ಆ್ಯಪ್ನಗರ

ಶ್ರೀಶೈಲಕೆ ಪಾದಯಾತ್ರೆ

ಹೋಳಿ ಹುಣ್ಣಿಮೆ ದಿನ ಕಾಮದಹನದ ನಂತರ ತಮ್ಮ ಊರುಗಳಿಂದ ಪಾದಯಾತ್ರೆ ಆರಂಭಿಸುವ ಭಕ್ತರು ಯುಗಾದಿ ಹಿಂದಿನ ದಿನ ಶ್ರೀಶೈಲ ಸೇರುತ್ತಾರೆ. ಪ್ರತಿದಿನ 60 ಕಿ.ಮೀ.ನಂತೆ 600ಕ್ಕೂ ಹೆಚ್ಚು ಕಿ.ಮೀ. ನಡೆದು ಶ್ರೀಶೈಲ ತಲುಪಿ ದೇವರ ದರ್ಶನ ಪಡೆಯುತ್ತಾರೆ.

Vijaya Karnataka 6 Apr 2019, 12:00 am
ಶ್ರೀಶೈಲ ಎನ್ನುತ್ತಿದ್ದಂತೆ ನೆನಪಾಗುವುದು ಅಲ್ಲಿ ಯುಗಾದಿ ಪಾಡ್ಯದಂದು ಸಂಜೆ ನಡೆಯುವ ವೈಭವದ ರಥೋತ್ಸವ. ಜಾತ್ರೆ ವೈಭವವನ್ನು ಕಣ್ತುಂಬಿಕೊಳ್ಳುವ ಭಕ್ತಸಾಗರವೇ ಸೇರುತ್ತದೆ. ಉತ್ತತ್ತಿ, ಹಣ್ಣು, ನಾಣ್ಯಗಳನ್ನು ರಥಕ್ಕೆ ಸಮರ್ಪಿಸಿ ಭಕ್ತರು ಹರಕೆ ತೀರಿಸುತ್ತಾರೆ. ಉತ್ತರ ಕರ್ನಾಟಕದ ವಿವಿಧ ಭಾಗಗಳ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ಬಂದು ರಥೋತ್ಸವದ ಸೊಬಗನ್ನು ಕಣ್ತುಂಬಿಕೊಳ್ಳುತ್ತಾರೆ.
Vijaya Karnataka Web shrishaila


ಹೋಳಿ ಹುಣ್ಣಿಮೆ ದಿನ ಕಾಮದಹನದ ನಂತರ ತಮ್ಮ ಊರುಗಳಿಂದ ಪಾದಯಾತ್ರೆ ಆರಂಭಿಸುವ ಭಕ್ತರು ಯುಗಾದಿ ಹಿಂದಿನ ದಿನ ಶ್ರೀಶೈಲ ಸೇರುತ್ತಾರೆ. ಪ್ರತಿದಿನ 60 ಕಿ.ಮೀ.ನಂತೆ 600ಕ್ಕೂ ಹೆಚ್ಚು ಕಿಮೀ. ನಡೆದು ಶ್ರೀಶೈಲ ತಲುಪಿ ದೇವರ ದರ್ಶನ ಪಡೆದಾಗ ಉಂಟಾಗುವ ಸಂತೃಪ್ತಿ ವರ್ಣನಾತೀತ ಎನ್ನುತ್ತಾರೆ ಪಾದಯಾತ್ರಿಕರು. ಅಂದಾಜು 70ಕಿ.ಮೀ.ಕಾಡು ದಾರಿಯಲ್ಲಿ ನಡೆಯಬೇಕು.

ಕೆಲವು ಭಕ್ತರು ಕಂಬಿಗಳನ್ನು ಹೊತ್ತು ನಡೆಯುತ್ತಾರೆ. ಪ್ರತಿದಿನ ಅದಕ್ಕೆ ಎರಡು ಬಾರಿ ಪೂಜೆ ನಡೆಯಬೇಕು ಎಂಬ ನಿಯಮವಿರುತ್ತದೆ. ಕೆಲವರು ಬರಿಗಾಲಿನಿಂದ ನಡೆಯುವ ಹರಕೆ ಹೊತ್ತಿದ್ದರೆ ಮತ್ತೆ ಕೆಲವರು ಮರಗಾಲು ಕಟ್ಟಿಕೊಂಡು ನಡೆಯುತ್ತಾರೆ. ಸಾಮಾನ್ಯ ನಡಿಗೆಗಿಂತ ಇದು ಇನ್ನೂ ಕಷ್ಟ. ಕರ್ನೂಲು ದಾಟುತ್ತಿದ್ದಂತೆ ಬೆಟ್ಟ ಗುಡ್ಡಗಳ ನಡುವೆ ಇವರ ನಡಿಗೆ ಕಠಿಣವಾಗುತ್ತದೆ. ಇಂಥ ದುರ್ಗಮ ದಾರಿ ತುಳಿದು ಮಲ್ಲಯ್ಯನ ದರ್ಶನ ಪಡೆದು ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಂತೆ ನಡೆದು ಬಂದ ಆಯಾಸವೆಲ್ಲ ಮರೆತು ಹೋಗುತ್ತದೆ. ಮೈಮನಗಳು ಹಗುರವಾಗಿ ಇನ್ನಿಲ್ಲದ ಚೈತನ್ಯ ಬರುತ್ತದೆ ಎಂಬುದು ಪಾದಯಾತ್ರಿಗಳ ಅನುಭವ. ಮಳೆ ಬೆಳೆ ಚೆನ್ನಾಗಿ ಬಂದು ರೈತರ ಬದುಕು ಹಸನಾಗಲಿ ಎಂದು ಹರಕೆ ಹೊತ್ತ ಕೆಲವು ಭಕ್ತರು ಧಾನ್ಯದ ಮೂಟೆಯನ್ನು ಹೆಗಲ ಮೇಲೆ ಹೊತ್ತು ಸಾಗುತ್ತಾರೆ. ಮಲ್ಲಯ್ಯನ ಸನ್ನಿಧಿಗೆ ಬಂದು ಸಾಮೂಹಿಕ ದಾಸೋಹಕ್ಕೆ ಈ ಧಾನ್ಯದ ಮೂಟೆ ಸಮರ್ಪಿಸುತ್ತಾರೆ. ಇದಂತೂ ಮೈನವಿರೇಳಿಸುವ ದೇಹ ದಂಡನೆ. 'ಮಲ್ಲಯ್ಯನ ಸೇವೆ, ನಮ್ಮ ನಂಬಿಕೆ, ಹತ್ತಾರು ವರ್ಷಗಳಿಂದ ಯಾತ್ರೆ ನಡೆಯುತ್ತಿದೆ. ನಮಗೆ ಯಾವ ತೊಂದರೆಯಾಗಿಲ್ಲ. ಈ ಯಾತ್ರೆ ನಮ್ಮ ಮನದ ಕೊಳೆ ತೊಳೆಯುತ್ತದೆ. ಸುಂದರ ಬದುಕು ರೂಪಿಸಿಕೊಳ್ಳಲು ಪಾಠವಾಗುತ್ತದೆ. ಭಕ್ತಿ ಸಮರ್ಪಣೆಗೊಂದು ಅವಕಾಶ ಕಲ್ಪಿಸುತ್ತದೆ' ಎನ್ನುತ್ತಾರೆ ಪಾದಯಾತ್ರಿಕರು. ಇವರೊಂದಿಗೆ ಕುದುರೆ, ಎತ್ತುಗಳೂ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತವೆ. ಕೆಲವು ಬಾರಿ ಈ ಪ್ರಾಣಿಗಳೇ ಮುಂದೆ ಸಾಗುತ್ತ ಹೊಸ ಯಾತ್ರಿಕರಿಗೆ ದಾರಿ ತೋರುತ್ತವೆ ಎಂಬುದು ವಿಶೇಷ.

ಹೀಗೆ ನಡೆದುಕೊಂಡು ಹೋಗುವಾಗ ನಾನಾ ಸ್ಥಳಗಳಲ್ಲಿ ಭಕ್ತರು ಊಟ, ಉಪಹಾರ, ಔಷಧ ನೀಡುವ ಮೂಲಕ ಸೇವೆ ಸಲ್ಲಿಸುತ್ತಾರೆ. ರಾಜ್ಯದ ಗಡಿ ದಾಟಿ ಕರ್ನೂಲು ಪ್ರವೇಶಿಸುತ್ತಿದ್ದಂತೆ ಆಂಧ್ರದವರೇ ಆದ ಕೆಲವು ಜನ ಒಂದು ಸ್ಥಳದಲ್ಲಿ ಟೆಂಟ್‌ ನಿರ್ಮಿಸಿ ಪಾದಯಾತ್ರಿಕರ ಕಾಲು ಮಸಾಜ್‌ ಮಾಡುತ್ತಾರೆ. ರಾಜ್ಯದಿಂದ ತೆರಳಿದ ಅನೇಕ ರೈತಾಪಿ ಜನರಿಗೆ ತೆಲುಗು ಭಾಷೆ ತಿಳಿದಿರುವುದಿಲ್ಲ. ಅಲ್ಲಿನ ಜನತೆಗೆ ಕನ್ನಡ ಬರುವುದಿಲ್ಲ. ಆದರೂ ಅವರು ಪಾದಯಾತ್ರಿಕರ ಕಾಲು ತಿಕ್ಕಿ ನಮಸ್ಕರಿಸುತ್ತಾರೆ. ಈ ಸೇವೆಗೆ ಯಾವ ರೀತಿ ಧನ್ಯವಾದ ಹೇಳಬೇಕೊ ತಿಳಿಯುವುದಿಲ್ಲ ಎಂದು ಭಾವುಕರಾಗುತ್ತಾರೆ ಪಾದಯಾತ್ರಿಕ ಬಸವರಾಜ ಸಾವಳಗಿ.

ಯುಗಾದಿ ಅಮಾವಾಸ್ಯೆ ದಿನ ಸಂಜೆ ಶ್ರೀಶೈಲದಲ್ಲಿ ಗೌರಮ್ಮನ ತೇರು ಎಂಬ ರಥೋತ್ಸವವೂ ನಡೆಯುತ್ತದೆ. ಇದಾದ ನಂತರ ಪುರವಂತರು ಪಾತಾಳ ಗಂಗೆಗೆ ತೆರಳಿ ಉಟ್ಟಬಟ್ಟೆಯ ಮೇಲೆ ಸ್ನಾನ ಮಾಡಿ ಮಡಿಯಿಂದ ಬಂದು ಅಗ್ಗಿ ಹಾಯುತ್ತಾರೆ. ಈ ದೃಶ್ಯವೂ ಮೈನವಿರೇಳಿಸುತ್ತದೆ. ಇನ್ನು ಶಿವರಾತ್ರಿ ಸಂದರ್ಭದಲ್ಲೂ ಇಲ್ಲಿ ರಥೋತ್ಸವ ನಡೆಯುತ್ತದೆ.
-ಸೀಮಾ ಎಸ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ