ಆ್ಯಪ್ನಗರ

ಕೃಷಿಕರು, ಸೈನಿಕರಿಗಿದೆಯೇ ಆದಾಯ ತೆರಿಗೆ ವಿನಾಯಿತಿ? 80ಸಿ ಭವಿಷ್ಯವೇನು? ಒಂದಿಷ್ಟು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ದೇಶದ ಬಹುಚರ್ಚಿತ ವಿಷಯಗಳಲ್ಲಿ ಆದಾಯ ತೆರಿಗೆಯೂ ಒಂದು. ಆದಾಯ ತೆರಿಗೆ ದರ, ಸ್ಥರ, ವಿನಾಯಿತಿಗಳು ಆಗಾಗ ಚರ್ಚೆಗೆ ಗುರಿಯಾಗುತ್ತಿರುತ್ತವೆ. ಬಜೆಟ್‌ ಹಿನ್ನೆಲೆಯಲ್ಲಿ ಆದಾಯ ತೆರಿಗೆಯ ಬಗ್ಗೆ ಮೇಲಿಂದ ಮೇಲೆ ಕೇಳುವ ಪ್ರಶ್ನೆಗಳು ಮತ್ತು ಅದಕ್ಕೆ ಉತ್ತರಗಳು ಇಲ್ಲಿವೆ.

Agencies 19 Jan 2021, 4:47 pm
  1. 5 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ತೆರಿಗೆ ಇಲ್ವಾ?
    Vijaya Karnataka Web income tax

    2019ರ ಫೆಬ್ರವರಿಯಲ್ಲಿ ಹಂಗಾಮಿ ಹಣಕಾಸು ಸಚಿವರಾಗಿದ್ದ ಪಿಯೂಷ್‌ ಗೋಯಲ್‌ ತಮ್ಮ ಬಜೆಟ್‌ ಭಾಷಣದಲ್ಲಿ ವಾರ್ಷಿಕ 5 ಲಕ್ಷ ರೂಪಾಯಿವರೆಗಿನ ಆದಾಯ ಗಳಿಸುವ ವೈಯಕ್ತಿಕ ತೆರಿಗೆದಾರರು ಪೂರ್ಣ ತೆರಿಗೆ ರಿಯಾಯಿತಿ ಪಡೆಯಲಿದ್ದಾರೆ. ಆದ್ದರಿಂದ ಇವರು ಯಾವುದೇ ಆದಾಯ ತೆರಿಗೆ ಪಾವತಿಸುವ ಅಗತ್ಯವಿರುವುದಿಲ್ಲ ಎಂದು ಹೇಳಿದ್ದರು. ಆದರೆ, ಇವರುಗಳು ಇನ್‌ಕಂ ಟ್ಯಾಕ್ಸ್‌ ರಿಟರ್ನ್ಸ್‌ ಫೈಲ್‌ ಮಾಡುವುದು ಮಾತ್ರ ಕಡ್ಡಾಯ. ವಾರ್ಷಿಕ ಆದಾಯ ಮೂಲ ತೆರಿಗೆ ವಿನಾಯಿತಿ ಮಿತಿಯಾದ 2.5 ಲಕ್ಷ ರೂ. ದಾಟಿದಲ್ಲಿ ಆದಾಯ ತೆರಿಗೆ ರಿಟರ್ನ್ಸ್‌ ಫೈಲ್‌ ಮಾಡಲೇಬೇಕು ಎನ್ನುತ್ತಾರೆ ತಜ್ಞರು.
  2. ಸೈನ್ಯದ ಸಂಬಳ ತೆರಿಗೆ ಮುಕ್ತವೇ?
    ಇಲ್ಲ. ಆದರೆ ಕರ್ತವ್ಯದಲ್ಲಿದ್ದಾಗ ಗಾಯಗೊಂಡವರ ಕುಟುಂಬಗಳಿಗೆ ನೀಡಲಾಗುವ ಅಂಗವೈಕಲ್ಯ ಪಿಂಚಣಿಗೆ ಆದಾಯ ತೆರಿಗೆ ವಿನಾಯಿತಿ ನೀಡಲಾಗಿದೆ. ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕೆಲವು ಶೌರ್ಯ ಪ್ರಶಸ್ತಿ ವಿಜೇತರಿಗೆ ಸೆಕ್ಷನ್‌ 10 (18)(i) ಅಡಿಯಲ್ಲಿ ಆದಾಯ ತೆರಿಗೆ ಪಾವತಿ ಅಥವಾ ರಿಟರ್ನ್ ಫೈಲಿಂಗ್‌ನಿಂದ ಸಂಪೂರ್ಣವಾಗಿ ವಿನಾಯಿತಿ ನೀಡಲಾಗಿದೆ. ಇವರ ಕುಟುಂಬದವರಿಗೆ ಸಿಗುವ ಪಿಂಚಣಿಗೂ ಇದು ಅನ್ವಯವಾಗಲಿದೆ.
  3. 2020ರ ಬಜೆಟ್‌ನಲ್ಲಿ 80ಸಿ ತೆಗೆದು ಹಾಕಲಾಗಿದೆಯೇ?
    2020ರ ಬಜೆಟ್‌ನಲ್ಲಿ ಕೇಂದ್ರ ಸರಕಾರ ಹೊಸ ಬಗೆಯ ತೆರಿಗೆ ಪದ್ಧತಿಯನ್ನು ಪರಿಷಯಿಸಿತ್ತು. ಸದ್ಯಕ್ಕೆ ಹಳೆಯ ಮತ್ತು ಹೊಸ ತೆರಿಗೆ ಸ್ಥರಗಳು ದೇಶದಲ್ಲಿ ಜಾರಿಯಲ್ಲಿವೆ. ಹಳೆಯ ತೆರಿಗೆ ಪದ್ಧತಿಯಲ್ಲಿ ಇಂದಿಗೂ 80ಸಿ ಸೇರಿದಂತೆ ಎಲ್ಲಾ ತೆರಿಗೆ ವಿನಾಯ್ತಿಗಳು ಇವೆ. ಆದರೆ ಹೊಸ ಪದ್ದತಿಯಲ್ಲಿ ಎಲ್ಲಾ ವಿನಾಯಿತಿಗಳನ್ನು ತೆಗೆದು ಹಾಕಲಾಗಿದೆ. 50,000 ರೂಪಾಯಿಗಳ ಸ್ಟ್ಯಾಂಡರ್ಡ್‌ ಡಿಡಕ್ಷನ್‌, 80ಸಿ ಅಡಿಯಲ್ಲಿ ಬರುವ 1.5 ಲಕ್ಷ ರೂ. ವಿನಾಯಿತಿಗಳನ್ನು ಕೈಬಿಡಲಾಗಿದೆ. ಆದರೆ ಎರಡು ಪದ್ಧತಿಗಳನ್ನು ತೆಗೆದು ಹಾಕಿ ಕೇವಲ ಒಂದು ಪದ್ಧತಿ ಮಾತ್ರ ಜಾರಿಯಲ್ಲಿ ಇರಲಿದೆಯೇ ಎಂಬುದು 2021ರ ಬಜೆಟ್‌ನಲ್ಲಿ ಸ್ಪಷ್ಟವಾಗಲಿದೆ.
  4. ಭಾರತದಲ್ಲಿ ಯಾವ ಆದಾಯಕ್ಕೆ ತೆರಿಗೆ ವಿಧಿಸುವುದಿಲ್ಲ?
    ಹಲವಾರು ಆದಾಯಗಳಿಗೆ ಭಾರತದಲ್ಲಿ ಆದಾಯ ತೆರಿಗೆ ವಿನಾಯಿತಿ ಇದೆ. ಅದರಲ್ಲಿ ಪ್ರಮುಖವಾದವುಗಳು ಇವು.ಕೃಷಿಯಿಂದ ಗಳಿಸುವ ಆದಾಯಕ್ಕೆ ಸೆಕ್ಷನ್‌ 10(1) ಅಡಿಯಲ್ಲಿ ವಿನಾಯಿತಿ ಇದೆ. ವಿದ್ಯಾರ್ಥಿ ವೇತನಕ್ಕೂ ಸೆಕ್ಷನ್‌ 56(ii) ಅಡಿಯಲ್ಲಿ ವಿನಾಯಿತಿ ನೀಡಲಾಗಿದೆ. ಪಿಪಿಎಪ್‌ ಮತ್ತು ಇಪಿಎಫ್‌ ಮೇಲೆ ಪಡೆಯುವ ಬಡ್ಡಿಗೂ ತೆರಿಗೆ ಇಲ್ಲ. ಉಳಿತಾಯ ಖಾತೆಗಳ ಮೂಲಕ ಗಳಿಸುವ ವಾರ್ಷಿಕ 10,000 ರೂಪಾಯಿವರೆಗಿನ ಬಡ್ಡಿಯ ಆದಾಯಕ್ಕೆ ತೆರಿಗೆ ಇಲ್ಲ. ವೇತನ ಪಡೆಯುವ ನೌಕರರು ಸಂಬಳದೊಂದಿಗೆ ಸೇರಿರುವ ಎಚ್‌ಆರ್‌ಎ, ಎಲ್‌ಟಿಎ ಮತ್ತು ರಜೆ ನಗದೀಕರಣದ ಒಂದಿಷ್ಟು ಹಣಕ್ಕೂ ತೆರಿಗೆ ಕಟ್ಟಬೇಕಾಗಿಲ್ಲ. ಟ್ಯಾಕ್ಸ್‌ ಫ್ರೀ ಬಾಂಡ್‌ ಮತ್ತು ಸರ್ಟಿಫಿಕೇಟ್‌ಗಳ ಮೇಲೆ ಗಳಿಸಿದ ಬಡ್ಡಿಗೂ 10(15)(iv)(h) ಅಡಿಯಲ್ಲಿ ಟ್ಯಾಕ್ಸ್‌ನಿಂದ ವಿನಾಯಿತಿ ನೀಡಲಾಗಿದೆ.
  5. ನಾನೊಬ್ಬ ಕೃಷಿಕ, ನನ್ನ ಆದಾಯಕ್ಕೆ ತೆರಿಗೆ ಕಟ್ಟಬೇಕಾ?
    ಕೃಷಿಯಿಂದ ಪಡೆಯುವ ಆದಾಯಕ್ಕೆ ತೆರಿಗೆ ಇಲ್ಲ. ಆದರೆ ನಿಮಗೆ ಕೃಷಿಯೇತರ ಆದಾಯ ಇದ್ದಲ್ಲಿ ಅದಕ್ಕೆ ತೆರಿಗೆ ಕಟ್ಟಬೇಕಾಗುತ್ತದೆ (ತೆರಿಗೆ ಪಾವತಿಸಬೇಕಾದ ವ್ಯಾಪ್ತಿಯೊಳಗೆ ಇದ್ದಲ್ಲಿ).
  6. ಐಟಿ ಕಾನೂನಿನಲ್ಲಿ ಪಶು ಸಂಗೋಪನೆಯಿಂದ ಪಡೆಯುವ ಆದಾಯವನ್ನು ಕೃಷಿ ಆದಾಯ ಎಂದು ಪರಿಗಣಿಸಲಾಗುತ್ತದೆಯೇ?
    ಇಲ್ಲ. ಇದರ ಅರ್ಥ ಪಶು ಸಂಗೋಪನೆ ನಡೆಸುವವರ ಆದಾಯ ನಿಗದಿತ ಮಿತಿಗಿಂತ ಹೆಚ್ಚಾಗಿದ್ದಲ್ಲಿ ಅಂಥಹವರು ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ