ಆ್ಯಪ್ನಗರ

ಚೀನಾದ ವಸ್ತುಗಳಿಂದ ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ: ಸಂಸತ್ ಸ್ಥಾಯಿ ಸಮಿತಿ

ಚೀನಾದಿಂದ ಆಮದಾಗುತ್ತಿರುವ ಹಲವು ವಸ್ತುಗಳಿಂದ ಸ್ವದೇಶಿ ಉತ್ಪಾದನೆ ವಲಯಕ್ಕೆ ಹೊಡೆತ ಬಿದ್ದಿದೆ. ಅಲ್ಲದೆ, ಹಲವು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಹೊಡೆತ ಬಿದ್ದಿದ್ದು, ಅನೇಕ ಕಾರ್ಖಾನೆಗಳಿಗೆ ಬೀಗ ಬಿದ್ದಿದೆ.

TIMESOFINDIA.COM 27 Jul 2018, 2:40 pm
ಹೊಸದಿಲ್ಲಿ: ಚೀನಾದಿಂದ ಆಮದಾಗುತ್ತಿರುವ ಹಲವು ವಸ್ತುಗಳಿಂದ ಸ್ವದೇಶಿ ಉತ್ಪಾದನೆ ವಲಯಕ್ಕೆ ಹೊಡೆತ ಬಿದ್ದಿದೆ. ಅಲ್ಲದೆ, ಹಲವು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಹೊಡೆತ ಬಿದ್ದಿದ್ದು, ಅನೇಕ ಕಾರ್ಖಾನೆಗಳಿಗೆ ಬೀಗ ಬಿದ್ದಿದೆ. ಹೀಗಾಗಿ, ಚೀನಾದ ವಸ್ತುಗಳಿಗೆ ಗುಣಮಟ್ಟದ ಮಾನದಂಡಗಳನ್ನು ಹೇರಿ ಹಾಗೂ ಚೀನಾದಿಂದ ಆಮದಾಗುವ ವಸ್ತುಗಳ ಪ್ರಮಾಣವನ್ನು ತಡೆ ಹಿಡಿಯಿರಿ ಎಂದು ಸಂಸತ್ ಸ್ಥಾಯಿ ಸಮಿತಿ ಕೇಂದ್ರ ಸರಕಾರಕ್ಕೆ ಮನವಿ ಮಾಡಿದೆ.
Vijaya Karnataka Web Chinese goods


ಚೀನಾದ ವಸ್ತುಗಳಿಗೆ ಕಡಿಮೆ ಬೆಲೆ ಇದೆ. ಇದರ ಜತೆ ಸಡಿಲ ಕಾನೂನು ನೀತಿಗಳಿಂದಾಗಿ ರಸ್ತೆ ಹಾಗೂ ಸಮುದ್ರದ ಮಾರ್ಗದಿಂದ ಅಲ್ಲಿಂದ ಬರುತ್ತಿರುವ ವಸ್ತುಗಳಿಂದಾಗಿ ಭಾರತ ಚೀನಿ ಸರಕುಗಳ ಡಂಪಿಂಗ್ ಮೈದಾನದಂತೆ ಆಗಿದೆ ಎಂದು ಸಂಸತ್ತಿನಲ್ಲಿ ವಾಣಿಜ್ಯ ಸ್ಥಾಯಿ ಸಮಿತಿ ವರದಿ ಮಂಡಿಸಿದೆ. ಅಲ್ಲದೆ, ಅಮೆರಿಕ ಹಾಗೂ ಐರೋಪ್ಯ ಒಕ್ಕೂಟ ಸಹ ಸ್ವದೇಶಿ ಉದ್ಯಮ ಹಾಗೂ ಉದ್ಯೋಗಕ್ಕೆ ಹೊಡೆತ ಬೀಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿವೆ. ಇದೇ ರೀತಿ, ಕೇಂದ್ರ ಸರಕಾರ ಸಹ ಡಂಪಿಂಗ್ ವಿರೋಧಿ, ಸಬ್ಸಿಡಿ ವಿರೋಧಿ ನೀತಿಯಂತಹ ವ್ಯಾಪಾರಿ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಇತರೆ ನಿರ್ಬಂಧಗಳನ್ನು ಹೇರಬೇಕೆಂದು ಸಲಹೆ ನೀಡಿದೆ.

ಇನ್ನು, ಚೀನಾದ ಸೋಲಾರ್ ಪ್ಯಾನಲ್‌ಗಳನ್ನು ಭಾರತಕ್ಕೆ ಡಂಪ್ ಮಾಡಿರುವುದರಿಂದ ದೇಶದಲ್ಲಿ ಸುಮಾರು 2 ಲಕ್ಷ ಜನರು ನಿರುದ್ಯೋಗಿಗಳಾಗಿದ್ದಾರೆ. ಅಲ್ಲದೆ, ಸಡಿಲವಾದ ಕಾನೂನಿನಿಂದಾಗಿ ಚೀನಾದಿಂದ ನಿಯಮಬಾಹಿರವಾಗಿ ಕಡಿಮೆ ಬೆಲೆಯ ಸೈಕಲ್‌ಗಳು ಬರುತ್ತಿವೆ. ಜತೆಗೆ, ಸಾರ್ವಜನಿಕರಿಗೆ ಶೇರಿಂಗ್ ಯೋಜನೆಯಿಂದಾಗಿಯೂ ಭಾರತಕ್ಕೆ ಅಲ್ಲಿಂದ ಸೈಕಲ್ ಆಮದಾಗುತ್ತಿದೆ ಎಂದು ಸಮಿತಿ ಅಂದಾಜಿಸಿದೆ. ಡಂಪಿಂಗ್ ವಿರೋಧಿ ನೀತಿಯಿಂದಾಗಿ ಚೀನಾ ವಿರುದ್ಧ ಸರಕಾರ ಹೆಚ್ಚು ಬಾರಿ ಕ್ರಮ ಕೈಗೊಂಡಿದ್ದರೂ ಸಹ ಅಲ್ಲಿಂದ ಆಮದಾಗುತ್ತಿರುವ ವಸ್ತುಗಳಿಗೆ ಹೋಲಿಸಿದರೆ ಇದು ಕಡಿಮೆ. ಚೀನಾದಿಂದ ಆಮದಾಗುತ್ತಿರುವ ವಸ್ತುಗಳಿಂದಾಗಿ ಭಾರತ ಆಮದುದಾರ ರಾಷ್ಟ್ರವಾಗುವ ಭೀತಿಯಲ್ಲಿದೆ. ಜತೆಗೆ, ಇದರಂದಾಗಿ ದೇಶೀಯ ಕಾರ್ಖಾನೆಗಳು ಉತ್ಪಾದನೆಯನ್ನು ಕಡಿಮೆ ಮಾಡಿವೆ ಅಥವಾ ಸಂಪೂರ್ಣವಾಗಿ ಬಂದ್ ಆಗುತ್ತಿವೆ ಎಂದು ಸಹ ಸ್ಥಾಯಿ ಸಮಿತಿ ಹೇಳಿದೆ.

ಇತ್ತೀಚಿನ ಕೆಲವು ವರ್ಷಗಳಿಂದ ಹೆಚ್ಚುತ್ತಿರುವ ವ್ಯಾಪಾರಿ ಕೊರತೆ ನೀತಿಯ ಬಗ್ಗೆ ಕೇಂದ್ರ ಸರಕಾರ ತಲೆಕೆಡಿಸಿಕೊಂಡಿದೆ. ಅಲ್ಲದೆ, ಆಮದು ಹಾಗೂ ರಫ್ತು ನಡುವಿನ ಅಂತರ ಕಡಿಮೆ ಮಾಡಲು ಭಾರತದ ಸರಕುಗಳಿಗೆ ಚೀನಾ ಮುಕ್ತ ಅವಕಾಶ ನೀಡಬೇಕೆಂದು ಬಯಸಿದೆ. ಅಲ್ಲದೆ, ಅಕ್ಕಿ, ಮಾಂಸ, ಔಷಧ ಹಾಗೂ ಐಟಿ ಕ್ಷೇತ್ರದಲ್ಲಿ ಕೇಂದ್ರ ಸರಕಾರ ಭಾರತದ ಕಂಪನಿಗಳಿಗೆ ಹೆಚ್ಚಿನ ಅವಕಾಶ ನೀಡಬೇಕೆಂದು ಮನವಿ ಮಾಡಿದ್ದರೂ ಚೀನಾ ಇದಕ್ಕೆ ಒಪ್ಪುತ್ತಿಲ್ಲ. ಅಲ್ಲದೆ, ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದಕ್ಕೆ ಸಹಿ ಹಾಕುವ ಬಗ್ಗೆಯೂ ಭಾರತ ಚಿಂತಿಸುತ್ತಿದೆ. ಈ ಒಪ್ಪಂದಕ್ಕೆ ಅಂಕಿತ ಬಿದ್ದರೆ ಭಾರತ, ಚೀನಾ, ಆಸಿಯಾನ್ ರಾಷ್ಟ್ರಗಳು, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವೆ ಮುಕ್ತ ಮಾರುಕಟ್ಟೆಯ ಅವಕಾಶ ದೊರೆಯಲಿದ್ದು, ಇದರಿಂದ ಚೀನಾದಿಂದ ಆಮದಾಗುವ ಸರಕುಗಳ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಾಗಬಹುದೆಂಬುದು ಭಾರತದ ಆತಂಕವಾಗಿದೆ.

ಇಷ್ಟೇ ಅಲ್ಲದೆ, ಭಾರತದ ಸಾಫ್ಟ್‌ವೇರ್ ಉದ್ಯೋಗಿಗಳು, ನರ್ಸ್‌ಗಳು ಹಾಗೂ ಇತರೆ ಸೇವಾ ಕ್ಷೇತ್ರಗಳಿಗೆ ಮುಕ್ತ ಅವಕಾಶ ನೀಡಲು ಇತರೆ ದೇಶಗಳು ಹಿಂದೇಟು ಹಾಕುತ್ತಿವೆ ಎಂದು ತಿಳಿಸಿದೆ. ಅಲ್ಲದೆ, ಆಸಿಯಾನ್ ರಾಷ್ಟ್ರಗಳ ನಡುವಿನ ಮಾರುಕಟ್ಟೆ ನೀತಿಯನ್ನು ಸಹ ತರಾಟೆಗೆ ತೆಗೆದುಕೊಂಡಿರುವ ವಾಣಿಜ್ಯ ಸಂಸತ್ ಸ್ಥಾಯಿ ಸಮಿತಿ ಮತ್ತೊಂದು ವರದಿಯಲ್ಲಿ ಕೇಂದ್ರ ಸರಕಾರವನ್ನು ಟೀಕೆ ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ