ಆ್ಯಪ್ನಗರ

ಮುಜರಾಯಿ ದೇವಾಲಯಗಳಿಗೆ ಒಂದು ಸಾವಿರ ಸಿಬ್ಬಂದಿ ನೇಮಕ

ರಾಜ್ಯದಲ್ಲಿ ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇವಾಲಯಗಳಲ್ಲಿಸಾಕಷ್ಟು ವರ್ಷಗಳಿಂದ ಸಿಬ್ಬಂದಿ ಕೊರತೆಯಿದ್ದು, ಮುಜರಾಯಿ ದೇವಾಲಯಗಳಿಗೆ ಒಂದು ಸಾವಿರ ಸಿಬ್ಬಂದಿಗಳನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲಾಗಿದೆ.

Vijaya Karnataka 4 Oct 2019, 3:29 pm
ಬೈಂದೂರು: ರಾಜ್ಯದಲ್ಲಿ ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇವಾಲಯಗಳಲ್ಲಿಸಾಕಷ್ಟು ವರ್ಷಗಳಿಂದ ಸಿಬ್ಬಂದಿ ಕೊರತೆಯಿದ್ದು, ಮುಜರಾಯಿ ದೇವಾಲಯಗಳಿಗೆ ಒಂದು ಸಾವಿರ ಸಿಬ್ಬಂದಿಗಳನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದರ ಅನುಮೋದನೆಗಾಗಿ ಈಗಾಗಲೇ ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳುಹಿಸಿಕೊಡಲಾಗಿದೆ ಎಂದು ರಾಜ್ಯ ಮುಜರಾಯಿ, ಮೀನುಗಾರಿಕಾ ಹಾಗೂ ಬಂದರು ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
Vijaya Karnataka Web kota


ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ಸುಮಾರು 21 ಕೋಟಿ ರೂ. ವೆಚ್ಚದಲ್ಲಿನಿರ್ಮಿಸಲಾದ ಮೂಕಾಂಬಿಕಾ ಅನ್ನಪ್ರಸಾದ ಭೋಜನ ಶಾಲೆಯ ನೂತನ ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಾಮೂಹಿಕ ವಿವಾಹ: ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ34 ಸಾವಿರ ದೇವಾಲಯಗಳಿದ್ದು, ಅದರಲ್ಲಿ190 ಎ ದರ್ಜೆಯ ದೇವಾಲಯಗಳಿವೆ. ದೇವಾಲಯಗಳು ಸಮಾಜಮುಖಿಯಾಗಿ ಕೆಲಸ ಮಾಡಬೇಕೆಂಬ ಚಿಂತನೆಯಿಂದ, ಮುಜರಾಯಿ ಇಲಾಖೆಯ ದೇವಾಲಯಗಳಿಂದ ಪ್ರತಿ ವರ್ಷ ಒಂದು ಸಾವಿರ ಸಾಮೂಹಿಕ ವಿವಾಹ ನಡೆಸುವ ಯೋಜನೆ ರೂಪಿಸಲಾಗಿದೆ. ರಾಜ್ಯದ ಎರಡನೇ ಶ್ರೀಮಂತ ದೇವಾಲಯವಾದ ಕೊಲ್ಲೂರಿನಲ್ಲಿ ಪ್ರತಿ ವರ್ಷ ನೂರು ಸಾಮೂಹಿಕ ವಿವಾಹ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಮುಜರಾಯಿ ಇಲಾಖೆಯ ದೇವಾಲಯಗಳ ಮೂಲಕ ಗೋ ಶಾಲೆ ನಿರ್ಮಿಸುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ. ರಾಜ್ಯದ 30 ಜಿಲ್ಲೆಗಳಲ್ಲಿಯೂ ಜಾಗ ಗುರುತಿಸುವ ಕೆಲಸವಾಗುತ್ತಿದ್ದು, ಪ್ರಸ್ತುತ ವರ್ಷದಿಂದ ಸುಮಾರು 15-20 ದೇವಾಲಯಗಳಿಂದ ಗೋಶಾಲೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಇ-ಹುಂಡಿ ಜಾರಿ: ಮುಜರಾಯಿ ಇಲಾಖೆಯ ದೇವಾಲಯಗಳಿಗೆ ಭಕ್ತರು ನಗದು, ಚಿನ್ನ ಮೊದಲಾದವುಗಳನ್ನು ತಲುಪಿಸಲು ಅನುಕೂಲವಾಗುವಂತೆ ಇ-ಹುಂಡಿ ಜಾರಿ ಮಾಡಲು ಚಿಂತನೆ ನಡೆಸಲಾಗಿದೆ ಎಂದರು.

ಆನ್‌ಲೈನ್‌ ಬುಕ್ಕಿಂಗ್‌ : ದೇವಾಲಯಗಳಲ್ಲಿ ನಡೆಯುವ ಯಕ್ಷಗಾನ, ಚಂಡಿಕಾ ಹೋಮ, ಚಿನ್ನದ ರಥ ಸೇವೆ ಸೇರಿದಂತೆ ನಾನಾ ಸೇವೆಗಳನ್ನು ಭಕ್ತರು ಆನ್‌ಲೈನ್‌ ಮೂಲಕ ನೋಂದಾವಣಿ ಮಾಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.

ಕೊಲ್ಲೂರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಭೋಜನಾಲಯ ಕಟ್ಟಡ ಕಳಪೆಯಾಗಿದೆ ಎಂದು ಯಾರಾದರೂ ಲಿಖಿತವಾಗಿ ಮನವಿ ಸಲ್ಲಿಸಿದರೆ, ಇಲಾಖೆಯಿಂದ ತನಿಖೆ ನಡೆಸಲಾಗುವುದು ಎಂದು ಹೇಳಿದರು.

ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾನು ಶಾಸಕನಾಗುವ ಮುನ್ನ,10 ವರ್ಷಗಳ ಕಾಲ ಈ ದೇವಾಲಯದ ಆಡಳಿತ ಮೋಕ್ತೇಸರನಾಗಿದ್ದೆ. ನಮ್ಮ ಅಧಿಕಾರವಧಿಯಲ್ಲಿ ಈ ದೇಗುಲಕ್ಕೆ 40 ಕೋಟಿ ರೂ. ವೆಚ್ಚದ ಚಿನ್ನದ ರಥ ನಿರ್ಮಿಸಲಾಗಿದ್ದು, ಇದರಿಂದ ಈಗ ಪ್ರತಿ ದಿನ 30 ಸಾವಿರ ರೂ. ಆದಾಯ ಬರುತ್ತಿದೆ. ಆ ಸಂದರ್ಭ ನನ್ನ ವಿರುದ್ಧ ವಿನಾ ಕಾರಣ ಲೋಕಯುಕ್ತಕ್ಕೆ ದೂರು ಸಲ್ಲಿಸಿದ್ದು, ಇದರಿಂದ ನೊಂದು 7 ವರ್ಷ ದೇವಾಲಯಕ್ಕೆ ಭೇಟಿ ನೀಡಲಿಲ್ಲಎಂದು ಭಾವುಕರಾಗಿ ನುಡಿದರು.

ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್‌ಕುಮಾರ್‌ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿ, ಸುಮಾರು 70 ಸಾವಿರ ಚದರ ಅಡಿಯ ಈ ಭೋಜನಾಲಯಕ್ಕೆ 2014ರಲ್ಲಿ ಶಂಕುಸ್ಥಾಪನೆ ಮಾಡಲಾಗಿದ್ದು, ಪ್ರತಿ ದಿನ 20 ಸಾವಿರಕ್ಕೂ ಅಧಿಕ ಭಕ್ತರು ಅನ್ನಪ್ರಸಾದ ಸ್ವೀಕರಿಸಬಹುದಾಗಿದೆ. ಇದು ರಾಜ್ಯದಲ್ಲಿಯೇ ಮಾದರಿ ಭೋಜನಾಲಯವಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ