ಆ್ಯಪ್ನಗರ

ಅಧ್ಯಾತ್ಮ ಚಿಂತನೆಗೆ ಹಲವು ದಾರಿ

ಧನಮೇಲೋ ಜನಮೇಲೋ, ಬದುಕು ಮಾಯೆ ದರ್ಶನ, ನೆಲದ ಮೇಲಿನ ನಕ್ಷತ್ರ, ಸತ್ಯದೊಂದಿಗಿನ ಸಂತಸವೇ ಅನುಭಾವ, ಬದುಕು ಭರವಸೆಯನ್ನು ಬೇಡುತ್ತದೆ, ಅಹಿಂಸೆಯೆ ಸಾತ್ವಿಕತೆಯ ದಿವ್ಯಾಸ್ತ್ರ ಹೀಗೆ ಇನ್ನೂ ಹಲವಾರು ಆಧ್ಯಾತ್ಮಿಕ ಲೇಖನಗಳು ಈ ಕೃತಿಯಲ್ಲಿವೆ.

Vijaya Karnataka 13 Jul 2019, 12:00 am
'ಪರಿಶುದ್ಧ ಪ್ರೀತಿಯೇ ಭಕ್ತಿ' ಲೇಖನದ ಮೂಲಕ ಕೃತಿ ಆರಂಭಗೊಳ್ಳುತ್ತದೆ. ಭಗವಂತನನ್ನು ನಮ್ಮವನ್ನಾಗಿಸಲು ಪ್ರೀತಿಯ ಪಾತ್ರ ಅನನ್ಯವಾದುದು. ಈ ಪ್ರೀತಿಗೆ ಹತ್ತಾರು ಮುಖಗಳು. ಭಗವಂತನನ್ನು ಆರಾಧಿಸುವ ನಿಷ್ಕಲ್ಮಷ ಮಾರ್ಗವೇ ಪ್ರೀತಿ. ಇದು ಸಹಜ ಮತ್ತು ಸರಳವಾದುದು. ಶ್ರದ್ಧೆ, ನಿಷ್ಠೆಗಳಿಂದ ಕೂಡಿದುದು. ಇದಕ್ಕೆ ಯಾವ ಸಿದ್ಧಾಂತಗಳ ಕಟ್ಟುಪಾಡುಗಳಿಲ್ಲ. ಎಲ್ಲರೂ ಸುಲಭವಾದ ದಾರಿಯಲ್ಲಿ ಅನುಸರಿಸಬಹುದಾದ ದಾರಿಯೇ ದೈವ ಪ್ರೀತಿ. ಭಗವಂತನೆಡೆಗಿನ ಪ್ರೀತಿಯ ಕುರಿತಾಗಿ ಹೀಗೆ ಅಭಿವ್ಯಕ್ತಗೊಳಿಸಿದ್ದಾರೆ.
Vijaya Karnataka Web Deepa Chinthana


ಧನಮೇಲೋ ಜನಮೇಲೋ, ಬದುಕು ಮಾಯೆ ದರ್ಶನ, ನೆಲದ ಮೇಲಿನ ನಕ್ಷತ್ರ, ಸತ್ಯದೊಂದಿಗಿನ ಸಂತಸವೇ ಅನುಭಾವ, ಬದುಕು ಭರವಸೆಯನ್ನು ಬೇಡುತ್ತದೆ, ಅಹಿಂಸೆಯೆ ಸಾತ್ವಿಕತೆಯ ದಿವ್ಯಾಸ್ತ್ರ ಹೀಗೆ ಇನ್ನೂ ಹಲವಾರು ಆಧ್ಯಾತ್ಮಿಕ ಲೇಖನಗಳು ಈ ಕೃತಿಯಲ್ಲಿವೆ.

ಭಗವಂತನ ಸೃಷ್ಟಿರೂಪದಲ್ಲಿ ಈ ಜಗತ್ತಿಗೆ ಬಂದಿರುವ ನಾವು ರಾಗದ್ವೇಷದಿಂದ ಬಂಧಿತರಾಗಿದ್ದೇವೆ. ನಮಗೆ ಎಲ್ಲರನ್ನು, ಎಲ್ಲವನ್ನು ಬಿಟ್ಟು ಬಿಡಲು ಸಾಧ್ಯವಿಲ್ಲ. ಆದರೆ ಎಲ್ಲರೊಡನೆ ಸೇರಿ ಇರಲೂ ಸಾಧ್ಯವಾಗುತ್ತಿಲ್ಲ. ಇಂತಹ ಮಾಯೆಯಿಂದ ಹೊರಬರಬೇಕಾದರೆ ನಮಗೆ ದರ್ಶನದ ಅನುಭೂತಿಯಾಗಬೇಕು. ಇಂದ್ರಿಯಾಕರ್ಷಣೆಯಿಂದ ಹೊರ ಬರಬೇಕು. ನಮಗೆ ನಮ್ಮನ್ನು ನೋಡಲು ಸಾಧ್ಯವಾದರೆ ಅದು ದರ್ಶನ. ಈ ದರ್ಶನ ಸುಲಭ ಸಾಧ್ಯವಲ್ಲ. ಕಳೆದುಕೊಳ್ಳುವುದೆಂದರೆ ಪರಿತ್ಯಜಿಸುವುದಲ್ಲ. ಅವುಗಳ ಹಿಡಿತಕ್ಕೆ ಸಿಕ್ಕಿಕೊಳ್ಳದಿರುವ. ಇದೇ ಕೃಷ್ಣ ತತ್ತ್ವ, ಇದೇ ಬುದ್ಧ ತತ್ವ, ಇದೇ ಶರಣತ್ವ ಎಂದಿದ್ದಾರೆ ಲೇಖಕರು.

ದೇವರೆಂದರೆ ದರ್ಶನ, ಪ್ರದರ್ಶನವಲ್ಲ. ಹಾಗಾದರೆ ದೇವನೆಂದರೆ ಏನು? ಅನಾದಿಕಾಲದಿಂದಲೂ ನಡೆದು ಬಂದಿರುವ ದೇವಚಿಂತನೆಯಿದು. ಉತ್ತರ ಸಿಕ್ಕಿಲ್ಲ ನಿಜ. ಕಂಡುಕೊಳ್ಳುವ ಪ್ರಯತ್ನವಂತೂ ನಿಂತಿಲ್ಲ. ಪ್ರತಿಯೊಬ್ಬರಿಗೂ ದೇವರು ವಿಭಿನ್ನ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾನೆ. ನಿಜ. ದೇವರು ಸರ್ವರಕ್ಷಕ, ಸರ್ವಾಂತರ್ಯಾಮಿ. ದೇವರು ಜಗದಗಲ, ಮುಗಿಲಗಲ, ಮಿಗೆಯಗಲ. ದೇವರು ಸತ್ಯಂ, ಅನಂತಂ, ಜ್ಞಾನಂ. ದೇವರು ಸಂತೋಷ ಮತ್ತು ಪ್ರೀತಿ .... ಹೀಗೆ ದೇವರು ವಿಭಿನ್ನ ರೀತಿಯಲ್ಲಿ ಭಕ್ತರ ಅಭಿಪ್ರಾಯಕ್ಕೆ ತಕ್ಕಂತೆ ನಿಲುಕುತ್ತಾನೆ. ಆದರೆ ಲೇಖಕರು, 'ಕತ್ತಲೆಯಿಂದ ಬೆಳಕಿನೆಡೆಗೆ ಒಯ್ಯುವವನೇ ದೇವರು' ಎಂದು ವ್ಯಾಖ್ಯಾನಿಸಿದ್ದಾರೆ.

ಹಾಗೆಯೇ ಶತ ಶತಮಾನಗಳ ಹಿಂದಿನವರು ದೇವರನ್ನು ಕಂಡುಕೊಂಡ ಬಗೆಯನ್ನು ಲೇಖಕರು ಈ ಲೇಖನದಲ್ಲಿ ಒಡಮೂಡಿಸಿದ್ದಾರೆ. ಹಾಗೆಯೇ 'ದೇವರಿದ್ದಾನೆ' ಎಂಬುದನ್ನು ಬಹುತೇಕ ಒಪ್ಪಿಕೊಂಡಿದ್ದೇವೆ. ಜತೆಗೆ ಎಲ್ಲಿದ್ದಾನೆ? ಹೇಗಿದ್ದಾನೆ ಎನ್ನುವ ಗೊಂದಲಗಳು ಸಲ್ಲದ ಆತಂಕಗಳು ಇವೆ. ಅದನ್ನು ಹೇಗೆ ಪರಿಹರಿಸಿಕೊಳ್ಳಬಹುದು ಎಂಬುದನ್ನು ಕೃತಿಕಾರರು ಈ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಜತೆಗೆ ಆಧ್ಯಾತ್ಮಿಕವಾಗಿ ತಮ್ಮನ್ನು ಹೇಗೆ ತೊಡಗಿಸಿಕೊಳ್ಳಬಹುದು ಎಂಬುದಕ್ಕೆ ಮಾರ್ಗದರ್ಶಿಯಂತಿರುವ ಹಲವು ಚಿಂತನ ಬರಹಗಳು ಈ ಕೃತಿಯಲ್ಲಿವೆ.

ಕೃತಿ: ದೀಪ ಚಿಂತನ

ಲೇಖಕರು: ಡಾ. ಪ್ರದೀಪ ಕುಮಾರ ಹೆಬ್ರಿ

ಪುಟಗಳು:152

ಬೆಲೆ: ರೂ. 110.

ಪ್ರಕಾಶಕರು: ಪ್ರಸಾದ್‌ ಏಜೆನ್ಸೀಸ್‌, 657, 1ನೇ ಮಹಡಿ, ಕೂಗುಬಂಡೆ ರಸ್ತೆ, ಕುವೆಂಪುನಗರ, ಮೈಸೂರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ