ಆ್ಯಪ್ನಗರ

ಪರಿಶಿಷ್ಟರ ನವೋದ್ಯಮಕ್ಕೆ 50 ಲಕ್ಷ ರೂ. ನೆರವು

ದುರ್ಬಲ ಸಮುದಾಯಕ್ಕೆ ಅನುಕೂಲವಾಗುವಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯಮಶೀಲತೆ, ಆರ್ಥಿಕ ಸಬಲತೆ ಮತ್ತು ಕೌಶಲ ಅಭಿವೃದ್ಧಿಗಾಗಿ ಸಮಾಜ ಕಲ್ಯಾಣ ಇಲಾಖೆಯು 'ಉನ್ನತಿ' ಎಂಬ ಹೆಸರಿನ ಹೊಸ ಯೋಜನೆ ಪ್ರಾರಂಭಿಸಿದೆ.

Vijaya Karnataka 7 Oct 2018, 8:13 am
ಬೆಂಗಳೂರು: ದುರ್ಬಲ ಸಮುದಾಯಕ್ಕೆ ಅನುಕೂಲವಾಗುವಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯಮಶೀಲತೆ, ಆರ್ಥಿಕ ಸಬಲತೆ ಮತ್ತು ಕೌಶಲ ಅಭಿವೃದ್ಧಿಗಾಗಿ ಸಮಾಜ ಕಲ್ಯಾಣ ಇಲಾಖೆಯು 'ಉನ್ನತಿ' ಎಂಬ ಹೆಸರಿನ ಹೊಸ ಯೋಜನೆ ಪ್ರಾರಂಭಿಸಿದೆ.
Vijaya Karnataka Web priyank kharge


ಈ ಯೋಜನೆಯಡಿ ತಂತ್ರಜ್ಞಾನ ಆವಿಷ್ಕಾರ ವಿಭಾಗದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರು ಯಾವುದೇ ತಂತ್ರಜ್ಞಾನ ಆಧಾರಿತ ನವೋದ್ಯಮಗಳನ್ನು ಆರಂಭಿಸಬಹುದು. ಏಕವ್ಯಕ್ತಿ, ಸಹಭಾಗಿತ್ವ ಕಂಪೆನಿಗಳು ಸಹ ಈ ಯೋಜನೆಯಡಿ ಉದ್ಯಮ ಆರಂಭಿಸಬಹುದು. ಇಂಥ ಉದ್ಯಮಿಗಳಿಗೆ ಉನ್ನತಿ ಯೋಜನೆಯಡಿ 50 ಲಕ್ಷ ರೂ.ವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ. ಈ ಯೋಜನೆಗಾಗಿ ಸಮಾಜ ಕಲ್ಯಾಣ ಇಲಾಖೆಯು ಈ ವರ್ಷ ಒಟ್ಟು 20 ಕೋಟಿ ರೂ. ಅನುದಾನ ಒದಗಿಸಲಿದೆ.

ಗ್ರಾಮೀಣಾಭಿವೃದ್ಧಿ ಹಾಗೂ ಸಾಮಾಜಿಕ ಪ್ರಭಾವ ಬೀರುವ ಉತ್ಪನ್ನಗಳಿಗೆ ಆಸರೆಯಾಗಲಿರುವ ಯಾವುದೇ ವ್ಯಕ್ತಿ ಆರಂಭಿಸುವ ತಂತ್ರಜ್ಞಾನ ಕ್ಷೇತ್ರದ ನವೋದ್ಯಮಗಳಿಗೆ ಎರಡನೆಯ ವಿಭಾಗದಡಿ ಆರ್ಥಿಕ ನೆರವು ನೀಡಲಾಗುತ್ತದೆ. ಹಾಗಾಗಿ ಉನ್ನತಿ ಯೋಜನೆಯಡಿ ರಾಜ್ಯದ ನಾಲ್ಕು ವರ್ಷಗಳು ಮೀರದ ತಂತ್ರಜ್ಞಾನ ಕಂಪೆನಿಗಳು ಅರ್ಜಿ ಸಲ್ಲಿಸಬಹುದು. ಈ ಉದ್ಯಮಗಳಲ್ಲಿ ಕೆಲಸ ಮಾಡುವ ಶೇ.50ರಷ್ಟು ಉದ್ಯೋಗಿಗಳು ರಾಜ್ಯದವರಾಗಿರಬೇಕು. ಮುಖ್ಯವಾಗಿ ನವೋದ್ಯಮಗಳನ್ನು ಆರಂಭಿಸುವ ಘಟಕವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಪ್ರಧಾನ ಹೂಡಿಕೆದಾರರ ಸಹಭಾಗಿತ್ವವನ್ನು ಹೊಂದಿರಬೇಕು ಎಂಬ ನಿಯಮ ರೂಪಿಸಲಾಗಿದೆ.

ಯೋಜನೆ ಬಗ್ಗೆ ಪ್ರತಿಕ್ರಿಯಿಸಿರುವ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ, ''ತಂತ್ರಜ್ಞಾನದ ಅನ್ವೇಷಣೆಗಳು ತುಂಬಾ ಸರಳ. ಬಹಳ ಮಂದಿ ಈ ಕ್ಷೇತ್ರದಲ್ಲಿ ಮುನ್ನಡೆಯುತ್ತಿದ್ದಾರೆ. ಆದರೆ ಪರಿಶಿಷ್ಟ ಜಾತಿ ಮತ್ತು ವರ್ಗದವರು ತಂತ್ರಜ್ಞಾನ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಅವಕಾಶಗಳು ಕಡಿಮೆ ಇವೆ. ಹಾಗಾಗಿ ಉನ್ನತಿ ಯೋಜನೆ ಈ ಅಸಮತೋಲವನ್ನು ತೊಡೆದುಹಾಕಲಿದೆ'' ಎಂದಿದ್ದಾರೆ.

ಫಲಾನುಭವಿಗಳ ಆಯ್ಕೆಗೆ ಸಮಾಜ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ಉನ್ನತ ಆಯ್ಕೆ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಮೂರು ಹಂತದ ಮೌಲ್ಯಮಾಪನ ಮಾಡಿ ಫಲಾನುಭವಿಗಳನ್ನು ಅಂತಿಮಗೊಳಿಸಲಿದೆ. ಅರ್ಜಿ ನಮೂನೆಗಳನ್ನು ಅ.10ರಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ www.kalyanakendra.com ನೋಡಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ