ಆ್ಯಪ್ನಗರ

ದಕ್ಷಿಣಭಾರತದ ಬದರಿನಾಥ

Vijaya Karnataka Web 24 Aug 2019, 12:00 am
ಮಂಡ್ಯ ಜಿಲ್ಲೆಯ ಮೇಲುಕೋಟೆ ದಕ್ಷಿಣಭಾರತದ ಬದರಿನಾಥ ಎಂದೇ ಹೆಸರುವಾಸಿ. ಇದಕ್ಕೆ ತಿರುನಾರಾಯಣಪುರ ಎಂತಲೂ ಹೆಸರು. ಶ್ರೀಕ್ಷೇತ್ರದಲ್ಲಿಮಹಾವಿಷ್ಣು ಚೆಲುವನಾರಾಯಣ ಸ್ವಾಮಿಯ ರೂಪದಲ್ಲಿ ಆರಾಧಿಸಲ್ಪಡುತ್ತಾನೆ. ಬೆಂಗಳೂರಿನಿಂದ 156 ಕಿ.ಮೀ. ಮತ್ತು ಮೈಸೂರಿನಿಂದ 48 ಕಿ.ಮೀ. ದೂರದಲ್ಲಿದೆ. ಮೇಲುಕೋಟೆಯ ಉಲ್ಲೇಖವನ್ನು ನಾರದೀಯ ಪುರಾಣ, ಮತ್ಸ್ಯಪುರಾಣ, ಈಶ್ವರ ಸಂಹಿತೆಯಲ್ಲೂ ನೋಡಬಹುದು.
Vijaya Karnataka Web Melkote-18


ಮೇಲುಕೋಟೆಯಲ್ಲಿ ಎರಡು ಪ್ರಾಚೀನ ದೇಗುಲಗಳಿವೆ. ಅವೆಂದರೆ ಚೆಲುವನಾರಾಯಣ ಮತ್ತು ಯೋಗಾ ನಾರಸಿಂಹ. ಮೇಲುಕೋಟೆಯ ದೇಗುಲ ಚತುರ್ಮುಖ ಗೋಪುರವನ್ನು ಹೊಂದಿದೆ. ಎಲ್ಲಾಮುಖಗಳ ವಿನ್ಯಾಸವೂ ಒಂದೇ ತೆರನಾಗಿದೆ. ರಾಮಾನುಜಾಚಾರ್ಯರು ಶುಕನಾಸಿಯವರೆಗೆ ನಿರ್ಮಿಸಿದರೆಂದು ತದನಂತರ ಮೈಸೂರು ಮಹಾರಾಜರು ಅಭಿವೃದ್ಧಿ ಪಡಿಸಿದರೆಂದು ಹೇಳಲಾಗುತ್ತದೆ.

ಚೆಲುವ ನಾರಾಯಣನಿಗೆ ತಿರುನಾರಾಯಣ ಎಂತಲೂ ಕರೆಯುತ್ತಾರೆ. ಉತ್ಸವಮೂರ್ತಿಗೆ ಶೆಲ್ವಪಿಳ್ಳಯ ಚೆಲುವರಾಯ ಮತ್ತು ಚೆಲುವ ನಾರಾಯಣ ಸ್ವಾಮಿ ಎಂದು ಗುರುತಿಸಲ್ಪಡುತ್ತದೆ. ಮೈಸೂರು ಪ್ರಾಚ್ಯವಸ್ತು ಇಲಾಖೆಯ ದಾಖಲೆಗಳ ಪ್ರಕಾರ ಶ್ರೀ ರಾಮಾನುಜಾಚಾರ್ಯರು ಕ್ರಿ.ಪೂ. 1098ರಲ್ಲಿ ಈ ಆಲಯದಲ್ಲಿ ಪೂಜೆ ಸಲ್ಲಿಸಿದರು ಎನ್ನಲಾಗಿದೆ. 1614ರಲ್ಲೇ ರಾಜಾ ಒಡೆಯರ್‌ ಮೇಲುಕೋಟೆ ಚೆಲುವನಾರಾಯಣನಿಗೆ ಕೆಲವೊಂದು ಭೂಮಿಗಳನ್ನು ದತ್ತಿಯಾಗಿ ಕೊಟ್ಟಿದ್ದನಂತೆ. ವೆಂಕಟಪತಿ ರಾಯ ಎನ್ನುವ ಮಹಾರಾಜ ಸ್ವಾಮಿಗೆ ಸಾಕಷ್ಟು ಚಿನ್ನಾಭರಣಗಳನ್ನು ಕೊಟ್ಟಿದ್ದಾನೆ. ಮೂರನೇ ಕೃಷ್ಣರಾಜ ಒಡೆಯರ್‌ ಸಹ ಸ್ವಾಮಿಗೆ ಸಾಕಷ್ಟು ದಿವ್ಯಾಭರಣಗಳನ್ನು ಕೊಟ್ಟಿದ್ದಾರೆ. ಅವರಿತ್ತ ಕಿರೀಟವನ್ನು ಸ್ವಾಮಿಗೆ ತೊಡಿಸಿ ಮಾಡುವ ಭವ್ಯವಾದ ಮೆರವಣಿಗೆಯೇ ಕೃಷ್ಣರಾಜ ಮುಡಿ ಉತ್ಸವ. ರಾಜ ಮುಡಿ ಮತ್ತು ಕೃಷ್ಣರಾಜ ಮುಡಿಗಿಂತ ಹಳೆಯದಾದುದೇ ವೈರಮುಡಿ. ಈ ಮೂರು ಕಿರೀಟಗಳನ್ನು ರಾಜ್ಯ ಸರ್ಕಾರದ ಖಜಾನೆಯಲ್ಲಿ ಉತ್ಸವೇತರ ದಿನಗಳಲ್ಲಿ ಭದ್ರವಾಗಿ ಕಾಪಾಡಲಾಗುತ್ತದೆ.

ರಾಮಾನುಜರಿಗೆ ತಿರುನಾರಾಯಣರು ಸ್ವಪ್ನದಲ್ಲಿ ಸೂಚಿಸಿದಂತೆ ದೆಹಲಿಯ ರಾಜನ ಅರಮನೆಯಲ್ಲಿದ್ದ ಉತ್ಸವ ಮೂರ್ತಿಯನ್ನು ತಂದು ಮೇಲುಕೋಟೆಯಲ್ಲಿ ಪ್ರತಿಷ್ಠಾಪಿಸುತ್ತಾರೆ. ಆ ಉತ್ಸವ ಮೂರ್ತಿಗೆ ರಾಮಪ್ರಿಯರೆಂದು ಹೆಸರು. ಅಂದು ರಾಮಪ್ರಿಯರೊಂದಿಗೆ ಬಂದವಳೇ ಬೀಬಿ ನಾಚಾರಮ್ಮ. ಇಂದಿಗೂ ಮೇಲುಕೋಟೆಯಲ್ಲಿ ಬೀಬಿ ನಾಚಾರಮ್ಮದ ಸನ್ನಿಧಿಯನ್ನು ನೋಡಬಹುದು. ಸ್ವಾಮಿಗೆ ತೊಡಿಸುವ ವೈರಮುಡಿ ಕಿರೀಟದ ಹಿಂದೆಯೂ ದೊಡ್ಡ ಕಥೆಯಿದೆ. ಕಥೆಯ ಪ್ರಕಾರ ಇದು ಪ್ರಹ್ಲಾದರಿಂದ ಬಂದದ್ದು ಎನ್ನಲಾಗುತ್ತದೆ. ಮೇಲುಕೋಟೆಯಲ್ಲಿ ರಾಮಾನುಜ, ಆಳ್ವಾರ್‌ ಮತ್ತು ಯದುಗಿರಿಯಮ್ಮನವರ ಸನ್ನಿಧಾನವನ್ನೂ ನೋಡಬಹುದು. ಬೆಟ್ಟದ ಮೇಲ್ಬದಿಯಲ್ಲಿಯೋಗ ನಾರಸಿಂಹ ಸ್ವಾಮಿಯ ಸನ್ನಿಧಾನವಿದೆ. ಯೋಗ ನಾರಸಿಂಹ ಸ್ವಾಮಿಯ ದೇವಸ್ಥಾನದಿಂದ ಅನತಿ ದೂರದಲ್ಲೇ ಬಸ್‌ ನಿಲ್ದಾಣವಿದೆ. ದೇವಸ್ಥಾನವನ್ನು ಮುಟ್ಟಲು ಕೇವಲ 400 ಮೆಟ್ಟಿಲುಗಳನ್ನೇರಿದರೆ ಸಾಕು. ಯೋಗಾ ನಾರಸಿಂಹ ಸ್ವಾಮಿಗೆ ಚಿನ್ನದ ಕಿರೀಟವನ್ನು ಮೂರನೇ ಕೃಷ್ಣರಾಜ ಒಡೆಯರ್‌ ದಾನವಾಗಿ ನೀಡಿದ್ದಾರೆ.

ಪುಷ್ಕರಿಣಿ ಸುಂದರವಾಗಿದೆ. ಈ ಪುಷ್ಕರಿಣಿಯಿಂದಲೇ ಅರ್ಚಕರು ಸ್ವಾಮಿಯ ಅಭಿಷೇಕಕ್ಕೆ ನೀರನ್ನು ಕೊಂಡೊಯ್ಯುತ್ತಾರೆ.

2019ರಲ್ಲಿ ಇನ್ಫೋಸಿಸ್‌ ಪ್ರತಿಷ್ಠಾನವು ಪಂಚಕಲ್ಯಾಣಿ ಯೋಜನೆಯ ಅಡಿಯಲ್ಲಿ ಮೇಲುಕೋಟೆಯ ಕಲ್ಯಾಣಿಯ ಅಭಿವೃದ್ಧಿಯನ್ನು ಪ್ರಾರಂಭಿಸಿದ್ದಾರೆ. ಮುಂದಿನ 2-3 ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಪುಳಿಯೋಗರೆ ಮತ್ತು ತೇಂಗೋಳಲು ಇಲ್ಲಿನ ಪ್ರಸಿದ್ಧ ದೇವರ ಪ್ರಸಾದ. ವಿಶ್ವದಾದ್ಯಂತ ಮೇಲುಕೋಟೆ ಪುಳಿಯೋಗರೆ ಎಂತಲೇ ಪ್ರಸಿದ್ಧಿ.

ಸಮೀಪದ ತಾಣಗಳು : ಪರಿಧಾನಶಿಲ ಕ್ಷೇತ್ರ, ಯೋಗ ನಾರಸಿಂಹ ಕ್ಷೇತ್ರ, ಧ್ಯಾನ ಅಶ್ವತ್ಥ ಕ್ಷೇತ್ರ, ತಾರಕ್ಷ್ಯ ಕ್ಷೇತ್ರ, ನಯನ ಕ್ಷೇತ್ರ, ವರಾಹ ಕ್ಷೇತ್ರ, ಸೀತಾ ಅರಣ್ಯ ಕ್ಷೇತ್ರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ