ಆ್ಯಪ್ನಗರ

ರೈಲ್ವೆಯಲ್ಲಿ ಕೆಲಸದ ಒತ್ತಡ, 9 ತಿಂಗಳಲ್ಲಿ 77 ಹಿರಿಯ ಅಧಿಕಾರಿಗಳ ರಾಜೀನಾಮೆ!

ಭಾರತೀಯ ರೈಲ್ವೆಯಲ್ಲಿ ಹೆಚ್ಚುತ್ತಿರುವ ಕಾರ್ಯಕ್ಷಮತೆಯ ಒತ್ತಡಗಳ ನಡುವೆ ಕಳೆದ ಒಂಬತ್ತು ತಿಂಗಳುಗಳಲ್ಲಿ ಇಬ್ಬರು ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಸೇರಿದಂತೆ 77 ಹಿರಿಯ ಅಧಿಕಾರಿಗಳು ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದಾರೆ.

THE ECONOMIC TIMES 14 Apr 2022, 3:17 pm
ಕಳೆದ ಒಂಬತ್ತು ತಿಂಗಳುಗಳಲ್ಲಿ ಇಬ್ಬರು ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಸೇರಿದಂತೆ ರೈಲ್ವೆಯ 77 ಹಿರಿಯ ಅಧಿಕಾರಿಗಳು ಕಾರ್ಯಕ್ಷಮತೆಗಾಗಿ ಹೆಚ್ಚುತ್ತಿರುವ ಒತ್ತಡಗಳ ನಡುವೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದು ಯಾವುದೇ ಹಣಕಾಸು ವರ್ಷದಲ್ಲಿ ರೈಲ್ವೆಯಲ್ಲಿನ ಹಿರಿಯ ಅಧಿಕಾರಿಗಳ ಗರಿಷ್ಠ ‘ವಿಆರ್‌ಎಸ್’ (ಸ್ವಯಂ ನಿವೃತ್ತಿ) ಆಗಿದೆ ಎಂದು ಮೂಲಗಳು ತಿಳಿಸಿವೆ.
Vijaya Karnataka Web Union Railways Minister Ashwini Vaishnaw


ಜುಲೈನಲ್ಲಿ ರೈಲ್ವೇ ಸಚಿವರಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಅಶ್ವಿನಿ ವೈಷ್ಣವ್ ಅವರು ‘ಕಾರ್ಯನಿರ್ವಹಿಸಿ ಅಥವಾ ಕೆಲಸ ತೊರೆಯಿರಿ’ ಎಂದು ಅಧಿಕಾರಿಗಳಿಗೆ ಕಟ್ಟಪ್ಪಣೆ ಹೊರಡಿಸಿದ್ದರು. “ಕಾರ್ಯನಿರ್ವಹಣೆ ಮಾಡದ ಮತ್ತು ಭ್ರಷ್ಟಾಚಾರಕ್ಕೆ ಕೈ ಹಾಕುವ ಅಧಿಕಾರಿಗಳಿಗೆ ಸ್ಥಾನವಿಲ್ಲ ಎಂದು ಸಚಿವರು ಒತ್ತಿ ಹೇಳಿದ್ದರು. ಇಂತಹ ಅಧಿಕಾರಿಗಳು ಒಂದೋ ವಿಆರ್‌ಎಸ್ ತೆಗೆದುಕೊಳ್ಳಲಿ ಅಥವಾ ಅಂತಹವರಿಗೆ ನಿರ್ಗಮನ ಬಾಗಿಲು ತೋರಿಸಲಾಗುತ್ತದೆ ಎಂದು ಸಚಿವರು ಎಚ್ಚರಿಕೆ ನೀಡಿದ್ದರು. ಸಕಾರಾತ್ಮಕ ಧೋರಣೆ ಹೊಂದಿರುವವರು ಮತ್ತು ಸಾಧನೆ ಮಾಡಲು ಸಿದ್ಧರಿರುವವರನ್ನೂ ಗುರುತಿಸಲಾಗುತ್ತದೆ ಎಂದಿದ್ದರು," ಎಂಬುದಾಗಿ ಹಿರಿಯ ರೈಲ್ವೇ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವರ್ಷದ ಜನವರಿಯಲ್ಲಿ ಗರಿಷ್ಠ 11 ಅಧಿಕಾರಿಗಳು ರೈಲ್ವೆಗೆ ರಾಜೀನಾಮೆ ನೀಡಿರುವ ಸಂಗತಿ 'ಟೈಮ್ಸ್‌ ಆಫ್‌ ಇಂಡಿಯಾ'ಗೆ ತಿಳಿದು ಬಂದಿದೆ.

ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿರುವ ರೈಲ್ವೇಯಲ್ಲಿನ ಹಿರಿಯ ಇಂಜಿನಿಯರ್‌ಗಳು ಕಾರ್ಯನಿರ್ವಹಿಸಲು ಒತ್ತಡ ಹೆಚ್ಚಿದೆ ಮತ್ತು ಸಚಿವಾಲಯವು ಕಠಿಣ ಗುರಿಗಳನ್ನು ನಿಗದಿಪಡಿಸಿದೆ ಎಂದು ಒಪ್ಪಿಕೊಂಡಿದ್ದಾರೆ. “ರೈಲ್ವೆಯಲ್ಲಿ ಉನ್ನತ ಮಟ್ಟದ ತೀವ್ರ ನಿಗಾದಿಂದಾಗಿ ಕಳೆದ ಕೆಲವು ತಿಂಗಳುಗಳಲ್ಲಿ ಸಂಗತಿಗಳು ಬಹಳಷ್ಟು ಬದಲಾಗಿವೆ. ಕೆಲವರು ಬಡ್ತಿ ಸಿಗಲಿಲ್ಲ ಎಂದು ಭಾವಿಸಿಯೂ ವಿಆರ್‌ಎಸ್ ತೆಗೆದುಕೊಂಡಿದ್ದಾರೆ. ಒಂದು ಪ್ರಕರಣದಲ್ಲಿ ಸಚಿವರು ಅಧಿಕಾರಿಯೊಬ್ಬರಿಗೆ ರಾಜೀನಾಮೆ ನೀಡುವಂತೆ ಹೇಳಿದ್ದರು ಮತ್ತು ಅವರು ದೀರ್ಘ ರಜೆಯ ಮೇಲೆ ತೆರಳಿದ್ದರು,” ಎಂದು ಅಧಿಕಾರಿಯೊಬ್ಬರು ಒಳಗಿನ ಮಾಹಿತಿಗಳನ್ನು ಇಂಚಿಂಚಾಗಿ ಬಿಚ್ಚಿಟ್ಟಿದ್ದಾರೆ.

ಕೆಲಸ ಮಾಡದ ಅಧಿಕಾರಿಗಳು ಇತ್ತೀಚಿನ ವರ್ಷಗಳಲ್ಲಿ ಟೀಕೆಗೆ ಗುರಿಯಾಗುತ್ತಿದ್ದಾರೆ. ಹಲವಾರು ಸಂದರ್ಭಗಳಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಇಂತಹ ಅಧಿಕಾರಿಗಳಿಗೆ ನೀವು ಕೆಲಸವನ್ನು ಸ್ಥಗಿತಗೊಳಿಸುವ ಬದಲು ರಾಜೀನಾಮೆ ನೀಡಿ ಮನೆಗೆ ಹೋಗಿ ಎಂದು ಹೇಳಿದ್ದೂ ಇದೆ.

ಸಂಸತ್ತಿನಲ್ಲಿ ಬಜೆಟ್ ಮಂಡಿಸಿದ ಕೂಡಲೇ ವೈಷ್ಣವ್ ಅವರು ಎಲ್ಲಾ ಜನರಲ್ ಮ್ಯಾನೇಜರ್‌ಗಳು (ಜಿಎಂಗಳು) ಮತ್ತು ನಿರ್ಮಾಣ ಯೋಜನೆಗಳ ಜವಾಬ್ದಾರಿ ಹೊತ್ತಿರುವ ಮುಖ್ಯ ಆಡಳಿತ ಅಧಿಕಾರಿಗಳಿಗೆ ಏ. 1 ರಿಂದ ಬಿಡ್‌ಗಳನ್ನು ಆಹ್ವಾನಿಸಲು ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದ್ದರು. ಈ ಮೂಲಕ ನಿಧಾನಗತಿಯ ರೈಲ್ವೆಯಲ್ಲಿ ವೇಗಕ್ಕೆ ಮಣೆ ಹಾಕಿದ್ದರು. ಆದರೆ ಇದಕ್ಕೆ ಹೊಂದಿಕೊಳ್ಳಲಾಗದೆ ಹಲವರು ಕೆಲಸವನ್ನೇ ತೊರೆಯುತ್ತಿದ್ದಾರೆ.

ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ 'ಎಕನಾಮಿಕ್ ಟೈಮ್ಸ್' ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ