* ಕೆ.ಆರ್. ಪ್ರಕಾಶ್ಬಾಬು
ನವೆಂಬರ್ 1, ಉತ್ಥಾನ ದ್ವಾದಶಿ. ಶುಭ ಅಥವಾ ಅಶುಭ ಯಾವುದೇ ಕಾರ್ಯವಾಗಿರಲಿ ತುಳಸಿ ಬೇಕೇ ಬೇಕು. ಪುರಾಣಗಳ ಪ್ರಕಾರ, ತುಳಸಿ ಗಿಡದ ದರ್ಶನ ಹಾಗೂ ಸ್ಪರ್ಶದಿಂದಲೇ ಪಾಪಗಳು ಪರಿಹಾರವಾಗುತ್ತವೆ. ವಾಸ್ತುದೋಷ ಪರಿಹಾರಕ್ಕೂ ತುಳಸಿ ಗಿಡ ಬಳಕೆಯಾಗುತ್ತದೆ. ತುಳಸಿಯಲ್ಲಿ ಮೂರು ವಿಧಗಳಿವೆ. ಅವೆಂದರೆ ಕೃಷ್ಣ ತುಳಸಿ, ಶ್ರೀ ತುಳಸಿ ಮತ್ತು ಕಾಡು ತುಳಸಿ.
ವಾಸ್ತು ದೋಷ ನಿವಾರಣೆಗೆ : ಪ್ರತಿಯೊಬ್ಬರ ಮನೆಯಂಗಳದಲ್ಲಿ ಅಥವಾ ಹಿತ್ತಲಿನಲ್ಲಿ ತುಳಸಿ ಗಿಡ ಇರಬೇಕು. ಈ ಸಸ್ಯವು ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕವನ್ನು ಹೊರಸೂಸುವ ಕಾರಣ ಮನೆಯೊಳಗಿನ ದುಷ್ಟ ಶಕ್ತಿಗಳು ನಿವಾರಣೆಯಾಗುತ್ತವೆ. ಹಾಗಾಗಿ ಮನೆಯ ಮುಖ್ಯ ದ್ವಾರದ ಮುಂಬದಿಯಲ್ಲಿ ತುಳಸಿಗಿಡವನ್ನು ಹಾಕುವುದು ಒಳ್ಳೆಯದು. ಮನಸ್ಸಿನ ಏಕಾಗ್ರತೆಗೆ ತುಳಸಿಮಣಿಯಿಂದ ಕೂಡಿರುವ ಜಪಮಾಲೆಯಿಂದ ಜಪ ಮಾಡಿ. ತುಳಸಿ ವೃಂದಾವನದ ಬದಿಯಲ್ಲಿ ಕುಳಿತು ಸಂಧ್ಯಾವಂದನೆ, ಧ್ಯಾನ ಮಾಡುವುದರಿಂದ ಮನಸ್ಸಿಗೂ ಮುದವಾಗುತ್ತದೆ. ದೇಹದ ಆರೋಗ್ಯಕ್ಕೂ ಪೂರಕವಾಗುತ್ತದೆ. ವಾಸ್ತು ದೋಷ ನಿವಾರಣೆಗೆ ಪ್ರತಿನಿತ್ಯ ಒಂದು ಎಸಳಾದರೂ ತುಳಸಿ ದಳವನ್ನು ಸಾಲಿಗ್ರಾಮಕ್ಕೆ ಅರ್ಪಿಸುವುದು ಒಳ್ಳೆಯದು.