ಆ್ಯಪ್ನಗರ

ಬ್ಯಾಂಕ್‌ಗಳ ವಿಲೀನದಿಂದ ಒಂದೇ ಒಂದು ಉದ್ಯೋಗವೂ ನಷ್ಟವಾಗದು: ವಿತ್ತಸಚಿವೆ ಭರವಸೆ

ಜಾಗತಿಕ ಮಟ್ಟದ ಬಲಿಷ್ಠ ಬ್ಯಾಂಕ್‌ಗಳ ನಿರ್ಮಾಣಕ್ಕಾಗಿ ಬ್ಯಾಂಕ್‌ಗಳ ವಿಲೀನದ ಪ್ರಸ್ತಾಪ ಮಾಡಲಾಗಿದ್ದು, ಇದರಿಂದ ಒಂದೇ ಒಂದು ಉದ್ಯೋಗವೂ ನಷ್ಟವಾಗದು; ಆ ಬಗ್ಗೆ ಆತಂಕ ಬೇಡ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತೊಮ್ಮೆ ಭರವಸೆ ನೀಡಿದ್ದಾರೆ.

PTI 1 Sep 2019, 4:13 pm
ಚೆನ್ನೈ: ಪ್ರಸ್ತಾವಿತ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ವಿಲೀನದಿಂದ ಒಂದೇ ಒಂದು ಉದ್ಯೋಗವೂ ನಷ್ಟವಾಗುವುದಿಲ್ಲ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಯಾವ ಉದ್ಯೋಗಿಯನ್ನೂ ಮನೆಗೆ ಕಳುಹಿಸುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ.
Vijaya Karnataka Web Nirmala Sitharaman


'ಬ್ಯಾಂಕ್‌ಗಳ ವಿಲೀನದಿಂದ ಉದ್ಯೋಗ ನಷ್ಟವಾಗುತ್ತದೆ ಎಂಬುದು ಸಂಪೂರ್ಣ ತಪ್ಪು ಮಾಹಿತಿ. ಈ ಬ್ಯಾಂಕ್‌ಗಳಲ್ಲಿರುವ ಪ್ರತಿಯೊಂದು ನೌಕರರ ಸಂಘಟನೆಗೂ ಪ್ರತಿಯೊಬ್ಬ ಉದ್ಯೋಗಿಗೂ ನಾನು ಕಳೆದ ಶುಕ್ರವಾರ ನೀಡಿದ ಭರವಸೆಯನ್ನೇ ಮತ್ತೊಮ್ಮೆ ನೆನಪಿಸುತ್ತಿದ್ದೇನೆ. ಬ್ಯಾಂಕ್‌ಗಳ ವಿಲೀನದ ಬಗ್ಗೆ ವಿವರಣೆ ನೀಡಿದಾಗ ಒಬ್ಬನೇ ನೌಕರನಿಗೂ ಉದ್ಯೋಗ ನಷ್ಟವಾಗುವುದಿಲ್ಲ ಎಂದು ಹೇಳಿದ್ದೆ. ಇಂದೂ ಅದನ್ನೇ ಪುನರುಚ್ಚರಿಸುತ್ತೇನೆ' ಎಂದು ಸಚಿವೆ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.

ಉದ್ಯೋಗ ನಷ್ಟದ ಭೀತಿಯಿಂದ ನೌಕರರ ಸಂಘಟನೆಗಳು ಬ್ಯಾಂಕ್‌ಗಳ ವಿಲೀನ ಪ್ರಸ್ತಾಪವನ್ನು ವಿರೋಧಿಸುತ್ತಿವೆಯೆ ಎಂಬ ಪ್ರಶ್ನೆಗೆ ಸಚಿವೆ ಈ ರೀತಿ ಉತ್ತರಿಸಿದರು.

10 ಬ್ಯಾಂಕ್‌ಗಳನ್ನು ನಾಲ್ಕು ಬ್ಯಾಂಕ್‌ಗಳಲ್ಲಿ ವಿಲೀನಗೊಳಿಸಿ ಜಾಗತಿಕ ಮಟ್ಟದ ಬಲಿಷ್ಠ ಬ್ಯಾಂಕಿಂಗ್ ವಲಯ ನಿರ್ಮಿಸುವ ಪ್ರಸ್ತಾಪವನ್ನು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಪ್ರಕಟಿಸಿದ್ದರು.

ಸರಕಾರದ ಪ್ರಸ್ತಾವಕ್ಕೆ ಪ್ರತಿಕ್ರಿಯಿಸಿದ್ದ ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟ, ಉದ್ಯೋಗ ನಷ್ಟದ ಆತಂಕ ವ್ಯಕ್ತಪಡಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ