ಹೊಸದಿಲ್ಲಿ: ಅನೇಕ ವರ್ಷಗಳ ನಂತರ ಇದೇ ಮೊದಲ ಬಾರಿಗೆ ಈ ವರ್ಷ ಏರ್ ಇಂಡಿಯಾ ಕಾರ್ಯಾಚರಣೆ ನಷ್ಟವನ್ನು ಅನುಭವಿಸಿಲ್ಲ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಣಪತಿ ರಾಜು ಹೇಳಿದ್ದಾರೆ.
''ಇಂಡಿಯನ್ ಏರ್ಲೈನ್ಸ್ ಜತೆ ಸರಕಾರಿ ಒಡೆತನದ ಏರ್ ಇಂಡಿಯಾವನ್ನು ವಿಲೀನಗೊಳಿಸಿದ ನಂತರ, ಅದರ ಆರ್ಥಿಕ ಸ್ಥಿತಿ ಹೇಗಿದೆ?'' ಎನ್ನುವ ಸಂಸದರ ಪ್ರಶ್ನೆಗೆ, ರಾಜ್ಯಸಭೆಯಲ್ಲಿ ಸಚಿವರು ಉತ್ತರಿಸಿದರು.
''ಏರ್ ಇಂಡಿಯಾ ಆರ್ಥಿಕ ಸ್ಥಿತಿ ಚಿಂತಾಜನಕವಾಗಿ ಮುಂದುವರಿದಿದ್ದರೂ, ಈ ವರ್ಷ ಕಾರ್ಯಾಚರಣೆ ನಷ್ಟ ಅನುಭವಿಸಿಲ್ಲ. ಅಂದರೆ ಸರಿಯಾದ ದಾರಿಯಲ್ಲಿ ಎಲ್ಲವೂ ಸಾಗುತ್ತಿದೆ ಎಂದರ್ಥ. ಪ್ರಯತ್ನಗಳನ್ನು ಇನ್ನೂ ಮುಂದುವರಿಸಿದರೆ, ನಮ್ಮೆಲ್ಲರ ಹೆಮ್ಮೆಯ ವಿಮಾನಯಾನ ಸಂಸ್ಥೆಯಾಗಿ ಇದು ರೂಪುಗೊಳ್ಳಲಿದೆ,'' ಎಂದು ರಾಜು ವಿವರಿಸಿದರು.
ಏರ್ ಇಂಡಿಯಾವನ್ನು ಅಭಿವೃದ್ಧಿಪಡಿಸಲು ಸರಕಾರ ನಾನಾ ಪ್ರಯತ್ನಗಳನ್ನು ನಡೆಸಿದೆ. ಕಳೆದ ವರ್ಷ 265 ಪೈಲಟ್ಗಳನ್ನು ನೇಮಕ ಮಾಡಿದೆ. ಪ್ರಯಾಣಿಕರನ್ನು ಸೆಳೆಯುವ ನಿಟ್ಟಿನಲ್ಲಿ ವಿಮಾನದಲ್ಲಿ ಪೂರೈಸುವ ಆಹಾರ ವ್ಯವಸ್ಥೆಯನ್ನೂ ಸುಧಾರಿಸಿದೆ.