ಆ್ಯಪ್ನಗರ

ಇದು ಅಣ್ಣ ತಮ್ಮ ಬಜೆಟ್‌: ಯಡಿಯೂರಪ್ಪ ವ್ಯಾಖ್ಯಾನ

ಕೃಷಿ ಸಾಲಮನ್ನಾಗೆ ಹಣ ಎಲ್ಲಿಂದ ತರುತ್ತಾರೆ ಎಂಬುದಿಲ್ಲ: ಬಿಎಸ್‌ವೈ

Vijaya Karnataka Web 5 Jul 2018, 2:39 pm
ಬೆಂಗಳೂರು: ಕಾಂಗ್ರೆಸ್‌-ಜೆಡಿಎಸ್‌ ದೋಸ್ತಿ ಸರಕಾರದ ಚೊಚ್ಚಲ ಬಜೆಟ್‌ ಮಂಡಿಸಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಎಚ್‌.ಡಿ. ರೇವಣ್ಣ ಮಾಡಿರುವ ಬಜೆಟ್‌ನಂತಿದೆ. ಇದು ಅಣ್ಣ ತಮ್ಮಂದಿರ ಬಜೆಟ್‌ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಟೀಕಿಸಿದ್ದಾರೆ.
Vijaya Karnataka Web ಯಡಿಯೂರಪ್ಪ
ಯಡಿಯೂರಪ್ಪ


ವಿಧಾನಸಭೆಯ ಮೊಗಸಾಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಬಜೆಟ್‌ ಕುರಿತು ತಮ್ಮದೇ ರೀತಿಯಲ್ಲಿ ವಿಶ್ಲೇಷಣೆ ಮಾಡಿದರು.

34 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಬಜೆಟ್‌ನಲ್ಲಿ ಪ್ರಸ್ತಾವ ಮಾಡಿದ್ದಾರೆ. ಆದರೆ ಅದಕ್ಕೆ ಎಲ್ಲಿಂದ ಹಣ ಒದಗಿಸಲಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟನೆ ಇಲ್ಲ ಎಂದು ಯಡಿಯೂರಪ್ಪ ತಿಳಿಸಿದರು.

6 ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಮೊತ್ತದ ಪ್ರಮಾಣಕ್ಕೆ ಮಾತ್ರ ಅನುದಾನ ತೋರಿಸಲಾಗಿದೆ. ಉಳಿದ ಹಣವನ್ನು ಮುಖ್ಯಮಂತ್ರಿ ಎಲ್ಲಿಂದ ತರುತ್ತಾರೆ. ಇದು ರೈತರ ಕಣ್ಣಿಗೆ ಮಣ್ಣು ಎರಚಿರುವ ಬಜೆಟ್‌ ಎಂದು ಬಿಎಸ್‌ವೈ ದೂರಿದರು.

ಸಿದ್ದರಾಮಯ್ಯ ಅಧಿಕಾರಾವಧಿಯಿಂದಲೂ ಇವತ್ತಿನವರೆಗೂ ಕರ್ನಾಟಕ ಸರಕಾರದ ಒಟ್ಟಾರೆ ಸಾಲದ ಪ್ರಮಾಣ ಹೆಚ್ಚಾಗಿದೆ. ಪೆಟ್ರೋಲ್‌, ಡೀಸೆಲ್‌ ಮೇಲೆ ಸೆಸ್‌ ಹೆಚ್ಚಿಸಲಾಗಿದೆ. ಜತೆಗೆ ವಿದ್ಯುತ್‌ ದರ ಏರಿಕೆಯ ಶಾಕ್‌ ಕೂಡ ನೀಡಲಾಗಿದೆ ಎಂದು ಆರೋಪಿಸಿದರು.

ಉತ್ತರ ಕರ್ನಾಟಕಕ್ಕೆ, ಮಲೆನಾಡು ಪ್ರದೇಶಗಳಿಗೆ, ಕರಾವಳಿ ಭಾಗಗಳನ್ನು ಕುಮಾರಸ್ವಾಮಿ ಸಂಪೂರ್ಣ ಮರೆತು ಹೋಗಿದ್ದಾರೆ. ಮೀನುಗಾರರಿಗೆ ಹೆಚ್ಚಿನ ಅನುದಾನ ನೀಡಿಲ್ಲ. ಕುಮಾರಸ್ವಾಮಿಗೆ ಹಳೆಯ ಮೈಸೂರು ಭಾಗದ ಮಂಡ್ಯ, ರಾಮನಗರ, ಹಾಸನ ಮಾತ್ರ ಕಣ್ಣ ಮುಂದಿದೆ ಎಂದು ಯಡಿಯೂರಪ್ಪ ಟೀಕಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ