ಆ್ಯಪ್ನಗರ

ಪಿಒಕೆಯಲ್ಲಿರುವ ಶಾರದಾ ಪೀಠಕ್ಕೆ ಕಾರಿಡಾರ್‌ ನಿರ್ಮಾಣಕ್ಕೆ ಸ್ವಾಗತ

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಶ್ರೀ ಶಾರದಾ ಪೀಠಕ್ಕೆ ಕಾರಿಡಾರ್‌ ನಿರ್ಮಿಸಲು ಅನುಮತಿ ನೀಡುವ ಅಲ್ಲಿನ ಸರಕಾರದ ನಿರ್ಧಾರವನ್ನು ಶಂಕರ ಪರಂಪರೆಯ ಗುರುಮಠಗಳು ಸ್ವಾಗತಿಸಿವೆ.

Vijaya Karnataka 30 Mar 2019, 5:00 am
ಬೆಂಗಳೂರು/ನವದೆಹಲಿ: ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಶ್ರೀ ಶಾರದಾ ಪೀಠಕ್ಕೆ ಕಾರಿಡಾರ್‌ ನಿರ್ಮಿಸಲು ಅನುಮತಿ ನೀಡುವ ಅಲ್ಲಿನ ಸರಕಾರದ ನಿರ್ಧಾರವನ್ನು ಶಂಕರ ಪರಂಪರೆಯ ಗುರುಮಠಗಳು ಸ್ವಾಗತಿಸಿವೆ.
Vijaya Karnataka Web Sharada peetha1


ಶ್ರೀ ಶಾರದಾ ಸರ್ವಜ್ಞ ಪೀಠದ ಪುನರುತ್ಥಾನ ಆಗಲೇ ಬೇಕಾದ ಕೆಲಸವಾಗಿದೆ. ಈ ಕಾರ್ಯಕ್ಕೆ ನಮ್ಮ ಸಮ್ಮತಿ ಇದೆ. ಈ ಕೆಲಸಕ್ಕೆ ಎಲ್ಲಾ ಮಠದವರು ಕೈಜೋಡಿಸಬೇಕು ಎಂದು ಹೆಬ್ಬೂರು ಕೋದಂಡರಾಮಾಶ್ರಮ ಜನಪುರಿ ಸಂಸ್ಥಾನದ ಶ್ರೀ ಮಾಧವಾಶ್ರಮ ಸ್ವಾಮೀಜಿ ಆಗ್ರಹಿಸಿದ್ದಾರೆ.

ನಮ್ಮ ಭಾರತೀಯ ಆಧ್ಯಾತ್ಮಿಕ ಪ್ರಪಂಚಕ್ಕೆ ಆದಿ ಶಂಕರಾಚಾರ್ಯರ ಎಷ್ಟು ಅಮೂಲ್ಯರೋ ಅವರು ಏರಿದ ಸರ್ವಜ್ಞ ಪೀಠವೂ ನಮಗೆ ಅಷ್ಟೇ ಅಮೂಲ್ಯವಾಗಿದೆ. ಅಂತಹ ಸರ್ವಜ್ಞ ಪೀಠವು ಪ್ರಸ್ತುತ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದ್ದು ಇತ್ತೀಚಿನ ಬೆಳವಣಿಗೆಗಳಲ್ಲಿ ವರ್ಷಕ್ಕೊಮ್ಮೆಯಾದರೂ ದರ್ಶನ ಮಾಡುವಂತಹ ಅವಕಾಶವೂ ಸಿಕ್ಕಿದ್ದು ಅತ್ಯಂತ ಸಂತೋಷಕರವೂ ಹೆಮ್ಮೆಯ ವಿಚಾರವೂ ಆಗಿದೆ. ಸಮಸ್ತ ಭಾರತೀಯರಿಗೆ ಸ್ವಾಭಿಮಾನದ ಸ್ಮಾರಕವಾಗಿರುವ ಜಗತ್ತಿಗೆ ಜ್ಞಾನಜ್ಯೋತಿಯಾಗಿ ಬೆಳಗಿದ ಈ ಪೀಠದ ದರ್ಶನವು ಮುಂದೆ ಸದಾ ಮುಕ್ತವಾಗಿ ಸಿಗುತ್ತಿರಲಿ ಎಂದು ನಾವು ಈ ಶುಭ ಸಂದರ್ಭದಲ್ಲಿ ಆಶಿಸುತ್ತೇವೆ ಎಂದು ಹರಿಹರಪುರ ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೇನೃಸಿಂಹ ಪೀಠದ ಜಗದ್ಗುರು ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ.

ಈ ನಿರ್ಧಾರವನ್ನು ಶೃಂಗೇರಿ ಶ್ರೀ ಶಾರದಾ ಪೀಠ ಸ್ವಾಗತಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಪೀಠದ ಆಡಳಿತಾಧಿಕಾರಿ ಡಾ. ವಿ. ಆರ್‌. ಗೌರಿಶಂಕರ್‌, ಕಾಶ್ಮೀರದಲ್ಲಿರುವ ಶಾರದಾ ಎಂಬ ಗ್ರಾಮ ಆದಿ ಶಂಕರಚಾರ್ಯರು ಭೇಟಿ ನೀಡಿದ ಸ್ಥಳವಾಗಿದೆ. ಶ್ರೀಮಠದಿಂದ ಅಲ್ಲಿಗೆ ಭಕ್ತಾದಿಗಳು ಭೇಟಿ ನೀಡಲು ಅನುಕೂಲ ಮಾಡಿಕೊಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಪಾಕಿಸ್ತಾನ ವಿದೇಶಾಂಗ ಸಚಿವಾಲಯ, ದೇವಾಲಯದ ಕಾರಿಡಾರ್‌ ತೆರೆಯಲು ಒಪ್ಪಿರುವುದು ಸಂತೋಷದಾಯಕ ವಿಚಾರ ಎಂದು ಹೇಳಿದ್ದಾರೆ.

ಸರ್ವಜ್ಞ ಪೀಠ ಎಂದು ಕರೆಯಲ್ಪಡುವ ಈ ದೇವಾಲಯದ ದಕ್ಷಿಣ ಬಾಗಿಲನ್ನು ಆದಿ ಶಂಕರಾಚಾರ್ಯರು ತೆರೆದರು. ಈ ಮೂಲಕ ಸರ್ವಜ್ಞ ಪೀಠಾರೋಹಣದ ಅಧಿಕಾರವನ್ನು ಅವರು ಪಡೆದರು ಎಂದು ಹೇಳಲಾಗಿದೆ.

ಸಿಖ್ಖರ ಪವಿತ್ರ ಕ್ಷೇತ್ರ ಕರ್ತಾರ್ಪುರ್‌ ಗುರುದ್ವಾರಕ್ಕೆ ಕಾರಿಡಾರ್‌ ಯೋಜನೆ ಪ್ರಾರಂಭಗೊಂಡಿರುವ ಬೆನ್ನಲ್ಲೇ ಈಗ ಶಾರದಾ ಪೀಠಕ್ಕೆ ಸಹ ಕಾರಿಡಾರ್‌ ನಿರ್ಮಾಣ ಮಾಡಲು ಪಾಕ್‌ ಅನುಮತಿ ನೀಡಿದೆ. ಕಾರಿಡಾರ್‌ ನಿರ್ಮಾಣವಾದ ನಂತರ ಕಾಶ್ಮೀರಿ ಹಿಂದುಗಳು ಇಲ್ಲಿಗೆ ವಿಸಾ ಇಲ್ಲದೆ ಹೋಗಿ ಬರಬಹುದು. ಕಾಶ್ಮಿರದಿಂದ ಇದು ಕೇವಲ 130 ಕಿ.ಮೀ. ದೂರವಿದೆ.

ಪಿಒಕೆಯ ನೀಲಂ (ಕಿಶನ್‌ಗಂಗಾ) ನದಿಯ ಕಣಿವೆಯಲ್ಲಿ 5000 ವರ್ಷಗಳಷ್ಟುಹಳೆಯ ಶಾರದಾ ದೇವಸ್ಥಾನ ಹಾಗೂ ಅದರ ಪಕ್ಕದಲ್ಲೆ ಶಾರದಾ ವಿಶ್ವವಿದ್ಯಾಲಯದ ಪಳೆಯುಳಿಕೆಗಳಿವೆ.

ಇದು ನೀಲಂ ನದಿಯು ಮಧುಮತಿ ಮತ್ತು ಸರ್ಗುಣ್‌ ನದಿಯನ್ನು ಸೇರುವ ಸಂಗಮ ಸ್ಥಳವಾಗಿದೆ. ಕಾಶ್ಮೀರಿ ಪಂಡಿತರು ಶಾರದೆಯ ಮೂಲ ಸ್ಥಾನವೇ ಪಿಒಕೆಯಲ್ಲಿರುವ ಶಾರದಾ ಪೀಠ ಎಂದು ಅವರು ನಂಬಿದ್ದಾರೆ. ಅಲ್ಲಿ ಕ್ರಿ.ಪೂ. 237ರಲ್ಲಿ ಅಶೋಕ ಚಕ್ರವರ್ತಿಯು ಶಾರದಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದ. ಅದು ಈಗ ನಾಶವಾಗಿದೆ. ಶಾರದೆಯ ದೇವಸ್ಥಾನ ಮಾತ್ರ ಜೀರ್ಣ ಸ್ಥಿತಿಯಲ್ಲಿದೆ. ಕಾಶ್ಮೀರಪುರವಾಸಿನಿ ಎಂದು ಶಾರದೆಗೆ ಹೆಸರು ಬಂದಿದ್ದೆ ಶಾರದಾಪೀಠದಿಂದ. ದೇಶ ವಿಭಜನೆ ನಂತರ ಕಾಶ್ಮೀರಿ ಬ್ರಾಹ್ಮಣರಿಗೆ ಶಾರದಾಪೀಠದ ಭೇಟಿ ನಿಷಿದ್ಧವಾಗಿತ್ತು. ವಾಜಪೇಯಿ ಪ್ರಧಾನಿಯಾಗಿದ್ದಾಗ ಇಲ್ಲಿಗೆ ಕಾಶ್ಮಿರದಿಂದ ನೇರ ಕಾರಿಡಾರ್‌ ನಿರ್ಮಿಸುವ ಬೇಡಿಕೆ ಆರಂಭವಾಯಿತು.

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಪ್ರಯಾಗ್‌ರಾಜ್‌ ಕುಂಭ ಮೇಳದಲ್ಲಿ ಈ ದೇವಾಲಯಕ್ಕೆ ಭೇಟಿ ನೀಡಲು ಅವಕಾಶ ನೀಡುವಂತೆ ಒತ್ತಾಯಿಸಿ ಶಾರದಾ ಕುಂಭ್‌ ನೇತೃತ್ವದಲ್ಲಿ ಸಾಧು-ಸಂತರು ನಿರ್ಣಯ ಅಂಗೀಕರಿಸಿದ್ದರು.


ಶ್ರೀ ಶಾರದಾ ಸರ್ವಜ್ಞ ಪೀಠದ ಪುನರುತ್ಥಾನ ಆಗಲೇ ಬೇಕಾದ ಕೆಲಸವಾಗಿದೆ. ಈ ಕಾರ್ಯಕ್ಕೆ ನಮ್ಮ ಸಮ್ಮತಿ ಸಂಪೂರ್ಣವಾಗಿದೆ. ಈ ಕೆಲಸಕ್ಕೆ ಎಲ್ಲಾ ಮಠದವರು ಕೈಜೋಡಿಸಬೇಕು.

- ಶ್ರೀ ಮಾಧವಾಶ್ರಮ ಸ್ವಾಮೀಜಿ, ಜನಪುರಿ ಸಂಸ್ಥಾನ, ಕೋದಂಡಾಶ್ರಮ, ಹೆಬ್ಬೂರು.

ನಮ್ಮ ಭಾರತೀಯ ಆಧ್ಯಾತ್ಮಿಕ ಪ್ರಪಂಚಕ್ಕೆ ಆದಿ ಶಂಕರಾಚಾರ್ಯರ ಎಷ್ಟು ಅಮೂಲ್ಯರೋ ಅವರು ಏರಿದ ಸರ್ವಜ್ಞ ಪೀಠವೂ ನಮಗೆ ಅಷ್ಟೇ ಅಮೂಲ್ಯವಾಗಿದೆ. ಜಗತ್ತಿಗೆ ಜ್ಞಾನಜ್ಯೋತಿಯಾಗಿ ಬೆಳಗಿದ ಈ ಪೀಠದ ದರ್ಶನವು ಮುಂದೆ ಸದಾ ಮುಕ್ತವಾಗಿ ಸಿಗುತ್ತಿರಲಿ ನಾವು ಆಶಿಸುತ್ತೇವೆ.

- ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮೀಜಿ, ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೇನೃಸಿಂಹ ಪೀಠ, ಹರಿಹರಪುರ.

ಕಾಶ್ಮೀರದಲ್ಲಿರುವ ಶಾರದಾ ಎಂಬ ಗ್ರಾಮ ಆದಿಶಂಕರಚಾರ್ಯರು ಭೇಟಿ ನೀಡಿದ ಸ್ಥಳವಾಗಿದೆ. ಶ್ರೀಮಠದಿಂದ ಅಲ್ಲಿಗೆ ಭಕ್ತಾದಿಗಳು ಭೇಟಿ ನೀಡಲು ಅನುಕೂಲ ಮಾಡಿಕೊಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಪಾಕಿಸ್ತಾನ ವಿದೇಶಾಂಗ ಸಚಿವಾಲಯ, ದೇವಾಲಯದ ಕಾರಿಡಾರ್‌ ತೆರೆಯಲು ಒಪ್ಪಿರುವುದು ಸಂತೋಷದಾಯಕ ವಿಚಾರ.

-ಡಾ.ವಿ.ಆರ್‌.ಗೌರಿಶಂಕರ್‌,ಆಡಳಿತಾಧಿಕಾರಿ, ಶ್ರೀಶಾರದಾ ಪೀಠಂ, ಶೃಂಗೇರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ