Please enable javascript.ಶಂಕಿತ ಕಾಳಧನಿಕರ ಖಾತೆಗಳಲ್ಲಿ ಹಣವೇ ಇಲ್ಲ - ಶಂಕಿತ ಕಾಳಧನಿಕರ ಖಾತೆಗಳಲ್ಲಿ ಹಣವೇ ಇಲ್ಲ - Vijay Karnataka

ಶಂಕಿತ ಕಾಳಧನಿಕರ ಖಾತೆಗಳಲ್ಲಿ ಹಣವೇ ಇಲ್ಲ

Vijaya Karnataka Web 7 Nov 2014, 4:46 am
Subscribe

ಕೇಂದ್ರ ಸರಕಾರ ಇತ್ತೀಚೆಗೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಶಂಕಿತ ಕಾಳಧನಿಕರ ‘ಎಚ್‌ಎಸ್‌ಬಿಸಿ ಜಿನೀವಾ’ ಪಟ್ಟಿಯಲ್ಲಿ ಬಹುತೇಕ ಅರ್ಧದಷ್ಟು ಖಾತೆಗಳಲ್ಲಿ ಹಣವೇ ಇಲ್ಲ ಎಂಬ ಮಹತ್ವದ ಅಂಶವನ್ನು ಕಪ್ಪು ಹಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಬಹಿರಂಗಪಡಿಸಿದೆ.

ಶಂಕಿತ ಕಾಳಧನಿಕರ ಖಾತೆಗಳಲ್ಲಿ ಹಣವೇ ಇಲ್ಲ
ಹೊಸದಿಲ್ಲಿ: ಕೇಂದ್ರ ಸರಕಾರ ಇತ್ತೀಚೆಗೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಶಂಕಿತ ಕಾಳಧನಿಕರ ‘ಎಚ್‌ಎಸ್‌ಬಿಸಿ ಜಿನೀವಾ’ ಪಟ್ಟಿಯಲ್ಲಿ ಬಹುತೇಕ ಅರ್ಧದಷ್ಟು ಖಾತೆಗಳಲ್ಲಿ ಹಣವೇ ಇಲ್ಲ ಎಂಬ ಮಹತ್ವದ ಅಂಶವನ್ನು ಕಪ್ಪು ಹಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಬಹಿರಂಗಪಡಿಸಿದೆ.

ಜತೆಗೆ, ಶಂಕಿತ ಕಾಳಧನಿಕರ ನೂರಕ್ಕಿಂತ ಹೆಚ್ಚಿನ ಹೆಸರುಗಳು ಪಟ್ಟಿಯಲ್ಲಿ ಪುನರಾವರ್ತನೆಯಾಗಿವೆ. ಇದರಿಂದ ಎಚ್‌ಎಸ್‌ಬಿಸಿ ಪಟ್ಟಿಯಲ್ಲಿರುವ ಶಂಕಿತ ಕಾಳಧನಿಕರ ವಿರುದ್ಧ ಎಸ್‌ಐಟಿ, ಯಾವುದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿಗೆ ಅಡ್ಡಿ ಉಂಟಾದಂತಾಗಿದೆ.

ಜಿನೀವಾದ ಎಚ್‌ಎಸ್‌ಬಿಸಿ ಬ್ಯಾಂಕ್‌ನಿಂದ ಭಾರತ ಸರಕಾರ ಪಡೆದಿರುವ 628 ಶಂಕಿತ ಕಾಳಧನಿಕರ ಪಟ್ಟಿಯಲ್ಲಿ ಹೆಸರಿಸಲಾಗಿರುವ 300 ಸಂಸ್ಥೆಗಳ ವಿರುದ್ಧ ವಿಚಾರಣೆ ನಡೆಸಲು ಆದಾಯ ತೆರಿಗೆ ಇಲಾಖೆ ಚಿಂತನೆ ನಡೆಸುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಪಟ್ಟಿ ಇದೀಗ ಸುಪ್ರೀಂ ಕೋರ್ಟ್ ರಚಿಸಿರುವ ವಿಶೇಷ ತನಿಖಾ ತಂಡದ ಸುಪರ್ದಿನಲ್ಲಿದೆ.

ಜಿನೀವಾದ ಎಚ್‌ಎಸ್‌ಬಿಸಿ ಬ್ಯಾಂಕ್ ಭಾರತ ಸರಕಾರಕ್ಕೆ ಒದಗಿಸಿರುವ ಪಟ್ಟಿಯಲ್ಲಿ 289 ಖಾತೆಗಳಲ್ಲಿ ಹಣವೇ ಇಲ್ಲ. ಜತೆಗೆ, 122 ಶಂಕಿತರ ಹೆಸರುಗಳು ಪುನರಾವರ್ತನೆಯಾಗಿವೆ ಎಂಬ ಅಂಶವನ್ನು ವಿಶೇಷ ತನಿಖಾ ತಂಡ ಪತ್ತೆ ಮಾಡಿದೆ.

ಎಚ್‌ಎಸ್‌ಬಿಸಿ ಒದಗಿಸಿರುವ ಪಟ್ಟಿಯಲ್ಲಿರುವವರು ವಿದೇಶಿ ಬ್ಯಾಂಕ್ ಖಾತೆಗಳಲ್ಲಿ ವಹಿವಾಟು ನಡೆಸಿರುವ ಯಾವುದೇ ವಿವರ ಇಲ್ಲ. ಹಾಗಾಗಿ, ಶಂಕಿತರ ವಿರುದ್ಧ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳಲು ಹಿನ್ನಡೆ ಉಂಟಾಗಿದೆ ಎಂದು ಎಸ್‌ಐಟಿ ತಿಳಿಸಿದೆ.

ಶಂಕಿತ ಕಾಳಧನಿಕರು ಯಾವಾಗ ಬ್ಯಾಂಕ್ ಖಾತೆ ತೆರೆದಿದ್ದಾರೆ? ಯಾವಾಗ ಕಾರ್ಯಾಚರಣೆ ಅಥವಾ ವಹಿವಾಟು ನಡೆಸಿದ್ದಾರೆ ಎಂಬುದರ ಬಗ್ಗೆ ಸ್ವಲ್ಪವೂ ಸುಳಿವು ಸಿಗುತ್ತಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಎಚ್‌ಎಸ್‌ಬಿಸಿ ಪಟ್ಟಿಯಲ್ಲಿರುವ 150 ಹೆಸರುಗಳ ವಿರುದ್ಧ ಆದಾಯ ತೆರಿಗೆ ಇಲಾಖೆ ಈಗಾಗಲೇ ಶೋಧ ಮತ್ತು ಸಮೀಕ್ಷಾ ಕಾರ್ಯಾಚರಣೆ ಆರಂಭಿಸಿದೆ. ಆದರೆ ವಿಚಾರಣಾ ಪ್ರಕ್ರಿಯೆ ಇನ್ನೂ ಪೂರ್ಣವಾಗಿಲ್ಲ ಎಂದು ಕಪ್ಪು ಹಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಅಧ್ಯಕ್ಷ ಎಂ.ಬಿ. ಷಾ ಮತ್ತು ಉಪಾಧ್ಯಕ್ಷ ಅರಿಜಿತ್ ಪಯಾಸತ್ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ಗೆ ಹಸ್ತಾಂತರಿಸಲಾಗಿರುವ ಎಚ್‌ಎಸ್‌ಬಿಸಿ ಪಟ್ಟಿಯಲ್ಲಿರುವ 300 ಪ್ರಕರಣಗಳ ಕುರಿತು ಈ ವರ್ಷಾಂತ್ಯದೊಳಗೆ ವಿಚಾರಣೆ ಆರಂಭಿಸಲು ಆದಾಯ ತೆರಿಗೆ ಇಲಾಖೆ ಚಿಂತನೆ ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಭಾರತ ಸರಕಾರ ವಿವಿಧ ರಾಷ್ಟ್ರಗಳ ಜತೆ ಹೊಂದಿರುವ ‘ತೆರಿಗೆ ಮಾಹಿತಿ ವಿನಿಮಯ ಒಪ್ಪಂದ’ದ ಅನ್ವಯ, ಮರುಸಂಧಾನ ನಡೆಸಲು ವಿಶೇಷ ತನಿಖಾ ತಂಡ ಕೋರಿಕೆ ಸಲ್ಲಿಸಿದೆ. ತೆರಿಗೆ ವಂಚಿಸಿ, ವಿದೇಶಿ ಬ್ಯಾಂಕ್‌ಗಳಲ್ಲಿರುವ ಅಕ್ರಮ ಸಂಪತ್ತು ರಕ್ಷಿಸುವ ದಂಧೆಯನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಲು ಎಸ್‌ಐಟಿ, ಈ ಕ್ರಮಕ್ಕೆ ಮುಂದಾಗಿದೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ