬರುವ ಹಬ್ಬ ಮತ್ತು ವ್ರತಗಳನ್ನು ಆಚರಿಸುವುದರಿಂದ ಜಾತಕದಲ್ಲಿರುವ ಗ್ರಹ ದೋಷವನ್ನು ನಿವಾರಣೆ ಮಾಡಿಕೊಳ್ಳಬಹುದು.

Vijaya Karnataka 25 Aug 2018, 12:20 pm
ಆಗಸ್ಟ್‌ 12 ರಿಂದ ಶ್ರಾವಣ ಮಾಸ ಆರಂಭವಾಗಿದ್ದು, ಸೆ.9ರವರೆಗೆ ಈ ಮಾಸವಿದೆ. ಶ್ರಾವಣ ಮಾಸದಲ್ಲಿ ಅನೇಕ ಹಬ್ಬಗಳು ಬರುತ್ತವೆ. ಈಗಾಗಲೇ ಕೆಲವು ಹಬ್ಬಗಳು ಬಂದು ಹೋಗಿವೆ. ಹಲವು ದೋಷ ಇರುವವರು ಕೆಲವು ಹಬ್ಬಗಳನ್ನು ಆಚರಿಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದು.
Vijaya Karnataka Web shravana


ನಾಗರ ಪಂಚಮಿ: ಜಾತಕದಲ್ಲಿ ನಾಗ ದೋಷ, ರಾಹು ದೋಷ, ಆಶ್ಲೇಷ ನಕ್ಷತ್ರ ದೋಷ, ಕೇತು ದೋಷ ಇದ್ದರೆ ಸಂತಾನ ಭಾಗ್ಯ, ಮಾಂಗಲ್ಯ ಭಾಗ್ಯಕ್ಕೆ ನಾಗ ದೋಷ ಇದ್ದರೆ ನಾಗರ ಪಂಚಮಿ ದಿನ ನಾಗನ ಕಲ್ಲಿಗೆ ಹಾಲು ಎರೆದರೆ ಒಳ್ಳೆಯದು. ರಾಹು ಹಾಗೂ ಕೇತು ಶಾಂತಿ ಮಾಡಿಸುವುದರಿಂದ ನಾಗ ದೋಷ ಪರಿಹಾರವಾಗುವುದು.

ಸಿರಿಯಾಳ ಷಷ್ಠಿ: ಈ ಹಬ್ಬವು ಗಂಡು ಮಕ್ಕಳು ಇರುವ ತಾಯಂದಿರು ಆಚರಿಸುತ್ತಾರೆ. ಜಾತಕದಲ್ಲಿ ಗಂಡು ಮಕ್ಕಳ ಸಂತತಿಗೆ ದೋಷವಿದ್ದರೆ, ಗಂಡು ಮಕ್ಕಳು ಹುಟ್ಟಿ ಮರಣ ಹೊಂದುತ್ತಿದ್ದರೆ ಅಂಥವರು ಸಿರಿಯಾಳ ಷಷ್ಠಿ ದಿನ ಭಕ್ತ ಸಿರಿಯಾಳ ಪೂಜೆ ಮಾಡಿ, ತರಕಾರಿಗಳನ್ನು ದಾನ ಮಾಡುವುದರಿಂದ ಗಂಡು ಮಕ್ಕಳನ್ನು ಪಡೆಯಬಹುದು.

ವರ ಮಹಾಲಕ್ಷ್ಮಿ ವ್ರತ: ಲಕ್ಷ್ಮಿಗೆ ಶುಕ್ರ ಗ್ರಹ ಅಧಿಪತಿ. ಶುಕ್ರ ಗ್ರಹ ನೀಚನಾಗಿದ್ದರೆ, ಶುಕ್ರನಿಗೆ ಪಾಪ ಗ್ರಹಗಳ ದೃಷ್ಟಿಯಿದ್ದರೆ ಅಥವಾ ಪಾಪ ಗ್ರಹಗಳು ಜತೆಯಲ್ಲಿದ್ದರೆ ಎರಡನೇ ಭಾವದಲ್ಲಿ ಪಾಪ ಗ್ರಹಗಳಿದ್ದರೆ ಲಕ್ಷ್ಮೇಯ ಭಾಗ್ಯ ಕಡಿಮೆ. ಅಂಥವರು ವರಮಹಾಲಕ್ಷ್ಮೇ ವ್ರತವನ್ನು ಮಾಡಿ ಲಕ್ಷ್ಮೇಯ ಕೃಪೆಗೆ ಪಾತ್ರರಾಗಬಹುದು.

ರಕ್ಷಾ ಬಂಧನ: ಇದನ್ನು ಸಹೋದರ ಸಹೋದರಿಯರ ಹಬ್ಬ ಎನ್ನುತ್ತಾರೆ. ಜಾತಕದಲ್ಲಿ 3ನೇ ಭಾವದಿಂದ ಸಹೋದರ ಸಹೋದರಿಯರ ವಿಚಾರ ತಿಳಿಯಬಹುದು. ಲಗ್ನಾಧಿಪತಿ 3ನೇ ಭಾವದ ಅಧಿಪತಿ ಶತ್ರು ಗ್ರಹವಾಗಿದ್ದರೆ ಸಹೋದರ ಸಹೋದರಿಯರಲ್ಲಿ ಭಿನ್ನಾಭಿಪ್ರಾಯ ಇರುವುದು. ಆ ಗ್ರಹಕ್ಕೆ ತಕ್ಕ ಶಾಂತಿಯನ್ನು ಆಚರಿಸಿದರೆ ಜೀವನ ಪರ್ಯಂತ ಭಾಂದವ್ಯ ಉತ್ತಮವಾಗಿರುವುದು.

ಗಾಯತ್ರಿ ಪ್ರತಿಪಾತ್‌: ಶ್ರಾವಣ ಮಾಸದ ಕೃಷ್ಣ ಪಕ್ಷದ ಪಾಡ್ಯ ದಿನ ಗಾಯತ್ರಿ ಪತಿಪಾತ್‌ ಆಚರಿಸುವರು. ಯಾವುದೇ ಮಂತ್ರ ಸಿದ್ಧಿಯಾಗಬೇಕಾದರೆ ಲಗ್ನದಿಂದ 9ನೇ ಮನೆ ಉತ್ತಮವಾಗಿರಬೇಕು (ಗುರು ಇರಬೇಕು). 2ನೇ ಮನೆ ಅಧಿಪತಿ ಉಚ್ಚನಾಗಿದ್ದರೆ ಮಂತ್ರ ಸಿದ್ಧಿಯಾಗುವುದು. ಆ ದಿನ ಸಿದ್ಧಿಗಾಗಿ ಗಾಯತ್ರಿ ಹೋಮ ಮತ್ತು ಜಪ ಮಾಡಿದರೆ ದೋಷ ಪರಿಹಾರವಾಗುವುದು.

ರಾಘವೇಂದ್ರ ಸ್ವಾಮಿಗಳ ಆರಾಧನೆ: ಯಾವುದೇ ವಿದ್ಯೆ ಕಲಿಯಬೇಕಾದರೂ ಗುರುವಿನ ಅನುಗ್ರಹ ಮುಖ್ಯ. ಗುರು ಗ್ರಹ ನೀಚ ಅಥವಾ ಪಾಪ ಗ್ರಹಗಳ ಜತೆಯಲ್ಲಿದ್ದರೆ ವಿದ್ಯೆ ಸುಲಭವಾಗಿ ಬರುವುದಿಲ್ಲ. ಆದ್ದರಿಂದ ರಾಘವೇಂದ್ರ ಸ್ವಾಮಿಗೆ ಆರಾಧನೆ ದಿನ ಅಥವಾ ಪ್ರತಿ ಗುರುವಾರ ಶಿರಡಿ ಸಾಯಿಬಾಬಾ ಅವರ ಪೂಜೆ ಮಾಡಿದರೆ ಅಥವಾ ಅವರಿಗೆ ಸಂಬಂಧಪಟ್ಟ ಜಪ ಮಾಡಿದರೆ ದೋಷ ಪರಿಹಾರವಾಗುವುದು.

ಮಂಗಳಗೌರಿ ವ್ರತ: ಜಾತಕದಲ್ಲಿ 7 ಮತ್ತು 8ನೇ ಮನೆಯಲ್ಲಿ ಪಾಪ ಗ್ರಹ ಅಥವಾ ಪಾಪ ಗ್ರಹದ ದೃಷ್ಟಿ, ಕುಜ ಗ್ರಹದ ದೃಷ್ಟಿಯಿದ್ದರೆ ಮಾಂಗಲ್ಯ ಭಾಗ್ಯಕ್ಕೆ ತೊಂದರೆ ಬರಬಹುದು. ಆದ್ದರಿಂದ ಮಂಗಳಗೌರಿ ವ್ರತ ಪೂಜೆಯನ್ನು ಮಾಡಿದರೆ ದೋಷ ಪರಿಹಾರವಾಗುವುದು.

ಶ್ರಾವಣ ಶನಿವಾರ: ಪ್ರತಿ ಶ್ರಾವಣ ಶನಿವಾರದಂದು ಕುಲ ದೇವತೆ ವೆಂಕಟರಮಣ ಸ್ವಾಮಿಯ ಒಕ್ಕಲಿನವರು ಪಡಿ ಬೇಡುತ್ತಾರೆ. ಅಕ್ಕಪಕ್ಕದ ಮನೆಗೆ ಹೋಗಿ ಬಿಕ್ಷೆ ಬೇಡುವುದು. ಲಗ್ನದಲ್ಲಿ ಕುಜ ಗ್ರಹವಿದ್ದರೆ ಅಹಂಕಾರ ಹೆಚ್ಚು. ಪಡಿ ಕೇಳುವುದರಿಂದ ಅಹಂ ಎನ್ನುವುದು ಕಡಿಮೆಯಾಗುವುದು ಹಾಗೂ ಕೋಪ ತಾಪವೂ ಕಡಿಮೆಯಾಗುವುದು. ದೋಷವೂ ಪರಿಹಾರವಾಗುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ