ಆ್ಯಪ್ನಗರ

ಅದಾನಿ ಬುಟ್ಟಿಗೆ ಮತ್ತೊಂದು ಗುತ್ತಿಗೆ, ದೇಶದ ಬೃಹತ್‌ ವಿದ್ಯುತ್‌ ಕಂಪನಿಗೆ ಕಲ್ಲಿದ್ದಲು ಪೂರೈಸಲಿದೆ ಸಂಸ್ಥೆ!

ಸಾರ್ವಜನಿಕ ವಲಯದ ವಿದ್ಯುತ್‌ ಉತ್ಪಾದಕ ಕಂಪನಿ ಎನ್‌ಟಿಪಿಸಿ ಲಿಮಿಟೆಡ್‌ಗೆ 10 ಲಕ್ಷ ಟನ್‌ ಕಲ್ಲಿದ್ದಲು ಪೂರೈಸುವ ಗುತ್ತಿಗೆ ಅದಾನಿ ಗ್ರೂಪ್‌ ಪಾಲಾಗಿದೆ. ಅದಾನಿ ಎಂಟರ್‌ಪ್ರೈಸಸ್‌ ವಿದೇಶದಿಂದ ಕಲ್ಲಿದ್ದಲನ್ನು ಆಮದು ಮಾಡಿಕೊಂಡು ಅದನ್ನು ಎನ್‌ಟಿಪಿಸಿಗೆ ಪೂರೈಕೆ ಮಾಡಲಿದೆ.

Agencies 6 Jan 2022, 12:17 am
ಹೊಸದಿಲ್ಲಿ: ಏಷ್ಯಾದ ಅತೀ ಶ್ರೀಮಂತ ವ್ಯಕ್ತಿ, ಉದ್ಯಮಿ ಗೌತಮ್‌ ಅದಾನಿ ಒಡೆತನದ ಅದಾನಿ ಗ್ರೂಪ್‌ ಸರಕಾರಿ ಸ್ವಾಮ್ಯದ ವಿದ್ಯುತ್‌ ಉತ್ಪಾದಕ ಕಂಪನಿಯೊಂದಕ್ಕೆ ಭಾರೀ ಪ್ರಮಾಣದಲ್ಲಿ ಕಲ್ಲಿದ್ದಲನ್ನು ಆಮದು ಮಾಡಿಕೊಂಡು ಪೂರೈಕೆ ಮಾಡುವ ಗುತ್ತಿಗೆಯನ್ನು ಟೆಂಡರ್‌ನಲ್ಲಿ ಗೆದ್ದುಕೊಂಡಿದೆ.
Vijaya Karnataka Web Industrialist Gautam Adani


ಅದಾನಿ ಎಂಟರ್‌ಪ್ರೈಸಸ್‌ ಲಿ. 10 ಲಕ್ಷ ಟನ್‌ ಕಲ್ಲಿದ್ದಲನ್ನು ಸಾರ್ವಜನಿಕ ವಲಯದ ವಿದ್ಯುತ್‌ ಉತ್ಪಾದಕ ಕಂಪನಿಯಾದ ಎನ್‌ಟಿಪಿಸಿ ಲಿಮಿಟೆಡ್‌ಗೆ ಪೂರೈಸಲಿದೆ. ಅದಾನಿ ಎಂಟರ್‌ಪ್ರೈಸಸ್‌ ದೇಶಕ್ಕೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲನ್ನು ತರಿಸಿಕೊಳ್ಳುವ ವ್ಯಾಪಾರಿ ಕಂಪನಿಯಾಗಿದೆ.

ಕಳೆದ ಅಕ್ಟೋಬರ್‌ನಲ್ಲಿ ಎನ್‌ಟಿಪಿಸಿ ಕಳೆದ 2 ವರ್ಷಗಳಲ್ಲೇ ಮೊದಲ ಬಾರಿಗೆ ಕಲ್ಲಿದ್ದಲು ಆಮದಿಗೆ ಟೆಂಡರ್‌ ಕರೆದಿತ್ತು. ಇದನ್ನು ಅದಾನಿ ಗ್ರೂಪ್‌ ಗೆದ್ದುಕೊಂಡಿದೆ. ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಬೇಡಿಕೆಗೆ ಇದು ಅನುಕೂಲ ಮಾಡಿಕೊಡಲಿದೆ ಎಂದು ವರದಿಯಾಗಿದೆ. ಈ ಬಗ್ಗೆ ಅದಾನಿ, ಎನ್‌ಟಿಪಿಸಿ ಇದುವರೆಗೆ ಪ್ರತಿಕ್ರಿಯಿಸಿಲ್ಲ.

ಮುಕೇಶ್‌ ಅಂಬಾನಿಯನ್ನು ಹಿಂದಿಕ್ಕಿದ ಗೌತಮ್‌ ಅದಾನಿ ಈಗ ಏಷ್ಯಾದ ಶ್ರೀಮಂತ ವ್ಯಕ್ತಿ!
2021ರ ದ್ವಿತೀಯಾರ್ಧದಲ್ಲಿ ಕಲ್ಲಿದ್ದಲು ಕೊರತೆಯಿಂದ ವಿದ್ಯುತ್‌ ಉತ್ಪಾದನೆಗೆ ತೀವ್ರ ಸಮಸ್ಯೆ ಉಂಟಾಗಿತ್ತು. ಪಳೆಯುಳಿಕೆ ಮೂಲದ ಇಂಧನದ ಮೇಲಿನ ಅವಲಂಬನೆಯನ್ನು ತಗ್ಗಿಸುವ ಗುರಿಯನ್ನು ಸರಕಾರ ಹೊಂದಿದ್ದರೂ, ಸದ್ಯಕ್ಕೆ ಆಮದು ಅನಿವಾರ್ಯವಾಗಿದೆ. ದೇಶದ ಶೇಕಡಾ 70ರಷ್ಟು ವಿದ್ಯುತ್‌ ಉತ್ಪಾದನೆಗೆ ಇಂದಿಗೂ ಕಲ್ಲಿದ್ದಲೇ ಆಧಾರವಾಗಿದ್ದು, ಆಮದು ಅನಿವಾರ್ಯವಾಗಿದೆ.

ಗೌತಮ್‌ ಅದಾನಿ ದಿನ ಗಳಿಕೆ 1002 ಕೋಟಿ ರೂ., ಏಷ್ಯಾದ 2ನೇ ಅತಿ ದೊಡ್ಡ ಕುಬೇರ
ಅದಾನಿ ಗ್ರೂಪ್‌ ಆಸ್ಪ್ರೇಲಿಯಾದ ವಿವಾದಿತ ಕಾರ್ಮೈಕಲ್‌ ಕಲ್ಲಿದ್ದಲು ಗಣಿಯಿಂದ ಇತ್ತೀಚೆಗೆ ಮೊದಲ ಬಾರಿಗೆ ಕಲ್ಲಿದ್ದಲನ್ನು ಹೊರತೆಗೆದು ರಫ್ತು ಆರಂಭಿಸಿತ್ತು. ಇದು ಭಾರತಕ್ಕೇ ರವಾನೆಯಾಗಿತ್ತು. ಇದೀಗ ಬಹುಶಃ ಅಲ್ಲಿಂದಲೇ ಮತ್ತೊಮ್ಮೆ ಕಲ್ಲಿದ್ದಲನ್ನು ದೇಶಕ್ಕೆ ಆಮದು ಮಾಡಿಕೊಳ್ಳುವ ಸಾಧ್ಯತೆ ಇದೆ.

ಇನ್ನೊಂದೆಡೆ ಕೊಲ್ಕೊತ್ತಾ ಮೂಲದ ದಾಮೋದರ್‌ ವ್ಯಾಲೆ ಕಾರ್ಪ್‌ ಲಿ. ಕೂಡ ಅದಾನಿ ಗ್ರೂಪ್‌ ಮೂಲಕವೇ ಕಲ್ಲಿದ್ದಲು ಆಮದು ಮಾಡಿಕೊಳ್ಳುವ ಸಂಬಂಧ ಚಿಂತನೆ ನಡೆಸುತ್ತಿದೆ. ಇದೂ ಕೂಡ ಸರಕಾರಿ ಸ್ವಾಮ್ಯದ ಕಂಪನಿ ಎಂಬುದು ವಿಶೇಷ. ಈ ಕಂಪನಿಯೂ 10 ಲಕ್ಷ ಟನ್‌ ಕಲ್ಲಿದ್ದಲನ್ನು ಅದಾನಿ ಗ್ರೂಪ್‌ ಮೂಲಕ ಆಮದು ಮಾಡಿಕೊಳ್ಳಲು ಮುಂದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ