ಆ್ಯಪ್ನಗರ

ಅಡುಗೆ ಎಣ್ಣೆ ಮೇಲಿನ ಸುಂಕ ಕಡಿತಕ್ಕೆ ತತ್ತರಿಸಿದ ತೆಂಗು ಬೆಳೆಗಾರರು, ನೆಲಕಚ್ಚಿದ ಕೊಬ್ಬರಿ ಬೆಲೆ

ಕೇಂದ್ರ ಅಡುಗೆ ಎಣ್ಣೆ ಮೇಲಿನ ಆಮದು ಸುಂಕ ಇಳಿಕೆ ಮಾಡಿದ್ದರಿಂದ ಕೊಬ್ಬರಿ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ತೆಂಗು ಹೆಚ್ಚಾಗಿ ಬೆಳೆವ ಕಲ್ಪತರು ನಾಡು ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ ಜಿಲ್ಲೆಗಳ ಬೆಳೆಗಾರರನ್ನು ಆತಂಕಕ್ಕೆ ತಳ್ಳಿದೆ.

Vijaya Karnataka Web 10 Jun 2022, 12:49 pm

ಹೈಲೈಟ್ಸ್‌:

  • ಕೊಬ್ಬರಿ ಬೆಲೆ ತಗ್ಗಿಸಿದ ಅಡುಗೆ ಎಣ್ಣೆ ಮೇಲಿನ ಸುಂಕ ಕಡಿತ
  • ಬೆಳೆಗಾರರಿಗೆ 4 ಸಾವಿರ ರೂ. ಬೆಲೆ ಇಳಿಕೆಯ ಬಿಸಿ
  • ಸಂಗ್ರಹಿಸಿದ ಕೊಬ್ಬರಿ ಮಾರಬೇಕೋ, ಇಟ್ಟುಕೊಳ್ಳಬೇಕೋ ಎಂಬ ದ್ವಂದ್ವದಲ್ಲಿ ರೈತರು


ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web dry coconut
  • ತಿ.ನಾ ಪದ್ಮನಾಭ, ಮಾಗಡಿ ಗ್ರಾಮಾಂತರ
ಕೇಂದ್ರ ಸರಕಾರದ ಅಡುಗೆ ಎಣ್ಣೆ ಮೇಲಿನ ಆಮದು ಸುಂಕ ಇಳಿಕೆ ನೀತಿಯಿಂದಾಗಿ ಕೊಬ್ಬರಿ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದರಿಂದ ತೆಂಗಿನ ಕಾಯಿಯನ್ನು ಕೊಬ್ಬರಿ ಮಾಡಿ ಮಾರಾಟಕ್ಕಿಟ್ಟಿದ್ದ ರೈತರಿಗೆ ಈ ಬೆಲೆ ಇಳಿಕೆಯ ಬಿಸಿ ತಟ್ಟಲಾರಂಭಿಸಿದೆ.
ತೆಂಗು ಹೆಚ್ಚಾಗಿ ಬೆಳೆವ ಕಲ್ಪತರು ನಾಡು ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ ಜಿಲ್ಲೆಗಳ ಬೆಳೆಗಾರರಲ್ಲಿ ಬೆಲೆ ಇಳಿಕೆ ಬೇಸರ ಹಾಗೂ ಆತಂಕ ಮೂಡಿಸಿದೆ.

ರಾಮನಗರ ಸೇರಿದಂತೆ ತೆಂಗು ಬೆಳೆವ ಸಾಕಷ್ಟು ಜಿಲ್ಲೆಗಳ ರೈತರು ತೆಂಗಿನ ಕಾಯಿಯನ್ನು ಮೂರು ತಿಂಗಳ ಹಿಂದೆಯೇ ಕಿತ್ತು ಕೊಬ್ಬರಿ ಮಾಡಿ ಇಟ್ಟುಕೊಂಡಿದ್ದಾರೆ. ಬೆಲೆ ಏರಿಕೆ ಆಗುವವರೆಗೂ ಕೊಬ್ಬರಿ ಇಟ್ಟುಕೊಂಡು ಕಾಯಲು ಬರುವುದಿಲ್ಲ. ಕಾರಣ ಕೊಬ್ಬರಿ ದಿನಕಳೆದಂತೆ ಮುಗ್ಗಲಾಗಿ ಸತ್ವ ಕಳೆದುಕೊಳ್ಳಲು ಆರಂಭಿಸುತ್ತದೆ. ಹೀಗಾಗಿ ಕೆಲ ರೈತರು ತಾವು ಬೆಳೆದ ಕೊಬ್ಬರಿ ಮಾರುವುದೋ, ಬಿಡುವುದೋ ಎಂದು ದಿಕ್ಕುತೋಚದಂತಾಗಿದ್ದಾರೆ.

ವಿದೇಶಗಳಲ್ಲಿ ಅಡುಗೆ ಎಣ್ಣೆ ಬೆಲೆ ದಿಢೀರ್‌ ಏರಿಗೆ: ದೇಶದಲ್ಲಿ ಯಾವ ಎಣ್ಣೆಗೆ ಎಷ್ಟು ಬೆಲೆ? ಇಲ್ಲಿದೆ ಪೂರ್ಣ ವಿವರ!
ಕೊಬ್ಬರಿ ಬೆಲೆ

ಜನವರಿ, ಫೆಬ್ರವರಿಯಲ್ಲಿ ಕ್ವಿಂಟಾಲ್‌ಗೆ 17,400 ರೂ. ಇದ್ದ ಉಂಡೆ ಕೊಬ್ಬರಿ ಬೆಲೆ ಇದೀಗ 13,500 ರೂ. ಅಂಚಿಗೆ ತಲುಪಿದೆ. ಕೆಲವೇ ದಿನಗಳಲ್ಲಿ ಬೆಂಬಲ ಬೆಲೆ 11 ಸಾವಿರ ರೂ. ಮಟ್ಟಕ್ಕೆ ಇಳಿದರೂ ಆಶ್ಚರ್ಯವಿಲ್ಲ. ಮಾರುಕಟ್ಟೆ ತಜ್ಞರ ಪ್ರಕಾರ, ಅಡುಗೆ ಎಣ್ಣೆ ಮೇಲಿನ ಆಮದು ಸುಂಕ ಕಡಿತಗೊಳಿಸಿರುವುದು ಕೊಬ್ಬರಿ ಬೆಲೆ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.

ಏಕಾಏಕಿ ಕೊಬ್ಬರಿ ಬೆಲೆ ಕ್ವಿಂಟಾಲ್‌ಗೆ ₹5,000 ಕುಸಿತ, ಸಂಕಷ್ಟದಲ್ಲಿ ತೆಂಗು ಬೆಳೆಗಾರರು
ಆರ್ಥಿಕತೆಗೆ ಹೊಡೆತ

ಎಣ್ಣೆ ಕಾಳುಗಳ ಬೆಲೆ ಇಳಿಕೆಯಾದಂತೆ ಕೊಬ್ಬರಿ ಎಣ್ಣೆಗೆ ಬೇಡಿಕೆ ಕಡಿಮೆಯಾಗಿದೆ. ಕೊಬ್ಬರಿ ಬೆಲೆ ಕುಸಿತಕ್ಕೆ ಇದು ಇನ್ನೊಂದು ಕಾರಣ ಎನ್ನಲಾಗಿದೆ. ಆಮದು ಸುಂಕ ಇಳಿಕೆ ಸಂದರ್ಭ ಕೊಬ್ಬರಿ ದರ ಕುಸಿತ ನೇರವಾಗಿ ರೈತ ಸಮುದಾಯದ ಆರ್ಥಿಕತೆಯ ಮೇಲೆ ಭಾರಿ ಹೊಡೆತ ನೀಡಲಿದೆ ಎಂಬುದು ಸರಕಾರದ ಗಮನಕ್ಕೆ ಬರಲಿಲ್ಲವೇ ಎಂಬ ಪ್ರಶ್ನೆಯ ಜತೆಗೆ, ಎಣ್ಣೆ ಕಂಪನಿಗಳ ಭವಿಷ್ಯವೇ ಸರಕಾರಕ್ಕೆ ಹೆಚ್ಚಾಯಿತೇ ಎಂಬ ಮಾತುಗಳೂ ಕೇಳಿಬರುತ್ತಿವೆ.

ಇನ್ನು ಮುಂದಾದರೂ ಸರಕಾರ ಕೊಬ್ಬರಿ ಸೇರಿದಂತೆ ಇತರ ಕೃಷಿ ಉತ್ಪನ್ನಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಸೂಕ್ತ, ಪರ್ಯಾಯ ಕ್ರಮ ಜಾರಿಗೆ ತರದಿದ್ದರೆ ಯುವ ಸಮುದಾಯ ಕೃಷಿಯಿಂದ ವಿಮುಖರಾಗುವ ಸಾಧ್ಯತೆ ಹೆಚ್ಚಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಜಿಎಂ ಹಳ್ಳಿ ಗ್ರಾಪಂ ಉಪಾಧ್ಯಕ್ಷ ಜಿ.ಎಂ ಗೋವಿಂದರಾಜು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ