ಆ್ಯಪ್ನಗರ

ಬಂಪರ್‌ ತೊಗರಿ, ಕುಸಿದ ದರ

ತೊಗರಿ ಕಣಜ ಕಲಬುರಗಿಯಲ್ಲಿ ಈಗ ಬಂಪರ್‌ ತೊಗರಿ ಬೆಳೆದು ನಿಂತಿದೆ. ಡಿಸೆಂಬರ್‌ ಮೂರನೇ ವಾರದಿಂದ ಕಟಾವು ಶುರುವಾಗಲಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚು ಇಳುವರಿ ನಿರೀಕ್ಷಿಸಲಾಗಿದ್ದು, ಮಾರುಕಟ್ಟೆಯಲ್ಲಿ ದರ ಹೇಗೆ ಇರಲಿದೆ ಎನ್ನುವುದರ ಮೇಲೆ ಗಮನ ನೆಟ್ಟಿದೆ.

Vijaya Karnataka Web 10 Dec 2017, 4:00 am

ದೇವಯ್ಯ ಗುತ್ತೇದಾರ್‌ ಕಲಬುರಗಿ: ತೊಗರಿ ಕಣಜ ಕಲಬುರಗಿಯಲ್ಲಿ ಈಗ ಬಂಪರ್‌ ತೊಗರಿ ಬೆಳೆದು ನಿಂತಿದೆ. ಡಿಸೆಂಬರ್‌ ಮೂರನೇ ವಾರದಿಂದ ಕಟಾವು ಶುರುವಾಗಲಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚು ಇಳುವರಿ ನಿರೀಕ್ಷಿಸಲಾಗಿದ್ದು, ಮಾರುಕಟ್ಟೆಯಲ್ಲಿ ದರ ಹೇಗೆ ಇರಲಿದೆ ಎನ್ನುವುದರ ಮೇಲೆ ಗಮನ ನೆಟ್ಟಿದೆ.

ಎಷ್ಟು ಉತ್ಪಾದನೆ ನಿರೀಕ್ಷೆ?:

ಈ ಬಾರಿ ಒಟ್ಟು 3.20 ಲಕ್ಷ ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆಯಾಗಿದೆ. ತೊಗರಿಗೆ ಅನುಕೂಲಕರವಾಗಿ ಉತ್ತಮ ಮಳೆ, ಹವಾಮಾನ ಇರುವುದರಿಂದ ಎಕರೆಗೆ 5-6 ಕ್ವಿಂಟಾಲ್‌ ಇಳುವರಿ ಬರಬಹುದು. ಒಟ್ಟು 32-35 ಲಕ್ಷ ಕ್ವಿಂಟಾಲ್‌ ತೊಗರಿ ಉತ್ಪಾದನೆಯಾಗಬಹುದು ಎಂದು ಕೃಷಿ ಅಧಿಕಾರಿಗಳು ಅಂದಾಜಿಸಿದ್ದಾರೆ. ರಾಜ್ಯ ಸರಕಾರ ತೊಗರಿ ಅಭಿವೃದ್ಧಿ ಮಂಡಳಿ, ಸಹಕಾರ ಸಂಘಗಳ ಮೂಲಕ ಮತ್ತು ಕೇಂದ್ರ ಸರಕಾರ ನಫೆಡ್‌ ಮೂಲಕ ಕಳೆದ ವರ್ಷ 12 ಲಕ್ಷ ಕ್ವಿಂಟಾಲ್‌ ತೊಗರಿ ಖರೀದಿಸಿತ್ತು.

ರಾಜ್ಯದ ಪ್ರೋತ್ಸಾಹ ಧನ ಕಾಯುತ್ತಿರುವ ಅನ್ನದಾತ:

ಕೇಂದ್ರ ಸರಕಾರ ಕ್ವಿಂಟಾಲ್‌ ತೊಗರಿಗೆ ಕಳೆದ ವರ್ಷ 5,050 ರೂ. ನಿಗದಿಪಡಿಸಿತ್ತು. ಇದಕ್ಕೆ ರಾಜ್ಯ ಸರಕಾರ 450 ರೂ. ಪ್ರೋತ್ಸಾಹ ಧನ ನೀಡಿತ್ತು. ಎರಡೂ ಸೇರಿಸಿ 5,500 ರೂ.ಗಳಿಗೆ ಖರೀದಿಸಲಾಗಿತ್ತು.

ಈ ವರ್ಷ ಕೇಂದ್ರ ಸರಕಾರ 5,450 ರೂ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿ ಮಾಡಿದೆ. ಹೀಗಾಗಿ ಕಳೆದ ವರ್ಷಕ್ಕಿಂತ ಈ ಬಾರಿ 400 ರೂ.ಗಳನ್ನು ಹೆಚ್ಚಿಸಿದೆ. ರಾಜ್ಯ ಸರಕಾರ ಕಳೆದ ವರ್ಷ ನೀಡಿದ್ದಷ್ಟೆ ಪ್ರೋತ್ಸಾಹ ಧನ ನೀಡಿದರೂ ಸಹ 6 ಸಾವಿರ ರೂ.ಗಳಿಗೆ ಗಡಿ ತಲುಪಿತ್ತದೆ. ಇದು ರೈತರಿಗೆ ಸಮಾಧಾನಕರವಾದರೂ ದರ ಹೆಚ್ಚಿಸಬೇಕೆಂಬ ಬೇಡಿಕೆಯೂ ಕೇಳಿ ಬರುತ್ತಿದೆ.

ಕುಸಿದ ದರ:

ಹೊಸ ತೊಗರಿ ಇನ್ನೂ ಮಾರುಕಟ್ಟೆಗೆ ಪ್ರವೇಶಿಸಿಲ್ಲ. ಆದರೂ ದರ ಕುಸಿತವಾಗಿದೆ. ಈಗ ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ ತೊಗರಿಗೆ ಕನಿಷ್ಠ 3,200 ರೂ.ಗಳಿಂದ 4,200 ರೂ.ಗಳಿಗಿದೆ. ಕಳೆದ ವರ್ಷದ ಬೆಂಬಲ ಬೆಲೆ ಐದೂವರೆಗೆ ಸಾವಿರ ಇದ್ದರೂ ಬೆಲೆ ಮಾತ್ರ ನಾಲ್ಕು ಸಾವಿರದ ಒಳಗೆ ಇತ್ತು. ಸರಕಾರ ಬೆಂಬಲ ಬೆಲೆ ಅಡಿ ತೊಗರಿ ಖರೀದಿಸಿದ್ದರಿಂದ ಅನ್ನದಾತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.

ಈಗ ಚುನಾವಣೆ ಸಮೀಪಿಸುತ್ತಿದ್ದರಿಂದ ಖರೀದಿ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದ್ದು, ವ್ಯವಸಾಯ ಸೇವಾ ಸಹಕಾರ ಸಂಘಗಳ ಸದಸ್ಯರಿಗೆ ಖರೀದಿ ಬಗ್ಗೆ ಸೂಕ್ತ ತರಬೇತಿ ಸಹ ನೀಡಿದ್ದು, ಜಾಗ ಗುರುತಿಸುವ ಕೆಲಸ ಆಗಿದೆ.

ಕೇಂದ್ರದ ಅಂಗಳದಲ್ಲಿ ಚೆಂಡು:

ಈಗ ಮಾರುಕಟ್ಟೆಯಲ್ಲಿ ತೊಗರಿ ದರ ಪಾತಾಳಕ್ಕೆ ತಲುಪಿದೆ. ಈ ದರಕ್ಕೆ ಯಾವ ರೈತರೂ ಮಾರಾಟ ಮಾಡುವುದಿಲ್ಲ. ಸರಕಾರ ತಕ್ಷಣವೇ ಮಾರುಕಟ್ಟೆ ಪ್ರವೇಶಿಸಿ ಖರೀದಿ ಶುರು ಮಾಡಿದರೆ ಮಾತ್ರ ಮಾರಾಟ ಪ್ರಕ್ರಿಯೆ ಶುರುವಾಗುತ್ತದೆ. ಖರೀದಿ ಪ್ರಕ್ರಿಯೆಗೆ ಶುರು ಮಾಡುವ ವಿಷಯದಲ್ಲಿ ರಾಜ್ಯ ಸರಕಾರದಿಂದ ಯಾವುದೇ ಪ್ರಕ್ರಿಯೆ ಬಂದಿಲ್ಲ. ಖರೀದಿಗೆ ಕೇಂದ್ರ ಸರಕಾರ ಅನುಮತಿ ನೀಡಬೇಕಿದೆ ಎಂದು ಮೂಲಗಳು ತಿಳಿಸಿವೆ.

ಕೋಟ್‌

ತೊಗರಿ ಇಳುವರಿ ಈ ಬಾರಿ ಬಂಪರ್‌ ಆಗಿದೆ. ಉತ್ತಮ ಮಳೆ ಮತ್ತು ಕೀಟಭಾದೆ ಕಮ್ಮಿ ಇದ್ದರಿಂದ ಉತ್ತಮ ಇಳುವರಿ ಬಂದಿದೆ. ಡಿಸೆಂಬರ್‌ ಮೂರನೇ ವಾರದಿಂದ ಮಾರುಕಟ್ಟೆಗೆ ಬರಲು ಆರಂಭವಾಗಲಿದ್ದು, ಖರೀದಿ ಪ್ರಕ್ರಿಯೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಅಗತ್ಯ ಮಾಹಿತಿಯನ್ನು ಸರಕಾರಕ್ಕೆ ಕಳುಹಿಸಲಾಗಿದೆ.

-ಜಿಲಾನಿ ಮೊಕಾಶಿ, ಜಂಟಿ ಕೃಷಿ ನಿರ್ದೇಶಕ, ಕಲಬುರಗಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ