ಆ್ಯಪ್ನಗರ

ಮಘಾ ಮಳೆಯ ನಡುವೆ ಮೇಳೈಸಿತು ಶ್ರೀಕೃಷ್ಣ ಲೀಲೆ

ಧಾರಾಕಾರವಾಗಿ ಸುರಿಯುವ ಮಘಾ ಮಳೆಯ ನಡುವೆಯೇ ನಗು ಮುಖದ ನೂರಾರು ರಾಧಾಕೃಷ್ಣರ ಸಮಾಗಮ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಆವರಣದಲ್ಲಿ ನಡೆಯಿತು.​

Vijaya Karnataka 24 Aug 2019, 4:10 pm
ಮಂಗಳೂರು:ಧಾರಾಕಾರವಾಗಿ ಸುರಿಯುವ ಮಘಾ ಮಳೆಯ ನಡುವೆಯೇ ನಗು ಮುಖದ ನೂರಾರು ರಾಧಾಕೃಷ್ಣರ ಸಮಾಗಮ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಆವರಣದಲ್ಲಿ ನಡೆಯಿತು.
Vijaya Karnataka Web 2308-2-6-23MY KADERI (8)


ಕಲ್ಕೂರ ಪ್ರತಿಷ್ಠಾನ ವತಿಯಿಂದ ಶುಕ್ರವಾರ ನಡೆದ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀ ಕೃಷ್ಣ ವೇಷ ಸ್ಪರ್ಧೆಯ ಅಂಗವಾಗಿ ಅನೇಕ ಸಂಖ್ಯೆಯಲ್ಲಿ ಭಾಗವಹಿಸಿದ ಮಕ್ಕಳು ಖುದ್ದು ಮುದ್ದುಕೃಷ್ಣರಾಗಿ ಸಂಭ್ರಮಿಸಿದರು.

ಮುದ್ದು ಕಂದಮ್ಮಗಳಿಂದ ಹಿಡಿದು ತುಂಟ ಕೃಷ್ಣನವರೆಗಿನ ಮುದ್ದು ಮುಖಗಳು ಮಳೆಯ ತೀವ್ರತೆಯನ್ನೇ ಮರೆ ಮಾಚುತ್ತಿತ್ತು. ಪೂರ್ಣ ವಾತಾವರಣ ಕೃಷ್ಣಮಯವಾಗಿತ್ತು.

ಸುಮಾರು 30 ವಿಭಾಗಗಳಲ್ಲಿ ಏಕಕಾಲದಲ್ಲಿ ನಡೆದ ಕೃಷ್ಣ ವೇಷ ಸ್ಪರ್ಧೆಯು ಕಂದ ಕೃಷ್ಣ, ಮುದ್ದು ಕೃಷ್ಣ, ತುಂಟ ಕೃಷ್ಣ, ಬಾಲ ಕೃಷ್ಣ, ಕಿಶೋರ ಕೃಷ್ಣ, ಶ್ರೀ ಕೃಷ್ಣ, ಗೀತಾಕೃಷ್ಣ, ಶಂಖನಾದ, ಯಶೋಧ ಕೃಷ್ಣ, ವಸುದೇವ ಕೃಷ್ಣ, ಯಕ್ಷ ಕೃಷ್ಣ ಮೊದಲಾದ ಸ್ಪರ್ಧೆ ನಡೆದವು.

ಕೃಷ್ಣನ ವೇಷದಲ್ಲಿ ಮಕ್ಕಳನ್ನು ನೋಡುವುದೇ ಆಹ್ಲಾದಕರ. ಅದರ ನಡುವೆ ಮತ್ತಷ್ಟು ತುಂಟ ಕೃಷ್ಣನ ಚೇಷ್ಟೆಗಳು ದೇವಸ್ಥಾನದ ಅಂಗಣದಲ್ಲಿ ಮೇಳೈಸಿದ್ದು ಸಾರ್ವಜನಿಕರಿಗೆ ಮತ್ತಷ್ಟು ಮುದ ನೀಡಿದವು.

ತುಂತುರು ಮಳೆಯಲ್ಲಿ ನೆನೆಯುತ್ತಾ ನಲಿಯುತ್ತಾ ಕ್ಯಾಮೆರಾ ಕಣ್ಣಿಗೆ ಪೋಸ್‌ ನೀಡುತ್ತಿದ್ದ ಮುದ್ದು ಕೃಷ್ಣಂದಿರು ನೆರೆದ ಜನರ ಮುಖದ ಮೇಲೆ ಮಂದಹಾಸ ಬೀರುವಂತೆ ಪ್ರೇರೇಪಿಸುತ್ತಿದ್ದ ದೃಶ್ಯ ಅಪ್ಯಾಯಮಾನವಾಗಿತ್ತು.
ಪೂರ್ತಿ ಮಗ್ನವಾಗಿ ಮಕ್ಕಳ ಮುಖದ ಮೇಳೆ ಕೃಷ್ಣನನ್ನು ಮೂಡಿಸುತ್ತಾ ಮೈಮರೆತ ಹೆತ್ತವರು, ವೇದಿಕೆ ಮೇಲೆ ನಲಿಯುವ ಮಕ್ಕಳಿಗೆ ಹುರಿದುಂಬಿಸುತ್ತಾ ನಲಿಯುವ ಹೆತ್ತವರು, ವೇದಿಕೆ ಮೇಲೆ ಹತ್ತಲು ಹೆದರಿ ಅಳುವ ಕಂದಮ್ಮನನ್ನು ಮುದ್ದು ಮಾಡುತ್ತಿದ್ದ ಹೆತ್ತವರು ಯಶೋಧ ನಂದನನ ಹಳೆಯ ಲೀಲೆಗಳನ್ನು ಮತ್ತೆ ನೆನಪಿಸುವಂತೆ ಭಾಸವಾಗುತ್ತಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ