ಆ್ಯಪ್ನಗರ

ತಿರುಮಲದಲ್ಲಿ ಹತ್ತು ದಿನ ತೆರೆಯಲಿರುವ ವೈಕುಂಠ ದ್ವಾರ

ಇನ್ನು ಮುಂದೆ ತಿರುಮಲ ತಿರುಪತಿಯಲ್ಲಿ ವೈಕುಂಠ ಏಕಾದಶಿಯಿಂದ ಹತ್ತು ದಿನಗಳ ಕಾಲ ವೈಕುಂಠ ದ್ವಾರ ತೆರೆಯುವ ಸಾಧ್ಯತೆ ಇದೆ.

Vijaya Karnataka 29 Nov 2019, 4:15 pm
ತಿರುಮಲ :ಇನ್ನು ಮುಂದೆ ತಿರುಮಲ ತಿರುಪತಿಯಲ್ಲಿವೈಕುಂಠ ಏಕಾದಶಿಯಿಂದ ಹತ್ತು ದಿನಗಳ ಕಾಲ ವೈಕುಂಠ ದ್ವಾರ ತೆರೆಯುವ ಸಾಧ್ಯತೆ ಇದೆ. ಇದರಿಂದ ಉತ್ತರದ ಬಾಗಿಲ ಮೂಲಕ ದೇವರ ದರ್ಶನಕ್ಕೆ ಅವಕಾಶ ದೊರೆಯಲಿದೆ. ಈ ಕುರಿತು ಟಿಟಿಡಿ ಆಡಳಿತ ಮಂಡಳಿಯು ಆಗಮಿಕ ಪಂಡಿತರ ಸಲಹೆಯನ್ನು ಕೇಳಿದೆ.
Vijaya Karnataka Web Tirupati


ಕಳೆದ ವರ್ಷ ವೈಕುಂಠ ಏಕಾದಶಿ ಮತ್ತು ವೈಕುಂಠ ದ್ವಾದಶಿಯಂದು ಸ್ವಾಮಿಯ ದರ್ಶನ ಪಡೆಯಲು ಎರಡು ಲಕ್ಷಕ್ಕೂ ಹೆಚ್ಚು ಯಾತ್ರಿಕರು ಸರದಿಯಲ್ಲಿ ಕಾದಿದ್ದರು. ತಿರುಮಲೆಯತ್ತ ತೆರಳುವ ಪ್ರತಿಯೊಬ್ಬ ಯಾತ್ರಿಕನೂ ಭೂವೈಕುಂಠವೆಂದೇ ಹೆಸರಾದ ತಿರುಮಲೆಯ ವೆಂಕಟರಮಣ ಸ್ವಾಮಿಯ ದರ್ಶನವನ್ನು ಉತ್ತರ ದ್ವಾರದ ಮೂಲಕ ಮಾಡಬೇಕೆಂಬ ಇಚ್ಛೆಯನ್ನು ಹೊಂದಿರುತ್ತಾನೆ.

ಭಕ್ತರ ಅಭಿಲಾಷೆ ಹಾಗೂ ಈ ದಿನಗಳಲ್ಲಿ ದೇವರ ದರ್ಶನಕ್ಕೆಂದು ಇರುವ ನೂಕುನುಗ್ಗಲನ್ನು ಮನಗಂಡ ಟಿಟಿಡಿ ಆಡಳಿತ ಮಂಡಳಿಯು ವೈಕುಂಠ ದ್ವಾರ ದರ್ಶನವನ್ನು ಎರಡು ದಿನಗಳಿಂದ ಹತ್ತು ದಿನಗಳಿಗೆ ಏರಿಸುವ ಪ್ರಸ್ತಾಪವನ್ನು ಆಗಮಿಕ ಪಂಡಿತರ ಸಲಹಾ ಮಂಡಳಿಯ ಮುಂದಿಟ್ಟಿದೆ. ಹಾಗೆ ತೆರೆಯಬಹುದೇ? ಶಾಸ್ತ್ರ ಹೇಳುವುದೇನು? ಎಂದು ಟಿಟಿಡಿಯ ಎಕ್ಸಿಕ್ಯೂಟಿವ್‌ ಆಫೀಸರ್‌ ಅನಿಲ್‌ ಕುಮಾರ್‌ ಸಿಂಘಲ್‌ ಮತ್ತು ಹೆಚ್ಚುವರಿ ಎಕ್ಸಿಕ್ಯೂಟಿವ್‌ ಆಫೀಸರ್‌ ಧರ್ಮರೆಡ್ಡಿ ವೈಕುಂಠ ದ್ವಾರ ದರ್ಶನದ ದಿನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಗಮ ಶಾಸ್ತ್ರ ಪಂಡಿತರ ಸಲಹೆ ಕೇಳಿದ್ದಾರೆ.

ಈ ಸಂಬಂಧ ಆಗಮಶಾಸ್ತ್ರ ಪಂಡಿತರು ಇತ್ತೀಚೆಗೆ ಸಭೆ ಸೇರಿದ್ದರು. ವೈಖಾನಸ ಆಗಮನ ಶಾಸ್ತ್ರದ ರೀತ್ಯ ವೈಕುಂಠ ದ್ವಾರವನ್ನು ಹತ್ತು ದಿನಗಳ ಕಾಲ ತೆರೆಯುವುದರಿಂದ ಯಾವುದೇ ರೀತಿಯ ಲೋಪವಾಗುವುದಿಲ್ಲ. ಆದರೆ ವೈಕುಂಠ ದ್ವಾರವನ್ನು ಎಷ್ಟು ದಿನಗಳ ಕಾಲ ತೆಗೆಯಬೇಕು ಎಂಬುದು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಬೇಕಾದ ವಿಷಯ ಎಂದು ಪಂಡಿತರು ಹೇಳಿದ್ದಾರೆ.

ವೈಕುಂಠ ದ್ವಾರವನ್ನು ಹತ್ತು ದಿನಗಳ ಕಾಲ ತೆರೆಯಲು ನಿಮ್ಮದೇನಾದರೂ ಅಭ್ಯಂತರವಿದೆಯೇ ಎಂದು ಪಂಡಿತರನ್ನು ಕೇಳಿದ್ದೆವು. ಅವರ ಅಭಿಪ್ರಾಯವನ್ನು ಪಡೆದು ಟಿಟಿಡಿ ಟ್ರಸ್ಟ್‌ಗೆ ವಿಸ್ತೃತ ವರದಿಯನ್ನು ಈ ಮಾಸಾಂತ್ಯಕ್ಕೆ ಸಲ್ಲಿಸಲಿದ್ದೇವೆ. ಟ್ರಸ್ಟ್‌ ತೆಗೆದುಕೊಳ್ಳುವ ನಿರ್ಣಯದ ಆಧಾರದಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಟಿಟಿಡಿಯ ಡೆಪ್ಯೂಟಿ ಕಾರ್ಯನಿರ್ವಾಹಕ ಅಧಿಕಾರಿ ಹರೀಂದ್ರನಾಥ್‌ ಹೇಳಿದ್ದಾರೆ.

ಕಳೆದ ವರ್ಷ ವೈಕುಂಠ ಏಕಾದಶಿಯಂದು ದೇವರ ದರ್ಶನಕ್ಕೆ ಎರಡು ಲಕ್ಷ ಭಕ್ತರು ಜಮಾಯಿಸಿದ್ದರು. ಒಂದೊಮ್ಮೆ ದೇವಸ್ಥಾನದ ಆಡಳಿತ ಮಂಡಳಿಯ ನಿರ್ಣಯ ಅನುಮೋದನೆಗೊಂಡರೆ 5 ರಿಂದ 9 ಲಕ್ಷ ಭಕ್ತರಿಗೆ ಅನುಕೂಲವಾಗಲಿದೆ.

ಮೋದಿ ಸರಕಾರದ ಕೊಡುಗೆ: ತಿರುಮಲ ತಿರುಪತಿ ದೇವಸ್ಥಾನಕ್ಕೆ ವಿಮಾನಯಾನ ಮಾಡಬಯಸುವ ಯಾತ್ರಿಕರಿಗೆ ರೇಣುಗುಂಟ ವಿಮಾನ ನಿಲ್ದಾಣದಲ್ಲಿ ವಿಶೇಷ ಸೌಕರ್ಯ ಕಲ್ಪಿಸಲು ಕೇಂದ್ರ ಸರಕಾರ ತೀರ್ಮಾನಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ