ಆ್ಯಪ್ನಗರ

ಶ್ರಾವಣ ಸೋಮವಾರ ಪೂಜೆ ಮಾಡುವುದು ಹೇಗೆ? ಅದರ ಮಹತ್ವಗಳೇನು ಗೊತ್ತಾ?

ಆಗಸ್ಟ್ 2 ರಿಂದ ಶ್ರಾವಣ ಮಾಸ ಆರಂಭವಾಗಲಿದ್ದು, ಹಿಂದೂಗಳಿಗೆ ಈ ಮಾಸ ಪ್ರಮುಖವಾದುದು. ಆಷಾಢ ಮಾಸದ ಬಳಿಕ ಶ್ರಾವಣ ಮಾಸ ಆರಂಭವಾಗುವುದರಿಂದ ಈ ಮಾಸದಲ್ಲಿ ಸಾಲು ಸಾಲು ಹಬ್ಬಗಳು ಬರುತ್ತವೆ. ಆಗಸ್ಟ್ 5ರಂದು ಮೊದಲನೇ ಶ್ರಾವಣ ಸೋಮವಾರ ಪೂಜೆ ನಡೆಯುತ್ತದೆ.

Vijaya Karnataka 12 Aug 2019, 9:56 am
- ಅರವಿಂತ್. ಕೆ
Vijaya Karnataka Web shiv puja shravana somavara

ಶಿವ ಪುರಾಣದ ಪ್ರಕಾರ ಶಿವನಿಗೆ ಪ್ರಿಯವಾದ ಮಾಸವೇ ಶ್ರಾವಣ. ಆ ಕಾರಣ ಶ್ರಾವಣ ಮಾಸದಾದ್ಯಂತ ಶಿವನ ಆರಾಧನೆ ನಡೆಯುತ್ತದೆ. ಈ ಮಾಸದಲ್ಲಿ ಶಿವನನ್ನು ಆರಾಧಿಸಿದರೆ, ಧ್ಯಾನಿಸಿದರೆ ಅಪೇಕ್ಷೆಗಳೆಲ್ಲವೂ ನೆರವೇರುತ್ತವೆ ಎಂಬುದು ಭಕ್ತರ ನಂಬುಗೆ. ಆ ಕಾರಣ ವಿವಾಹಾಪೇಕ್ಷಿತ ಕನ್ಯೆಯರು ಶ್ರಾವಣ ಸೋಮವಾರದಂದು ಉಪವಾಸ ವ್ರತವನ್ನು ಕೈಗೊಳ್ಳುವ ವಾಡಿಕೆಯಿದೆ.

ಈ ಮಾಸದಲ್ಲಿ ಪರಮೇಶ್ವರ ತನ್ನನ್ನು ಬೇಡಿ ಬಂದವರ ಕೋರಿಕೆಗಳನ್ನು ಈಡೇರಿಸುತ್ತಾನೆ, ಆಶೀರ್ವದಿಸುತ್ತಾನೆ. ಆ ಕಾರಣ ಹಿಂದೂಗಳು ಪರಶಿವನನ್ನು ಪರಿಶುದ್ಧವಾದ ಮನಸ್ಸಿನಿಂದ ಮತ್ತು ಹೃತ್ಪೂರ್ವಕ ಭಕ್ತಿಯಿಂದ ಶ್ರಾವಣ ಮಾಸದಲ್ಲಿ ಆರಾಧಿಸುತ್ತಾರೆ. ಶಿವ ಪುರಾಣದ ಪ್ರಕಾರ ಭಕ್ತನಾದವನು ಶ್ರಾವಣ ಮಾಸದಲ್ಲಿ ಈ ಎಂಟು ವಸ್ತುಗಳನ್ನು ತನ್ನೊಂದಿಗೆ ಇಟ್ಟುಕೊಂಡು ಪೂಜೆ ಮಾಡಬೇಕು. ಹಾಗೆ ಮಾಡಿದರೆ ಅವನ ಮನೆ ಸುಭಿಕ್ಷವಾಗುತ್ತದೆ. ಶಿವನ ಕೃಪಾಶೀರ್ವಾದ ಸಂಪೂರ್ಣವಾಗಿ ಆತನ ಮೇಲಿರುತ್ತದೆ. ಆ ಎಂಟು ವಸ್ತುಗಳೆಂದರೆ ರುದ್ರಾಕ್ಷ, ಭಸ್ಮ, ಗಂಗಾಜಲ, ನಂದಿ ವಿಗ್ರಹ, ತ್ರಿಶೂಲ ಮತ್ತು ಢಮರು, ಕಂಚಿನ ಪಾತ್ರೆ, ನಾಗದೇವತೆ.

ಪೂಜಾ ವಿಧಾನ

ಶ್ರಾವಣ ಸೋಮವಾರದಂದು ಮೇಲ್ಕಾಣಿಸಿದ ಎಂಟು ವಸ್ತುಗಳನ್ನು ಶಿವ ಪೂಜೆಯ ವೇಳೆ ಸಮೀಪದಲ್ಲಿ ಇಟ್ಟುಕೊಳ್ಳಬೇಕು. ಈ ಬಾರಿ ಶ್ರಾವಣ ಸೋಮವಾರ ಆಗಸ್ಟ್‌ 5, 12, 19, 26ರಂದು ಬರುತ್ತದೆ. ಈ ದಿನದಂದು ಶಿವಾಷ್ಟೋತ್ತರವನ್ನು ಪಠಿಸಬೇಕು. ಭಸ್ಮವನ್ನು ಧಾರಣೆ ಮಾಡಿಕೊಳ್ಳಬೇಕು. ಗಂಗಾಜಲ, ನಂದಿ ವಿಗ್ರಹವನ್ನು ಕಂಚಿನ ಪಾತ್ರೆಯಲ್ಲಿಟ್ಟು ಪೂಜೆಗೆ ಸಿದ್ಧ ಮಾಡಿಕೊಳ್ಳಬೇಕು. ಸೋಮ ಎಂದರೆ ಚಂದ್ರ. ಹಾಗಾಗಿ ಚಂದ್ರನ ಆರಾಧನೆಯನ್ನು ಚಂದ್ರ ಹೋರಾದಲ್ಲಿ ಅಂದರೆ ಬೆಳಗ್ಗೆ 6.15 ರಿಂದ 6.45ರೊಳಗೆ ಮಾಡಬೇಕು.

ಶ್ರಾವಣ ಶುಕ್ರವಾರದಂದು ಮಹಾಲಕ್ಷ್ಮಿ ಪೂಜೆ ಮಾಡುವುದು ಶ್ರೇಷ್ಠ. ಶ್ರಾವಣ ಮಹಾಲಕ್ಷ್ಮಿ ಪೂಜೆಗೆ ಬಿಲ್ವ ಪತ್ರೆಯನ್ನು ಬಳಸುವುದು ಒಳ್ಳೆಯದು. ಶ್ರಾವಣ ಶುಕ್ರವಾರ ಈ ಬಾರಿ ಆಗಸ್ಟ್‌ 9, 16, 23, 30ರಂದು ಬರುತ್ತದೆ. ಅಂದು ಮಹಾಲಕ್ಷ್ಮಿ ಅಷ್ಟೋತ್ತರ ಪಠಿಸುವುದರಿಂದ ಆಕೆಯ ಕೃಪೆಗೆ ಪಾತ್ರರಾಗುತ್ತೀರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ