ಆ್ಯಪ್ನಗರ

Christmas Story: ಇದು ಜೀಸಸ್‌ ಜನ್ಮದ ಕಥೆ

ಯೇಸು ಕ್ರಿಸ್ತ ಹುಟ್ಟಿದ ವರ್ಷವನ್ನು ಥ್ರೇಸ್‌ ಎಂಬ ಒಬ್ಬ ಸಿಥಿಯನ್‌ ಸನ್ಯಾಸಿ ಗುರುತಿಸಿದ್ದಾರೆ ಎನ್ನಲಾಗಿದೆ. ಟಿಬೆರಿಯಸ್‌ ಆಳ್ವಿಕೆ ಸಂದರ್ಭದಲ್ಲಿ ಜೀಸಸ್‌ಗೆ 30 ವರ್ಷ ವಯಸ್ಸಾಗಿತ್ತು ಎಂಬುದು ತಿಳಿದು ಬರುತ್ತದೆ.

Wikipedia 24 Dec 2018, 5:12 pm
ಕ್ರಿಸ್ತಶಕ ಸುಮಾರು ಇಪ್ಪತ್ತೆಂಟನೇ ಇಸವಿಯಲ್ಲಿ ಇಸ್ರಾಯಲ್‌ ನಾಡಿನ ನಜರೇತ ಹಳ್ಳಿಯಲ್ಲಿ ಬಡಗಿಯಾಗಿದ್ದ ಮೂವತ್ತು ವಯಸ್ಸಿನ ಯುವಕನೊಬ್ಬ, ತನ್ನ ಬಡಗಿ ಅಂಗಡಿಯ ಬಾಗಿಲನ್ನು ಮುಚ್ಚಿ ಚರಿತ್ರೆಯನ್ನು ಪ್ರವೇಶಿಸಿದ. ಅತ್ಯಂತ ಸಂಪ್ರದಾಯಬದ್ಧ ನಾಡೊಂದರಲ್ಲಿ ಹುಟ್ಟಿ, ಎಲ್ಲಾ ಸಂಪ್ರದಾಯಗಳಲ್ಲೂ ಸುಪ್ತವಾಗಿದ್ದು ಬದುಕನ್ನು ಹಾಳುಗೆಡಹುವ ಹುಳುಕುಗಳನ್ನು ತೆರೆದು ತೋರಿಸಿದ ಕಾರಣ ಕ್ರಾಂತಿಕಾರಿಯಾದ.
Vijaya Karnataka Web why christmas is celebrated on december 25th brief history of christmas
Christmas Story: ಇದು ಜೀಸಸ್‌ ಜನ್ಮದ ಕಥೆ


ಮಾನವಚರಿತ್ರೆಯ ಕೇಂದ್ರ ಬಿಂದುವಾದ ಇವನ ಜನನ ಕಾಲವನ್ನೇ ಕಾಲ ಮಾಪನವಾಗಿಟ್ಟುಕೊಂಡು ಕ್ರಿಸ್ತ ಪೂರ್ವ- ಕ್ರಿಸ್ತ ಶಕ ಎಂಬ ಕಾಲ ವಿಭಜನಾ ಕ್ರಮ ಪ್ರಾರಂಭವಾಯಿತು. ಮಾನವ ಕಾಲಕ್ಕೆ ಒಂದು ಚೌಕಟ್ಟು ದೊರೆತಂತಾಯಿತು. ಅವನ ಬದುಕು ಬೋಧನೆಗಳನ್ನು ಕಂಡು ಕೇಳಿದ ಜನ, ಇವನಂತೂ ಸಾಮಾನ್ಯ ವ್ಯಕ್ತಿಯಲ್ಲ ಎಂದು ಕೊಂಡರು.ಇವನು ಮರಣ ಹೊಂದಿದ ನೂರು ವರ್ಷಗೊಳಗೆ, ಇವನು ಬರೀ ವ್ಯಕ್ತಿಯಲ್ಲ, ಒಂದು ಮಾನವಾತೀತ ಶಕ್ತಿ, ದೇವಸುತ ಎಂಬ ದೃಢನಂಬಿಕೆ ಬೆಳೆದು ಹರಡಿತು.

ನಂತರದ ವರ್ಷಗಳಲ್ಲಿ ಇವನು ಮರಣವನ್ನಪ್ಪಿದ ಶಿಲುಬೆಯು ಮಾನವಮುಕ್ತಿಯ ಸಾರ್ವತ್ರಿಕ ಸಂಕೇತವಾಯಿತು. ಇಂದು ಸುಮಾರು ಎರಡು ಸಾವಿರ ವರ್ಷಗಳ ನಂತರ ಜಗತ್ತಿನ ಕೋಟ್ಯಂತರ ಮಂದಿ ಈ ವ್ಯಕ್ತಿಯನ್ನು ಆರಾಧಿಸುತ್ತಾರೆ, ಮಾನವನ ಸರ್ವತೋಮುಖ ಮುಕ್ತಿ ಅವನ ಮೂಲಕವೆಂದು ನಂಬಿದ್ದಾರೆ. ಜಗತ್ತಿನ ಬಹು ಮಂದಿಗೆ ಅವನು ಪರಮಾತ್ಮನ ಪ್ರತಿರೂಪ, ಆಗ್ರಾಹ್ಯ ಪ್ರೇಮ ಶಕ್ತಿಯ ಮಾನವರೂಪಿ ಅನುವಾದ, ಮಾನವ ಸಂಸ್ಕೃತಿಯನ್ನು ಪ್ರವೇಶಿಸಿದ ದೈವಚೇತನ, ಮಾನವನ ಏಕೈಕ ಉನ್ನತ ಆದರ್ಶ. ತನ್ನ ಬದುಕು- ಬೋಧನೆ- ಬವಣೆಗಳಿಂದ ಚರಿತ್ರೆಯ ದಿಕ್ಕನ್ನು ಬದಲಾಯಿಸಿ, ತನ್ನ ಪ್ರಭಾವದ ಮೂಲಕ ಮಾನವ ಚರಿತೆಗೆ ಈಗಲೂ ಹೊಸತಿರುವುಗಳನ್ನು ಕೊಡುತ್ತಿದ್ದಾನೆ ಈ ವ್ಯಕ್ತಿ. ಇಂಥ ಪವಾಡಸದೃಶ ವ್ಯಕ್ತಿಯೇ ಯೇಸುಕ್ರಿಸ್ತ.

ಕ್ರಿಸ್ಮಸ್‌ ಹಬ್ಬವುಒಂದು ಸಂಭ್ರಮದ ಕಥೆಯನ್ನು ಮೆಲುಕಾಡುವ ಸನ್ನಿವೇಶವನ್ನು ನಿರ್ಮಿಸುತ್ತದೆ. ಬದುಕಿನಲ್ಲಿ ಹೇಳದೆ ಕೇಳದೆ ಹಠಾತ್ತಾಗಿ ಸಂಭವಿಸುವ ವ್ಯಥೆಗಳಿಗೆಲ್ಲಾ ಕಥಾರೂಪವೊಂದನ್ನು ಒದಗಿಸಿ ಕೊಟ್ಟು, ಬದುಕನ್ನು ಸಹನೀಯಗೊಳಿಸುವುದು, ಅನಿಮಿತ್ತವಾಗಿ ಒದಗಿ ಬಂದ ತನ್ನ ಹುಟ್ಟಿನಲ್ಲಿ ಸಂಭ್ರಮಿಸುವುದು ಮಾನವನ ಹುಟ್ಟು ಗುಣ. ಆದುದರಿಂದಲೇ ಆ ಬಾಲವೃದ್ಧರಾದಿಯಾಗಿ ಪ್ರತಿಯೊಬ್ಬರಿಗೂ ಕಥೆಯೆಂದಾಗ ಕಿವಿ ನಿಮಿರುತ್ತದೆ, ಕೌತುಕದ ಹುಬ್ಬು ಮೇಲೇರುತ್ತದೆ, ಹೃದಯವು ಚುಮು ಚುಮು ಸ್ಪಂದಿಸುತ್ತದೆ. ಕ್ರಿಸ್ಮಸ್‌ ಹಬ್ಬವಂತೂ ಅಮ್ಮ ಹೇಳಿದಂತಾ ಕಥೆಯಂತಿರುವ ಒಂದು ಕಥೆ. ಈ ಕಥೆಯ ಒಟ್ಟು ಸಾರಾಂಶವೆಂದರೆ - ದೇವರೇ ಮಾನವನಾಗಿ ಹುಟ್ಟಿ ಮಾನವನನ್ನು ಮಾನವೀಯಗೊಳಿಸಿದ ಕಥೆ. ಕೊಲ್ಲು- ಗೆಲ್ಲು, ಹೊಡಿ-ಬಡಿಗಳನ್ನೇ ಗುಣುಗುಣಿಸುತ್ತಿರುವ ಮಾನವನಲ್ಲಿ ತಾಯ್ತನವನ್ನೂ ಹೆಂಗರುಳನ್ನು ಕಸಿ ಮಾಡಿದ ನವಿರಾದ ಕಥೆಯ ಸಂಭ್ರಮದ ನೆನಪೇ ಕ್ರಿಸ್ಮಸ್‌. ಮಲ್ಲಿಗೆ ಮನಸ್ಸಿನ ಮಮತೆಯ ಹಬ್ಬ ಕ್ರಿಸ್‌ಮಸ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ