ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ನೆಚ್ಚಿನ ಡಿಜಿಟಲ್ ಇಂಡಿಯಾ ಯೋಜನೆಯನ್ನು ಬಾಂಗ್ಲಾದೇಶದ ಹೆಸರಾಂತ ಅರ್ಥ ಶಾಸ್ತ್ರಜ್ಞ, ಬ್ಯಾಂಕರ್ ಮಹಮ್ಮದ್ ಯೂನಸ್ ಬೆಂಬಲಿಸಿದ್ದಾರೆ. ಹೀಗಿದ್ದರೂ ಇದನ್ನು ಬಲವಂತವಾಗಿ ಹೇರುವುದು ಸಲ್ಲ. ಬದಲಿಗೆ ಡಿಜಿಟಲ್ ಎಕಾನಮಿಯನ್ನು ಅನುಸರಿಸುವಂತೆ ಜನತೆಗೆ ಉತ್ತೇಜಿಸಬೇಕು. ' ಪೋಷಕರು ಮಕ್ಕಳಿಗೆ ಚಾಕೊಲೇಟ್ ತೋರಿಸಿ, ಆಸಕ್ತಿ ಕೆರಳಿಸುವಂತೆ ಜನತೆಯನ್ನು ಕ್ಯಾಶ್ಲೆಸ್ ಅರ್ಥವ್ಯವಸ್ಥೆಯತ್ತ ಪ್ರೋತ್ಸಾಹಿಸಬೇಕು' ಎಂದವರು ಹೇಳಿದ್ದಾರೆ.
ಬೆಂಗಳೂರಿನ ಸಿನರ್ಜಿಯಾ ಫೌಂಡೇಷನ್ ಗುರುವಾರ ಆಯೋಜಿಸಿದ್ದ, ' ಸಾಮಾಜಿಕ ಸಮಸ್ಯೆ ಪರಿಹಾರಕ್ಕೆ ಸಾಮಾಜಿಕ ಉದ್ಯಮ' ವಿಚಾರ ಕುರಿತ ಸಂವಾದದಲ್ಲಿ ಡಾ. ಮಹಮ್ಮದ್ ಯೂನಸ್ ಅವರು ಸಾಮಾಜಿಕ ಉದ್ದಿಮೆ ಕುರಿತ ತಮ್ಮ ನಿಲುವನ್ನು ವಿವರಿಸಿದರು.
ಕಾರ್ಪೊರೇಟ್ ವಲಯದ ಅನೇಕ ಮಂದಿ ತಮ್ಮ ಸಾಮಾಜಿಕ ಕಲ್ಯಾಣ ಕಾರ್ಯಕ್ರಮದ ಭಾಗವಾಗಿ ಟ್ರಸ್ಟ್ಗಳನ್ನು ಸ್ಥಾಪಿಸುತ್ತಾರೆ. ಇದರಿಂದ ಒಂದಷ್ಟು ಮಂದಿಗೆ ಉಪಯೋಗವಾದೀತು. ಆದರೆ ಅದು ಸೀಮಿತ ವ್ಯಾಪ್ತಿಯದ್ದಾಗಿದೆ. ಟ್ರಸ್ಟ್ ಬದಲಿಗೆ ಸಾಮಾಜಿಕ ಉದ್ಯಮಕ್ಕಾಗಿ ಹಣ ವಿನಿಯೋಗಿಸಿದರೆ ದೊಡ್ಡ ಸಂಖ್ಯೆಯಲ್ಲಿ ಬಡಜನತೆಗೆ ಅನುಕೂಲವಾಗಲಿದೆ. ಅವರು ಸ್ವಾವಲಂಬಿಗಳಾಗಲು, ತಾವೇ ಉದ್ಯಮಶೀಲರಾಗಲು ಇದು ಸಹಕರಿಸುತ್ತದೆ ಎಂದು ವಿವರಿಸಿದರು.
ಕಿರು ಹಣಕಾಸು ಸೇವೆಯು ಬಡವರಿಗೆ ಆಮ್ಲಜನಕ ಇದ್ದಂತೆ. ಹಾಗೂ ಇದು ಯಾವುದೇ ದೇಶ ಮತ್ತು ಪರಿಸರದಲ್ಲಿ ಯಶಸ್ವಿಯಾಗುತ್ತದೆ. ಬಾಂಗ್ಲಾದ ಗ್ರಾಮೀಣ ಬ್ಯಾಂಕ್ ಮಾದರಿಯಲ್ಲಿ ಅಮೆರಿಕದಲ್ಲೂ ಗ್ರಾಮೀಣ ಅಮೆರಿಕ ಎಂಬ ಹೆಸರಿನಲ್ಲಿ ಕಿರು ಹಣಕಾಸು ಸಂಸ್ಥೆಯನ್ನು ಹುಟ್ಟು ಹಾಕಲಾಗಿದ್ದು, ಜನತೆಗೆ ಉಪಯೋಗವಾಗಿದೆ ಎಂದರು.
ಉದ್ಯೋಗವೇ ಸೃಜನಶೀಲತೆಯ ಅಂತ್ಯ
ಉದ್ಯೋಗಕ್ಕಾಗಿ ಹುಡುಕಾಟ ನಡೆಸುವುದು, ಸೇರಿಕೊಳ್ಳುವುದು ವ್ಯಕ್ತಿಯ ಸೃಜನಶೀಲತೆಯನ್ನು ಅಂತ್ಯಗೊಳಿಸುತ್ತದೆ. ಸ್ವಂತ ಉದ್ಯಮಿಯಾಗುವುದರಿಂದ ಮಾತ್ರ ತಾನೂ ಬೆಳೆಯುವುದರ ಜತೆಗೆ ಇತರರನ್ನೂ ಬೆಳೆಸಬಹುದು. ಸಂಪತ್ತಿನ ಅಸಮಾನ ಹಂಚಿಕೆಯನ್ನು ಹೋಗಲಾಡಿಸಬೇಕಾದರೆ ಎಲ್ಲರೂ ಉದ್ಯಮಶೀಲರಾಗಬೇಕು ಎಂದು ಯೂನಸ್ ಹೇಳಿದರು.
ಬಾಂಗ್ಲಾದೇಶದಲ್ಲಿ ಗ್ರಾಮೀಣ ಬ್ಯಾಂಕ್ ಅನ್ನು ಬಡವರಿಗಾಗಿಯೇ ಸ್ಥಾಪಿಸಲಾಯಿತು. ಅಲ್ಲಿದ್ದವರೆಲ್ಲ ಬಡವರೇ. ಅವರೇ ಸಾಲ ಪಡೆದು, ಹಿಂತಿರುಗಿಸಿದರು. ಬ್ಯಾಂಕನ್ನು ಲಾಭಗೊಳಿಸಿದರು. ಆ ಲಾಭವನ್ನು ಅವರೇ ಹಂಚಿಕೊಂಡರು. ಸಾಮಾಜಿಕ ಉದ್ಯಮದಲ್ಲಿ ಲಾಭ ತನಗಾಗಿ ಇರುವುದಿಲ್ಲ. ಲಾಭ ಇತರರಿಗೆ ಸೇರುತ್ತದೆ. ಇತರ ಉದ್ಯಮದಲ್ಲಿ ಲಾಭ ಕೆಲವೇ ವ್ಯಕ್ತಿಗಳಿಗೆ ಜಮೆಯಾಗುತ್ತಾ ಹೋಗುತ್ತದೆ. ಅದಯ ಅವರ ತಪ್ಪಲ್ಲ, ವ್ಯವಸ್ಥೆಯ ತಪ್ಪು ಎಂದು ಯೂನಸ್ ವಿವರಿಸಿದರು.