ಆ್ಯಪ್ನಗರ

ಅಡುಗೆ ಎಣ್ಣೆ ಬೆಲೆಯನ್ನು ಲೀಟರ್‌ಗೆ 10 ರೂ. ಕಡಿತಗೊಳಿಸಿದ ಅದಾನಿ ವಿಲ್ಮಾರ್‌

ಅದಾನಿ ವಿಲ್ಮಾರ್ ತನ್ನ ಫಾರ್ಚೂನ್ ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯ 1 ಲೀಟರ್ ಪ್ಯಾಕ್‌ನ ಗರಿಷ್ಠ ಮಾರಾಟ ದರವನ್ನು 220 ರೂ.ನಿಂದ 210 ರೂ.ಗೆ ಇಳಿಕೆ ಮಾಡಿದೆ. ಫಾರ್ಚ್ಯೂನ್ ಸೋಯಾಬೀನ್, ಫಾರ್ಚೂನ್ ಸಾಸಿವೆ ಎಣ್ಣೆಗಳ 1 ಲೀಟರ್ ಪ್ಯಾಕ್‌ನ ಎಂಆರ್‌ಪಿ ದರವನ್ನು 205 ರೂ.ನಿಂದ 195 ರೂ.ಗೆ ಇಳಿಕೆ ಮಾಡಿದೆ.

THE ECONOMIC TIMES 18 Jun 2022, 5:42 pm
ದೇಶದ ಅತಿದೊಡ್ಡ ಖಾದ್ಯ ತೈಲ ಕಂಪನಿಯಾದ ಅದಾನಿ ವಿಲ್ಮಾರ್ ಅಡುಗೆ ಎಣ್ಣೆ ಬೆಲೆಗಳನ್ನು ಲೀಟರ್‌ಗೆ 10 ರೂ.ನಷ್ಟು ಕಡಿತಗೊಳಿಸಿದೆ. ಖಾದ್ಯ ತೈಲ ಬೆಲೆಗಳನ್ನು ಕಡಿಮೆ ಮಾಡಲು ಕೇಂದ್ರ ಸರಕಾರ ಆಮದು ಸುಂಕವನ್ನು ಕಡಿತಗೊಳಿಸಿತ್ತು. ಸರ್ಕಾರದ ಪ್ರಯತ್ನಗಳ ಮುಂದುವರಿಕೆಯಾಗಿ ಇದೀಗ ಕಂಪನಿ ಪ್ರಯೋಜನಗಳನ್ನು ಗ್ರಾಹಕರಿಗೆ ವರ್ಗಾಯಿಸಲು ಆರಂಭಿಸಿದೆ.
Vijaya Karnataka Web Cooking Oil Price


ಅದಾನಿ ವಿಲ್ಮಾರ್‌ ತನ್ನ ಫಾರ್ಚೂನ್ ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯ 1 ಲೀಟರ್ ಪ್ಯಾಕ್‌ನ ಗರಿಷ್ಠ ಮಾರಾಟ ದರ (ಎಂಆರ್‌ಪಿ) ಅನ್ನು 220 ರೂ.ನಿಂದ 210 ರೂ.ಗೆ ಇಳಿಕೆ ಮಾಡಿದೆ. ಫಾರ್ಚ್ಯೂನ್ ಸೋಯಾಬೀನ್ ಮತ್ತು ಫಾರ್ಚೂನ್ ಕಚಿ ಘನಿ (ಸಾಸಿವೆ ಎಣ್ಣೆ) ತೈಲಗಳ 1-ಲೀಟರ್ ಪ್ಯಾಕ್‌ನ ಎಂಆರ್‌ಪಿ ದರವನ್ನು 205 ರೂ.ನಿಂದ 195 ರೂ.ಗೆ ಇಳಿಕೆ ಮಾಡಿದೆ. ಹೊಸ ಬೆಲೆಗಳೊಂದಿಗೆ ಅಡುಗೆ ಎಣ್ಣೆ ಪ್ಯಾಕ್‌ಗಳು ಶೀಘ್ರದಲ್ಲೇ ಮಾರುಕಟ್ಟೆ ತಲುಪಲಿವೆ.

ಕೇಂದ್ರ ಸರ್ಕಾರವು ಖಾದ್ಯ ತೈಲಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಿ, ಅವುಗಳನ್ನು ಅಗ್ಗವಾಗಿಸಿದ ಹಿನ್ನೆಲೆಯಲ್ಲಿ ತೈಲ ಬೆಲೆಯಲ್ಲಿ ಇಳಿಕೆಯಾಗುತ್ತಿದೆ.

"ನಾವು ಕಡಿಮೆ ವೆಚ್ಚದ ಲಾಭವನ್ನು ನಮ್ಮ ಗ್ರಾಹಕರಿಗೆ ವರ್ಗಾಯಿಸುತ್ತಿದ್ದೇವೆ. ಕಡಿಮೆ ಬೆಲೆಗಳು ಬೇಡಿಕೆಯನ್ನು ಹೆಚ್ಚಿಸುತ್ತವೆ ಎಂದು ನಮಗೆ ವಿಶ್ವಾಸವಿದೆ,” ಎಂದು ಅದಾನಿ ವಿಲ್ಮಾರ್‌ನ ಎಂಡಿ ಮತ್ತು ಸಿಇಒ ಆಂಗ್ಶು ಮಲ್ಲಿಕ್ ಹೇಳಿದ್ದಾರೆ.

ಬ್ರ್ಯಾಂಡೆಡ್‌ ಅಡುಗೆ ಎಣ್ಣೆ ದರದಲ್ಲಿ ಭಾರೀ ಇಳಿಕೆ, ಯಾವ ತೈಲ ಎಷ್ಟು ಅಗ್ಗ?
ತೈಲಬೀಜಗಳ ಕಡಿಮೆ ಉತ್ಪಾದನೆ ಮತ್ತು ಹೆಚ್ಚಿನ ಉತ್ಪಾದನಾ ಹಾಗೂ ಲಾಜಿಸ್ಟಿಕ್ಸ್ ವೆಚ್ಚದಿಂದಾಗಿ 2021-22ರ ಅವಧಿಯಲ್ಲಿ ಖಾದ್ಯ ತೈಲಗಳ ಅಂತಾರಾಷ್ಟ್ರೀಯ ಮತ್ತು ದೇಶೀಯ ಬೆಲೆಗಳು ಏರಿಕೆಯಾಗಿರುವುದನ್ನು ಗಮನಿಸಬಹುದು. ಆದಾಗ್ಯೂ, ಕಚ್ಚಾ ಮತ್ತು ಸಂಸ್ಕರಿಸಿದ ಖಾದ್ಯ ತೈಲಗಳ ಮೇಲಿನ ಆಮದು ಸುಂಕವನ್ನು ಕೇಂದ್ರ ಸರಕಾರ ಕಡಿತಗೊಳಿಸಿರುವುದು ಬೆಲೆಗಳು ಇದೀಗ ಇಳಿಕೆಯಾಗುತ್ತಿವೆ.

ಅದಾನಿ ವಿಲ್ಮಾರ್ ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಎಫ್‌ಎಂಸಿಜಿ ಕಂಪನಿಗಳಲ್ಲಿ ಒಂದಾಗಿದೆ. ಖಾದ್ಯ ತೈಲಗಳ ಶ್ರೇಣಿಯ ಜೊತೆಗೆ, ಅಕ್ಕಿ, ಗೋಧಿ ಹಿಟ್ಟು, ಸಕ್ಕರೆ, ಕಡಲೆ ಹಿಟ್ಟು, ರೆಡಿಟು ಕುಕ್‌ ಖಿಚಡಿ, ಸೋಯಾ ಚಂಕ್ಸ್‌ ಮತ್ತು ಇತರ ಉತ್ಪನ್ನಗಳನ್ನು ಕಂಪನಿ ಮಾರಾಟ ಮಾಡುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ