ಆ್ಯಪ್ನಗರ

ಏಪ್ರಿಲ್‌ನಲ್ಲಿ 4.74 ಕೋಟಿ ರೈತರಿಗೆ ಎರಡನೇ ಕಂತಾಗಿ 2,000 ರೂ. ವಿತರಣೆ

4.74 ಕೋಟಿ ರೈತರ ಪೈಕಿ 2.74 ಕೋಟಿ ರೈತರು ಈಗಾಗಲೇ ಮೊದಲ ಕಂತನ್ನು ಸ್ವೀಕರಿಸಿದ್ದು, ಉಳಿದವರು ಮಾರ್ಚ್‌ ಅಂತ್ಯದೊಳಗೆ ಹಣ ಸ್ವೀಕರಿಸಲಿದ್ದಾರೆ.

Vijaya Karnataka 24 Mar 2019, 2:16 pm
ಹೊಸದಿಲ್ಲಿ: ರೈತರಿಗೆ ವಾರ್ಷಿಕ 6,000 ರೂ. ಆರ್ಥಿಕ ನೆರವು ನೀಡುವ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯ 2ನೇ ಕಂತನ್ನು ಕೇಂದ್ರ ಸರಕಾರವು ಮುಂದಿನ ತಿಂಗಳು ವಿತರಿಸಲಿದೆ. ಏಪ್ರಿಲ್‌ನಲ್ಲಿ ಸುಮಾರು 4.74 ಕೋಟಿ ಸಣ್ಣ ಮತ್ತು ಮಧ್ಯಮ ರೈತರಿಗೆ ಎರಡನೇ ಕಂತಿನಲ್ಲಿ ತಲಾ 2,000 ರೂ. ವಿತರಣೆಯಾಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
Vijaya Karnataka Web Cash


4.74 ಕೋಟಿ ರೈತರ ಪೈಕಿ 2.74 ಕೋಟಿ ರೈತರು ಈಗಾಗಲೇ ಮೊದಲ ಕಂತನ್ನು ಸ್ವೀಕರಿಸಿದ್ದು, ಉಳಿದವರು ಮಾರ್ಚ್‌ ಅಂತ್ಯದೊಳಗೆ ಹಣ ಸ್ವೀಕರಿಸಲಿದ್ದಾರೆ. ಎರಡನೇ ಕಂತನ್ನು ಏಪ್ರಿಲ್‌ನಲ್ಲಿ ಪಡೆಯಲಿದ್ದಾರೆ. ಏ.1ರಿಂದಲೇ ಕಂತು ವಿತರಣೆ ಪ್ರಕ್ರಿಯೆ ಆರಂಭವಾಗಲಿದೆ. ಮಾ.10ರಂದು ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಅದಕ್ಕೂ ಮುನ್ನವೇ ಕಿಸಾನ್‌ ಸಮ್ಮಾನ್‌ ಯೋಜನೆಗೆ ನೋಂದಣಿ ಮಾಡಿಸಿದ್ದ ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ಎರಡನೇ ಕಂತು ಜಮೆಯಾಗಲಿದೆ. ಈ ರೈತರಿಗೆ ಮೊದಲ ಮತ್ತು ಎರಡನೇ ಕಂತನ್ನು ಪಾವತಿಸಲು ಕೇಂದ್ರ ಕೃಷಿ ಸಚಿವಾಲಯಕ್ಕೆ ಚುನಾವಣಾ ಆಯೋಗವು ಅವಕಾಶ ನೀಡಿದೆ.

ಯೋಜನೆಗೆ ಫೆ.24ರಂದು ಉತ್ತರಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದು, 1.01 ಕೋಟಿ ರೈತರಿಗೆ 2,021 ಕೋಟಿ ರೂ.ಗಳನ್ನು ವಿತರಿಸಲಾಗಿತ್ತು.

ಮಧ್ಯಂತರ ಬಜೆಟ್‌ನಲ್ಲಿ 75,000 ಕೋಟಿ ರೂ.ಗಳ ಪಿಎಂ-ಕಿಸಾನ್‌ ಸಮ್ಮಾನ್‌ ಯೋಜನೆಯನ್ನು ಪ್ರಕಟಿಸಲಾಗಿತ್ತು. ಎರಡು ಹೆಕ್ಟೇರ್‌ವರೆಗೆ ಜಮೀನು ಹೊಂದಿರುವ ದೇಶದ ಸಣ್ಣ ಮತ್ತು ಮಧ್ಯವರ್ಗದ 12 ಕೋಟಿ ರೈತರಿಗೆ ಈ ಯೋಜನೆ ತಲುಪಿಸುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ. ಮೂರು ಕಂತುಗಳಲ್ಲಿ ವಾರ್ಷಿಕ 6,000 ರೂ.ಗಳನ್ನು ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ.

ದೇಶದ 12 ಕೋಟಿ ರೈತರಿಗೆ ತಲಾ ವಾರ್ಷಿಕ 6,000 ರೂ. ನೀಡುವ ಗುರಿಯನ್ನು ಕೇಂದ್ರ ಹೊಂದಿದೆ.

ಎರಡನೇ ಕಂತಲ್ಲಿ 4.74 ಕೋಟಿ ಫಲಾನುಭವಿಗಳನ್ನು ಗುರ್ತಿಸಲಾಗಿದ್ದು, ಎರಡನೇ ಕಂತು ವಿತರಣೆಯಾಗಲಿದೆ.

ಉತ್ತರ ಪ್ರದೇಶದಲ್ಲಿ 1 ಕೋಟಿ ರೈತರು ನೋಂದಣಿ. ಹೆಚ್ಚುವರಿಯಾಗಿ 66 ಲಕ್ಷ ರೈತರ ಮಾಹಿತಿ ಸಂಗ್ರಹ.

ಪಂಜಾಬ್‌ ಮತ್ತು ಹರಿಯಾಣಾದಲ್ಲಿ ಶೇ.80ರಷ್ಟು ಫಲಾನುಭವಿಗಳ ನೋಂದಣಿ.

ಪಶ್ಚಿಮ ಬಂಗಾಳ, ದಿಲ್ಲಿ, ಸಿಕ್ಕಿಂ ರಾಜ್ಯಗಳು ಅರ್ಹ ಫಲಾನುಭವಿಗಳ ಪಟ್ಟಿಯನ್ನು ನೀಡಿಲ್ಲ, ಹೀಗಾಗಿ ಹಣ ವರ್ಗಾವಣೆಯಾಗಿಲ್ಲ.

ಕರ್ನಾಟಕದಲ್ಲೂ ಆಮೆಗತಿಯಲ್ಲಿ ನೋಂದಣಿ ಪ್ರಕ್ರಿಯೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ