ಆ್ಯಪ್ನಗರ

ನನ್ನ ಹಣ ತೆಗೆದುಕೊಳ್ಳಿ, ಜೆಟ್‌ ಏರ್‌ವೇಸ್‌ ಉಳಿಸಿ: ಮಲ್ಯ

ಜೆಟ್‌ ಏರ್‌ವೇಸ್‌ ಉಳಿಸಲು ನನ್ನ ಹಣವನ್ನು ತೆಗೆದುಕೊಳ್ಳಿ ಎಂದು ಮಲ್ಯ ಟ್ವೀಟ್‌ ಮೂಲಕ ಬ್ಯಾಂಕ್‌ಗಳು ಮತ್ತು ಕೇಂದ್ರ ಸರಕಾರಕ್ಕೆ ಆಹ್ವಾನ ನೀಡಿದ್ದಾರೆ.

Vijaya Karnataka Web 26 Mar 2019, 8:11 pm
ಹೊಸದಿಲ್ಲಿ: ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ ಮತ್ತು ಅವರ ಪತ್ನಿ ಅನಿತಾ ಅವರು ಆಡಳಿತ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ. ಈ ಮಧ್ಯೆ, ಆರ್ಥಿಕ ಸಂಕಷ್ಟದಲ್ಲಿರುವ ಜೆಟ್‌ ಏರ್‌ವೇಸ್‌ ಉಳಿಸಲು ಉದ್ಯಮಿ ವಿಜಯ ಮಲ್ಯ ನೆರವಿಗೆ ಬಂದಿದ್ದಾರೆ! ''ಜೆಟ್‌ ಏರ್‌ವೇಸ್‌ ಉಳಿಸಲು ನನ್ನ ಹಣವನ್ನು ತೆಗೆದುಕೊಳ್ಳಿ,'' ಎಂದು ಮಲ್ಯ ಟ್ವೀಟ್‌ ಮೂಲಕ ಬ್ಯಾಂಕ್‌ಗಳು ಮತ್ತು ಕೇಂದ್ರ ಸರಕಾರಕ್ಕೆ ಆಹ್ವಾನ ನೀಡಿದ್ದಾರೆ.
Vijaya Karnataka Web Mallya


ಜೆಟ್‌ ಏರ್‌ವೇಸ್‌ಗೆ ಮರುಜೀವ ತುಂಬಲು 1,500 ಕೋಟಿ ರೂ. ಸಾಲ ನೀಡಲು ಬ್ಯಾಂಕ್‌ಗಳು ಒಪ್ಪಿವೆ. ಇದಕ್ಕೆ ಸರಣಿಯೋಪಾದಿಯಲ್ಲಿ ಪ್ರತಿಕ್ರಿಯಿಸಿರುವ ಮಲ್ಯ, ''ಜೆಟ್‌ ಏರ್‌ವೇಸ್‌ ಸಿಬ್ಬಂದಿಯ ಉದ್ಯೋಗಗಳು, ಸಂಪರ್ಕ ವ್ಯವಸ್ಥೆ ಮತ್ತು ಉದ್ಯಮಿಗಳನ್ನು ರಕ್ಷಿಸಲು ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮುಂದಾಗಿದ್ದು, ಇದನ್ನು ನೋಡಲು ಸಂತೋಷವಾಗುತ್ತಿದೆ. ಆದರೆ, ಇಂಥದ್ದೇ ಪ್ರಯತ್ನವನ್ನು ಕಿಂಗ್‌ ಫಿಷರ್‌ ವಿಷಯದಲ್ಲಿ ಮಾಡಲಿಲ್ಲ,'' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

''ಕಿಂಗ್‌ಫಿಷರ್‌ ಮತ್ತು ಜೆಟ್‌ ಏರ್‌ವೇಸ್‌ ಪ್ರಕರಣಗಳಲ್ಲಿ ಎನ್‌ಡಿಎ ಸರಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್‌ಗಳು ದ್ವಿಮುಖ ನೀತಿ ಅನುಸರಿಸುತ್ತಿವೆ,'' ಎಂದು ಮತ್ತೊಂದು ಟ್ವೀಟ್‌ನಲ್ಲಿ ದೂರಿದ್ದಾರೆ. ಎನ್‌ಡಿಎ ಸರಕಾರವು ಪಕ್ಷಪಾತದ ಧೋರಣೆ ಹೊಂದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

9 ಸಾವಿರ ಕೋಟಿ ರೂ. ವಂಚನೆ ಪ್ರಕರಣದ ಬಳಿಕ ದೇಶ ಬಿಟ್ಟು ಲಂಡನ್‌ಗೆ ಪಲಾಯನಗೊಂಡಿರುವ ವಿಜಯ ಮಲ್ಯ, ಟ್ವೀಟ್‌ ಮೂಲಕ ಈಗ ಮತ್ತೆ ಸದ್ದು ಮಾಡಿದ್ದಾರೆ. ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಜಾರಿಯಲ್ಲಿದ್ದು, ಅದನ್ನು ವಿರೋಧಿಸಿ ಲಂಡನ್‌ನ ಹೈಕೋರ್ಟ್‌ಗೆ ಕಳೆದ ತಿಂಗಳು ಮಲ್ಯ ಅರ್ಜಿ ಸಲ್ಲಿಸಿದ್ದಾರೆ.

ಕಂಪನಿ ಮತ್ತು ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಕಿಂಗ್‌ಫಿಷರ್‌ ಏರ್‌ಲೈನ್ಸ್‌ನಲ್ಲಿ ನಾನು 4,000 ಕೋಟಿ ರೂ. ಹೂಡಿಕೆ ಮಾಡಿದ್ದೇನೆ. ಇದನ್ನು ಯಾರೂ ಗಮನಿಸದೇ, ಸಾಧ್ಯವಿರುವ ಎಲ್ಲ ಪ್ರಯತ್ನಗಳ ಮೂಲಕ ಹೊಡೆತಗಳನ್ನೇ ನೀಡಿದರು. ಜೆಟ್‌ ಏರ್‌ವೇಸ್‌ಗೆ ನೆರವು ನೀಡಿದಂತೆಯೇ ದೇಶದ ಅತ್ಯುನ್ನತ ಏರ್‌ಲೈನ್ಸ್‌ಗೂ(ಕಿಂಗ್‌ಫಿಷರ್‌) ಮಾಡಬಹುದಿತ್ತು. ಕಿಂಗ್‌ಫಿಷರ್‌ ಮತ್ತು ಜೆಟ್‌ ಏರ್‌ವೇಸ್‌ ವಿಷಯದಲ್ಲಿ ಎನ್‌ಡಿಎ ಸರಕಾರವು ದ್ವಿಮುಖ ಧೋರಣೆ ಹೊಂದಿದೆ.

ನಾನು ಮತ್ತೊಮ್ಮೆ ಕೇಳಿಕೊಳ್ಳುತ್ತಿದ್ದೇನೆ. ಕರ್ನಾಟಕ ಹೈಕೋರ್ಟ್‌ ಮುಂದೆ ಇರಿಸಿರುವ ಠೇವಣಿ ಆಸ್ತಿಯನ್ನು ತೆಗೆದುಕೊಳ್ಳಿ. ಸಾರ್ವಜನಿಕ ಬ್ಯಾಂಕುಗಳು ಮತ್ತು ಇತರೆ ಸಾಲದಾತರಿಗೆ ಹಣ ಮರಳಿಸಲು ನನ್ನ ಆಸ್ತಿಗಳನ್ನು ಬಳಸಿಕೊಳ್ಳಿ. ಸಾಲ ತೀರಿಸಲು ಮುಂದಾದರೂ, ಬ್ಯಾಂಕ್‌ಗಳೇಕೆ ನನ್ನ ಹಣವನ್ನು ತೆಗೆದುಕೊಳ್ಳುತ್ತಿಲ್ಲ? ಏನಿಲ್ಲದಿದ್ದರೂ ನನ್ನ ಹಣವನ್ನು ಜೆಟ್‌ ಏರ್‌ವೇಸ್‌ ಉಳಿಸಲು ಬಳಸಬಹುದಾಗಿದೆ.

ಆರ್ಥಿಕ ಸಂಕಷ್ಟದಲ್ಲಿರುವ ಜೆಟ್‌ ಏರ್‌ವೇಸ್‌ ಸಂಸ್ಥೆಯ ಮೇಲ್ವಿಚಾರಣೆಯನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ತನ್ನ ನಿಯಂತ್ರಣಕ್ಕೆ ಪಡೆಯಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ