ಆ್ಯಪ್ನಗರ

ಬ್ಯಾಂಕ್‌ಗಳಲ್ಲಿ ಸಾಲ ವಸೂಲಾತಿ ಚುರುಕು: ಜೇಟ್ಲಿ

ಸಾರ್ವಜನಿಕ ಬ್ಯಾಂಕ್‌ಗಳು ಸಾಲ ಮರು ವಸೂಲಾತಿಯಲ್ಲಿ ಪ್ರಗತಿ ಸಾಧಿಸುತ್ತಿದ್ದು, ಕಳೆದ ಏಪ್ರಿಲ್‌-ಜೂನ್‌ ಅವಧಿಯಲ್ಲಿ 36,551 ಕೋಟಿ ರೂ.ಗಳನ್ನು ಮರು ವಸೂಲು ಮಾಡಿಕೊಳ್ಳುವಲ್ಲಿ ಸಫಲವಾಗಿವೆ.

Vijaya Karnataka Web 25 Sep 2018, 9:27 pm
ಹೊಸದಿಲ್ಲಿ: ವಂಚಕರು ಹಾಗೂ ಉದ್ದೇಶಪೂರ್ವಕವಾಗಿ ಸುಸ್ತಿಸಾಲಗಾರರಾಗಿರುವವರ ವಿರುದ್ಧ 'ಪರಿಣಾಮಕಾರಿ' ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಾರ್ವಜನಿಕ ಬ್ಯಾಂಕ್‌ಗಳಿಗೆ ಹಣಕಾಸು ಸಚಿವ ಅರುಣ್‌ ಜೇಟ್ಲಿ ಸೂಚಿಸಿದ್ದಾರೆ. ಹಾಗೆಯೇ ಪಿಎಸ್‌ಯು ಬ್ಯಾಂಕ್‌ಗಳಲ್ಲಿ ಸಾಲ ಮರು ವಸೂಲಾತಿ ಚುರುಕಾಗಿದ್ದು, ವಸೂಲಾಗದ ಸಾಲದ ಪ್ರಮಾಣ ಇಳಿಯತೊಡಗಿದೆ ಎಂದು ತಿಳಿಸಿದ್ದಾರೆ.
Vijaya Karnataka Web New Delhi: Finance Minister Arun Jaitley speaks during a press conference, in Ne...


ಸಾರ್ವಜನಿಕ ಬ್ಯಾಂಕ್‌ಗಳ ವಾರ್ಷಿಕ ಪರಾಮರ್ಶೆ ಸಭೆಯಲ್ಲಿ ಮಾತನಾಡಿದ ಅವರು, ಭಾರತ ಶೇ.8ರ ದರದಲ್ಲಿ ಜಿಡಿಪಿ ಬೆಳವಣಿಗೆ ದಾಖಲಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಒಂದು ಕಡೆ ಸಾಲ ಮರು ವಸೂಲಾತಿ ಪರಿಣಾಮಕಾರಿಯಾಗಿ ನಡೆಯಬೇಕು, ಮತ್ತೊಂದು ಕಡೆ ಸಾಲ ವಿತರಣೆ ಕೂಡ ಸಮರ್ಪಕವಾಗಿ ಮುಂದುವರಿಯಬೇಕು. ಬ್ಯಾಂಕ್‌ಗಳು ಆರ್ಥಿಕತೆಯ ಜೀವನಾಡಿಗಳಾಗಿದ್ದು, ತಮ್ಮ ಬಲ ವೃದ್ಧಿಸಿಕೊಳ್ಳಬೇಕು ಎಂದರು. ಬ್ಯಾಂಕ್‌ ಆಫ್‌ ಬರೋಡಾ, ವಿಜಯ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ ವಿಲೀನ ನಿರ್ಧಾರದ ಘೋಷಣೆಯ ನಂತರ ನಡೆದ ಮಹತ್ವದ ಬ್ಯಾಂಕಿಂಗ್‌ ಸಭೆ ಇದಾಗಿದೆ.

36,551 ಕೋಟಿ ರೂ. ಸಾಲ ವಸೂಲು

ಸಾರ್ವಜನಿಕ ಬ್ಯಾಂಕ್‌ಗಳು ಸಾಲ ಮರು ವಸೂಲಾತಿಯಲ್ಲಿ ಪ್ರಗತಿ ಸಾಧಿಸುತ್ತಿದ್ದು, ಕಳೆದ ಏಪ್ರಿಲ್‌-ಜೂನ್‌ ಅವಧಿಯಲ್ಲಿ 36,551 ಕೋಟಿ ರೂ.ಗಳನ್ನು ಮರು ವಸೂಲು ಮಾಡಿಕೊಳ್ಳುವಲ್ಲಿ ಸಫಲವಾಗಿವೆ. 2017-18ರ ಸಾಲಿಗೆ ಹೋಲಿಸಿದರೆ (74,562 ಕೋಟಿ ರೂ.) ಶೇ.49ರಷ್ಟು ವೃದ್ಧಿಸಿದೆ ಎಂದು ಸಭೆಯ ನಂತರ ಜೇಟ್ಲಿ ಸುದ್ದಿಗಾರರಿಗೆ ತಿಳಿಸಿದರು.

ದಿವಾಳಿ ಇತ್ಯರ್ಥಕ್ಕೆ ಸಂಬಂಧಿಸಿದ ಇನ್‌ಸಾಲ್ವೆನ್ಸಿ ಆ್ಯಂಡ್‌ ಬ್ಯಾಂಕ್ರಪ್ಟಸಿ ಕೋಡ್‌ (ಐಬಿಸಿ), ಜಿಎಸ್‌ಟಿ, ನೋಟು ಅಮಾನ್ಯತೆ ಮತ್ತು ಡಿಜಿಟಲ್‌ ಪೇಮೆಂಟ್‌ ಇತ್ಯಾದಿ ಸುಧಾರಣಾ ಕ್ರಮಗಳ ಪರಿಣಾಮ ಆರ್ಥಿಕತೆಗೆ ಅನುಕೂಲವಾಗಿದೆ. ಮುಖ್ಯವಾಗಿ ಹಣಕಾಸು ಸಾಮರ್ಥ್ಯ‌, ಅಪಾಯದ ಅಂದಾಜು, ಹಣಕಾಸು ಸೇರ್ಪಡೆಗೆ ಸಹಕಾರಿಯಾಗಿದೆ. ಇದರಿಂದ ಭಾರತದ ಖರೀದಿ ಸಾಮರ್ಥ್ಯ‌ ವೃದ್ಧಿಸುತ್ತಿದ್ದು ಸರಾಸರಿ ಶೇ.8ರ ಆಸುಪಾಸಿನಲ್ಲಿ ಜಿಡಿಪಿ ಬೆಳವಣಿಗೆಗೆ ಪೂರಕವಾಗಿ ಪರಿಣಮಿಸಿದೆ ಎಂದರು. ಈ ವರ್ಷ ಶೇ.8.2 ಜಿಡಿಪಿ ದಾಖಲಾಗುವ ನಿರೀಕ್ಷೆ ಇದೆ.

ಸಾರ್ವಜನಿಕ ಬ್ಯಾಂಕ್‌ಗಳು ಸಾಲ ಮರು ವಸೂಲಾತಿಯಲ್ಲಿ ಗಮನಾರ್ಹವಾಗಿ ಸುಧಾರಿಸುತ್ತಿದ್ದು, ದಿವಾಳಿ ಪ್ರಕ್ರಿಯೆ ಕುರಿತ ಐಬಿಸಿ ನೀತಿಯಿಂದಾಗಿ ಸಕಾರಾತ್ಮಕ ಫಲಿತಾಂಶ ಲಭಿಸಿದೆ. ಹಲವಾರು ಸುಸ್ತಿ ಸಾಲದ ಪ್ರಕರಣಗಳು ಇತ್ಯರ್ಥವಾಗುತ್ತಿವೆ. ತ್ವರಿತ ವಿಲೇವಾರಿಯೇ ಇದರ ಉದ್ದೇಶವಾಗಿದೆ ಎಂದು ಜೇಟ್ಲಿ ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ ಐಬಿಸಿ ಮತ್ತು ಇತರ ಕಾರ್ಯತಂತ್ರಗಳ ಮೂಲಕ 1.8 ಲಕ್ಷ ಕೋಟಿ ರೂ. ಸುಸ್ತಿ ಸಾಲ ಮರು ವಸೂಲು ಆಗುವ ನಿರೀಕ್ಷೆ ಇದೆ ಎಂದು ಹಣಕಾಸು ಕಾರ್ಯದರ್ಶಿ ರಾಜೀವ್‌ ಕುಮಾರ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ