ಆ್ಯಪ್ನಗರ

ಉಕ್ಕು ಉತ್ಪಾದಕರಿಂದ ಮುಂದುವರಿದ ಕಬ್ಬಿಣದ ಅದಿರು ಆಮದು

ರಾಜ್ಯದಲ್ಲಿ ಕಬ್ಬಿಣದ ಅದಿರು ಉತ್ಪಾದನೆಗೆ ಸುಪ್ರೀಂಕೋರ್ಟ್‌ 2012ರಲ್ಲಿ ವಿಧಿಸಿದ್ದ ಮಿತಿ ಸಡಿಲವಾಗದಿರುವುದರಿಂದ ಉಕ್ಕು ಉತ್ಪಾದಕ ಕಂಪನಿಗಳು ಅದಿರನ್ನು ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಿವೆ. ಆದರೆ ಇಂಥ ಮಿತಿ ಕರ್ನಾಟಕದಲ್ಲಿ ಮಾತ್ರ ಕಳೆದ ನಾಲ್ಕಾರು ವರ್ಷಗಳಿಂದ ಇರುವುದರಿಂದ ಉಕ್ಕು ಉತ್ಪಾದನೆಗೆ ಹಿನ್ನಡೆಯಾಗಿದೆ ಎಂದು ಉದ್ಯಮ ವಲಯದ ತಜ್ಞರು ಹೇಳಿದ್ದಾರೆ.

Vijaya Karnataka Web 10 Aug 2017, 10:25 am

ಬೆಂಗಳೂರು: ರಾಜ್ಯದಲ್ಲಿ ಕಬ್ಬಿಣದ ಅದಿರು ಉತ್ಪಾದನೆಗೆ ಸುಪ್ರೀಂಕೋರ್ಟ್‌ 2012ರಲ್ಲಿ ವಿಧಿಸಿದ್ದ ಮಿತಿ ಸಡಿಲವಾಗದಿರುವುದರಿಂದ ಉಕ್ಕು ಉತ್ಪಾದಕ ಕಂಪನಿಗಳು ಅದಿರನ್ನು ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಿವೆ. ಆದರೆ ಇಂಥ ಮಿತಿ ಕರ್ನಾಟಕದಲ್ಲಿ ಮಾತ್ರ ಕಳೆದ ನಾಲ್ಕಾರು ವರ್ಷಗಳಿಂದ ಇರುವುದರಿಂದ ಉಕ್ಕು ಉತ್ಪಾದನೆಗೆ ಹಿನ್ನಡೆಯಾಗಿದೆ ಎಂದು ಉದ್ಯಮ ವಲಯದ ತಜ್ಞರು ಹೇಳಿದ್ದಾರೆ.

ಕಬ್ಬಿಣದ ಅದಿರು ಉತ್ಪಾದನೆಗೆ 3 ಕೋಟಿ ಟನ್‌ಗಳ ಮಿತಿ ಹಾಕಿರುವುದರಿಂದ ಯಾವುದೇ ಹೊಸ ಉಕ್ಕಿನ ಘಟಕ ಸ್ಥಾಪನೆಗೆ ಕರ್ನಾಟಕದಲ್ಲಿ ಅವಕಾಶವೇ ಇಲ್ಲವಾಗಿದೆ. ಈಗಿರುವ ಕಂಪನಿಗಳಿಗೂ ಇಲ್ಲಿನ ಅದಿರನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದು ರಾಜ್ಯದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೂ ತೊಡಕಾಗಿ ಪರಿಣಮಿಸಿದೆ ಎಂದು ಫೆಡರೇಷನ್‌ ಆಫ್‌ ಇಂಡಿಯನ್‌ ಮಿನರಲ್‌ ಇಂಡಸ್ಟ್ರೀಸ್‌ (ಎಫ್‌ಐಎಂಐ) ವಿವರಿಸಿದೆ.

'' ಕರ್ನಾಟಕಕ್ಕೆ 2012ರಿಂದ 3 ಕೋಟಿ ಟನ್‌ಗಳ ಅದಿರು ಉತ್ಪಾದನೆಯ ಮಿತಿ ಇದೆ. ಬೇರೆ ಯಾವುದೇ ರಾಜ್ಯದಲ್ಲಿ ಈ ಮಿತಿ ಇಲ್ಲ. ಒಡಿಶಾದಲ್ಲೂ 10 ಕೋಟಿ ಟನ್‌ಗೂ ಹೆಚ್ಚು ಕಬ್ಬಿಣದ ಅದಿರು ಉತ್ಪಾದಿಸಲಾಗುತ್ತಿದೆ. ಇದರ ಪರಿಣಾಮ ಪ್ರಮುಖ ಕಂಪನಿಗಳು ದಕ್ಷಿಣ ಆಫ್ರಿಕಾ, ಆಸ್ಪ್ರೇಲಿಯಾ ಮುಂತಾದ ಕಡೆಗಳಿಂದ ಕಬ್ಬಿಣದ ಅದಿರು ಆಮದು ಮಾಡಿಕೊಳ್ಳುತ್ತಿವೆ. ಸ್ಥಳೀಯ ಅದಿರಿಗೆ ಹೋಲಿಸಿದರೆ ಇದು ದುಬಾರಿಯಾಗಿವೆ'' ಎನ್ನುತ್ತಾರೆ ಫೆಡರೇಷನ್‌ ಆಫ್‌ ಇಂಡಿಯನ್‌ ಮಿನರಲ್‌ ಇಂಡಸ್ಟ್ರೀಸ್‌ನ ಸ್ಥಾಯಿ ಸಮಿತಿಯ ಉಪಾಧ್ಯಕ್ಷರಾದ ಯು.ಆರ್‌. ಆಚಾರ್ಯ.

ಸುಪ್ರೀಂಕೋರ್ಟ್‌ಗೆ ಈ ಮಿತಿಯನ್ನು ತೆರವುಗೊಳಿಸಲು ಮನವಿ ಸಲ್ಲಿಸಿದ್ದರೂ, ದುರದೃಷ್ಟವಶಾತ್‌ ಮರು ಪರಿಶೀಲಿಸುವ ಸಾಧ್ಯತೆಗಳು ಕಾಣಿಸುತ್ತಿಲ್ಲ ಎಂದು ಎಫ್‌ಐಎಂಐನ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾಗಿರುವ ಬಸಂತ್‌ ಪೊಡ್ಡಾರ್‌ ಹೇಳಿದ್ದಾರೆ.

ಕಬ್ಬಿಣದ ಅದಿರು ಆಮದು:

ರಾಜ್ಯದಲ್ಲಿ ಜೆಸ್‌ಡಬ್ಲ್ಯು, ಕುದುರೆಮುಖ ಕಬ್ಬಿಣ ಅದಿರು ಕಂಪನಿ (ಕೆ ಐಒಸಿಎಲ್‌) ಮುಂತಾದ ಪ್ರಮುಖ ಕಂಪನಿಗಳು ಕಬ್ಬಿಣದ ಅದಿರನ್ನು ಆಮದು ಮಾಡಿಕೊಳ್ಳುತ್ತಿವೆ.

ಕೆ ಐಒಸಿಎಲ್‌ ಛತ್ತೀಸ್‌ಗಢದಿಂದ ಅದಿರು ತರಿಸಿಕೊಳ್ಳುತ್ತದೆ. ಇದರ ಜತೆಗೆ ಇರಾನ್‌, ಬ್ರೆಜಿಲ್‌ನಿಂದ ಕೂಡ ಆಮದು ಮಾಡಿಕೊಳ್ಳುತ್ತದೆ. ನಂತರ ಮಂಗಳೂರಿನಲ್ಲಿರುವ ಕಂಪನಿಯ ಘಟಕದಲ್ಲಿ ಅದಿರನ್ನು ಪೆಲೆಟ್‌ಗಳಾಗಿ (ಉಂಡೆ) ಪರಿವರ್ತಿಸಿ ಮತ್ತೆ ರಫ್ತು ಮಾಡುತ್ತದೆ. ಕಳೆದ 2016-17ರ ಸಾಲಿನಲ್ಕಲಿ ಕಂಪನಿ 14 ಲಕ್ಷದ 60 ಸಾವಿರ ಟನ್‌ ಉಕ್ಕಿನ ವಹಿವಾಟು ನಡೆಸಿತ್ತು.

ರಾಜ್ಯದಲ್ಲಿ ಉಕ್ಕು ಉತ್ಪಾದನೆಗೆ ಈ ಹಿಂದೆ ಮುಂದಾಗಿದ್ದ ಅರ್ಸೆಲರ್‌ ಮಿತ್ತಲ್‌, ಟಾಟಾ ಸ್ಟೀಲ್‌ ಕಂಪನಿಗಳು ಭೂಸ್ವಾಧೀನ ಕುರಿತ ಬಿಕ್ಕಟ್ಟಿನ ಜತೆಗೆ ಉತ್ಪಾದನೆಗೆ ನಿರ್ಬಂಧದ ಪರಿಣಾಮ ಯೋಜನೆಯಿಂದ ಹಿಂದೆ ಸರಿದಿವೆ. ಹೊಸ ಘಟಕ ಸ್ಥಾಪನೆಗೂ ಅವಕಾಶ ಇಲ್ಲವಾಗಿದೆ, ಉದ್ಯಮ ಮತ್ತು ಮೂಲ ಸೌಕರ್ಯ ವಲಯದ ಹಿನ್ನಡೆಗೆ ಕಾರಣವಾಗಿದೆ ಎನ್ನುತ್ತಾರೆ ವಿಶ್ಲೇಷಕರು.

Vijaya Karnataka Web crisis of iron ore to hit steel industry
ಉಕ್ಕು ಉತ್ಪಾದಕರಿಂದ ಮುಂದುವರಿದ ಕಬ್ಬಿಣದ ಅದಿರು ಆಮದು


Crisis of iron ore to hit steel industry

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ