ಆ್ಯಪ್ನಗರ

18 ಸಿದ್ಧಿಗಳ ಒಡತಿ ಸಿದ್ಧಿಧಾತ್ರೀ

ಸಿದ್ಧರು, ಗಂಧರ್ವರು, ಯಕ್ಷರು, ಅಸುರರು, ಸುರರು ಹೀಗೆ ಎಲ್ಲರಿಂದಲೂ ಪೂಜಿಸಲ್ಪಡುವವಳು, ಸಿದ್ಧಿಗಳನ್ನು ಅನುಗ್ರಹಿಸುವವಳು, ನವರಾತ್ರಿ ಪರ್ವದ ಒಂಭತ್ತನೆಯ ದಿನ ಎಲ್ಲೆಡೆ ಪೂಜಿಸಲ್ಪಡುವವಳು ಸಿದ್ದಿಧಾತ್ರೀ. ಸಿಂಹವಾಹನೆ, ಚತುರ್ಭುಜೆಯಾಗಿರುವ ಇವಳು ಕಮಲಪುಷ್ಪದ ಮೇಲೆ ವಿರಾಜಮಾನಳಾಗಿದ್ದಾಳೆ.

Vijaya Karnataka 18 Oct 2018, 11:55 am
ಅಣಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಮಹಿಮಾ, ಈಶಿತ್ವ-ವಶಿತ್ವ, ಸರ್ವಕಾಮಾವಸಾಯಿತಾ, ಸರ್ವಜ್ಞತ್ವ, ದೂರಶ್ರವಣ, ಪರಕಾಯಪ್ರವೇಶ, ವಾಕ್‌ ಸಿದ್ಧಿ, ಕಲ್ಪವೃಕ್ಷತ್ವ, ಸೃಷ್ಟಿ, ಸಂಹಾರ ಕರಣಸಾಮರ್ಥ್ಯ, ಅಮರತ್ವ, ಸರ್ವನ್ಯಾಯತತ್ವ, ಭಾವನಾ ಮತ್ತು ಸಿದ್ಧಿ ಈ ಹದಿನೆಂಟು ಸಿದ್ಧಿಗಳನ್ನು ಅನುಗ್ರಹಿಸುವವಳು ಸಿದ್ಧಿಧಾತ್ರೀ. ಮಹಾಶಿವನು ಸಿದ್ಧಿಧರ. ಎಲ್ಲಾ ಸಿದ್ಧಿಗಳನ್ನು ತಿಳಿದುಕೊಂಡವನು. ಮಾತೆ ಸಿದ್ದಿಧಾತ್ರೀಯನ್ನು ಆರಾಧಿಸಿ ಗಳಿಸಿಕೊಂಡ ಸಿದ್ಧಿಗಳವು. ಇವಳ ಅನುಕಂಪದಿಂದಲೇ ಮಹಾಶಿವನ ಅರ್ಧ ಶರೀರವು ದೇವಿಯದಾಗಿತ್ತು. ಇದರಿಂದಾಗಿ ಅವನು ಅರ್ಧನಾರೀಶ್ವರ ಎಂದು ಪ್ರಸಿದ್ಧ್ಧನಾದನು.
Vijaya Karnataka Web a1008f0d-7569-47df-adef-5eed58a9661a


ಈ ಎಂಟು ದಿನಗಳಲ್ಲಿ ಮಹಾಮಾತೆಯ ಆರಾಧನೆ ಪೂಜೆ, ಸೇವೆ, ಸತ್ಸಂಗ, ಉಪವಾಸವ್ರತ, ಶರಣುಭಾವ ಹೀಗೆ ನವವಿಧ ಭಕ್ತಿಗಳ ಮೂಲಕ ಮಾಡಿದ್ದಾಯಿತು. ನಮ್ಮ ಸುಪ್ತಮನಸ್ಸನ್ನು ಆಧ್ಯಾತ್ಮಿಕ ಪಥದತ್ತ ಎಳೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದಾಯಿತು. ನಾವೆಷ್ಟೇ ಅಂದುಕೊಂಡರೂ ಎಲ್ಲವನ್ನೂ ಕರುಣಿಸುವ ಕರುಣಾಮಯಿ ಅವಳೇ ತಾನೇ. ಕೊಡುವ ಕೈಯ ಕೆಳಗೆ ಮಂಡಿಯೂರಿ ಕುಳಿತು ಧನ್ಯತಾಭಾವದಿಂದ ಅಂಗೈಗಳನ್ನು ಜೋಡಿಸಿಕೊಂಡು ಬೇಡುವ ವಿನಯವಂತಿಕೆ ನಮಗಿದ್ದರೆ ಮಾತ್ರ ಇಷ್ಟು ದಿನ ಮಾಡಿದ ತಪಸ್ಸಿಗೆ ಫಲ ಸಿಕ್ಕೀತು.

ಸಿದ್ಧಿಧಾರ್ತೈ ನಮ:

ಸಿದ್ಧಗಂಧರ್ವಯಕ್ಷಾದ್ವೈರ ಸುರರೈರಮಪಿ

ಸೇವ್ಯಮಾನಾ ಸದಾ ಭೂಯಾತ್‌ ಸಿದ್ಧಿದಾ ಸಿದ್ಧಿದಾಯಿನೀ


ಸಿದ್ಧರು, ಗಂಧರ್ವರು, ಯಕ್ಷರು, ಅಸುರರು, ಸುರರು ಹೀಗೆ ಎಲ್ಲರಿಂದಲೂ ಪೂಜಿಸಲ್ಪಡುವವಳು, ಸಿದ್ಧಿಗಳನ್ನು ಅನುಗ್ರಹಿಸುವವಳು, ನವರಾತ್ರಿ ಪರ್ವದ ಒಂಭತ್ತನೆಯ ದಿನ ಎಲ್ಲೆಡೆ ಪೂಜಿಸಲ್ಪಡುವವಳು ಸಿದ್ದಿಧಾತ್ರೀ. ಸಿಂಹವಾಹನೆ, ಚತುರ್ಭುಜೆಯಾಗಿರುವ ಇವಳು ಕಮಲಪುಷ್ಪದ ಮೇಲೆ ವಿರಾಜಮಾನಳಾಗಿದ್ದಾಳೆ. ಶಂಖ, ಚಕ್ರ, ಗದಾ ಪದ್ಮಧಾರಿಣಿಯಾಗಿ ಶೋಭಿಸುತ್ತಿರುವ ಇವಳನ್ನು ನಿರಂತರವಾಗಿ ಆರಾಧಿಸಿದರೆ ಸಾಧಕನ ಮನಸ್ಸಿನಲ್ಲಿ ಯಾವುದೇ ಕಾಮನೆಗಳ ವಾಸನೆ ಉಳಿದಿರದೇ ವಾಸನಾರಹಿತನಾಗುತ್ತಾನೆ. ಎಂಟನೆಯ ದಿನ ದುರ್ಗೆಯರ ಪೂಜೆ-ಉಪಾಸನೆಯನ್ನು ಶಾಸ್ತ್ರೀಯ ವಿಧಿಗಳಿಗನುಸಾರವಾಗಿ ಮಾಡಿದ ಭಕ್ತರು ಒಂಭತ್ತನೆಯ ದಿನ ಸಿದ್ದಿಧಾತ್ರೀಯನ್ನು, ದುರ್ಗಾಸಪ್ತಶತಿಯ ಎಲ್ಲ ಸ್ಕಂದಗಳನ್ನು ಒಂದೇ ದಿನ ಪಠಿಸಿ ಪೂಜಿಸುತ್ತಾರೆ. ಹಿಮಾಲಯದ ನಂದಪರ್ವತ ವಾಸಿಯಾಗಿರುವ ಸಿದ್ದಿಧಾತ್ರೀ, ಕೇತುಗ್ರಹಾಧಿಪತಿಯಾಗಿದ್ದಾಳೆ. ವಾರಾಣಸಿಯ ಸಿದ್ಧೇಶ್ವರಿ ಮೊಹಲ್ಲಾದಲ್ಲಿ ಅತ್ಯಂತ ವಿಜೃಭಣೆಯಿಂದ ಸಿದ್ದಿಧಾತ್ರೀಯನ್ನು ಆರಾಧಿಸಲಾಗುತ್ತದೆ. ವಾರಾಣಸಿಯಲ್ಲಿ ಮಾತ್ರ ನವದುರ್ಗೆಯರಿಗೆ ಒಂಭತ್ತು ಬೇರೆ ಬೇರೆ ಮಂದಿರಗಳಿವೆ. ವೈಭವೋಪೇತವಾಗಿ ನವರಾತ್ರಿ ಕಳೆದಿದೆ. ಸುವಾಸಿನಿ ಕುಮಾರಿಕೆಯರಿಗೆ ಪೂಜೆ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ