ಆ್ಯಪ್ನಗರ

ಕೃಷಿ ಸೆಸ್‌ನಿಂದ ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಳ ಆಗಲ್ಲ: ನಿರ್ಮಲಾ ಸೀತಾರಾಮನ್‌

ಕಳೆದ ವರ್ಷ ಹೆಚ್ಚು ವೆಚ್ಚ ಮಾಡಿದ್ದರಿಂದ ಕೊರತೆ ಹೆಚ್ಚಾಗಿದೆ. ಜಿಡಿಪಿ ಮೇಲೂ ಪರಿಣಾಮ ಬೀರಿದೆ. ಇದನ್ನು ಸರಿದೂಗಿಸುವ ಪ್ರಕ್ರಿಯೆ ಕೂಡ ಶುರುವಾಗಿದೆ. ಹೀಗಾಗಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ ಎಂದು ವಿವರಿಸಿದರು.

Vijaya Karnataka Web 1 Feb 2021, 7:09 pm
ಹೊಸದಿಲ್ಲಿ: ಪ್ರಸಕ್ತ ಬಜೆಟ್‌ನಲ್ಲಿ ಮಂಡಿಸಲಾಗಿರುವ ಕೃಷಿ ಸೆಸ್‌ನಿಂದ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಾಗಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.
Vijaya Karnataka Web ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್


ಬಜೆಟ್‌ ನಂತರ ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್‌ ಹಲವಾರು ವಿಷಯಗಳ ಕುರಿತು ಸ್ಪಷ್ಟನೆ ನೀಡಿದರು.

ಈ ಬಾರಿ ಹೊಸದಾಗಿ ಕೃಷಿ ಸೆಸ್‌ ಪರಿಚಯಿಸಲಾಗಿದೆ. ಪೆಟ್ರೋಲ್‌, ಡೀಸೆಲ್‌ ಮೇಲೆ 2.5 ರೂಪಾಯಿ ಘೋಷಿಸಲಾಗಿದೆ. ಇದರಿಂದ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆ ಹೆಚ್ಚಳವಾಗಬಹುದು ಎಂದು ಅಂದಾಜಿಸಲಾಗಿತ್ತು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಈ ರೀತಿಯ ಆತಂಕ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ. ಕೃಷಿ ಸೆಸ್‌ ಹೇರಿದ್ದರೂ, ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಳವಾಗುವುದಿಲ್ಲ ಎಂದರು.

ಕಳೆದ ವರ್ಷ ಕೊರೊನಾದಿಂದಾಗಿ ಅತಿ ಹೆಚ್ಚು ಸಂಕಷ್ಟ ಎದುರಾಗಿತ್ತು. ಹೀಗಾಗಿ ಸರಕಾರ ಕಳೆದ ಒಂದು ವರ್ಷ ಅತಿ ಹೆಚ್ಚು ವ್ಯಯ ಮಾಡಿದೆ. ಇಂದಿಗೂ ವ್ಯಯ ಮಾಡುತ್ತಲೇ ಇದ್ದೇವೆ ಎಂದು ಸಚಿವರು ತಿಳಿಸಿದರು.

ಈ ಬಾರಿ ಬಜೆಟ್‌ನಲ್ಲಿ ಆರ್ಥಿಕತೆಯನ್ನು ಸರಿದೂಗಿಸುವುದಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಮೂಲ ಸೌಕರ್ಯ ಕ್ಷೇತ್ರದಲ್ಲಿ ಹೆಚ್ಚು ವೆಚ್ಚ ಮಾಡಲಾಗುತ್ತಿದೆ. ರಸ್ತೆ, ಅಣೆಕಟ್ಟು, ಬಂದರು, ಇಂಧನ ಉತ್ಪಾದನೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಅನುದಾನ ವಿನಿಯೋಗಿಸಿ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

ಕಳೆದ ವರ್ಷ ಹೆಚ್ಚು ವೆಚ್ಚ ಮಾಡಿದ್ದರಿಂದ ಕೊರತೆ ಹೆಚ್ಚಾಗಿದೆ. ಜಿಡಿಪಿ ಮೇಲೂ ಪರಿಣಾಮ ಬೀರಿದೆ. ಇದನ್ನು ಸರಿದೂಗಿಸುವ ಪ್ರಕ್ರಿಯೆ ಕೂಡ ಶುರುವಾಗಿದೆ. ಹೀಗಾಗಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ ಎಂದು ವಿವರಿಸಿದರು.

ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸೆಸ್‌ ಪರಿಚಯಿಸಲಾಗಿದೆ. ಪೆಟ್ರೋಲ್‌, ಡೀಸೆಲ್‌ ಮೇಲೂ ಕೃಷಿ ಸೆಸ್‌ ಹಾಕಲಾಗಿದೆ. ಆದರೆ ಇದರಿಂದ ಬೆಲೆ ಏರಿಕೆ ಹೆಚ್ಚಳವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ