ಆ್ಯಪ್ನಗರ

ಗೌರಿ-ಗಣೇಶ ಹಬ್ಬಕ್ಕೆ ನಂದಿನಿಯಿಂದ 12 ಹೊಸ ಉತ್ಪನ್ನ ಬಿಡುಗಡೆ

ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಹಾಲಿನಿಂದ ತಯಾರಿಸಿದ 12 ನೂತನ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್‌ ಹೇಳಿದ್ದಾರೆ.

Vijaya Karnataka Web 30 Aug 2022, 8:38 am

ಹೈಲೈಟ್ಸ್‌:

  • ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಹಾಲಿನಿಂದ ತಯಾರಿಸಿದ 12 ನೂತನ ಉತ್ಪನ್ನಗಳು ಬಿಡುಗಡೆ
  • ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್‌ ಮಾಹಿತಿ
  • 8 ಬಗೆಯ ಸಿಹಿ ತಿನಿಸುಗಳು, 2 ಬಗೆಯ ಬಿಸ್ಕತ್‌, ಪನ್ನೀರ್‌ ಮುರುಕು ಮತ್ತು ಗುಡ್‌ಲೈಫ್‌ ಚಾಕೊಲೇಟ್‌ ಬಿಡುಗಡೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Nandini
ಸಾಂದರ್ಭಿಕ ಚಿತ್ರ
ಬೆಂಗಳೂರು: "ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಹಾಲಿನಿಂದ ತಯಾರಿಸಿದ 12 ನೂತನ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಈ ಉತ್ಪನ್ನಗಳನ್ನು ಖರೀದಿಸುವ ಮೂಲಕ ರಾಜ್ಯದ ರೈತರ ಆರ್ಥಿಕ ಮತ್ತು ಸಾಮಾಜಿಕ ಬದುಕಿನ ಸುಧಾರಣೆಗೆ ಸ್ಪಂದಿಸಬೇಕು," ಎಂದು ರಾಜ್ಯ ಹಾಲು ಮಹಾಮಂಡಳದ (ಕೆಎಂಎಫ್‌) ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್‌ ಮನವಿ ಮಾಡಿದರು.
ಸೋಮವಾರ ಕೆಎಂಎಫ್‌ನ ನೂತನ ಉತ್ಪನ್ನಗಳನ್ನು ಬಿಡುಗಡೆ ಮಾಡಿ, "ದೇಶದಲ್ಲಿ ಅಮೂಲ್‌ ಹೊರತುಪಡಿಸಿದರೆ ಕೆಎಂಎಫ್‌ 2ನೇ ಅತಿ ದೊಡ್ಡ ಹೈನೋದ್ಯಮ ಸಹಕಾರ ಸಂಸ್ಥೆಯಾಗಿದೆ. 45 ವರ್ಷಗಳಿಂದ ಹಾಲು, ಮೊಸರು ಮತ್ತು ತುಪ್ಪ ಉತ್ಪಾದನೆಗಷ್ಟೇ ಸೀಮಿತವಾಗಿತ್ತು. 3 ವರ್ಷಗಳಿಂದ ಮಾರುಕಟ್ಟೆಯಲ್ಲಿ ವಿನೂತನ ಪ್ರಯತ್ನ ಮಾಡುತ್ತಿದೆ," ಎಂದರು.

"ಗ್ರಾಹಕರ ಅಭಿರುಚಿಗೆ ತಕ್ಕಂತೆ ಹಾಲಿನಿಂದ ಸಿದ್ಧಪಡಿಸಲಾದ 8 ಬಗೆಯ ಸಿಹಿ ತಿನಿಸುಗಳು, 2 ಬಗೆಯ ಬಿಸ್ಕತ್‌, ಪನ್ನೀರ್‌ ಮುರುಕು ಮತ್ತು ಗುಡ್‌ಲೈಫ್‌ ಚಾಕೊಲೇಟ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ," ಎಂದು ತಿಳಿಸಿದರು.

Nandini milk | ಹಾಲು ಲೀಟರ್‌ಗೆ 3 ರೂ. ಹೆಚ್ಚಳಕ್ಕೆ ಸರಕಾರಕ್ಕೆ ಕೆಎಂಎಫ್‌ ಪ್ರಸ್ತಾವನೆ: 'ಸಿಎಂ ಸಕಾರಾತ್ಮಕ ಸ್ಪಂದನೆ'
ದಸರಾದಲ್ಲಿ ಕೆಎಂಎಫ್‌ ಟ್ಯಾಬ್ಲೊ

"ಮೈಸೂರಿನ ಜಂಬೂ ಸವಾರಿಯಲ್ಲಿ ಮೊದಲ ಬಾರಿಗೆ ಕೆಎಂಎಫ್‌ನ ಸ್ತಬ್ಧಚಿತ್ರ (ಟ್ಯಾಬ್ಲೊ) ಭಾಗಿಯಾಗಲಿದೆ. ಕೆಎಂಎಫ್‌ ಮತ್ತು ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳ ಹಾಲು ಉತ್ಪಾದಕರ ಹಾಗೂ ಕಾರ್ಮಿಕರ ಚಟುವಟಿಕೆಗಳನ್ನು ಟ್ಯಾಬ್ಲೊ ಮೂಲಕ ಪ್ರಸ್ತುತಪಡಿಸಲಾಗುತ್ತದೆ. ನಂದಿನಿ ಉತ್ಪನ್ನಗಳ ಮಳಿಗೆಯನ್ನೂ ಅಲ್ಲಿ ತೆರೆಯಲಾಗುತ್ತದೆ," ಎಂದು ವಿವರಿಸಿದರು.

ಸಮ್ಮೇಳನ

"ಹೊಸದಿಲ್ಲಿಯಲ್ಲಿ ಸೆ. 12 ರಿಂದ 15ರವರೆಗೆ ಅಂತಾರಾಷ್ಟ್ರೀಯ ಡೇರಿ ಸಮ್ಮೇಳನ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕೇಂದ್ರದ ಪಶು ಸಂಗೋಪನಾ ಸಚಿವರು, ಕರ್ನಾಟಕ, ಉತ್ತರ ಪ್ರದೇಶ ಮತ್ತು ಗುಜರಾತ್‌ ಮುಖ್ಯಮಂತ್ರಿಗಳು ಸಮ್ಮೇಳನದಲ್ಲಿ ಭಾಗವಹಿಸುತ್ತಾರೆ. ಸಮ್ಮೇಳನದಲ್ಲಿ ಕೆಎಂಎಫ್‌ನ 15 ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗುತ್ತದೆ," ಎಂದು ವಿವರ ನೀಡಿದರು.

"ರಾಜ್ಯದ ಜತೆಗೆ ದೇಶದೆಲ್ಲೆಡೆ ಕೆಎಂಎಫ್‌ನ ಮಾರಾಟ ಜಾಲ ವಿಸ್ತರಿಸಿದೆ. ಮುಂಬಯಿ, ಕೇರಳ, ತಮಿಳುನಾಡು, ತೆಲಂಗಾಣ, ಗೋವಾ, ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯಗಳಲ್ಲಿ ದಿನಕ್ಕೆ 5 ಲಕ್ಷ ಲೀಟರ್‌ ಹಾಲು ಮಾರಾಟವಾಗುತ್ತಿದೆ. 2023ರ ಜ.1ರ ವೇಳೆಗೆ ಹೊಸದಿಲ್ಲಿಯಲ್ಲಿ ಮಹಾಮಂಡಳದಿಂದ ದಿನಕ್ಕೆ 5 ಲಕ್ಷ ಲೀಟರ್‌ ಹಾಲು ಮಾರಾಟ ಮಾಡುವ ಗುರಿಯಿದೆ. ಜತೆಗೆ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದ 5 ರಾಜ್ಯಗಳಲ್ಲಿ ಹಾಲು ಮಾರುವ ಗುರಿಯಿದೆ," ಎಂದು ವಿವರಿಸಿದರು.

"ಹೊಸದಿಲ್ಲಿ ಮಾರುಕಟ್ಟೆಯಲ್ಲಿನಂದಿನಿ ಬ್ರಾಂಡ್‌ನ ಪಿಜ್ಜಾ ಮತ್ತು ಚಾಕೊಲೇಟ್‌ ಬಿಡುಗಡೆ ಮಾಡುತ್ತೇವೆ. ಕಳೆದ 3 ತಿಂಗಳಲ್ಲಿ 50 ಮೆಟ್ರಿಕ್‌ ಟನ್‌ ಚಾಕೊಲೇಟ್‌ ಮಾರಾಟವಾಗಿದೆ. ಡಿಸೆಂಬರ್‌ ವೇಳೆಗೆ 100 ಮೆಟ್ರಿಕ್‌ ಟನ್‌ ಚಾಕೊಲೇಟ್‌ ಮಾರಾಟ ಮಾಡಲು ಯೋಜಿಸಲಾಗಿದೆ. ಯುವಕ-ಯುವತಿಯರನ್ನು ಆಕರ್ಷಿಸಲು ಹಾಸನ, ಮಂಗಳೂರು ಮತ್ತು ಕೇರಳದಲ್ಲಿ ಸೆಪ್ಟೆಂಬರ್‌ನಲ್ಲಿ ನಂದಿನಿ ಕೆಫೆಗಳನ್ನು ಆರಂಭಿಸಲಾಗುತ್ತದೆ," ಎಂದು ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ