ದಾವಣಗೆರೆ: ರಾಜ್ಯದಲ್ಲಿ ಪಕ್ಷದ ವತಿಯಿಂದಲೇ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವ ಬಗ್ಗೆ ಕಾರ್ಯ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳುವ ಮೂಲಕ ರಾಜ್ಯ ಸರಕಾರಕ್ಕೆ ಚಾಟಿ ಬೀಸಿದ್ದಾರೆ.
ನಗರದಲ್ಲಿ ಮಂಗಳವಾರ ನಡೆದ ಪ್ರಚಾರ ಸಭೆಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯ ಪಕ್ಷದ ಅಭ್ಯರ್ಥಿ ಪರ ಮತ ಯಾಚಿಸಿ ಮಾತನಾಡಿದ ಅವರು, ''ಬರ ಪರಿಹಾರ ಕಾಮಗಾರಿಗೆ ರಾಜ್ಯ ಸರಕಾರ ಸಾಕಷ್ಟು ಹಣ ಬಿಡುಗಡೆ ಮಾಡದಿರುವ ಹಿನ್ನೆಲೆಯಲ್ಲಿ ಬಿಜೆಪಿ ಈ ಕ್ರಮಕ್ಕೆ ಮುಂದಾಗಿದೆ. ಹಣ ಮತ್ತು ಕಾರ್ಯಕರ್ತರ ಜೋಡಣೆಯ ಕೆಲಸ ನಡೆದಿದೆ,'' ಎಂದು ಹೇಳಿದರು.
''ಸಂಸದರಿಂದ ತಲಾ ಒಂದು ಕೋಟಿ ರೂ., ಶಾಸಕರಿಂದ ತಲಾ 25 ಲಕ್ಷ ರೂ., ಜತೆಗೆ ಮಠಗಳಿಂದಲೂ ಹಣ ಸಂಗ್ರಹಿಸಲಾಗುವುದು. ಗೋಶಾಲೆ, ಕುಡಿಯುವ ನೀರು, ಮೇವು ವಿತರಣೆಯನ್ನೂ ಮಾಡಲಾಗುವುದು,'' ಎಂದರು.
''ನಾವು ಅಧಿಕಾರದಲ್ಲಿದ್ದಾಗ ಕೃಷ್ಣಾ ಕೊಳ್ಳದಲ್ಲಿ ಮುಳುಗಡೆ ಆದ 320 ಗ್ರಾಮಗಳನ್ನು ಇದೇ ರೀತಿ ಹಣ ಸಂಗ್ರಹಿಸಿ ನವಗ್ರಾಮ ನಿರ್ಮಿಸಿದ್ದೆವು. ಕೇಂದ್ರ ಸರಕಾರದ ಹಣಕ್ಕೆ ಕಾಯುತ್ತಾ ಕುಳಿತಿರಲಿಲ್ಲ,'' ಎಂದು ಪರೋಕ್ಷವಾಗಿ ಛೇಡಿಸಿದರು.
ಶಿವಮೊಗ್ಗ ಘಟನೆ: ಪ್ರತಿಕ್ರಿಯೆಗೆ ಬಿಎಸ್ವೈ ನಕಾರ
ಶಿವಮೊಗ್ಗ ಘಟನೆಗೆ ಪ್ರತಿಕ್ರಿಯೆ ನೀಡಲು ಬಿಎಸ್ವೈ ನಿರಾಕರಿಸಿದರು. ಸಣ್ಣ ಪುಟ್ಟ ಗೊಂದಲಗಳಿದ್ದರೂ ಅವನ್ನು ಪಕ್ಷದೊಳಗಡೆ ಪರಿಹರಿಸಿಕೊಳ್ಳಲಾಗುವುದು ಎಂದು ತಿಳಿಸಿದರು.