ಆ್ಯಪ್ನಗರ

ಟಾಪ್‌ 10ರಲ್ಲಿ 9 ಕಂಪನಿಗಳಿಗೆ 1.60 ಲಕ್ಷ ಕೋಟಿ ರೂ. ನಷ್ಟ

ಮಾರುಕಟ್ಟೆಯಲ್ಲಿ ಕರಡಿ ಕುಣಿತ | ಹೂಡಿಕೆದಾರರಿಗೆ 642 ಲಕ್ಷ ಕೋಟಿ ರೂ...

Agencies 13 May 2019, 5:00 am
ಹೊಸದಿಲ್ಲಿ: ಆರ್‌ಐಎಲ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಐಟಿಸಿ, ಇನ್ಫೋಸಿಸ್‌ ಸೇರಿದಂತೆ ಟಾಪ್‌-10 ಕಂಪನಿಗಳ ಪೈಕಿ ಒಂಬತ್ತು ಕಂಪನಿಗಳು ಕಳೆದ ವಾರ 1.60 ಲಕ್ಷ ಕೋಟಿ ರೂ. ಮಾರುಕಟ್ಟೆ ಬಂಡವಾಳವನ್ನು ನಷ್ಟ ಮಾಡಿಕೊಂಡಿವೆ. ಮುಕೇಶ್‌ ಅಂಬಾನಿ ನೇತೃತ್ವದ ಆರ್‌ಐಎಲ್‌ 99 ಸಾವಿರ ಕೋಟಿ ರೂ. ಕಳೆದುಕೊಂಡಿದೆ.
Vijaya Karnataka Web SENSEX


ಈ ಟಾಪ್‌ 10 ಕಂಪನಿಗಳ ಪೈಕಿ ಟಾಟಾ ಕನ್ಸಲ್ಟೆನ್ಸಿ ಸವೀರ್‍ಸಸ್‌(ಟಿಸಿಎಸ್‌) ಮಾತ್ರ ಲಾಭ ಗಳಿಸಿದೆ. ಆರ್‌ಐಎಲ್‌ 99 ಸಾವಿರ ಕೋಟಿ ರೂ. ನಷ್ಟ ಮಾಡಿಕೊಂಡಿದ್ದು, ಅದರ ಮಾರುಕಟ್ಟೆ ಬಂಡವಾಳವು ನಾಲ್ಕು ದಿನಗಳಲ್ಲಿ 7,92,680 ಕೋಟಿ ರೂ.ಗೆ ಇಳಿದಿದೆ. ದೇಶದ ಹೆಚ್ಚು ಮೌಲ್ಯದ ಕಂಪನಿ ಎನ್ನುವ ಸ್ಥಾನವನ್ನು ಆರ್‌ಐಎಲ್‌ ಕಳೆದುಕೊಂಡಿದ್ದು ಟಿಸಿಎಸ್‌ ಆ ಸ್ಥಾನವನ್ನು ಮತ್ತೆ ಗಳಿಸಿದೆ. ಅದರ ಮಾರುಕಟ್ಟೆ ಮೌಲ್ಯ 1,1444 ಕೋಟಿ ರೂ. ಏರಿಕೆಯಾಗಿದ್ದು ಕಳೆದ ಶುಕ್ರವಾರಕ್ಕೆ 8,01,340 ಕೋಟಿ ರೂ. ಮುಟ್ಟಿದೆ.

ರಿಲಯನ್ಸ್‌ ಇಂಡಸ್ಟ್ರೀಸ್‌ನ ಷೇರುಗಳ ರೇಟಿಂಗ್‌ ಅನ್ನು ಮೋರ್ಗಾನ್‌ ಸ್ಟ್ಯಾನ್ಲಿ ಕೆಳಕ್ಕಿಳಿಸಿದ್ದು, ಮತ್ತು ಜಾಗತಿಕ ಪ್ರಭಾವವು ಷೇರುದಾರರ ಮೇಲೆ ಕಂಡು ಬಂದಿದೆ. ಷೇರುಪೇಟೆಯಲ್ಲಿ ಕಳೆದ ವಾರದ ಆರಂಭದಿಂದ ಅಂತ್ಯದ ತನಕ ಮಾರಾಟದ ಒತ್ತಡ ಕಂಡು ಬಂದಿದೆ. ಫೆಬ್ರವರಿ ಮಧ್ಯದಿಂದ ಈ ತನಕ ಹೆಚ್ಚಿನ ನಷ್ಟವನ್ನು ಕಂಪನಿಗಳು ದಾಖಲಿಸಿವೆ. ಕಳೆದ ವಾರ ಸೆನ್ಸೆಕ್ಸ್‌ 1,500 ಅಂಕ ಅಥವಾ ಶೇ.3.85 ಕಳೆದುಕೊಂಡಿದ್ದು, 37,462.99ಕ್ಕೆ ಶುಕ್ರವಾರ ಅಂತ್ಯವಾಗಿದೆ. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಶೇ.4ರಷ್ಟು ಕುಸಿದಿದೆ.

ಮಾರ್ಚ್‌ 31ಕ್ಕೆ ಅಂತ್ಯವಾದ ನಾನಾ ಕಂಪನಿಗಳ 4ನೇ ತ್ರೈಮಾಸಿಕದ ಫಲಿತಾಂಶಗಳು ಮತ್ತು ಅಲ್ಲಿನ ಲಾಭಗಳು ಮಾರುಕಟ್ಟೆಗೆ ಪುಷ್ಟಿ ತುಂಬುವಲ್ಲಿ ವಿಫಲವಾಗಿವೆ.

ತಾರಕಕ್ಕೆ ಏರುತ್ತಿರುವ ಅಮೆರಿಕ ಮತ್ತು ಚೀನಾ ನಡುವಣ ವಾಣಿಜ್ಯ ಬಿಕ್ಕಟ್ಟು, ಲೋಕಸಭೆ ಚುನಾವಣೆ ಫಲಿತಾಂಶ ಮತ್ತಿತರ ಸಂಗತಿಗಳು ಷೇರುಮಾರುಕಟ್ಟೆ ಮೇಲೆ ಈ ವಾರವೂ ಪ್ರಭಾವ ಬೀರಲಿವೆ. ನಿಶ್ಚಿತ ಸರಕಾರ ರಚನೆಯಾಗುವ ತನಕ ಷೇರುಪೇಟೆಯಲ್ಲಿ ದೇಶೀಯವಾಗಿ ನಕಾರಾತ್ಮಕ ಪ್ರಭಾವ ಇದ್ದೇ ಇರುತ್ತದೆ ಎಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದಾರೆ.

ವಾರದ ಮುನ್ನೋಟ: ಈ ವಾರ ಮಾರುಕಟ್ಟೆ ಮೇಲೆ ಪ್ರಭಾವ ಬೀರುವ ಅರ್ಧ ಡಜನ್‌ ಅಂಶಗಳು

1. ಚುನಾವಣೆ ರಾಜಕಾರಣ: 7 ಹಂತಗಳ ಲೋಕಸಭೆ ಚುನಾವಣೆ ಪ್ರಕ್ರಿಯೆ ಮೇ 23ರ ಫಲಿತಾಂಶದ ಮೂಲಕ ಅಂತ್ಯವಾಗಲಿದೆ. ಅಲ್ಲಿಯ ತನಕ ಷೇರುಮಾರುಕಟ್ಟೆಯಲ್ಲಿ ಕರಡಿ ಕುಣಿತ ಮುಂದುವರಿಯುತ್ತದೆ ಎನ್ನುವುದು ದಲಾಲ್‌ ಸ್ಟ್ರೀಟ್‌ ವಿಶ್ಲೇಷಕರ ಅಭಿಪ್ರಾಯ.

2. ವಾಣಿಜ್ಯ ಸಮರ: ಅಮೆರಿಕ ದೇಶವು 200 ಶತಕೋಟಿ ಡಾಲರ್‌ ಮೌಲ್ಯದ ಚೀನಾ ಸರಕುಗಳ ಮೇಲೆ ಸುಂಕವನ್ನು ವಿಧಿಸಿದ್ದು, ಚೀನಾ ಪ್ರತೀಕಾರ ಮತ್ತು ಸಮನ್ವಯದ ಮಾರ್ಗಗಳನ್ನು ಆಲೋಚಿಸುತ್ತಿದೆ. ಉಭಯ ದೇಶಗಳು ಸಕಾರಾತ್ಮಕ ನಿಲುವುಗಳನ್ನು ಜಾರಿಗೊಳಿಸಿದರೆ ಮಾತ್ರ, ವಿಶ್ವದ ಮಾರುಕಟ್ಟೆ ಮೇಲೆ ಸಕಾರಾತ್ಮಕ ಪ್ರಭಾವ ಉಂಟಾಗುತ್ತದೆ.

3. ಹಣದುಬ್ಬರದ ಕತೆ
: ಏಪ್ರಿಲ್‌ ತಿಂಗಳ ರೀಟೇಲ್‌ ಹಣದುಬ್ಬರದ ಅಂಕಿಅಂಶಗಳು ಸೋಮವಾರ, ಸಗಟು ಹಣದುಬ್ಬರದ ವಿವರಗಳು ಮಂಗಳವಾರ ಬಿಡುಗಡೆಯಾಗುತ್ತವೆ. ''ಆರ್‌ಬಿಐನ ಅಂದಾಜಿನಲ್ಲಿಯೇ ಹಣದುಬ್ಬರ ಇರಲಿದ್ದು, ಜೂನ್‌ನಲ್ಲಿ ರೆಪೊ ದರ ಮತ್ತೆ ಶೇ.0.25 ಇಳಿಕೆಯಾಗಬಹುದು,'' ಎನ್ನುವ ನಿರೀಕ್ಷೆಯನ್ನು ಮಾರುಕಟ್ಟೆ ಪ್ರಮುಖರು ಹೊಂದಿದ್ದಾರೆ.

4. ಮಾರ್ಚ್‌ ತ್ರೈಮಾಸಿಕದ ಫಲಿತಾಂಶ: ಎಚ್‌ಡಿಎಫ್‌ಡಿ, ವೊಡಾಫೋನ್‌ ಐಡಿಯಾ, ಐಟಿಸಿ, ಲುಪಿನ್‌, ಬಜಾಜ್‌ ಫಿನ್‌ಸರ್ವ್‌, ಬಜಾಜ್‌ ಫೈನಾನ್ಸ್‌, ಬಜಾಜ್‌ ಆಟೊ ಸೇರಿದಂತೆ ಪ್ರಮುಖ ಕಂಪನಿಗಳ ಮಾರ್ಚ್‌ ತ್ರೈಮಾಸಿಕದ ಫಲಿತಾಂಶವು ಈ ವಾರ ಬಿಡುಗಡೆಯಾಗಲಿದೆ.

5. ಕಚ್ಚಾ ತೈಲದ ದರ: ಕಚ್ಚಾ ತೈಲದ ದರವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರಲ್‌ಗೆ 70 ಡಾಲರ್‌ ಮೀರಬಹುದು. ಈ ವರ್ಷ ಶೇ.30ರಷ್ಟು ದರ ಏರಿಕೆಯಾಗಬಹುದು ಎನ್ನುವುದು ರಾಯ್ಟರ್ಸ್‌ ಅಂದಾಜು. ಕಳೆದ ಶುಕ್ರವಾರ ತೈಲವು ಶೇ.0.4 ಏರಿಕೆಯಾಗಿದ್ದರೂ, ಒಟ್ಟಾರೆ ವಾರದಲ್ಲಿ ಶೆ.0.3ರಷ್ಟು ಇಳಿಕೆಯಾಗಿದೆ.

6. ವಿದೇಶಿ ಸಾಂಸ್ಥಿಕ ಹೂಡಿಕೆ: ವಿದೇಶಿ ಸಾಂಸ್ಥಿಕ ಹೂಡಿಕೆದಾರರು 1,245 ಕೋಟಿ ರೂ. ಮೌಲ್ಯದ ದೇಶೀಯ ಷೇರುಗಳನ್ನು ಶುಕ್ರವಾರ ಮಾರಾಟ ಮಾಡಿದ್ದಾರೆ. ಅಮೆರಿಕ-ಚೀನಾದ ವಾಣಿಜ್ಯ ಸಮರವು ಹೂಡಿಕೆದಾರರ ಮೇಲೆ ಒತ್ತಡ ತಂದಿದ್ದು, ಆತಂಕವು ಈ ವಾರವೂ ಮುಂದುವರಿಯಲಿದೆ. ವಿದೇಶಿ ಹಣದ ಹೊರ ಹರಿವು ಹೆಚ್ಚಿದರೆ ಮುಂದಿನ ದಿನಗಳಲ್ಲಿ ಮಾರುಕಟ್ಟೆ ಇನ್ನಷ್ಟು ಕುಸಿಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ