ಆ್ಯಪ್ನಗರ

ಆನ್‌ಲೈನ್‌ನಲ್ಲೇ ದೊರೆಯಲಿದೆ ಎಲೆಕ್ಟ್ರಿಕ್ ಅಂಬಾಸಿಡರ್

ಒಂದು ಕಾಲದಲ್ಲಿ ಭಾರತದ ರಸ್ತೆ ರಾಜನಾಗಿ ಮೆರೆದಿದ್ದ ಅಂಬಾಸಿಡರ್‌ ಕಾರು ಈಗ ತೆರೆಮರೆಗೆ ಸರಿದಿರುವುದು ಹಳೆ ಕಥೆ. ಈಗ ಅದೇ ಅಂಬಾಸೆಡರ್‌ ಹೊಸ ರೂಪದೊಂದಿಗೆ ಮತ್ತೆ ದೇಶದ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

Vijaya Karnataka Web 13 Apr 2019, 5:00 pm
ಹಿಂದೂಸ್ತಾನ್‌ ಮೋಟಾರ್ಸ್‌ನಿಂದ 2017ರಲ್ಲಿ ಅಂಬಾಸಿಡರ್‌ ಬ್ರಾಂಡ್‌ ಹೆಸರು ಖರೀದಿ ಮಾಡಿರುವ ಪಿಎಸ್‌ಎ ಪಿಯಾಗೌಟ್‌ ಸಿಟ್ರಾನ್‌, ಭಾರತದ ಮಾರುಕಟ್ಟೆಗೆ ಅದೇ ಬ್ರಾಂಡ್‌ನ್ನು ಮತ್ತೆ ಪರಿಚಯಿಸಲು ನಿರ್ಧರಿಸಿದೆ. ಈ ಬಾರಿ ಅದು ಇಲೆಕ್ಟ್ರಿಕ್‌ ಕಾರು ರೂಪದಲ್ಲಿ ಬರಲಿದ್ದು, 2022ರ ಅಂತ್ಯದೊಳಗೆ ರಸ್ತೆಗಿಳಿಯಲಿದೆ.
Vijaya Karnataka Web ambassador


ಹೊಸ ರೂಪ: ಸಿಟ್ರಾನ್‌ ಇದೇ ಮೊದಲ ಬಾರಿಗೆ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ. 2021ರಲ್ಲಿ ಕರಂಡ್‌ಬೈಕ್‌ ಲಾಂಚ್‌ ಮಾಡುತ್ತಿರುವ ಅದು 2022ರಲ್ಲಿ ಅಂಬಾಸಿಡರ್‌ ಬ್ರಾಂಡ್‌ನ್ನು ಮತ್ತೆ ಪರಿಚಯಿಸುತ್ತಿದೆ. ಕೇವಲ ಇಲೆಕ್ಟ್ರಿಕ್‌ ವಾಹನಗಳಿಗೆ ಮಾತ್ರ ಅಂಬಾಸಿಡರ್‌ ಬ್ರಾಂಡ್‌ ಬಳಕೆ ಮಾಡುತ್ತಿದ್ದು, ಇದನ್ನು ಭಾರತದ ಮಾರುಕಟ್ಟೆಗೆ ಮಾತ್ರ ಪರಿಚಯಿಸಲಾಗುತ್ತದೆ ಎಂದು ಸಂಸ್ಥೆಯ ಆಡಳಿತ ಮಂಡಳಿಯ ಹಿರಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

ಆನ್‌ಲೈನ್‌ ಮಾರಾಟ: ಸಿಟ್ರಾನ್‌ ಎಲ್ಲೆಡೆ ಡೀಲರ್‌ಶಿಪ್‌ ನೆಟ್‌ವರ್ಕ್‌ ಹೊಂದಿದ್ದು, ಅಂಬಾಸಿಡರ್‌ ಬ್ರಾಂಡ್‌ ಕಾರನ್ನು ಆನ್‌ಲೈನ್‌ ಮೂಲಕವೇ ಮಾರಾಟ ಮಾಡಲು ನಿರ್ಧರಿಸಿದೆ. ಕಾಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲಿ ಕಾರು ಇರಲಿದ್ದು, ಶೀಘ್ರವೇ ಅದರ ಮಾದರಿಯನ್ನು ಅನಾವರಣಗೊಳಿಸಲಿದೆ. ಮಾರಾಟ ಆರಂಭವಾದ ಮೊದಲ ತ್ರೈಮಾಸಿಕದಲ್ಲೇ ಲಾಭ ಪಡೆದುಕೊಳ್ಳುವ ಗುರಿಯನ್ನು ಸಂಸ್ಥೆ ಹಾಕಿಕೊಂಡಿದ್ದು, ಅದಕ್ಕಾಗಿ ಈಗಾಗಲೇ ಕಾರ್ಯತಂತ್ರ ರೂಪಿಸಿದೆ ಎಂದು ಹೇಳಲಾಗಿದೆ.

2015ರಿಂದ ಇಲೆಕ್ಟ್ರಿಕ್‌ ವೆಹಿಕಲ್‌ಗಳನ್ನು ತಯಾರಿಸುತ್ತಿರುವ ಸಿಟ್ರಾನ್‌, ಡಿಎಸ್‌ ಬ್ರಾಂಡ್‌ನೊಂದಿಗೆ ಇಲೆಕ್ಟ್ರಿಕ್‌ ಕಾರುಗಳ ಮಾರಾಟದಲ್ಲಿ ಯುರೋಪ್‌ನಲ್ಲಿ ಪಾರಮ್ಯ ಸಾಧಿಸಿದೆ. ಡಿಎಸ್‌3 ಕ್ರಾಸ್‌ ಬ್ಯಾಕ್‌ ಇ- ಟೆನ್ಸ್‌ ಕೂಡ ನಿರೀಕ್ಷಿತ ರಿಸಲ್ಟ್‌ ನೀಡಿದೆ. ಇದು ಒಂದು ಬಾರಿ ಚಾರ್ಜ್‌ ಮಾಡಿದರೆ 330 ಕಿ.ಮೀ. ದೂರ ಚಲಿಸುವ ಸಾಮರ್ಥ್ಯ ಹೊಂದಿದೆ. ಅಂಬಾಸಿಡರ್‌ ಕೂಡ ಇದೇ ಸಾಧನೆಯನ್ನು ನೀಡುವ ನಿರೀಕ್ಷೆಯಿದೆ.

ಗತವೈಭವ: ಅಂಬಾಸಿಡರ್‌ ಹೆಸರು ಭಾರತದ ಜತೆಗೆ ಸುದೀರ್ಘ ಸಂಬಂಧವನ್ನು ಹೊಂದಿದೆ. ಇದರಿಂದಾಗಿಯೇ ಈ ಬ್ರಾಂಡ್‌ನ ಹೆಸರಿನಲ್ಲಿ ಇ-ಕಾರು ಸಿದ್ಧ ಪಡಿಸಲು ನಿರ್ಧರಿಸಿರುವುದಾಗಿ ಸಂಸ್ಥೆ ತಿಳಿಸಿದೆ. ಹಿಂದೂಸ್ತಾನ್‌ ಮೋಟಾರ್ಸ್‌ ಜತೆ ಜಂಟಿ ಸಹಭಾಗಿತ್ವವನ್ನು ಹೊಂದಿರುವ ಸಿಟ್ರಾನ್‌, 80 ಕೋಟಿ ರೂ.ಗಳ ಮೊತ್ತಕ್ಕೆ ಅಂಬಾಸಿಡರ್‌ ಬ್ರಾಂಡ್‌ನ್ನು ಖರೀಸಿತ್ತು. ಇದರ ಹೊರತಾಗಿ 700 ಕೋಟಿ ರೂ. ಆರಂಭಿಕ ಹೂಡಿಕೆಯಲ್ಲಿ ವಾಹನ ಮತ್ತು ಎಂಜಿನ್‌ ಉತ್ಪಾದನೆಯ ಒಪ್ಪಂದವನ್ನು ಈ ಎರಡು ಕಂಪನಿಗಳು ಮಾಡಿಕೊಂಡಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ