ಆ್ಯಪ್ನಗರ

ಸ್ಟರ್ಲಿಂಗ್‌ ಬಯೊಟೆಕ್‌ನಿಂದ 8100 ಕೋಟಿ ರೂ. ಬ್ಯಾಂಕ್‌ ವಂಚನೆ ಹಗರಣ

ಸ್ಟರ್ಲಿಂಗ್‌ ಬಯೊಟೆಕ್‌ ಗ್ರೂಪ್‌, ಯುಎಇ, ಅಮೆರಿಕ, ಬ್ರಿಟಿಷ್‌ ವರ್ಜಿನ್‌ ಲ್ಯಾಂಡ್ಸ್‌, ಮಾರಿಷಸ್‌, ಬಾರ್ಬಡೋಸ್‌, ನೈಜೀರಿಯಾ ಮುಂತಾದ ದೇಶಗಳಲ್ಲಿ 100ಕ್ಕೂ ಹೆಚ್ಚು ಕಂಪನಿಗಳನ್ನು ಹೊಂದಿದ್ದು, ಅವುಗಳಲ್ಲಿ ಬಹುಪಾಲು ನಕಲಿ ಕಂಪನಿಗಳಾಗಿವೆ ಎಂದು ಇ.ಡಿ ತಿಳಿಸಿದೆ.

Vijaya Karnataka 27 Oct 2018, 8:27 am
ಗುಜರಾತ್‌ನ ವಡೋದರಾ ಮೂಲದ ಔಷಧ ಹಾಗೂ ತೈಲೋದ್ಯಮ ವಲಯದ ಸ್ಟರ್ಲಿಂಗ್‌ ಬಯೊಟೆಕ್‌ ಗ್ರೂಪ್‌ ಕಂಪನಿಯು 8,100 ಕೋಟಿ ರೂ. ಬ್ಯಾಂಕ್‌ ಸಾಲವನ್ನು ಉದ್ದೇಶಪೂರ್ವಕವಾಗಿ ಮರು ಪಾವತಿಸದೆ ವಂಚಿಸಿದ್ದು, ಕಂಪನಿಯ ಮಾಲೀಕರನ್ನು ಆರ್ಥಿಕ ಅಪರಾಧಿಗಳೆಂದು ಘೋಷಿಸಬೇಕು ಎಂದು ಜಾರಿ ನಿರ್ದೇಶನಾಲಯವು ವಿಶೇಷ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದೆ.
Vijaya Karnataka Web Nitin Sandeasara


ನೂತನ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ ಅಡಿಯಲ್ಲಿ (ಪಿಎಂಎಲ್‌ಎ) ಸ್ಟರ್ಲಿಂಗ್‌ ಬಯೊಟೆಕ್‌ ಗ್ರೂಪ್‌ನ ಮಾಲೀಕರಾದ ನಿತಿನ್‌ ಸಂದೇಸರ, ಚೇತನ್‌ ಸಂದೇಸರ, ದೀಪ್ತಿ ಸಂದೇಸರ ಮತ್ತು ಹಿತೇಶ್‌ ಪಟೇಲ್‌ ಅವರನ್ನು ಆರ್ಥಿಕ ಅಪರಾಧಿಗಳೆಂದು ಘೋಷಿಸಬೇಕು ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

ಸಾಲ ವಂಚನೆಗೆ ಸಂಬಂಧಿಸಿ ಕ್ರಿಮಿನಲ್‌ ವಿಚಾರಣೆಯಿಂದ ನುಣುಚಿಕೊಳ್ಳಲು ಈ ನಾಲ್ವರೂ ದೇಶ ಬಿಟ್ಟು ಪರಾರಿಯಾಗಿದ್ದಾರೆ ಎಂದು ಇ.ಡಿಯ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ ಹಾಗೂ ವಿದೇಶಗಳಲ್ಲಿ ಕಂಪನಿ ಹೊಂದಿರುವ 7,000 ಕೋಟಿ ರೂ. ಆಸ್ತಿಯನ್ನು ಕೂಡಲೆ ಜಪ್ತಿ ಮಾಡಲು ಅನುಮತಿಯನ್ನು ಜಾರಿ ನಿರ್ದೇಶನಾಲಯ ನಿರೀಕ್ಷಿಸಿದೆ. ಕೋರ್ಟ್‌ ಈ ನಾಲ್ವರು ಆರೋಪಿಗಳಿಗೆ ನೋಟಿಸ್‌ ಜಾರಿಗೊಳಿಸಿದೆ.

ಸ್ಟರ್ಲಿಂಗ್‌ ಬಯೊಟೆಕ್‌ ಗ್ರೂಪ್‌, ಯುಎಇ, ಅಮೆರಿಕ, ಬ್ರಿಟಿಷ್‌ ವರ್ಜಿನ್‌ ಲ್ಯಾಂಡ್ಸ್‌, ಮಾರಿಷಸ್‌, ಬಾರ್ಬಡೋಸ್‌, ನೈಜೀರಿಯಾ ಮುಂತಾದ ದೇಶಗಳಲ್ಲಿ 100ಕ್ಕೂ ಹೆಚ್ಚು ಕಂಪನಿಗಳನ್ನು ಹೊಂದಿದ್ದು, ಅವುಗಳಲ್ಲಿ ಬಹುಪಾಲು ನಕಲಿ ಕಂಪನಿಗಳಾಗಿವೆ ಎಂದು ಇ.ಡಿ ತಿಳಿಸಿದೆ.

ಸಂದೇಸರ ಕುಟುಂಬ ತೈಲ ವಲಯದಲ್ಲಿ ಹೆಚ್ಚು ಬಿಸಿನೆಸ್‌ ಹೊಂದಿದ್ದು, ನೈಜೀರಿಯಾದಲ್ಲಿ ಭಾರಿ ಆಸ್ತಿಪಾಸ್ತಿಗಳನ್ನು ಹೊಂದಿದೆ. ಪನಾಮಾದಲ್ಲೂ ಹಲವು ಹಡಗುಗಳು ಕುಟುಂಬದ ಸದಸ್ಯರ ಹೆಸರಿನಲ್ಲಿವೆ. ಸಂದೇಸರ ಕುಟುಂಬವು ಸರಕಾರಿ ಅಧಿಕಾರಿಗಳಿಗೆ 140 ಕೋಟಿ ರೂ.ಗೂ ಅಧಿಕ ಲಂಚವನ್ನು ಕೊಟ್ಟಿರುವ ಬಗ್ಗೆಯೂ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

ಹಗರಣಕ್ಕೆ ಸಂಬಂಧಿಸಿ ನಾಲ್ವರನ್ನು ಇ.ಡಿ ಬಂಧಿಸಿದೆ. ಮಧ್ಯವರ್ತಿ ಗಗನ್‌ ಧವನ್‌, ಕಂಪನಿಯ ನಿರ್ದೇಶಕ ರಾಜ್‌ ಭೂಷಣ್‌ ದೀಕ್ಷಿತ್‌ ಸೇರಿ ನಾಲ್ವರು ಬಂಧಿತರಾಗಿದ್ದಾರೆ. ಇದುವರೆಗೆ ಸ್ಟರ್ಲಿಂಗ್‌ ಬಯೊಟೆಕ್‌ ಗ್ರೂಪ್‌ನ 4,710 ಕೋಟಿ ರೂ. ಆಸ್ತಿಯನ್ನು ಇ.ಡಿ ಜಪ್ತಿ ಮಾಡಿದೆ. ಹಾಗೂ 15 ಲಕ್ಷ ದಾಖಲೆಗಳ ನ್ನು ವಶಪಡಿಸಿಕೊಂಡಿದೆ.

ಸ್ಟರ್ಲಿಂಗ್‌ ಬಯೊಟೆಕ್‌ ಬಯೊಡೇಟಾ

ವಡೋದರಾ ಮೂಲದ ಸ್ಟರ್ಲಿಂಗ್‌ ಬಯೊಟೆಕ್‌ ಔಷಧ ಹಾಗೂ ರಾಸಾಯನಿಕಗಳನ್ನು ಉತ್ಪಾದಿಸುತ್ತದೆ. ಗುಜರಾತ್‌ನಲ್ಲಿ ಸುಸಜ್ಜಿತ ಪ್ರಯೋಗಾಲಯ, ಉತ್ಪಾದನಾ ಘಟಕಗಳನ್ನು ಹೊಂದಿದ್ದು, ದೇಶ ವಿದೇಶಗಳಲ್ಲಿ ವಹಿವಾಟು ಹೊಂದಿದೆ. ನಿತಿನ್‌ ಸಂದೇಸರ ಕಂಪನಿಯ ಅಧ್ಯಕ್ಷರಾಗಿದ್ದರೆ, ಅವರ ಸೋದರ ಚೇತನ್‌ ಸಂದೇಸರ ಜಂಟಿ ವ್ಯವಸ್ಥಾಪಕ ನಿರ್ದೇಶಕರು. ಹಗರಣ ಬಯಲಾದ ನಂತರ ನಿತಿನ್‌ ಸಂದೇಸರ ಮತ್ತು ಇತರರು ನೈಜೀರಿಯಾಕ್ಕೆ ಪಲಾಯನ ಮಾಡಿದ್ದಾರೆ ಎನ್ನಲಾಗಿದೆ. ಭಾರತ ಹಾಗೂ ವಿದೇಶಗಳಲ್ಲಿ ನೂರಾರು ನಕಲಿ ಕಂಪನಿಗಳನ್ನು ಹೊಂದಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ನಿತಿನ್‌ ಸಂದೇಸರ, ಚೇತನ್‌ ಸಂದೇಸರ ಹಾಗೂ ದೀಪ್ತಿ ಬೆನ್‌ ಸಂದೇಸರ ಈಗ ನೈಜೀರಿಯಾದಲ್ಲಿ ತಲೆ ಮರೆಸಿಕೊಂಡಿರುವ ಸಾಧ್ಯತೆ ಇದೆ.

ಹಗರಣ ಹೇಗೆ?

ಬ್ಯಾಂಕ್‌ಗಳಿಂದ ಪಡೆದಿರುವ ಸಾಲವನ್ನು ನಕಲಿ ಕಂಪನಿಗಳಿಗೆ ವರ್ಗಾಯಿಸಿ ದುರುಪಯೋಗ. ಕಂಪನಿಯ ಬ್ಯಾಲೆನ್ಸ್‌ಶೀಟ್‌ನಲ್ಲಿ ತಪ್ಪು ಲೆಕ್ಕ, ಸುಳ್ಳು ಆದಾಯ ಘೋಷಿಸಿ, ಷೇರುಗಳ ಒಳ ಅವ್ಯಹಾರ, ಬೇನಾಮಿ ಕಂಪನಿಗಳ ಬೋಗಸ್‌ ಸೇಲ್‌ ಇತ್ಯಾದಿ ಆರೋಪ ಸಂದೇಸರ ಕುಟುಂಬದ ಮೇಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ