ಆ್ಯಪ್ನಗರ

ITR ಪೋರ್ಟಲ್‌ನ ದೋಷಗಳನ್ನು ಪರಿಹರಿಸದಿದ್ದರೆ ರಿಟರ್ನ್ ಸಲ್ಲಿಕೆ ಗಡುವನ್ನು ನಾವೇ ವಿಸ್ತರಿಸುತ್ತೇವೆ - ಗುಜರಾತ್‌ ಹೈಕೋರ್ಟ್‌

ಐಟಿಆರ್‌ ಪೋರ್ಟಲ್‌ನಲ್ಲಿರುವ ಸಮಸ್ಯೆಗಳನ್ನು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು ಪರಿಹರಿಸದೇ ಇದ್ದಲ್ಲಿ ಗಡುವನ್ನು ಮಾರ್ಚ್ 15 ರವರೆಗೆ ವಿಸ್ತರಿಸುವುದಾಗಿ ಗುಜರಾತ್‌ ಹೈಕೋರ್ಟ್‌ ನೇರ ಎಚ್ಚರಿಕೆ ನೀಡಿದೆ.

ET Online 20 Jan 2022, 2:50 pm
ತೆರಿಗೆ ಲೆಕ್ಕಪರಿಶೋಧನಾ ವರದಿ (ಟಿಎಆರ್) ಮತ್ತು ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವಾಗ ತೆರಿಗೆದಾರರು ಎದುರಿಸುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಗುಜರಾತ್ ಹೈಕೋರ್ಟ್ ಕೇಂದ್ರೀಯ ನೇರ ತೆರಿಗೆಗಳ ಮಂಡಳಿಗೆ (ಸಿಬಿಡಿಟಿ) ಆದೇಶಿಸಿದೆ. ಅಷ್ಟೇ ಅಲ್ಲದೆ ಸಮಸ್ಯೆಗಳನ್ನು ಪರಿಹರಿಸದೇ ಇದ್ದಲ್ಲಿ ಗಡುವನ್ನು ಮಾರ್ಚ್ 15 ರವರೆಗೆ ವಿಸ್ತರಿಸುವುದಾಗಿ ಎಚ್ಚರಿಕೆ ನೀಡಿದೆ. ಇದು ದೇಶದಾದ್ಯಂತ ಪರಿಣಾಮ ಬೀರಲಿದೆ ಎಂದು ವಿಷಯದ ಗಂಭೀರತೆಯನ್ನು ಆದಾಯ ತೆರಿಗೆ ಇಲಾಖೆಗೆ ಮನವರಿಕೆ ಮಾಡಿದೆ.
Vijaya Karnataka Web ITR portal Court


2021-22ರ ಮೌಲ್ಯಮಾಪನ ವರ್ಷಕ್ಕೆ ಟಿಎಆರ್‌ ಮತ್ತು ಐಟಿಆರ್‌ (ನಿರ್ದಿಷ್ಟ ತೆರಿಗೆ ಪಾವತಿದಾರರಿಗೆ) ಸಲ್ಲಿಸಲು ಕ್ರಮವಾಗಿ ಫೆಬ್ರವರಿ 15 ಮತ್ತು ಮಾರ್ಚ್ 15 ಅಂತಿಮ ದಿನವಾಗಿದೆ.

‘ಟಿಒಐ’ ವರದಿಯ ಪ್ರಕಾರ, ಹೊಸದಾಗಿ ಜಾರಿಗೊಳಿಸಲಾದ ಐಟಿ ಪೋರ್ಟಲ್‌ನ ಸಮಸ್ಯೆಗಳನ್ನು ಉಲ್ಲೇಖಿಸಿ ಚಾರ್ಟರ್ಡ್ ಅಕೌಂಟೆಂಟ್‌ಗಳ ಸಂಘವು ಈಗಾಗಲೇ ಗಡುವು ವಿಸ್ತರಣೆಯನ್ನು ಕೋರಿದೆ. ಅಷ್ಟೇ ಅಲ್ಲದೆ ಖುದ್ದಾಗಿ ಕಚೇರಿಗೆ ತೆರಳಿ ತೆರಿಗೆ ರಿಟರ್ನ್ಸ್ ಮತ್ತು ವರದಿಗಳನ್ನು ಸಲ್ಲಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದೆ.

ಮಂಗಳವಾರದ ವಿಚಾರಣೆಯ ಸಂದರ್ಭದಲ್ಲಿ, ಸಿಬಿಡಿಟಿಯು, ಐಟಿ ರಿಟರ್ನ್ಸ್‌ನ ಭೌತಿಕ ಫೈಲಿಂಗ್‌ನ ವಿನಂತಿಯನ್ನು ತಿರಸ್ಕರಿಸಿತ್ತಲ್ಲದೆ, ಇದು ಕಾರ್ಯಸಾಧ್ಯವಲ್ಲ ಎಂದು ಹೇಳಿತ್ತು. ಬಳಿಕ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ನಿಶಾ ಠಾಕೋರ್ ಅವರಿದ್ದ ಪೀಠವು ಕೇಂದ್ರ ಸರ್ಕಾರದ ವಕೀಲರಿಗೆ ಸೂಚನೆ ನೀಡಿ,“ಸೃಷ್ಟಿಯಾಗಿರುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಸಲು ಉನ್ನತ ಅಧಿಕಾರಿಯನ್ನು ಕೇಳಿ ಮತ್ತು ಅವರು ತಕ್ಷಣ ಹಾಜರಾಗಬಹುದು. ಸಮಸ್ಯೆಗೆ ಸ್ಪಂದಿಸದೇ ಇದ್ದರೆ ಅದಕ್ಕೆ ಅಧಿಕಾರಿಯೇ ಹೊಣೆಯಾಗುತ್ತಾರೆ. ಸಿಬಿಡಿಟಿ ಅತ್ಯಂತ ಮೊಂಡುತನದ ಮನೋಭಾವವನ್ನು ಮುಂದುವರಿಸುವುದಾದರೆ, ಅದು ಇಂದಿನ ಮೌಲ್ಯಮಾಪಕರ ಸಮಸ್ಯೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಸಿಬಿಡಿಟಿ ಸಂತೋಷಪಡುವ ಅಗತ್ಯವಿಲ್ಲ, ಏಕೆಂದರೆ ಶೇ. 35ರಷ್ಟು ಮೌಲ್ಯಮಾಪಕರು ತಮ್ಮ ವರದಿಗಳನ್ನು ಅಪ್‌ಲೋಡ್ ಮಾಡಲು ಕಷ್ಟಪಡುತ್ತಿದ್ದಾರೆ ಮತ್ತು ಶೇ. 65 ಜನರು ತಮ್ಮ ತೆರಿಗೆ ಲೆಕ್ಕಪರಿಶೋಧನಾ ವರದಿ ಮತ್ತು ಐಟಿ ರಿಟರ್ನ್‌ಗಳನ್ನು ಇನ್ನೂ ಸಲ್ಲಿಸಬೇಕಾಗಿದೆ ಮತ್ತು ಈಗ ನಮಗೆ ಒಂದು ತಿಂಗಳಿಗಿಂತ ಕಡಿಮೆ ಸಮಯವಿದೆ.”

ಮಂಗಳವಾರ ಯಾವುದೇ ನಿರ್ದೇಶನ ನೀಡಲು ನಿರಾಕರಿಸಿದ ಗುಜರಾತ್ ಹೈಕೋರ್ಟ್, ಯಾವುದೇ ಮೌಲ್ಯಮಾಪಕರಿಗೆ ತೊಂದರೆ ಉಂಟಾದರೆ, ಯಾವುದೇ ರೀತಿಯಲ್ಲಾದರೂ ಸರಿ 48 ಗಂಟೆಗಳ ಒಳಗೆ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ‘ಉನ್ನತ ಪ್ರಾಧಿಕಾರ’ ಭರವಸೆ ನೀಡಬೇಕು ಎಂದು ಒತ್ತಾಯಿಸಿತು.

ಗುರುವಾರದೊಳಗೆ ಈ ಸಂಬಂಧ ಅಫಿಡವಿಟ್‌ ಸಲ್ಲಿಸುವಂತೆ ಹೈಕೋರ್ಟ್‌ ಅಧಿಕಾರಿಗಳಿಗೆ ಹೇಳಿದೆ. ಐಟಿ ಪೋರ್ಟಲ್‌ನಲ್ಲಿ ವರದಿ ಸಲ್ಲಿಸುವಲ್ಲಿ ಲೋಪದೋಷಗಳಿದ್ದು, ಅಧಿಕಾರಿಗಳು ಇದರಿಂದ ತಪ್ಪಿಸಿಕೊಳ್ಳುವಂತಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. "ಪರಿಸ್ಥಿತಿಯನ್ನು ನೋಡಿಕೊಳ್ಳುವ ವಿಶ್ವಾಸ ಅವರಿಗಿದ್ದಲ್ಲಿ, ಇದನ್ನು ಪರಿಹರಿಸಲಿ,” ಎಂದು ನ್ಯಾಯಾಲಯವು ಹೇಳಿದೆ.

ಶುಕ್ರವಾರಕ್ಕೆ ವಿಚಾರಣೆಯನ್ನು ಮುಂದೂಡಿರುವ ನ್ಯಾಯಾಲಯವು, ಫೆಬ್ರುವರಿ 10ರಂದು ಅಂದರೆ ಗಡುವಿಗೆ ಕೇವಲ ಐದು ದಿನಗಳ ಮೊದಲೂ ಮೌಲ್ಯಮಾಪಕರು ಸಮಸ್ಯೆಯನ್ನು ಎದುರಿಸುತ್ತಿದ್ದರೆ ನ್ಯಾಯಾಲಯವು ಮಾರ್ಚ್ 15, 2022ರವರೆಗೆ ಗಡುವನ್ನು ವಿಸ್ತರಿಸುತ್ತದೆ ಎಂದು ಸ್ವಷ್ಟ ಎಚ್ಚರಿಕೆ ನೀಡಿದೆ.

"ರಿಟ್ ನೀಡುವಿಕೆಯು ದೇಶದಾದ್ಯಂತ ಪರಿಣಾಮವನ್ನು ಬೀರುತ್ತದೆ. ಸಿಬಿಡಿಟಿ ಅದರ ಬಗ್ಗೆ ಏನು ಹೇಳುತ್ತದೆ ಎಂದು ನೋಡೋಣ, ”ಎಂದು ನ್ಯಾಯಮೂರ್ತಿಗಳು ಹೇಳಿದರು. ಮತ್ತು ಇಲಾಖೆಯು ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗದಿದ್ದರೆ ಮೌಲ್ಯಮಾಪನಕಾರರಿಗೆ ಯಾವುದೇ ರೂಪದಲ್ಲಿ ದಂಡ ಅಥವಾ ಬಡ್ಡಿಯ ಹೊಣೆಗಾರಿಕೆಯನ್ನು ವಿಧಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ವಾಣಿಜ್ಯ ಕ್ಷೇತ್ರದ 20 ಕ್ಕೂ ಹೆಚ್ಚು ವಲಯಗಳಿಗೆ ಸಂಬಂಧಿಸಿದ ಅತ್ಯುತ್ತಮ ಲೇಖನಗಳು ಮತ್ತು ಉದ್ಯಮಕ್ಕೆ ಸಂಬಂಧಿಸಿದ ಆಳವಾದ ಮಾಹಿತಿಗಾಗಿ ನೀವು ಎಕನಾಮಿಕ್ ಟೈಮ್ಸ್‌ ಓದಬಹುದು. ಮಾಹಿತಿಯುಕ್ತ ಲೇಖನಗಳನ್ನು ಓದಲು ಎಕನಾಮಿಕ್ ಟೈಮ್ಸ್ ಇಲ್ಲಿ ಕ್ಲಿಕ್ ಮಾಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ