ಆ್ಯಪ್ನಗರ

ಧರ್ಮಸಂಸತ್ತು ಆದ ಲೋಕ ಸಭೆ

ಪ್ರಜಾತಂತ್ರ ದೇಗುಲದಲ್ಲಿ ದೇವರ ಸ್ಮರಣೆ, ಸಂಸದರಾಗಿ ಪ್ರತಿಜ್ಞೆ ಸ್ವೀಕರಿಸಿದ ಸಾಧುಗಳು

Vijaya Karnataka 22 Jun 2019, 12:00 am
ಬೆಂಗಳೂರು: ಕಳೆದ ಸೋಮವಾರ ಆರಂಭವಾದ 17ನೇ ಲೋಕಸಭೆಯಲ್ಲಿ ಧರ್ಮ ಗುರುಗಳು ಗಮನ ಸೆಳೆದರು. ಮುಖ್ಯವಾಗಿ ಮಧ್ಯಪ್ರದೇಶದ ಭೋಪಾಲ್‌ ಕ್ಷೇತ್ರದಿಂದ ಆಯ್ಕೆಯಾದ ಸಾಧ್ವಿ ಪ್ರಗ್ಯಾ ಸಿಂಗ್‌ ಠಾಕೂರ್‌, ಉತ್ತರ ಪ್ರದೇಶದ ಉನಾವೋ ಕ್ಷೇತ್ರದ ಸಾಕ್ಷಿ ಮಹಾರಾಜ್‌, ರಾಜಸ್ತಾನದ ಆಳ್ವಾರ್‌ನ ಬಾಲಕ್‌ನಾಥ್‌, ರಾಜಸ್ತಾನದ ಸಿಕಾರ್‌ ಕ್ಷೇತ್ರದಿಂದ ಆಯ್ಕೆಯಾದ ಸ್ವಾಮಿ ಸುಮೇಧಾನಂದ ಸರಸ್ವತಿ ಉಪಸ್ಥಿತಿ ಅಧಿವೇಶನದ ಮೊದಲ ದಿನವೇ ಎದ್ದು ಕಾಣುತ್ತಿತ್ತು. ಈಗ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ್‌ 1998ರಿಂದ 2014ರವರೆಗೆ ಐದು ಬಾರಿ ಸತತವಾಗಿ ಆಯ್ಕೆಯಾಗಿದ್ದರು ಎಂಬುದಿಲ್ಲ ಗಮನಾರ್ಹ.
Vijaya Karnataka Web Pragya sing


ಅಧಿವೇಶನದ ಮೊದಲ ದಿನ ನೂತನ ಸದಸ್ಯ ಪ್ರಮಾಣ ವಚನ ಸ್ವೀಕಾರದ ಸಂದರ್ಭದಲ್ಲಿ ಧಾರ್ಮಿಕ ಘೋಷಣೆಗಳೊಂದಿಗೆ ಲೋಕಸಭೆಯಲ್ಲಿ ಧಾರ್ಮಿಕ ಸಭೆಯ ಸನ್ನಿವೇಶ ಕಂಡು ಬಂದಿದ್ದು, ಈ ಬಾರಿಯ ವಿಶೇಷ.

ಪ್ರತಿಜ್ಞಾ ವಿಧಿ ಸ್ವೀಕರಿಸಿದ ಬಳಿಕ ಬಿಜೆಪಿಯ ಹಲವಾರು ಸದಸ್ಯರು ಜೈ ಶ್ರೀರಾಮ್‌ ಎಂದು ಕೂಗಿದರು. ಇದಕ್ಕೆ ಪ್ರತಿಯಾಗಿ ಜೈ ದುರ್ಗಾ ಮಾತಾ, ಅಲ್ಲಾಹೋ ಅಕ್ಬರ್‌ ಮೊದಲಾದ ಘೋಷಣೆಗಳೂ ಕೇಳಿ ಬಂದವು.

ಭೋಪಾಲ್‌ ಸಂಸದೆ ಪ್ರಗ್ಯಾ ಸಿಂಗ್‌ ಠಾಕೂರ್‌ ತಮ್ಮ ಧಾರ್ಮಿಕ ಗುರು ಸ್ವಾಮಿ ಪೂರ್ಣ ಚೇತನಾನಂದ ಅವ್ದೇಶಾನಂದ ಗಿರಿ ಅವರ ಹೆಸರನ್ನು ತಮ್ಮ ಹೆಸರಿನ ಜತೆ ಸೇರಿಸಿಕೊಂಡರು. ಇದು ತೀವ್ರ ಅಕ್ಷೇಪಕ್ಕೆ ಕಾರಣವಾಯಿತು. ಪ್ರಮಾಣ ಪೂರ್ಣಗೊಂಡ ಬಳಿಕ ಜೈ ಶ್ರೀರಾಮ್‌ ಎಂದವರು ಹೇಳಿದರು. ಮಥುರಾ ಲೋಕಸಭೆ ಕ್ಷೇತ್ರದಿಂದ ಸಂಸತ್ತು ಪ್ರವೇಶಿಸಿರುವ ಹೇಮಾ ಮಾಲಿನಿ ರಾಧೆ, ರಾಧೆ, ಕೃಷ್ಣಂ ವಂದೇ ಜದ್ಗುರುಂ ಮಂತ್ರವನ್ನು ಪಠಿಸಿದರು.

ಇನ್ನು ಸಂಭಾಲ್‌ನ ಸಮಾಜವಾದಿ ಪಕ್ಷದ ಸಂಸದ ಶಫೀಕರ್‌ ರೆಹಮಾನ್‌ ಸಿದ್ಧಿಕಿ ಬರ್ಕ್‌ ಪ್ರಮಾಣ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ವಂದೇ ಮಾತರಂ ಘೋಷಣೆಯನ್ನು ಬಿಜೆಪಿ ಸದಸ್ಯರು ಕೂಗಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬರ್ಕ್‌ ಇದು ಇಸ್ಲಾಂ ಧರ್ಮದ ನೀತಿಗೆ ವಿರುದ್ಧವಾದದ್ದು ಎಂದು ಹೇಳಿದರು. ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಓವೈಸಿ ಅಲ್ಲಾಹೋ ಅಕ್ಬರ್‌ ಎಂದು ಪ್ರತಿಜ್ಞೆಯ ಬಳಿಕ ಹೇಳಿದರು.

ಕಳೆದ ಲೋಕಸಭೆಯಲ್ಲೂ ಜೈ ಶ್ರೀರಾಮ್‌ ಮಂತ್ರ ಮೊಳಗಿತ್ತು. ಆದರೆ ಈ ಬಾರಿಯಷ್ಟು ದೊಡ್ಡ ಪ್ರಮಾಣದಲ್ಲಿ ಅದು ಕಂಡು ಬಂದಿರಲಿಲ್ಲ.

ಪ್ರಮುಖ ಧರ್ಮ ಗುರುಗಳು

- ಪ್ರಗ್ಯಾ ಸಿಂಗ್‌ ಠಾಕೂರ್‌, ಭೋಪಾಲ್‌ ಲೋಕಸಭಾ ಕ್ಷೇತ್ರದಿಂದ ಆಯ್ಕೆ.

- ಸಾಕ್ಷಿ ಮಹಾರಾಜ್‌, ಉತ್ತರ ಪ್ರದೇಶದ ಉನಾವೋ ಕ್ಷೇತ್ರದಿಂದ ಆಯ್ಕೆ.

- ಸ್ವಾಮಿ ಸುಮೇಧಾನಂದ ಸರಸ್ವತಿ, ಸಿಕಾರ್‌ ಕ್ಷೇತ್ರದ ಸಂಸತ್‌ ಸದಸ್ಯರು.

- ಬಾಲಕ್‌ನಾಥ್‌, ರಾಜಸ್ತಾನದ ಆಳ್ವಾರ್‌ ಕ್ಷೇತ್ರದಿಂದ ಆಯ್ಕೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ