ಆ್ಯಪ್ನಗರ

ಮಕ್ಕಳ ಎಜುಕೇಷನ್‌ಗೆ ನೀವು ಎಷ್ಟು ಕಾಸು ಉಳಿಸಿದ್ದೀರಿ?

ಮಹಾನಗರಗಳ ಕತೆ ಬಿಡಿ, ಒಂದು ತಾಲೂಕು ಕೇಂದ್ರದಲ್ಲಿ ಎಲ್‌ಕೆಜಿ ಮುಗಿಸಲು ಒಂದು ಮಗುವಿಗೆ 25ರಿಂದ 30 ಸಾವಿರ ರೂ. ಖರ್ಚಾಗುತ್ತಿದೆ. ಉನ್ನತ ಶಿಕ್ಷಣಗಳಿಗೆ ಲಕ್ಷ ಗಟ್ಟಲೇ ಹಣ ಬೇಕು. ಈ ಖರ್ಚುಗಳನ್ನು ನಿಭಾಯಿಸಲು ಪೋಷಕರಿಗೆ ಫೈನಾನ್ಸಿಯಲ್‌ ಪ್ಲಾನ್‌ ಅತ್ಯಗತ್ಯ.

Vijaya Karnataka Web 29 May 2016, 4:00 am

ಮಹಾನಗರಗಳ ಕತೆ ಬಿಡಿ, ಒಂದು ತಾಲೂಕು ಕೇಂದ್ರದಲ್ಲಿ ಎಲ್‌ಕೆಜಿ ಮುಗಿಸಲು ಒಂದು ಮಗುವಿಗೆ 25ರಿಂದ 30 ಸಾವಿರ ರೂ. ಖರ್ಚಾಗುತ್ತಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಹಂತಗಳಲ್ಲಿ ಖರ್ಚು ಏರಿಕೆಯಾಗುತ್ತಲೇ ಹೋಗುತ್ತದೆ. ಉನ್ನತ ಶಿಕ್ಷಣಗಳಿಗೆ ಲಕ್ಷ ಗಟ್ಟಲೇ ಹಣ ಬೇಕು. ಈ ಖರ್ಚುಗಳನ್ನು ನಿಭಾಯಿಸಲು ಪೋಷಕರಿಗೆ ಫೈನಾನ್ಸಿಯಲ್‌ ಪ್ಲಾನ್‌ ಅತ್ಯಗತ್ಯ.

Vijaya Karnataka Web
ಮಕ್ಕಳ ಎಜುಕೇಷನ್‌ಗೆ ನೀವು ಎಷ್ಟು ಕಾಸು ಉಳಿಸಿದ್ದೀರಿ?


-----

* ಹ.ಚ.ನಟೇಶ ಬಾಬು

ಪಿಯುಸಿ ಫಲಿತಾಂಶಗಳು ಮೊನ್ನೆಯಷ್ಟೆ ಬಂದಿವೆ. ಮೆಡಿಕಲ್‌, ಎಂಜಿನಿಯರಿಂಗ್‌ ಸೇರಿದಂತೆ ವೃತ್ತಿಪರ ಕೋರ್ಸ್‌ಗಳನ್ನು ಮಾಡಲು ಈಗ 5 ಲಕ್ಷ ರೂ.ಗಳಾದರೂ ಬೇಕು. 5 ವರ್ಷಗಳ ನಂತರ ಶೇ.6ರಷ್ಟು ಹಣದುಬ್ಬರ ಲೆಕ್ಕ ಹಾಕಿದರೆ ಅದು 6.69 ಲಕ್ಷ ರೂ. ಮುಟ್ಟುತ್ತದೆ. 10 ವರ್ಷಗಳಿಗೆ 8.95 ಲಕ್ಷ ರೂ., 15 ವರ್ಷಗಳ ನಂತರ 11.98 ಲಕ್ಷ ರೂ. ಹೀಗೆ ಏರಿಕೆಯಾಗುತ್ತಲೇ ಹೋಗುತ್ತದೆ. ಹಣದುಬ್ಬರ ಪ್ರಮಾಣ ಶೇ.8ರಿಂದ 10ರಷ್ಟು ಹೆಚ್ಚಳವಾದರೆ ಈ ಮೊತ್ತ ಗಾಬರಿ ಹುಟ್ಟುವಷ್ಟು ದೊಡ್ಡದಾಗುತ್ತದೆ. ಹೌದು, ವರ್ಷದಿಂದ ವರ್ಷಕ್ಕೆ ಮಕ್ಕಳ ಎಜುಕೇಷನ್‌ ದುಬಾರಿಯಾಗುತ್ತಿದೆ. ಪೋಷಕರ ದುಡಿಮೆಯ ಬಹುಪಾಲು ಹಣ ಇದಕ್ಕಾಗಿಯೇ ಖರ್ಚಾಗುತ್ತಿದೆ.

ಇನ್ನು ಐಐಎಂನಂಥ ಪ್ರತಿಷ್ಠಿತ ಸಂಸ್ಥೆಗಳಲ್ಲಿ 2007ರಿಂದ ಈಚೆಗೆ ಶುಲ್ಕಗಳು ಶೇ.400 ಪಟ್ಟು ಹೆಚ್ಚಳವಾಗಿವೆ! 2007ರಲ್ಲಿ ಐಐಎಂ ಅಹಮದಾಬಾದ್‌ ಮತ್ತು ಕೋಲ್ಕೊತಾದಲ್ಲಿ ಎರಡು ವರ್ಷಗಳ ಶುಲ್ಕವು 4 ಲಕ್ಷ ರೂ.ಗಳಷ್ಟಿತ್ತು. ಅದೀಗ 19 ಲಕ್ಷ ರೂ.ಗಳಿಗೆ ಮುಟ್ಟಿದೆ. ಟ್ರೆಂಡ್‌ ಹೀಗೆಯೇ ಮುಂದುವರಿದರೆ ಇನ್ನು 10 ವರ್ಷಕ್ಕೆ ಶುಲ್ಕವು 95 ಲಕ್ಷ ರೂ.ತಲುಪಿದರೂ ಅಚ್ಚರಿಯೇನಿಲ್ಲ. ಕಳೆದ ಒಂದೇ ವರ್ಷದಲ್ಲಿ ಐಐಎಂ-ಅಹಮದಾಬಾದ್‌ನಲ್ಲಿ ಶುಲ್ಕವು ಶೇ.5ರಷ್ಟು, ಐಐಎಂ-ಲಖನೌನಲ್ಲಿ ಶೇ.37ರಷ್ಟು ಹೆಚ್ಚಳವಾಗಿವೆ(ಮಾಹಿತಿ: ಸಂಕೇತ್‌ ಧನೋರ್ಕರ್‌).

ಮಕ್ಕಳು ಡಾಕ್ಟರ್‌, ಎಂಜಿನಿಯರ್‌, ಸೈಂಟಿಸ್ಟ್‌ ಆಗಬೇಕು, ಐಎಎಸ್‌ ಮಾಡಬೇಕು ಎನ್ನುವ ಕನಸುಗಳು ಪೋಷಕರಿಗೆ ಸಹಜ. ಆದರೆ, ಉನ್ನತ ಶಿಕ್ಷ ಣವೆಂದರೆ ಸುಮ್ಮನೇ ಅಲ್ಲ. ನಿರ್ದಿಷ್ಟ ಶುಲ್ಕದ ಜತೆಗೆ ನಾನಾ ವೆಚ್ಚಗಳನ್ನೂ ಪೋಷಕರು ಭರಿಸಬೇಕಾಗುತ್ತದೆ. ಒಬ್ಬ ವಿದ್ಯಾರ್ಥಿಯ ಬೋಧನಾ ಶುಲ್ಕ ರೂ.45,000, ಪರೀಕ್ಷಾ ಶುಲ್ಕ ರೂ.500, ನೋಂದಣಿ ಶುಲ್ಕ ರೂ.500, ಹಾಸ್ಟೆಲ್‌ ಶುಲ್ಕ ರೂ.2,000 ಸೇರಿದಂತೆ ಒಂದು ಲಕ್ಷ ರೂ.ಗಳ ತನಕ ನಾನಾ ಖರ್ಚುಗಳು ಸೇರಿಕೊಳ್ಳುತ್ತವೆ. ಇಂಥ ಪರಿಸ್ಥಿತಿ ನಿಭಾಯಿಸಲು ಪೋಷಕರು ಸಜ್ಜಾಗಬೇಕು. ಅಂದರೆ, ಮಕ್ಕಳ ಎಜುಕೇಷನ್‌ಗಾಗಿ ಆರಂಭದಿಂದಲೂ ಹಣಕಾಸಿನ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಮಕ್ಕಳ ಶಿಕ್ಷ ಣಕ್ಕೆ ಪೂರಕವಾಗಿ ಉಳಿತಾಯದ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕು. ಶಿಕ್ಷ ಣ ಶುಲ್ಕಗಳ ಏರಿಕೆಯನ್ನು ಅಂದಾಜಿಸಿ ಪ್ಲಾನ್‌ ಮಾಡಬೇಕು. ಇಲ್ಲದೇ ಹೋದರೆ, ನಿಮ್ಮ ಕನಸಿನ ಜತೆಗೆ ಮಕ್ಕಳ ಕನಸುಗಳೂ ಬಾಡಿ ಹೋಗುತ್ತವೆ.

ಮಕ್ಕಳು ಸಣ್ಣವರಾಗಿದ್ದಾಗಲೇ ಉಳಿತಾಯ ಆರಂಭಿಸಿ:

ಕಾಲನ ವೇಗಕ್ಕೆ ಸಾಟಿಯಿಲ್ಲ. ನಿಮ್ಮ ಮಕ್ಕಳು ಎಸ್‌ಎಸ್‌ಎಲ್‌ಸಿ, ಪಿಯುಸಿ, ಉನ್ನತ ಶಿಕ್ಷ ಣದ ಕೋರ್ಸ್‌ಗಳಿಗೆ ಬಂದಾಗ ಆಯಾ ಸಂದರ್ಭಕ್ಕೆ ತಕ್ಕಂತೆ ಹಣಕಾಸಿನ ವೆಚ್ಚಗಳು ಎದುರಾಗುತ್ತವೆ. ಅದಕ್ಕೆ ತಕ್ಕನಾದ ಹಣಕಾಸಿನ ಪ್ಲಾನ್‌ಗಳನ್ನು ಪೋಷಕರು ಅನುಸರಿಸಬೇಕು. ಮಕ್ಕಳ ಉನ್ನತ ಶಿಕ್ಷ ಣಕ್ಕೆ ಅಗತ್ಯವಾದ ಲಕ್ಷಾಂತರ ರೂಪಾಯಿಯನ್ನು ಹೊಂದಿಸುವುದು ಸುಲಭದ ಮಾತಲ್ಲ. ಹೀಗಾಗಿ ಅತಿ ಬೇಗ ಹೂಡಿಕೆಯನ್ನು ಆರಂಭಿಸಬೇಕು. ನಿಮ್ಮ ಮಗ/ಮಗಳಿಗೆ 18 ವರ್ಷವಾದಾಗ 25 ಲಕ್ಷ ರೂ.ಗಳು ಬರುವಂತಾಗಬೇಕು ಅನ್ನುವಿರಾದರೆ ನಿಮ್ಮ ಮಗುವಿಗೆ 3 ವರ್ಷವಾಗಿದ್ದಾಗಲಿಂದಲೇ ಉಳಿತಾಯ ಆರಂಭಿಸಬೇಕು. 15 ವರ್ಷಗಳ ಕಾಲ ತಿಂಗಳಿಗೆ 5000 ರೂ.ಗಳನ್ನು ಉಳಿತಾಯ ಮಾಡುತ್ತಾ ಹೋಗಬೇಕು. ನಿಮ್ಮ ಮಗುವಿನ 9ನೇ ವರ್ಷದಿಂದ ಉಳಿತಾಯ ಆರಂಭಿಸುವಿರಾದರೆ ತಿಂಗಳಿಗೆ 9,195 ರೂ. ಹಣವನ್ನು 9 ವರ್ಷ ಉಳಿಸಬೇಕು. ನಿಮ್ಮ ಮಗ/ಮಗಳಿಗೆ 12ನೇ ವರ್ಷವಾದಾಗ ನಿಮ್ಮ ಉಳಿತಾಯದ ಪ್ಲಾನ್‌ ಆರಂಭವಾದರೆ 6 ವರ್ಷಗಳ ಕಾಲ ತಿಂಗಳಿಗೆ 23,875 ರೂ. ತೆಗೆದಿಡಬೇಕಾಗುತ್ತದೆ. ಅಂದರೆ ನೀವು ತಡ ಮಾಡಿದಷ್ಟು ತೊಂದರೆ ತಪ್ಪಿದ್ದಲ್ಲ.

ಉಳಿತಾಯದ ಮೊತ್ತವನ್ನು ಹೆಚ್ಚಿಸಿ:

''ಮೂರು ಈಕ್ವಿಟಿ ಫಂಡ್‌ಗಳಲ್ಲಿ 5,000 ರೂ.ಗಳ ಹೂಡಿಕೆ ಮಾಡಿ, ಪ್ರತಿ ವರ್ಷ ಈ 'ಸಿಪ್‌* ಮೊತ್ತವನ್ನು 5,000 ರೂಪಾಯಿ ಹೆಚ್ಚಿಸುತ್ತಾ ಬಂದರೆ 13 ವರ್ಷಗಳಲ್ಲಿ ಸುಮಾರು ಒಂದು ಕೋಟಿ ರೂಪಾಯಿಯನ್ನು ನೀವು ಉಳಿಸಬಹುದು. ಸದ್ಯಕ್ಕೆ ಇಂದು ಒಂದು ಕೋಟಿ ಅನ್ನುವುದು ದೊಡ್ಡ ಮೊತ್ತವಾಗಿ ಕಂಡರೂ, ಮುಂದಿನ 10-15 ವರ್ಷಗಳಲ್ಲಿ ಉತ್ತಮ ವೃತ್ತಿಪರ ಕೋರ್ಸ್‌ಗಳಿಗೆ ಅದಕ್ಕೂ ಹೆಚ್ಚಿನ ಹಣ ತೆರಬೇಕಾಗುತ್ತದೆ,** ಎನ್ನುವುದು ತಜ್ಞರ ಅಭಿಪ್ರಾಯ. ಹೂಡಿಕೆ ಸಂಬಂಧ ಹಣಕಾಸು ತಜ್ಞರ ಸಲಹೆಗಳನ್ನು ಪಡೆಯಬಹುದು.

ಹೂಡಿಕೆ ಎಲ್ಲಿ, ಹೇಗೆ?

ಮಕ್ಕಳ ಶಿಕ್ಷ ಣಕ್ಕಾಗಿ ಉಳಿತಾಯ ಮಾಡಲು ನಾನಾ ಆಯ್ಕೆಗಳಿವೆ. ರಿಸ್ಕ್‌ ಇದ್ದರೂ ಪರವಾಗಿಲ್ಲ ಎನ್ನುವವರು ಸ್ಟಾಕ್ಸ್‌ ಮತ್ತು ಈಕ್ವಿಟಿ ಫಂಡ್‌ಗಳನ್ನು ಆಯ್ದುಕೊಳ್ಳಬಹುದು. ಮಕ್ಕಳು ಚಿಕ್ಕವರಾಗಿದ್ದ ಪಕ್ಷ ದಲ್ಲಿ ಈ ಆಯ್ಕೆಗಳನ್ನು ಬಳಸಬಹುದು. ಒಂದು ವೇಳೆ ಮಗ/ಮಗಳಿಗೆ 15ರಿಂದ 17 ವರ್ಷವಾಗಿದ್ದರೆ, ಆಗ ನೀವು ಉಳಿತಾಯ ಆರಂಭವಿಸುವುದಾದರೆ ಮ್ಯೂಚುವಲ್‌ ಫಂಡ್‌ಗಳಿಗೆ ಹಣ ಹಾಕಬಹುದು. ಈ ಹಂತದಲ್ಲಿ ರಿಸ್ಕ್‌ಗಳು ಬೇಡ. ಆರ್‌ಡಿ ಮತ್ತು ಅಲ್ಪಾವಧಿಯ ಡೆಬ್ತ್‌ ಫಂಡ್‌ಗಳತ್ತ ಗಮನ ಹರಿಸಬಹುದು.

ಮಕ್ಕಳಿಗೆ ಹಣ ಮತ್ತು ನಿಮ್ಮ ತೆರಿಗೆ ಉಳಿಸುವ ನಿಟ್ಟಿನಲ್ಲಿ ಪಿಪಿಎಫ್‌ ಅಥವಾ ಹೆಣ್ಣು ಮಕ್ಕಳಿಗಾಗಿ ಮೀಸಲಾದ ಸುಕನ್ಯ ಸಮೃದ್ಧಿ ಯೋಜನೆಗಳನ್ನು ಆಯ್ದುಕೊಳ್ಳಬಹುದು. ಜೀವವಿಮೆ ಯೋಜನೆಯನ್ನು ನೋಡುವುದಾದರೆ ಮನಿ ಬ್ಯಾಕ್‌ ಯೋಜನೆಯನ್ನು ಆಯ್ದುಕೊಳ್ಳಬಹುದು. ಮಗ/ಮಗಳಿಗೆ 18 ವರ್ಷವಾದಾಗ ಪಾಲಿಸಿ ಮೆಚ್ಯೂರ್ಡ್‌ ಆಗುವಂತೆ ವ್ಯವಸ್ಥೆ ಮಾಡಿ, 5 ವರ್ಷಕ್ಕೆ ಒಂದು ಸಲ ಬರುವ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಬಹುದು. ಇನ್ನು ಸುಕನ್ಯ ಸಮೃದ್ಧಿ ಯೋಜನೆಯಲ್ಲಿ ವಾರ್ಷಿಕ 30,000ರಿಂದ 40,000 ರೂ. ಮತ್ತು ಪಿಪಿಎಫ್‌ನಲ್ಲಿ 30 ಸಾವಿರ ರೂ. ಹಣ ಉಳಿಸುವುದರಿಂದ ತೆರಿಗೆ ಜತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೂ ಅನುಕೂಲವಾಗುತ್ತದೆ.

ಮಕ್ಕಳ ಎಜುಕೇಷನ್‌ಗೆ ಹಣ ಉಳಿತಾಯ ಮಾಡಬೇಕೇ? ಕೆಲವು ತಿಂಗಳ ನಂತರ ಶುರು ಮಾಡೋಣ ಎಂದು ಯೋಚಿಸಬೇಡಿ... ಒಂದು ತಿಂಗಳು ಸಹ ಪೋಸ್ಟ್‌ಪೋನ್‌ ಮಾಡಬೇಡಿ. ಈ ತಿಂಗಳಿನಿಂದಲೇ ಆರಂಭಿಸಿ... ಒಳ್ಳೆ ಕೆಲಸ ಮಾಡುವುದನ್ನು ತಡಮಾಡಬಾರದು.

ಇರಲಿ ಪರ್ಫೆಕ್ಟ್ ಪ್ಲಾನ್‌:

ಪಿಯುಸಿಯಲ್ಲಿ ಪ್ರವೀಣ್‌ ಕುಮಾರ್‌ ಉತ್ತಮ ಅಂಕ ಪಡೆದಿದ್ದಾನೆ. ಆತನಿಗೆ ಎಂಜಿನಿಯರ್‌ ಆಗುವ ಹಂಬಲ. ಹೆತ್ತವರಿಗೂ ಅದೇ ಕನಸು. ಇಲ್ಲಿ ಮಗನ 18ನೇ ವರ್ಷಕ್ಕೆ ಹಣ ಬರುವಂತೆ ತಂದೆ ಗೋಪಾಲ್‌ ರಾವ್‌ ಅವರು ಎಲ್‌ಐಸಿ ಮಾಡಿಸಿದ್ದರು. 3 ಲಕ್ಷ ರೂ. ವಿಮೆ ಹಣ ಕೈಯಲ್ಲಿದ್ದು, ಉಳಿದ ಹಣವನ್ನು ತಮ್ಮ ಪಿಎಫ್‌ ಮತ್ತು ಉಳಿತಾಯದ ಹಣದಲ್ಲಿ ಹೊಂದಿಸುವುದು ಅವರಿಗೆ ಕಷ್ಟವೇನಲ್ಲ. ಇಂಥ ನಿರ್ದಿಷ್ಟ ಯೋಜನೆಗಳು ಇಲ್ಲದೇ ಹೋದರೆ ಮಕ್ಕಳ ಶಿಕ್ಷ ಣ ಕುಂಟುತ್ತದೆ.

(ಪೂರಕ ಮಾಹಿತಿ: ವೆಲ್ತ್‌)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ