ಆ್ಯಪ್ನಗರ

ಕಟೀಲು ಬ್ರಹ್ಮಕಲಶೋತ್ಸವ : ಕಾಮಗಾರಿ ಪೂರ್ಣಗೊಳಿಸಲು ಸೂಚನೆ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮುಂದಿನ ಜನವರಿಯಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಪ್ರಯುಕ್ತ ದೇವಸ್ಥಾನಕ್ಕೆ ಸಂಬಂಧಪಟ್ಟ ಸಿದ್ಧತಾ ಕಾರ್ಯ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ತಕ್ಷಣ ನಡೆಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದ್ದಾರೆ.

Vijaya Karnataka 21 Sep 2019, 1:29 pm
ಮಂಗಳೂರು:ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮುಂದಿನ ಜನವರಿಯಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಪ್ರಯುಕ್ತ ದೇವಸ್ಥಾನಕ್ಕೆ ಸಂಬಂಧಪಟ್ಟ ಸಿದ್ಧತಾ ಕಾರ್ಯ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ತಕ್ಷಣ ನಡೆಸಬೇಕು. ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಪೂರ್ಣ ಸಹಕಾರ ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದ್ದಾರೆ.
Vijaya Karnataka Web kateel Temple


ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ಕ್ಷೇತ್ರದ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ, ಕ್ಷೇತ್ರದ ಮುಂಭಾಗದಲ್ಲಿ ಅನಧಿಕೃತವಾಗಿರುವ ಅಂಗಡಿಗಳ ತೆರವು ಸೇರಿದಂತೆ ವಿವಿಧ ಕೆಲಸಗಳನ್ನು ತುರ್ತಾಗಿ ನಡೆಸುವಂತೆ ಅವರು ಸೂಚಿಸಿದರು.

ಕಟೀಲಿನ ಅರ್ಚಕ ಹರಿನಾರಾಯಣದಾಸ ಅಸ್ರಣ್ಣ ಮಾತನಾಡಿ, ಕ್ಷೇತ್ರದ ಮುಂಭಾಗದಲ್ಲಿ ಕೆಲವು ಅಂಗಡಿಯವರು ರಸ್ತೆ ಅತಿಕ್ರಮಣ ಮಾಡಿದ್ದಾರೆ. ಬೀದಿಬದಿ ವ್ಯಾಪಾರ ಅಧಿಕವಾಗಿದೆ. ಕೆಲವು ಹೋಟೆಲ್‌ಗಳ ಕೊಳಚೆ ನೀರು ನಂದಿನಿ ನದಿಗೆ ಸೇರುತ್ತಿದೆ. ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಮಾಡಲಾಗುತ್ತಿದೆ. ಇವೆಲ್ಲದರ ವಿರುದ್ಧ ಸೂಕ್ತ ಕ್ರಮಗಳು ತುರ್ತಾಗಿ ನಡೆಯಬೇಕು. ಇಲ್ಲವಾದರೆ, ಬ್ರಹ್ಮಕಲಶೋತ್ಸವದ ಸಂದರ್ಭ ಇನ್ನಷ್ಟು ಸಮಸ್ಯೆಗಳು ಆಗಲಿವೆ ಎಂದು ತಿಳಿಸಿದರು.

ನಿಯಮಗಳನ್ನು ಪಾಲಿಸದೆ ಇರುವ ಅಂಗಡಿಯವರಿಗೆ ಒಂದು ವಾರದ ಸಮಯ ನೀಡಿ ನಂತರವೂ ಪಾಲಿಸದೆ ಇದ್ದಲ್ಲಿ ಅಂತಹ ಅಂಗಡಿಯ ಪರವಾನಗಿಯನ್ನು ರದ್ದುಗೊಳಿಸಬೇಕು. ನದಿ ನೀರನ್ನು ಕಲುಷಿತಗೊಳಿಸುವ ಹೋಟೆಲ್‌ನ ಪರವಾನಗಿಯನ್ನು ರದ್ದು ಮಾಡಲು ಕ್ರಮ ವಹಿಸಬೇಕು ಎಂದು ಸಚಿವರು ಸೂಚನೆ ನೀಡಿದರು.

ರಸ್ತೆ ದುರಸ್ತಿಗೆ ಸಂಸದರ ಸೂಚನೆ: ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಕಟೀಲು ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಇಲಾಖೆಗಳಿಂದ ಬಾಕಿ ಇರುವ ಎಲ್ಲ ಕಾಮಗಾರಿ, ಕೆಲಸಗಳನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸಬೇಕು. ಕ್ಷೇತ್ರವನ್ನು ಸಂಪರ್ಕಿಸಲು ಬೇರೆ ಬೇರೆ ಭಾಗಗಳ ರಸ್ತೆಯನ್ನು ಅಗಲೀಕರಣಗೊಳಿಸಿ ಬೈಪಾಸ್‌ ರಸ್ತೆಗೆ ವಿಶೇಷ ಆದ್ಯತೆ ನೀಡಬೇಕು. ಕಟೀಲಿನ ಪೆಟ್ರೋಲ್‌ ಪಂಪ್‌ ಸಮೀಪದಿಂದ ಮಿತ್ತಬೈಲ್‌, ಪೂಪಾಡಿಕಲ್ಲು ರಸ್ತೆ, ಜಲಕದಕಟ್ಟೆ ರಸ್ತೆ ಹಾಗೂ ಎಕ್ಕೂರಿನಿಂದ ಗೋಪಾಲಕೃಷ್ಣ ಸಭಾಭವನ ರಸ್ತೆಯನ್ನು ತುರ್ತಾಗಿ ಅಗಲೀಕರಣ ಮಾಡಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಪಾರ್ಕಿಂಗ್‌ ವ್ಯವಸ್ಥೆಗೆ ಜಾಗದ ಮಾಲೀಕರಿಂದ ಒಪ್ಪಿಗೆ ಪತ್ರ ಪಡೆಯಿರಿ ಎಂದರು.

ಶ್ರೀ ಕ್ಷೇತ್ರ ಕಟೀಲಿನ ಬ್ರಹ್ಮಕಲಶೋತ್ಸವಕ್ಕೆ ಸುಮಾರು 17 ಕೋಟಿ ರೂ. ವೆಚ್ಚ ನಿರೀಕ್ಷಿಸಲಾಗಿದ್ದು, ಈ ಪೈಕಿ 12 ಕೋಟಿ ರೂ.ಗಳಲ್ಲಿ ಅಭಿವೃದ್ಧಿ ಕಾಮಗಾರಿ ಹಾಗೂ ಉಳಿದ ಮೊತ್ತವನ್ನು ಬ್ರಹ್ಮಕಲಶೋತ್ಸವದ ಖರ್ಚಿಗೆ ವಿನಿಯೋಗಿಸಲಾಗುವುದು. ಈ ಬಗ್ಗೆ ಕ್ಷೇತ್ರದಿಂದ ಅಂದಾಜುಪಟ್ಟಿ ಬಂದಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಮಾಹಿತಿ ನೀಡಿದರು.

ಶಾಸಕ ಉಮಾನಾಥ ಕೋಟ್ಯಾನ್‌, ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌, ಹೆಚ್ಚುವರಿ ಜಿಲ್ಲಾಧಿಧಿಕಾರಿ ಎಂ.ಜೆ.ರೂಪ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಸೆಲ್ವಮಣಿ ಆರ್‌., ಸಹಾಯಕ ಆಯುಕ್ತ ರವಿಚಂದ್ರ ನಾಯ್ಕ್‌ ಹಾಗೂ ಶ್ರೀಕ್ಷೇತ್ರ ಕಟೀಲಿನ ಆಡಳಿತ ಮಂಡಳಿಯ ಮುಖ್ಯಸ್ಥರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ