ಆ್ಯಪ್ನಗರ

ಕಾರುಗಳ ಬೆಲೆ ದುಬಾರಿ, ಸಾಮಾನ್ಯರು ಖರೀದಿಸಲು ಸಾಧ್ಯವಿಲ್ಲ: ಮಾರುತಿ ಸಂಸ್ಥೆ ಅಧ್ಯಕ್ಷ ಭಾರ್ಗವ

ಆರ್ಥಿಕ ಹಿಂಜರಿತದ ನಡುವೆ ದೇಶದ ಆಟೊಮೊಬೈಲ್‌ ಕ್ಷೇತ್ರ ಭಾರಿ ಪೆಟ್ಟು ತಿಂದಿದೆ. ಕಾರುಗಳ ಖರೀದಿಯಲ್ಲಿ ಭಾರಿ ಇಳಿಮುಖವಾಗಿರುವುದು ಉದ್ದಿಮೆಗಳು ತೀವ್ರ ನಷ್ಟ ಅನುಭವಿಸುತ್ತಿವೆ. ಆರ್ಥಿಕತೆ ಚೇತರಿಕೆ ಕಾಣದಿದ್ದರೆ ಇನ್ನಷ್ಟು ಸಂಕಷ್ಟ ಎದುರಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Vijaya Karnataka Web 10 Sep 2019, 3:11 pm
ಹೊಸದಿಲ್ಲಿ: ಕೆಲವೇ ಕೆಲವು ವರ್ಷಗಳ ಹಿಂದೆ ಮಧ್ಯಮ ವರ್ಗದವರೂ ಐಷಾರಾಮಿ ಜೀವನ ನಡೆಸಲು ಸಾಧ್ಯವಾಗಿತ್ತು. ಕಾರು ಖರೀದಿ ಎಲ್ಲರಿಗೂ ಸಾಧ್ಯವಾಗಿತ್ತು. ಆದರೆ ಇಂದು ಕಾರು ಖರೀದಿ ದುಬಾರಿಯಾಗಿದೆ. ಕೈಗೆಟುಕದ ಸ್ಥಿತಿ ತಲುಪಿದೆ ಎಂದು ಮಾರುತಿ ಸಂಸ್ಥೆಯ ಅಧ್ಯಕ್ಷ ಆರ್‌ಸಿ ಭಾರ್ಗವ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web ಆರ್‌ಸಿ ಭಾರ್ಗವ
ಆರ್‌ಸಿ ಭಾರ್ಗವ


ಆಟೊ ಕ್ಷೇತ್ರದ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ಮಾರುತಿ ಸಂಸ್ಥೆಯ ಅಧ್ಯಕ್ಷರು.

ಇತ್ತೀಚಿನ ದಿನಗಳಲ್ಲಿ ಆರ್ಥಿಕತೆ ಭಾರಿ ಕುಸಿತ ಕಂಡಿದೆ. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕೈಗೊಳ್ಳುತ್ತಿರುವ ಅಸ್ಪಷ್ಟ ನೀತಿಗಳು, ಆಟೊಮೊಬೈಲ್‌ ಕ್ಷೇತ್ರದಲ್ಲಿ ಸುರಕ್ಷತೆಗೆ ಒತ್ತು ನೀಡಲು ವಿಫಲವಾಗುತ್ತಿರುವುದು ಈ ಇಳಿಕೆಗೆ ಕಾರಣವಾಗಿದೆ ಎಂದು ಭಾರ್ಗವ ವಿವರಿಸಿದ್ದಾರೆ.

ಕಾರುಗಳಲ್ಲಿ ಈಗ ಎಬಿಎಸ್‌, ಆರ್‌ ಬ್ಯಾಗ್‌ಗಳು ಕಡ್ಡಾಯವಾಗಿರಬೇಕು. ಆದರೆ ಇದನ್ನು ಅಳವಡಿಸಿದರೆ ಸ್ವಾಭಾವಿಕವಾಗಿ ಉತ್ಪಾದನಾ ವೆಚ್ಚ ಹೆಚ್ಚಾಗುತ್ತದೆ. ಇದರಿಂದಾಗಿ ಕಂಪನಿಗಳು ಕಾರುಗಳ ಬೆಲೆ ಹೆಚ್ಚಿಸುತ್ತಿವೆ. ಇದಕ್ಕಿಂತ ಮುಖ್ಯವಾಗಿ ಕೇಂದ್ರ ಸರಕಾರದ ನೀತಿಗಳು ಭಾರಿ ಪರಿಣಾಮ ಬೀರುತ್ತಿವೆ ಎಂದು ಅವರು ಹೇಳಿದ್ದಾರೆ.

ವ್ಯಾಪಾರ ವಹಿವಾಟು ಚಾರ್ಟ್‌


ಕಳೆದ ಒಂದು ವರ್ಷದ ಅವಧಿಯಲ್ಲಿ ಆಟೊಮೊಬೈಲ್‌ ಕ್ಷೇತ್ರದಲ್ಲಿ ವ್ಯಾಪಾರ ವಹಿವಾಟು ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಪೆಟ್ರೋಲ್‌, ಡೀಸೆಲ್ ವಾಹನಗಳ ಮೇಲೆ ಹೆಚ್ಚು ತೆರಿಗೆ, ನೋಂದಣಿ ಶುಲ್ಕ ಹೆಚ್ಚಳ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಯಿಂದ ವ್ಯಾಪಾರದ ಮೇಲೆ ಭಾರಿ ಪರಿಣಾಮ ಬೀರಿದೆ. ಕಾರುಗಳ ನಿರ್ವಹಣೆ ಕೂಡ ದುಪ್ಪಟ್ಟಾಗಿದೆ ಎಂದು ಭಾರ್ಗವ ಹೇಳಿದ್ದಾರೆ.

ದ್ವಿಚಕ್ರ ವಾಹನ ಹೊಂದಿದ್ದ ವ್ಯಕ್ತಿ ನಾಲ್ಕು ಚಕ್ರ ವಾಹನ ಖರೀದಿಸಬೇಕಾದರೆ ಈಗ ಸಾಕಷ್ಟು ಶ್ರಮ ಪಡಬೇಕು. ಈಗ ಎಲ್ಲವೂ ದುಬಾರಿಯಾಗಿದೆ. ಜಿಎಸ್‌ಟಿಯನ್ನು ಶೇ.28 ರಿಂದ ಶೇ.18ಕ್ಕೆ ಇಳಿಸಬೇಕೆಂದು ಈಗಾಗಲೇ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ ಎಂದು ಭಾರ್ಗವ ವಿವರಿಸಿದರು.

ಇದಲ್ಲದೆ ಸಾರಿಗೆ ವ್ಯವಸ್ಥೆಯಲ್ಲಿ ಆಗಿರುವ ಬದಲಾವಣೆ ಕೂಡ ಕ್ಷೇತ್ರದ ಮೇಲೆ ಪರಿಣಾಮ ಬೀರಿದೆ. ಸಮೂಹ ಸಾರಿಗೆ, ಕ್ಯಾಬ್‌ ವ್ಯವಸ್ಥೆ ಬಂದಿದ್ದರಿಂದ ಜನರು ಇದಕ್ಕೆ ಒಲವು ತೋರುತ್ತಿದ್ದಾರೆ. ಈ ಕಾರಣಗಳಿಂದ ಆಟೊಮೊಬೈಲ್‌ ಕ್ಷೇತ್ರ ಸಮಸ್ಯೆಯ ಚಕ್ರದಡಿ ಸಿಲುಕಿದೆ ಎಂದು ವಿಶ್ಲೇಷಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ