ಆ್ಯಪ್ನಗರ

ನಗದು ಠೇವಣಿ, ಹಿಂತೆಗೆತಕ್ಕೆ ಶುಲ್ಕ - ಸುತ್ತೋಲೆ ವಾಪಸ್‌ ಪಡೆದ ಬ್ಯಾಂಕ್‌ ಆಫ್‌ ಬರೋಡ

ಬ್ಯಾಂಕಿನ ಉಳಿತಾಯ, ಚಾಲ್ತಿ ಖಾತೆಗಳಲ್ಲಿ ನಗದು ಠೇವಣಿ ಇಡುವುದಕ್ಕೆ ಹಾಗೂ ಹಿಂತೆಗೆತಕ್ಕೆ ಸೇವಾ ಶುಲ್ಕ ವಿಧಿಸಿದ್ದ ನಿರ್ಧಾರಕ್ಕೆ ಸಾರ್ವಜನಿಕರ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬ್ಯಾಂಕ್‌ ಆಫ್‌ ಬರೋಡಾ ತನ್ನ ಸುತ್ತೋಲೆಯನ್ನು ವಾಪಸ್ ಪಡೆದಿದೆ.

Vijaya Karnataka Web 3 Nov 2020, 8:12 pm
ಬೆಂಗಳೂರು: ಗ್ರಾಹಕರು ಬ್ಯಾಂಕಿನ ಉಳಿತಾಯ, ಚಾಲ್ತಿ ಖಾತೆಗಳಲ್ಲಿ ನಗದು ಠೇವಣಿ ಇಡುವುದಕ್ಕೆ ಹಾಗೂ ಹಿಂತೆಗೆತಕ್ಕೆ ಸಂಬಂಧಿಸಿದ ಸೇವಾ ಶುಲ್ಕಗಳ ನಿಯಮಗಳನ್ನು ಬಿಗಿಗೊಳಿಸಿ ಇತ್ತೀಚೆಗೆ ಹೊರಡಿಸಿದ್ದ ಸುತ್ತೋಲೆಯನ್ನು ಬ್ಯಾಂಕ್‌ ಆಫ್‌ ಬರೋಡಾ ಮಂಗಳವಾರ ತಕ್ಷಣದಿಂದ ಅನ್ವಯಿಸುವಂತೆ ಹಿಂತೆಗೆದುಕೊಂಡಿದೆ.
Vijaya Karnataka Web Bank of Baroda


ಬ್ಯಾಂಕ್‌ ಆಫ್‌ ಬರೋಡಾ ಮಂಗಳವಾರ ನೀಡಿರುವ ಸ್ಪಷ್ಟನೆಯಲ್ಲಿ, ‘ಕಳೆದ ಸೆಪ್ಟೆಂಬರ್‌ 29ರಂದು ಹೊರಡಿಸಿದ್ದ, ನಗದು ಸೇವಾ ಶುಲ್ಕ ಮತ್ತು ಚೆಕ್‌ಬುಕ್‌ ಸಂಬಂಧಿತ ಬದಲಾವಣೆಗಳ ಕುರಿತ ಸುತ್ತೋಲೆಯನ್ನು’ ಹಿಂತೆಗೆದುಕೊಂಡಿರುವುದಾಗಿ ತಿಳಿಸಿದೆ.

ಕೋವಿಡ್‌-19 ಸಾಂಕ್ರಾಮಿಕ ರೋಗವು ಆರ್ಥಿಕತೆಯ ಮೇಲೆಯೂ ಪ್ರಭಾವ ಬೀರಿರುವುದರಿಂದ ಸುತ್ತೋಲೆಯನ್ನು ಹಿಂತೆಗೆದುಕೊಳ್ಳುತ್ತಿರುವುದಾಗಿ ಬ್ಯಾಂಕ್‌ ಆಫ್‌ ಬರೋಡಾ ತಿಳಿಸಿದೆ. ಈ ಸೂಚನೆಯನ್ನು ಗ್ರಾಹಕರ ಗಮನಕ್ಕೆ ತರಲು ಕ್ಯಾಶ್‌ ಕೌಂಟರ್‌ಗಳ ಬಳಿ ಇಲ್ಲವೇ ಸೂಕ್ತ ಸ್ಥಳದಲ್ಲಿ ಪ್ರಕಟಿಸುವಂತೆ ಬ್ಯಾಂಕ್‌ ಆಫ್‌ ಬರೋಡಾ ತನ್ನ ಎಲ್ಲ ಶಾಖೆಗಳಿಗೆ ಸೂಚಿಸಿದೆ.

ಬ್ಯಾಂಕ್‌ ಆಫ್‌ ಬರೋಡಾ, ನವೆಂಬರ್‌ 1ರಿಂದ ಅನ್ವಯವಾಗುವಂತೆ ಪ್ರತಿ ತಿಂಗಳು ಬ್ಯಾಂಕ್‌ ಖಾತೆಗಳಿಗೆ ಉಚಿತವಾಗಿ ನಗದು ಜಮೆ ಮತ್ತು ಹಿಂತೆಗೆತದ ಸೌಲಭ್ಯವನ್ನು 5 ರಿಂದ 3 ಸಲಕ್ಕೆ ಕಡಿತಗೊಳಿಸಿತ್ತು. ಈ ಮಿತಿಯ ನಂತರ ನಗದು ಜಮೆ ಹಾಗೂ ಹಿಂತೆಗೆತಕ್ಕೆ ಸೇವಾ ಶುಲ್ಕ ಅನ್ವಯವಾಗುತ್ತಿತ್ತು. ಉದಾಹರಣೆಗೆ ಮಾಸಿಕ 3ಕ್ಕಿಂತ ಹೆಚ್ಚಿನ ನಗದು ಠೇವಣಿ ಇಡಲು ಪ್ರತಿ ವರ್ಗಾವಣೆಗೆ 50 ರೂ. ಶುಲ್ಕ ಅನ್ವಯಿಸುತ್ತದೆ.

ಬ್ಯಾಂಕ್‌ಗಳು ಉಳಿತಾಯ ಮತ್ತು ಚಾಲ್ತಿ ಖಾತೆಗಳಲ್ಲೂ ನಗದು ಇಡುವುದಕ್ಕೆ ಮತ್ತು ಹಿಂತೆಗೆಯಲು ನಿರ್ದಿಷ್ಟ ಮಿತಿಯ ನಂತರ ಶುಲ್ಕ ವಿಧಿಸುತ್ತಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ನೂರೆಂಟು ವಿಧದ ಸೇವಾ ಶುಲ್ಕಗಳು ಗ್ರಾಹಕರಿಗೆ ಬರೆಯಾಗಿ ಪರಿಣಮಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ