ಆ್ಯಪ್ನಗರ

ಸತ್‌ಚಿತ್ ಆನಂದ ಹೊಂದಲು ದೇವಿಗೆ ಶರಣು

ಮಹಾಮಾತೆ ದೇವಿಯ ಆರಾಧನೆಯಿಂದ ಮೊದಲನೆಯ ದಿನ ನಮ್ಮ ಚೈತನ್ಯವನ್ನು ಆ ಶಕ್ತಿಯಲ್ಲಿ ಸ್ಥಿರಗೊಳಿಸಿ, ಎರಡನೆಯ ದಿನ ಮನಸ್ಸನ್ನು ಗೆಲ್ಲುವ ತಪಸ್ಸನ್ನು ಮಾಡುವುದಕ್ಕೆ ತಯಾರುಗೊಳಿಸಿದರೆ ಮೂರನೆಯ ದಿನ ಇಹಲೋಕ ಹಾಗೂ ಪರಲೋಕದ ಬಗ್ಗೆ ವ್ಯತ್ಯಾಸವನ್ನು ತಿಳಿಯುವುದಕ್ಕೆ ಅನುಕೂಲವಾಗುತ್ತದೆ.

Vijaya Karnataka 12 Oct 2018, 12:03 pm
ನಯನಾ ಭಿಡೆ (ಲೇಖಕರು ಯಕ್ಷಗಾನ ಕಲಾವಿದರು, ಆಧ್ಯಾತ್ಮ ಚಿಂತಕರು)
Vijaya Karnataka Web navdurga


ಮಹಾಮಾತೆ ದೇವಿಯ ಆರಾಧನೆಯಿಂದ ಮೊದಲನೆಯ ದಿನ ನಮ್ಮ ಚೈತನ್ಯವನ್ನು ಆ ಶಕ್ತಿಯಲ್ಲಿ ಸ್ಥಿರಗೊಳಿಸಿ, ಎರಡನೆಯ ದಿನ ಮನಸ್ಸನ್ನು ಗೆಲ್ಲುವ ತಪಸ್ಸನ್ನು ಮಾಡುವುದಕ್ಕೆ ತಯಾರುಗೊಳಿಸಿದರೆ ಮೂರನೆಯ ದಿನ ಇಹಲೋಕ ಹಾಗೂ ಪರಲೋಕದ ಬಗ್ಗೆ ವ್ಯತ್ಯಾಸವನ್ನು ತಿಳಿಯುವುದಕ್ಕೆ ಅನುಕೂಲವಾಗುತ್ತದೆ. ಆರೋಗ್ಯಕರ ಮನಸ್ಸು ಸತ್ಯದ ಅನ್ವೇಷಣೆಯಲ್ಲಿ ಖುಷಿ ಕಾಣುತ್ತದೆ, ಉತ್ತಮ ಸಕಾರಾತ್ಮಕ ಬೆಳವಣಿಗೆಯನ್ನು ಹೊಂದುತ್ತದೆ ಹಾಗೇ ಜ್ಞಾನದ ಮೂಲಕ ಸತ್‌-ಚಿತ್‌-ಆನಂದವನ್ನು ಹೊಂದಲು ಪ್ರಯತ್ನಿಸುತ್ತದೆ. ಇದೆಲ್ಲ ನೆರವೇರಬೇಕಾದರೆ ಮೂಲಶಕ್ತಿ ದೇವೀಯಲ್ಲಿ ಶರಣುಹೊಂದುವುದು ಬಿಟ್ಟರೆ ಅನ್ಯ ಮಾರ್ಗವಿಲ್ಲ.

- 3ನೇ ದಿನ ಚಂದ್ರಘಂಟಾಯೈನಮ -

ಪಿಂಡಜಪ್ರವರಾರೂಢಾ ಚಂಡಕೋಪಾಸ್ತ್ರಕೈರ್ಯುತಾ

ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ

ಮಸ್ತಕದಲ್ಲಿ ಗಂಟೆಯಾಕಾರದ ಅರ್ಧಚಂದ್ರನನ್ನು ಧರಿಸಿಕೊಂಡು, ಸಿಂಹವಾಹಿನಿಯಾಗಿ, ಶಾಂತಿಸ್ವರೂಪಿಣಿಯಾಗಿ, ಹೊಳೆಯುವ ಚಿನ್ನದಂತೆ ಶರೀರ ವರ್ಣದವಳಾಗಿ, ಹತ್ತು ಕೈಗಳಲ್ಲಿ ಅಸ್ತ್ರ ಶಸ್ತ್ರ ವಿಭೂಷಿತೆಯಾಗಿ ಯುದ್ಧಸನ್ನದ್ಧಳಾಗಿರುವಂತೆ ಕಾಣುವ ಚಂದ್ರಘಂಟಾಸ್ವರೂಪಿಣಿಯಾದ ಮಾತೆಯ ಆರಾಧನೆ ಮೂರನೇ ದಿನ. ನಮ್ಮ ಮನಸ್ಸು ತನ್ನಲ್ಲಿರುವ ವಿಕಾರ ಪ್ರವ್ರತ್ತಿಗಳನ್ನೆಲ್ಲ ಹೊಡೆದೋಡಿಸಲು ಸನ್ನದ್ಧವಾಗುವ ಪ್ರತೀಕವೇ ಈ ದಿನದ ಆರಾಧನೆ. ವಾರಾಣಸಿಯಲ್ಲಿ ಮಾತ್ರವೇ ಮಾತೆಯ ಒಂಭತ್ತು ಸ್ವರೂಪಗಳಿಗೂ ದೇವಾಲಯಗಳಿದ್ದು ಅತ್ಯಂತ ವಿಜೃಂಭಣೆಯಿಂದ ನವರಾತ್ರಿಯನ್ನು ಆಚರಿಸಲಾಗುತ್ತದೆ. ವಾರಾಣಸಿಯಲ್ಲಿ ಜೈತ್ಪುರಿಯಲ್ಲಿ ಚಂದ್ರಘಂಟಾದೇವಿಯ ದೇಗುಲ ವಿರಾಜಮಾನವಾಗಿದೆ. ಮೂಲಾಧಾರದಿಂದ ಸ್ವಾಧಿಷ್ಠಾನ ಚಕ್ರದಲ್ಲಿ ಸ್ಥಿರವಾಗಿದ್ದ ಸಾಧಕನ ಮನಸ್ಸು ಈ ದಿನ ಮಣಿಪೂರ ಚಕ್ರ ತಲುಪಿ ಅಲೌಕಿಕ ವಿಷಯಗಳ ದರ್ಶನವಾಗುವುದನ್ನು ಸಿದ್ಧಿಸಿಕೊಳ್ಳುತ್ತದೆ. ಸಾಧಕನಿಗೆ ಸಿಧ್ಧಿಯಾಯಿತೆಂದರೆ ಈ ದಿನ ಘಂಟಾನಾದ ಮತ್ತು ದಿವ್ಯಸುಗಂಧ ಅನುಭವವಾಗುತ್ತದೆ ಎಂದು ಯೋಗಿಗಳ ಅನುಭವದ ಮಾತು. ಇದರ ಜತೆಜತೆಗೆ ಸಿದ್ಧಿಹೊಂದಿದ ಸಾಧಕನ ಶರೀರದಿಂದ ದಿವ್ಯಪ್ರಕಾಶದ ವಿಕಿರಣಗಳು ಸುತ್ತಮುತ್ತಲಿನ ಪ್ರದೇಶವನ್ನು ಧನಾತ್ಮಕವಾಗಿ ಪರಿವರ್ತಿಸುತ್ತವೆ ಎಂಬುದು ಭಕ್ತರ ಅಭಿಪ್ರಾಯ. ಇಂತಹ ಇಹ-ಪರ ಇವೆರಡರ ಪರಮ ವ್ಯತ್ಯಾಸವನ್ನು ನಮಗೆ ಗೋಚರಗೊಳಿಸುವುದಕ್ಕಾಗಿ ಅವತಾರವೆತ್ತಿದ ಚಂದ್ರಘಂಟಾಸ್ವರೂಪಿಣಿಯ ಆರಾಧನೆಯನ್ನು ಮಾಡುತ್ತಾ ನವರಾತ್ರಿಯ ನಾಲ್ಕನೆಯ ದಿನ ದೇವಿಯ ಇನ್ನೊಂದು ಪರಮದಿವ್ಯಸ್ವರೂಪವನ್ನು ಸ್ವಾಗತಿಸೋಣ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ